ರಾಜ್ಯದಲ್ಲಿ ಹಲವು ದಿನಗಳಿಂದ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೇರಿದೆ. ಪರಿಷ್ಕರಣೆಯಾದ ಪಠ್ಯವನ್ನು ರದ್ದು ಮಾಡಿ ಅನೇಕ ಸಮುದಾಯದ ನಾಯಕರಿಗೆ ಮತ್ತು ನಾಡ ಗೀತೆಗೆ ಅಪಮಾಣ ಮಾಡಿದ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಎಂದು ಸಾರ್ವಜನಿಕ ವಲಯದಿಂದ ಬಲವಾದ ವಿರೋದ ವ್ಯಕ್ತವಾದರೂ ಸಹ ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸಮರ್ಥನೆಗಿಳಿದಿದ್ದಾರೆ. ಈ ಸಮರ್ಥನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀರ್ವವಾಗಿ ಟೀಕಿಸಿದ್ದು, ಬಸವಣ್ಣ, ಅಂಬೇಡ್ಕರ್ ಅವರು ಹಿಂದೂ ಧರ್ಮ ತ್ಯಜಿಸಿದಕ್ಕೆ ಪಠ್ಯದಲ್ಲಿ ಅವರನ್ನು ನಿರ್ಲಕ್ಷಿಸಲಾಯಿತೇ? ಎಂದು ಪ್ರಶ್ನಿಸಿದ್ದಾರೆ.
ಹೌದು, ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು? ಎನ್ನುವುದನ್ನು ಸನ್ಮಾನ್ಯ ಸಚಿವರು ಬಹಿರಂಗ ಪಡಿಸಿ, ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಅಗ್ರಹಿಸಿದ್ದಾರೆ.
‘ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣಗುರು, ಕುವೆಂಪು ಸೇರಿದಂತೆ ಹಲವು ಮಹನೀಯರ ವ್ಯಕ್ತಿತ್ವವನ್ನು ಕಡೆಗಣಿಸಲಾಗಿದೆ, ಇವರನ್ನು ಪರಿಷ್ಕೃತ ಸಮಿತಿಯ ಕಿಡಿಗೇಡಿ ಅಧ್ಯಕ್ಷ ತುಚ್ಛೀಕರಿಸಿದ್ದಾನೆ’ ಎಂದು ಪ್ರತಿಭಟಿಸುತ್ತಿರುವವರು ಅನ್ಯಧರ್ಮೀಯರಲ್ಲ, ಹಿಂದೂಗಳೇ ಅಲ್ವಾ ಬಿಸಿ ನಾಗೇಶ್? ಎಂದು ಪ್ರಶ್ನಿಸಿದ್ದಾರೆ.
ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ದಲಿತ ಮತ್ತು ಹಿಂದುಳಿದ ಜಾತಿಗಳ ವಿದ್ವಾಂಸರಿಗೆ ಪ್ರಾತಿನಿಧ್ಯವೇ ನೀಡಿಲ್ಲವಲ್ಲಾ? ಶಿಕ್ಷಣ ಸಚಿವರು ಕಾಳಜಿ ತೋರುತ್ತಿರುವ ಹಿಂದೂಗಳ ವ್ಯಾಖ್ಯಾನದಲ್ಲಿ ಈ ಸಮುದಾಯಗಳು ಸೇರಿಕೊಳ್ಳುವುದಿಲ್ಲವೇ? ಈ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ನೀಡಿಲ್ಲವೇ ಬಿಸಿ ನಾಗೇಶ್? ಎಂದು ಸಾಲು ಸಾಲು ಪ್ರಶ್ನೆಗಳಿರಿಸಿ ಉತ್ತರಕ್ಕೆ ಆಗ್ರಹಿಸಿದ್ದಾರೆ.

ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಯಿತೇ? ಅವಮಾನ ಮಾಡಲಾಯಿತೇ? ನಾರಾಯಣ ಗುರು, ಪೆರಿಯಾರ್, ಕುವೆಂಪು ಅವರು ಹಿಂದೂ ಧರ್ಮದ ದೋಷಗಳನ್ನು ಎತ್ತಿತೋರಿಸಿದ್ದಕ್ಕಾಗಿ ನಿರ್ಲಕ್ಷ್ಯ ಮಾಡಲಾಯಿತೇ? ಹಾಗೆಂದು ಹೇಳಿಬಿಡಿ ಬಿಸಿ ನಾಗೇಶ್? ಎಂದು ಕೇಳಿದ್ದಾರೆ.
ಈ ದೇಶದ ಬಡವರಲ್ಲಿ ಬಹುಸಂಖ್ಯೆಯಲ್ಲಿರುವುದು ಹಿಂದೂ ಧರ್ಮದ ದಲಿತರು ಮತ್ತು ಹಿಂದುಳಿದ ಜಾತಿಗಳು. ಸರ್ಕಾರಿ ಶಾಲೆಗಳಲ್ಲಿ ಈ ಮಕ್ಕಳ ಸಂಖ್ಯೆಯೇ ಹೆಚ್ಚು. ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಅವರಿಗೆ ಆಗಿರುವ ಅವಮಾನದಿಂದ ಈ ಮಕ್ಕಳ ಭಾವನೆಗೂ ಧಕ್ಕೆಯಾಗಿದೆಯಲ್ವಾ ಬಿಸಿ ನಾಗೇಶ್? ಎಂದು ಮರು ಪ್ರಶ್ನೆ ಎಸೆದಿದ್ದಾರೆ.
ವಿಕೃತ ಮನಸ್ಸಿನ ಕಿಡಿಗೇಡಿ ಅಧ್ಯಕ್ಷ ತಯಾರಿಸಿರುವ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾತ್ರವಲ್ಲ, ರಾಜ್ಯದ ಆರುವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ. ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ, ಮೊದಲು ಈ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಕಿಡಿಕಾರಿದ್ದಾರೆ.






