ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಜನ ಪಟಾಕಿ ಸಹವಾಸಕ್ಕೆ ಹೋಗಿರ್ಲಿಲ್ಲ. ಸರ್ಕಾರ ಸಹ ಹಾನಿಕಾರಕ ಪಟಾಕಿಯನ್ನ ಬ್ಯಾನ್ ಮಾಡಿ ಆದೇಶಿಸಿತ್ತು. ಆದ್ರೀಬಾರಿ ಮುಕ್ತ ದೀಪಾವಳಿಗೆ ಅವಕಾಶ ಸಿಕ್ಕಿತ್ತು. ಇದ್ರಿಂದ ಜನ ಕಳೆದ ಎರಡು ವರ್ಷದ ಪಟಾಕಿಯನ್ನೂ ಸೇರಿಸಿ ಸಿಡಿಸಿದ್ದಾರೆ. ಇದ್ರಿಂದ ನಗರದ ಮಾಲಿನ್ಯ ದುಪ್ಪಟ್ಟು ಏರಿಕೆಯಾಗಿದೆ.
ಪಟಾಕಿ ಹೊಗೆಗೆ ವಿಷವಾದ ರಾಜ್ಯ ರಾಜಧಾನಿಯ ಪ್ರಾಣವಾಯು
ಸಿಲಿಕಾನ್ ಸಿಟಿ ಬೆಂಗಳೂರಿಗೆ ಗಾರ್ಬೇಜ್ ಸಿಟಿ, ಗುಂಡಿ ಸಿಟಿ, ಜೊತೆಗೆ ಮಾಲಿನ್ಯಕಾರಕ ಸಿಟಿ ಅನ್ನೊ ಅಪಖ್ಯಾತಿಯೂ ಇದೆ. ನಗರದಲ್ಲಿ ಹೆಚ್ಚಾಗ್ತಿರೋ ಮಾಲಿನ್ಯ ನಿಯಂತ್ರಣ ಮಾಡೋಕೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ದೆಹಲಿಯಂತೆ ಬೆಂಗಳೂರು ಮಾಲಿನ್ಯ ನಗರ ಆಗಬಾರದು ಅಂತ ನಾನಾ ಪ್ರಯತ್ನ ಮಾಡಲಾಗ್ತಿದೆ. ಆದ್ರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷಪೂರ್ತಿ ನಿಯಂತ್ರಣ ಮಾಡಿದ್ದು ದೀಪಾವಳಿ ವೇಳೆ ನೀರಲ್ಲಿ ಹೋಮ ಮಾಡಿದಂತಾಗಿದೆ. ದೀಪಾವಳಿ ವೇಳೆ ನಗರದ ಮಾಲಿನ್ಯ ಗರಿಷ್ಠ ಮಟ್ಟ ತಲುಪಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಲು ಅನುಮತಿ ಇರಲಿಲ್ಲ. ಹಾಗಾಗಿ ಪಟಾಕಿ ಮಾಲಿನ್ಯ ಕಡಿಮೆಯಿತ್ತು. ಜೊತೆಗೆ ಎರಡೆರಡು ಬಾರಿ ಲಾಕ್ಡೌನ್ ಪರಿಣಾಮ ವಾಹನ ಸಂಚಾರವೂ ಅರ್ಧಕ್ಕಿಳಿದಿತ್ತು. ಇದ್ರಿಂದಾಗಿ ಕಳೆದ ವರ್ಷ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಶೇ.54.8 ರಷ್ಟಿತ್ತು. ಆದರೆ ಈ ವರ್ಷ ಕೊರೋನಾ ಪ್ರಕರಣಗಳು ಕಡಿಮೆಯಾಗಿ ಜನಜೀವನ ಸಹಜಸ್ಥಿತಿಗೆ ಮರಳಿದೆ. ಸರ್ಕಾರ ಸಹ ದೀಪಾವಳಿ ಹಬ್ಬ ಪ್ರಯುಕ್ತ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿತ್ತು. ಇದರಿಂದ ದೀಪಾವಳಿ ವೇಳೆ ಅಂದರೆ ಅಕ್ಟೋಬರ್ 24 ರಿಂದ ಅಕ್ಟೋಬರ್ 26ವರೆಗೆ ಜನ ಮನಸೋ ಇಚ್ಚೆ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ ಪಟಾಕಿ ಸಿಡಿತದಿಂದ ನಗರದಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಪ್ರಮಾಣ ಶೇ.65 ರಷ್ಟು ಏರಿಕೆಯಾಗಿದೆ. ಅಂದರೆ ಕಳೆದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ವಾಯು ಮಾಲಿನ್ಯ ತೀವ್ರಗತಿಯಲ್ಲಿ ಹೆಚ್ಚಿದೆ.
-ಸಿಲ್ಕ್ ಬೋರ್ಡ್ ಜಂಕ್ಷನ್: AQI 45 ರಿಂದ 150 AQIಕ್ಕೆ ಏರಿಕೆ
-ಹೆಬ್ಬಾಳ: AQI 46 ರಿಂದ 156 AQIಕ್ಕೆ ಏರಿಕೆ
-ಸನೆಗೊರುವನಹಳ್ಳಿ: AQI 28 ರಿಂದ 92 AQIಕ್ಕೆ ಏರಿಕೆ
-ಮೆಜೆಸ್ಟಿಕ್: AQI 92 ರಿಂದ 105 AQIಕ್ಕೆ ಏರಿಕೆ
-ಜಯನಗರ: AQI 37 ರಿಂದ 150 AQIಕ್ಕೆ ಏರಿಕೆ
-ನಿಮ್ಹಾನ್ಸ್: 77 AQI ರಿಂದ 101 AQIಕ್ಕೆ ಏರಿಕೆ
ಇನ್ನು ಈ ಬಗ್ಗೆ ಪರಿಸರ ಹೋರಾಟಗಾರರು, ಪರಿಸರವಾದಿಗಳು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಂಗಳೂರಿನ ಅರಣ್ಯ ಸತ್ವ ಕಳೆಗುಂದುತ್ತಿದೆ. ಇದರ ಜೊತೆಗೆ ಜನರೇ ಈ ರೀತಿ ಪಟಾಕಿ ಸಿಡಿಸಿ ವಾತಾವರಣವನ್ನು ಹಾಳುಗೆಡವುತ್ತಿರುವುದು ಸರಿಯಲ್ಲ. ಸರ್ಕಾರ ಹಾಗೂ ಬಿಬಿಎಂಪಿ ಕಾಳಜಿವಹಿಸಿ ಇದಕ್ಕೆ ಕಡಿವಾಣ ಹಾಕಬೇಕು ಅಂತ ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.
ಒಟ್ಟಾರೆ ದೀಪಾವಳಿ ವೇಳೆ ನಗರದ ವಸತಿ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ನಗರದ ಹಲವು ಕಡೆ ನಿರ್ಮಿಸಲಾದ ವಾಯು ಮಾಲಿನ್ಯ ಗುಣಮಟ್ಟ ಮಾಪಕನ ಕೇಂದ್ರ ಗಳು ಮಾಲಿನ್ಯ ಕುರಿತು ದತ್ತಾಂಶಗಳನ್ನ ಸಂಗ್ರಹಿಸಿವೆ. ಸರ್ಕಾರ ರಾತ್ರಿ 8 ಗಂಟೆಯಿಂದ 10 ವರಿಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಿತ್ತು. ಆದ್ರೂ ನಗರದಲ್ಲಿ ಅವಧಿ ಮೀರಿ ಪಟಾಕಿ ಸಿಡಿಸಿದ ಪರಿಣಾಮ ವಾಯುಮಾಲಿನ್ಯ ಮಿತಿ ಮೀರಿದೆ.