
ಬೆಂಗಳೂರು: ಮಕ್ಕಳನ್ನು( Children)ಮನೆಯ ಹೊರಗೆ ಆಟಕ್ಕೆ ಬಿಡುವುದರಿಂದ ಕ್ರಿಯಾಶೀಲತೆ (Activism from play)ಅರಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್(KV Prabhakar) ಅಭಿಪ್ರಾಯಪಟ್ಟರು.ಬಾಲ ಭವನ ಸೊಸೈಟಿ ಆಯೋಜಿಸಿದ್ದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮನಸ್ಸು ಯಾವಾಗಲೂ ಓಡಾಟ-ಕುಣಿದಾಟದೊಂದಿಗೆ ಅತ್ಯಂತ ಫಲವತ್ತಾಗಿ ಅರಳುತ್ತವೆ. ಹೀಗಾಗಿ ಮಕ್ಕಳನ್ನು ನಿರಂತರ ಚಟುವಟಿಕಿಯಿಂದಿಡಬೇಕು. ಮಣ್ಣಲ್ಲಿ ಆಡೋದು, ಕೆರೆಯಲ್ಲಿ ಈಜುತ್ತಾ ನಾವೆಲ್ಲಾ ಬೆಳೆದೆವು. ಈಗ ಸಿಟಿ ಮಕ್ಕಳಿಗೆ ಈ ಅವಕಾಶ ಇಲ್ಲದಂತಾಗಿದೆ. ಹಳ್ಳಿಗಳಲ್ಲಿ ಈ ಅವಕಾಶಗಳು ಇವೆ ಎಂದರು.
ಮಕ್ಕಳು ಸ್ವಾಭಾವಿಕವಾಗಿಯೇ ಚಟುವಟಿಕೆಯಿಂದ ಇರುತ್ತಾರೆ. ರೆಡಿ ಮೇಡ್ ಪ್ಲಾಸ್ಟಿಕ್ ಆಟದ ಸಾಮಾನುಗಳು ಮತ್ತು ಮೊಬೈಲ್ ಫೋನ್ ಮಕ್ಕಳ ಕ್ರಿಯಾಶೀಲತೆಯ ಶತ್ರುಗಳಾಗಿವೆ ಎಂದರು.
ಮಕ್ಕಳನ್ನು ಪರಿಸರಕ್ಕೆ, ಆಟದ ಬಯಲಿಗೆ ಬಿಟ್ಟರೆ ಸಾಕು. ತಮಗೆ ಬೇಕಾದ ಆಟದ ಸಾಮಾಗ್ರಿಗಳನ್ನು ಕ್ರಿಯಾಶೀಲವಾಗಿ ಸೃಷ್ಟಿಸಿಕೊಳ್ಳುತ್ತಾರೆ.ಪೋಷಕರು ತಮ್ಮ ಕೆಲಸದ ಒತ್ತಡ, ತಮ್ಮ ಹವ್ಯಾಸಗಳ ಒತ್ತಡವನ್ನು ಮಕ್ಕಳ ಮೇಲೆ ಹೇರುವುದರಿಂದ ಮಕ್ಕಳ ಕ್ರಿಯಾಶೀಲತೆ ಚಿವುಟಿದಂಗಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.
ಇವತ್ತು ಜಗತ್ತು ತುಂಬಾ ಫಾಸ್ಟ್ ಆಗಿದೆ. ವೇಗವಾಗಿ ಬೆಳೆಯುತ್ತಿರುವ ಇಂದಿನ ಪ್ರಂಚದಲ್ಲಿ ಚಿಗುರೊಡೆಯುತ್ತಿರುವ ಮಕ್ಕಳನ್ನು ಕ್ರಿಯಾಶೀಲತೆ ಹಾಗೂ ಏಕಾಗೃತೆ ಮೂಡಿಸಲು ನಾವು ಪ್ರಯತ್ನಿಸಬೇಕು.
ಕನಕದಾಸರು ಮತ್ತು ಇಂತಹ ಮಹಾನ್ ಸಾಧಕರು ತಮ್ಮ ಸಾಧನೆಯನ್ನು ಹೇಗೆ ಮಾಡಿದರು ಎನ್ನುವ ತಿಳಿವಳಿಕೆ ಎಲ್ಲರ ಬಾಳಿನಲ್ಲಿ ಸ್ಪೂರ್ತಿನ್ನು ತಂದುಕೊಡುತ್ತವೆ. ಬಾಲ್ಯದ ದಿನಗಳಲ್ಲೇ ಕ್ರಿಯಾಶೀಲತೆ ಕುರಿತು ನಾವು ಪೋಷಕರು ಅರಿವು ಬೆಳೆಸಿಕೊಳ್ಳಬೇಕು. ಬಳಿಕ ಮಕ್ಕಳಲ್ಲಿ ಮೂಡಿಸಬೇಕಾಗಿದೆ ಎಂದರು.
ಇವೆಲ್ಲದರ ಒಟ್ಟು ಪರಿಣಾಮವಾಗಿ ಇಂದು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಮಕ್ಕಳು ಬೆಳೆದಂತೆ ಕೇವಲ ಯಾಂತ್ರಿಕವಾಗಿ ಬದುಕು ರೂಪಿಸಿಕೊಂಡು ಪೋಷಕರನ್ನು ನಿರ್ಲಕ್ಷಿಸುವುದು ಹೆಚ್ಚಾಗುತ್ತಿದೆ. ಇದರಿಂದ ವೃದ್ಧಾಶ್ರಮಗಳೂ ಹೆಚ್ಚುತ್ತಿವೆ ಎಂದರು.
ಬಾಲ ಭವನದ ಅಧ್ಯಕ್ಷರಾದ ಬಿ.ಆರ್.ನಾಯ್ಡು ಕಾರ್ಯದರ್ಶಿ ನಿಶ್ಚಿಲ್, ಆಡಳಿತಾಧಿಕಾರಿ ವಿಜಯಲಕ್ಷ್ಮಿ ಅವರು ಉಪಸ್ಥಿತರಿದ್ದರು.