ದಿಗ್ಬಂಧನಗಳ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ಇತರ ರಾಷ್ಟ್ರಗಳಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದರೂ ರಷ್ಯಾದ ಬಹುಕಾಲದ ಸ್ನೇಹಿತ ಭಾರತ ತನ್ನ ಪ್ರಮುಖ ವ್ಯಾಪಾರೀ ಪಾಲುದಾರನಾದ ರಷ್ಯಾವನ್ನು ಇನ್ನೂ ತನ್ನ ಜೊತೆಗಿಟ್ಟುಕೊಳ್ಳಲು ಬಯಸುತ್ತಿದೆ ಎಂಬುವುದಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಮತ್ತು ಇತರ ಸರಕುಗಳನ್ನು ಒದಗಿಸುವ ರಷ್ಯಾದ ಪ್ರಸ್ತಾಪವನ್ನು ಭಾರತವು ಒಪ್ಪಿಕೊಂಡಿರುವುದೇ ಸಾಕ್ಷಿಯಾಗಿದೆ.
ಭಾರತವು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳಿಂದ ಹಿಡಿದು ಕ್ಷಿಪಣಿಗಳು ಮತ್ತು ಯುದ್ಧವಿಮಾನಗಳವರೆಗೂ ರಷ್ಯಾವನ್ನೇ ಹೆಚ್ಚು ಆಶ್ರಯಿಸುತ್ತಿದ್ದರೂ ರಷ್ಯಾದಿಂದ ಭಾರತ ಆದಷ್ಟು ದೂರವಿರಲು ಪ್ರಯತ್ನಿಸಬೇಕು ಎಂದು ಯುಎಸ್ ಅಧಿಕಾರಿಗಳು ಹೇಳಿದ್ದರು. ಆದರೂ ಭಾರತವು ರಷ್ಯಾದ ಪ್ರಸ್ತಾಪವನ್ನು ಒಪ್ಪುವ ಮೂಲಕ ಅಮೆರಿಕದ ಸಲಹೆಯನ್ನು ಕಡೆಗಣಿಸಿದೆ. ಅಲ್ಲದೆ ರಷ್ಯಾವು ಉಕ್ರೇನ್ನಲ್ಲಿನ ತನ್ನ ಕ್ರಮಗಳನ್ನು ದೇಶವನ್ನು ಸಶಸ್ತ್ರೀಕರಣ ಮಾಡಲು ‘ವಿಶೇಷ ಕಾರ್ಯಾಚರಣೆ’ ಎಂದು ಕರೆಯುತ್ತಿದ್ದು ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಅಮೆರಿಕ ಮಂಡಿಸಿದ ಮತದಾನದಿಂದಲೂ ಭಾರತ ದೂರವಿತ್ತು.
ಭಾರತವು ತನ್ನ ತೈಲ ಅಗತ್ಯಗಳಲ್ಲಿ 80% ರಷ್ಟು ಆಮದು ಮಾಡಿಕೊಳ್ಳುತ್ತದೆ. ಆದರೆ ರಷ್ಯಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕೇವಲ 2-3% ಮಾತ್ರ. ಆದರೆ ಈ ವರ್ಷ ತೈಲ ಬೆಲೆಗಳು 40% ರಷ್ಟು ಏರಿಕೆಯಾಗಿರುವುದರಿಂದ, ಸರ್ಕಾರವು ತನ್ನ ಏರುತ್ತಿರುವ ಇಂಧನ ಬಿಲ್ ಅನ್ನು ಕಡಿಮೆ ಮಾಡಲು ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಳ್ಳಲು ಯೋಜಿಸುತ್ತಿದೆ. “ರಷ್ಯಾ ತೈಲ ಮತ್ತು ಇತರ ಸರಕುಗಳನ್ನು ಭಾರೀ ರಿಯಾಯಿತಿಯಲ್ಲಿ ನೀಡುತ್ತಿದೆ. ಅದನ್ನು ತೆಗೆದುಕೊಳ್ಳಲು ನಾವು ಸಂತೋಷಪಡುತ್ತೇವೆ” ಎಂದು ಭಾರತೀಯ ಸರ್ಕಾರದ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
ಆದರೆ ಅಂತಹ ವ್ಯಾಪಾರಕ್ಕೆ ಸಾರಿಗೆ, ವಿಮಾ ರಕ್ಷಣೆ ಮತ್ತು ಸರಿಯಾದ ಕಚ್ಚಾ ಮಿಶ್ರಣವನ್ನು ಪಡೆಯುವುದು ಸೇರಿದಂತೆ ಪೂರ್ವಸಿದ್ಧತಾ ಕೆಲಸಗಳ ಅಗತ್ಯವಿದೆ ಎಂದು ಅಧಿಕಾರಿ ಹೇಳಿದ್ದಾರೆ. ಆದರೆ ಒಮ್ಮೆ ಪೂರ್ವಸಿದ್ಧತೆಗಳು ಪೂರ್ಣಗೊಂಡರೆ ಭಾರತವು ರಷ್ಯಾದ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿದೆ.
ರಷ್ಯಾ ಭಾರತ ಸಂಬಂಧ ಮತ್ತಷ್ಟು ವೃದ್ಧಿಸುತ್ತಿರುವ ಬಗ್ಗೆ ರಾಯಿಟರ್ಸ್ ಸಹ ವರದಿ ಮಾಡಿದ್ದು ದ್ವಿಪಕ್ಷೀಯ ವ್ಯಾಪಾರವನ್ನು ಮುಂದುವರಿಸಲು ರಷ್ಯಾದೊಂದಿಗೆ ರೂಪಾಯಿ-ರೂಬಲ್ ಕಾರ್ಯವಿಧಾನವನ್ನು ಸ್ಥಾಪಿಸಲು ಭಾರತೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ತೈಲದ ಹೊರತಾಗಿ, ಭಾರತವು ರಷ್ಯಾ ಮತ್ತು ಅದರ ಮಿತ್ರರಾಷ್ಟ್ರವಾದ ಬೆಲಾರಸ್ನಿಂದ ಅಗ್ಗದ ಗೊಬ್ಬರವನ್ನು ಸಹ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ರಷ್ಯಾ ಸಂಕೀರ್ಣ ಇತಿಹಾಸ
ರಷ್ಯಾದ ಮಿಲಿಟರಿ ತಂತ್ರಾಶಗಳನ್ನು ಇತರ ದೇಶಗಳು ಖರೀದಿಸುವುದನ್ನು ತಡೆಯುವ ಗುರಿಯನ್ನು ಯುಎಸ್ ಹೊಂದಿದೆ. ಹಾಗಾಗಿ ರಷ್ಯಾದಿಂದ ಎಸ್ -400 ಕ್ಷಿಪಣಿಯನ್ನು ಭಾರತವು ಖರೀದಿಸಿದರೆ ಅಮೆರಿಕ ಭಾರತದ ಮೇಲೆ ದಿಗ್ಬಂಧನ ಹೇರುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ ಅಮೆರಿಕಾದ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ಭಾರತವು ತನ್ನ ರಕ್ಷಣಾ ಪೂರೈಕೆದಾರರನ್ನು ಬದಲಾಯಿಸುತ್ತಿದೆ ಎಂದು ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ US ಸಹಾಯಕ ರಕ್ಷಣಾ ಕಾರ್ಯದರ್ಶಿ ಎಲಿ ರಾಟ್ನರ್ ಕಳೆದ ವಾರ US ಕಾಂಗ್ರೆಸ್ಗೆ ತಿಳಿಸಿದ್ದಾರೆ.
“ಭಾರತವು ರಷ್ಯಾದೊಂದಿಗೆ ಸಂಕೀರ್ಣವಾದ ಇತಿಹಾಸ ಮತ್ತು ಸಂಬಂಧವನ್ನು ಹೊಂದಿದೆ ಎಂಬುದನ್ನು ನಾವು ಬಲ್ಲೆವು. ಅವರು ಖರೀದಿಸುವ ಬಹುಪಾಲು ಶಸ್ತ್ರಾಸ್ತ್ರಗಳು ರಷ್ಯಾದಿಂದ ಬಂದವು” ಎಂದು ಅವರು ಹೇಳಿದ್ದಾರೆ.
ಒಳ್ಳೆಯ ಸುದ್ದಿ ಎಂದರೆ ಅವರು ತಮ್ಮ ಶಸ್ತ್ರಾಸ್ತ್ರ ಖರೀದಿಗಳಿಂದ ರಷ್ಯಾವನ್ನು ದೂರವಿಡುವ ದೀರ್ಘ ಕಾಲಿನ ಪ್ರಕ್ರಿಯೆಯಲ್ಲಿದ್ದಾರೆ. ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಅವರು ತಮ್ಮದೇ ಆದ ರಕ್ಷಣಾ ಉದ್ಯಮ ಸ್ಥಾಪನೆಯನ್ನು ಒಳಗೊಂಡಂತೆ ರಷ್ಯಾವನ್ನು ದೂರವಿಡುವ ವಿಚಾರಕ್ಕೆ ಬದ್ಧರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. .ಬ್ರಿಟೀಷ್ ವಿದೇಶಾಂಗ ಸಚಿವ ಲಿಜ್ ಟ್ರಸ್ ಕೂಡ ಕಳೆದ ವಾರ ಲಂಡನ್ನಲ್ಲಿ ತನ್ನ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡಲು ಭಾರತದೊಂದಿಗೆ ನಿಕಟ ಆರ್ಥಿಕ ಮತ್ತು ರಕ್ಷಣಾ ಸಂಬಂಧಗಳನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ. 2011 ರಿಂದಲೇ ಭಾರತ ರಷ್ಯಾದಿಂದ ತನ್ನ ರಕ್ಷಣಾ ಆಮದುಗಳನ್ನು 53% ರಷ್ಟು ಕಡಿತಗೊಳಿಸಿದೆ.
ಆದರೆ ರಷ್ಯಾದ ಮಾಜಿ ಭಾರತೀಯ ರಾಯಭಾರಿ ಡಿ. ಬಾಲ ವೆಂಕಟೇಶ್ ವರ್ಮಾ ಅವರು ಜಾಗತಿಕ ಶಕ್ತಿಗಳ ನಡುವಿನ ಬಿಕ್ಕಟ್ಟಿಗೆ ಭಾರತ ಬೆಲೆ ತೆರಬೇಕೆಂದು ಯಾರೂ ನಿರೀಕ್ಷಿಸಬಾರದು. “ಇದು ನಾವು ಶುರು ಮಾಡಿದ ಯುದ್ಧವಲ್ಲ” ಎಂದು ಅವರು ಸೋಮವಾರ ಆನ್ಲೈನ್ ಸೆಮಿನಾರ್ ಒಂದರಲ್ಲಿ ಹೇಳಿದ್ದಾರೆ.