ಡಬಲ್ ಎಂಜಿನ್ ಸರ್ಕಾರದ ಭರವಸೆಯ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿಯ, ಸದ್ಯ ನಾಯಕತ್ವ ಬದಲಾವಣೆಯ ಗೊಂದಲಗಳು, ಅಕ್ಷರಶಃ ಬಿಜೆಪಿ ಪಕ್ಷವನ್ನೇ ಮತ್ತೊಂದು ಅರ್ಥದಲ್ಲಿ ‘ಡಬಲ್ ಎಂಜಿನ್’ ಮಾಡಿಬಿಟ್ಟಿವೆ!
ಹಿಂದಿನ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಅಧಿಕಾರ ಹಿಡಿಯುವಾಗ ಸ್ವತಃ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು, ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇರುವಾಗ, ರಾಜ್ಯದಲ್ಲಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೆ, ಒಂದೇ ರೈಲು ಗಾಡಿಗೆ ಎರಡು(ಡಬ್ಬಲ್) ಎಂಜಿನ್ ಹಾಕಿದಂತೆ ಶರವೇಗದ ಅಭಿವೃದ್ಧಿ ಸಾಧಿಸಬಹುದು, ಸ್ವರ್ಗವನ್ನೇ ಧರೆಗಿಳಿಸಬಹುದು ಎಂದು ಭರವಸೆ ನೀಡಿದ್ದರು.
ಆದರೆ, ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷದಲ್ಲಿ ಬಿಜೆಪಿಯ ಗುಂಪುಗಾರಿಕೆ, ಬಣ ರಾಜಕಾರಣ ಮತ್ತು ನಾಯಕತ್ವ ಬದಲಾವಣೆಯ ಹಗ್ಗಜಗ್ಗಾಟದಿಂದಾಗಿ ಆ ಡಬಲ್ ಎಂಜಿನ್ ಎಂಬುದು, ರೈಲು ಗಾಡಿಯ ಡಬ್ಬಲ್ ಎಂಜಿನ್ ಬದಲಾಗಿ, ಒಮ್ಮೆ ಒಂದು ದಿಕ್ಕಿಗೆ, ಮರು ಕ್ಷಣ ಮತ್ತೊಂದು ದಿಕ್ಕಿಗೆ ಚಲಿಸುವ ಮಣ್ಣುಮುಕ್ಕ ಹಾವಿನ ‘ಡಬಲ್ ಎಂಜಿನ್’ ಎಂಬಂತಾಗಿದೆ. ನಿರಂತರ ಭಿನ್ನಮತೀಯ ಚಟುವಟಿಕೆ, ಕುರ್ಚಿ ಕಾದಾಟದಿಂದಾಗಿ ಸರ್ಕಾರ ಮತ್ತು ಆಡಳಿತ ಅತ್ತಿತ್ತ ಚಲಿಸದೆ, ನಿಂತಲ್ಲೇ ನಿಂತು ಸ್ಥಗಿತಗೊಂಡಂತಾಗಿದೆ.
ಈ ನಡುವೆ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ಖುದ್ದು ಬಿಕ್ಕಟ್ಟು ಪರಿಹಾರದ ವರಿಷ್ಠರ ರಾಜಧೂತರಾಗಿ ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ಮೂರು ದಿನಗಳ ಕಾಲ ಇಲ್ಲಿಯೇ ತಂಗಿದ್ದು ಮುಖ್ಯಮಂತ್ರಿ ಪರ ವಿರೋಧದ ಬಣಗಳ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಗುರುವಾರ ಶಾಸರಕ ಸಭೆ ನಡೆಸುವ ಮೂಲಕ ಪಕ್ಷದ ಮತ್ತು ಸರ್ಕಾರದ ಕುರಿತ ಅವರ ಅಹವಾಲುಗಳನ್ನು ಆಲಿಸಿ ವರಿಷ್ಠರಿಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.
ಆದರೆ, ಬಿಜೆಪಿಯ ಬಣ ಸಂಘರ್ಷ ಇದೀಗ ಮತ್ತೊಂದು ಮಜಲಿಗೆ ಹೋಗಿದ್ದು, ಸ್ವತಃ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನೇ ಬದಲಾಯಿಸುವ ಮಟ್ಟಕ್ಕೆ ಸಿಎಂ ವಿರೋಧಿ ಬಣ ದೆಹಲಿಯಲ್ಲಿ ಕೂತು ಇನ್ನಿಲ್ಲದ ಯತ್ನ ನಡೆಸುತ್ತಿದೆ. ಕಳೆದ ವಾರ ನಾಯಕತ್ವ ಬದಲಾವಣೆಯ ಪರ ವಿರೋಧಗಳ ಹೇಳಿಕೆಯ ಬೆನ್ನಲ್ಲೇ ಸ್ವತಃ ಸಿಎಂ ವರಿಷ್ಠರು ಹೇಳಿದರೆ ಕೂಡಲೇ ರಾಜೀನಾಮೆ ನೀಡುವುದಾಗಿ ಹೇಳಿದ ಬಳಿಕ ಆ ಬಗ್ಗೆ ಪ್ರತಿಕ್ರಿಯಿಸಿದ್ದ ಅರುಣ್ ಸಿಂಗ್, ಸದ್ಯ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಅಂತಹ ಚರ್ಚೆಗಳೇ ನಡೆದಿಲ್ಲ ಎಂದಿದ್ದರು.
ಇದೀಗ ಆ ಹೇಳಿಕೆಯನ್ನೇ ಮುಂದಿಟ್ಟುಕೊಂಡು, ಶಾಸಕರ ಅಭಿಪ್ರಾಯವನ್ನೇ ಕೇಳದೆ, ಏಕಾಏಕಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಏಕಪಕ್ಷೀಯವಾಗಿ ವಕಾಲತು ವಹಿಸಿದ್ದಾರೆ. ಇದು ಯಡಿಯೂರಪ್ಪ ವಿರುದ್ಧ ಇರುವ ಶಾಸಕರಿಗೆ ಮಾಡಿದ ಅವಮಾನ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕಾದ ಹೊತ್ತಲ್ಲಿ, ಶಾಸಕರ ಸಭೆ ಕರೆಯುವ ನಿರ್ಧಾರ ಕೂಡ ಅಂತಹದ್ದೇ ಪಕ್ಷಪಾತಿ ನಡೆ. ಹಾಗಾಗಿ, ರಾಜ್ಯ ಉಸ್ತುವಾರಿ ಹೊಣೆಗಾರಿಕೆಯಿಂದ ಅವರನ್ನೇ ಬದಲಾಯಿಸಿ ಎಂದು ಸ್ವತಃ ಅರವಿಂದ್ ಬೆಲ್ಲದ್, ಸಿ ಪಿ ಯೋಗೀಶ್ವರ್, ಬಸನಗೌಡ ಪಾಟೀಲ್ ಯತ್ನಾಳ್, ಎಚ್ ವಿಶ್ವನಾಥ್ ಸೇರಿದಂತೆ ಭಿನ್ನಮತೀಯ ಬಳಗದ ಪ್ರಮುಖರು ದೆಹಲಿ ವರಿಷ್ಠರ ಮೊರೆ ಹೋಗಿದ್ದಾರೆ. ಆ ಪ್ರಯತ್ನದ ಉದ್ದೇಶದಿಂದಲೇ ಶಾಸಕ ಅರವಿಂದ್ ಬೆಲ್ಲದ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ, ದೆಹಲಿಯಲ್ಲಿ ಬೆಲ್ಲದ್ ಅವರು ಯಡಿಯೂರಪ್ಪ ವಿರೋಧಿ ಬಣದ ಸೂತ್ರಧಾರ ಎಂದೇ ಬಣ್ಣಿಸಲಾಗುತ್ತಿರುವ ಮತ್ತು ಆರ್ ಎಸ್ ಎಸ್ ಹಿನ್ನೆಲೆಯ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೊಂದಿಗೆ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ರಾಜ್ಯ ಬಿಜೆಪಿಯ ಭಿನ್ನಮತೀಯ ಚಟುವಟಿಕೆಯ ಹಿಂದಿನ ಶಕ್ತಿ ಮತ್ತು ಮಾರ್ಗದರ್ಶಕರು ಎಂದೇ ಬಣ್ಣಿಸಲಾಗುವ ಸಂತೋಷ್ ಅವರೊಂದಿಗೆ ಭಿನ್ನರ ಬಣದ ಮುಂಚೂಣಿ ನಾಯಕ ಬೆಲ್ಲದ್ ಭೇಟಿ ಸಹಜವಾಗೇ, ಇಡೀ ವಿಷಯವನ್ನು ಮತ್ತೊಂದು ಮಟ್ಟಕ್ಕೆ ಹಿಗ್ಗಿಸಿದೆ. ಈವರೆಗೆ ಕೇವಲ ರಾಜ್ಯ ನಾಯಕತ್ವ ಬದಲಾವಣೆಗೆ ಸೀಮಿತವಾಗಿದ್ದ ಭಿನ್ನಮತೀಯ ಚಟುವಟಿಕೆ, ಇದೀಗ ತಮ್ಮ ಆ ಬೇಡಿಕೆಗೆ ಸೊಪ್ಪುಹಾಕದೆ ಏಕಪಕ್ಷೀಯ ನಿರ್ಧಾರಗಳನ್ನು, ಸಮಾಲೋಚನೆಗೆ ಮುಂಚೆಯೇ ತೀರ್ಮಾನಗಳನ್ನು ಪ್ರಕಟಿಸುತ್ತಿರುವ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಅರುಣ್ ಸಿಂಗ್ ವಿರುದ್ಧವೇ ಸಿಡಿದೆದ್ದಿದೆ. ಹಾಗಾಗಿ ಮುಖ್ಯಮಂತ್ರಿಗಳ ಬದಲಾವಣೆಗೆ ಮುನ್ನ ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಅರುಣ್ ಸಿಂಗ್ ಅವರನ್ನೇ ಬದಲಾಯಿಸಿ ಎಂದು ವರಿಷ್ಠರ ಮುಂದೆ ಭಿನ್ನಮತೀಯರು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದರೆ, ಜೂ.16ರಂದು ನಾಯಕತ್ವ ಬದಲಾವಣೆಯ ವಿಷಯವನ್ನೇ ಮುಂದಿಟ್ಟುಕೊಂಡು ಸಿಎಂ ಪರ ಮತ್ತು ವಿರೋಧಿ ಬಣಗಳ ಶಾಸಕರೊಂದಿಗೆ ಸಭೆ ನಡೆಸಲು ಬರುತ್ತಿರುವ ಅರುಣ್ ಸಿಂಗ್ ಅವರು, ತಮ್ಮ ಕೋರಿಕೆಗೆ ಸ್ಪಂದಿಸುವುದಿಲ್ಲ ಎಂಬುದನ್ನು ಅರಿತಿರುವ ಭಿನ್ನಮತೀಯರು, ಅವರು ಬರದಂತೆ ತಡೆಯಲು ಇನ್ನಿಲ್ಲದ ಲಾಬಿ ನಡೆಸಿದ್ದಾರೆ. ಆ ಮೂಲಕ ನಾಯಕತ್ವ ಬದಲಾವಣೆಯ ತಮ್ಮ ಪಟ್ಟನ್ನು ಮತ್ತು ಅದಕ್ಕೆ ಪೂರಕವಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂಬ ತಮ್ಮ ಬೇಡಿಕೆಯನ್ನು ಇನ್ನಷ್ಟು ಪ್ರಬಲವಾಗಿ ಮಂಡಿಸಿದ್ದಾರೆ.
ಆದರೆ ಶಾಸಕಾಂಗ ಪಕ್ಷದ ಸಭೆ ಕರೆಯದಂತೆ ಸಿಎಂ ಬಣ ಅರುಣ್ ಸಿಂಗ್ ಅವರ ಮೆಲೆ ಒತ್ತಡ ಹೇರಿದೆ ಮತ್ತು ವರಿಷ್ಠರು ಕೂಡ ಶಾಸಕಾಂಗ ಪಕ್ಷದ ಸಭೆ ಕರೆಯುವ ಬಗ್ಗೆ ಒಲವು ಹೊಂದಿಲ್ಲ. ಹಾಗಾಗಿ ಸ್ವತಃ ಅರುಣ್ ಸಿಂಗ್ ಕೂಡ ಈ ವಿಷಯದಲ್ಲಿ ಒತ್ತಡಕ್ಕೆ ಸಿಲುಕಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ಪ್ರಭಾವಿ ನಾಯಕ ಸಿಎಂ ಬಣ ಮತ್ತು ಮತ್ತೊಂದು ಕಡೆ, ವರಿಷ್ಠರ ವಲಯದಲ್ಲಿ ಪ್ರಭಾವಿ ನಾಯಕರಾಗಿರುವ ಬಿ ಎಲ್ ಸಂತೋಷ್ ನೇತೃತ್ವದ ಭಿನ್ನರ ಬಣದ ನಡುವೆ ಸಮನ್ವಯ ಸಾಧಿಸುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಪರಿಸ್ಥಿತಿ ಕೈಮೀರಿ ಹೋಗಿರುವಾಗ, ಈ ಬಿಕ್ಕಟ್ಟನ್ನು ಪರಿಹರಿಸುವುದು ಹೇಗೆ ಎಂಬ ಗೊಂದಲ ಅರುಣ್ ಸಿಂಗ್ ಅವರಿಗೆ ತಲೆನೋವು ತಂದಿದೆ ಎನ್ನಲಾಗಿದೆ.
ಹಾಗಾಗಿ, ಈ ಡಬ್ಬಲ್ ಎಂಜಿನ್ ಭರವಸೆಯ ಆಡಳಿತ, ರಾಜ್ಯದ ಜನರ ಪಾಲಿಗೆ ಮಾತ್ರವಲ್ಲದೆ, ಸ್ವತಃ ಸ್ವಪಕ್ಷೀಯ ವರಿಷ್ಠರ ಪಾಲಿಗೂ ಈಗ ‘ಅತ್ತ ಧರಿ, ಇತ್ತ ಪುಲಿ’ ಎಂಬ ಸಂದಿಗ್ಧತೆ ಸೃಷ್ಟಿಸಿ, ಚಿಂತೆಗೀಡುಮಾಡಿದೆ. ಹಾಗಾಗಿ, ಸಿಎಂ ಯಡಿಯೂರಪ್ಪ ವರ್ಸಸ್ ಬಿ ಎಲ್ ಸಂತೋಷ್ ಎಂಬ ಡಬ್ಬಲ್ ಎಂಜಿನ್ ನಡುವೆ ಆಡಳಿತವಷ್ಟೇ ಅಲ್ಲದೆ, ಸ್ವತಃ ಪಕ್ಷ ಕೂಡ ಸಿಕ್ಕು ಹೈರಾಣಾಗತೊಡಗಿದೆ ಎಂಬುದು ಪಕ್ಷನಿಷ್ಠ ಕಾರ್ಯಕರ್ತರ ಸಂಕಟ!