ರಾಜ್ಯ-ಕೇಂದ್ರದಲ್ಲಿರುವ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮಂಡ್ಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಜೆಡಿಎಸ್-ಕಾಂಗ್ರೆಸ್ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಹಾಯ್ದಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಆಡಳಿತವನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ದೆಹಲಿಗೆ ಎಟಿಎಂ ಆಗುತ್ತದೆ, ಜೆಡಿಎಸ್ ಆಡಳಿತದಲ್ಲಿ ಕರ್ನಾಟಕ ಒಂದು ಕುಟುಂಬಕ್ಕೆ ಎಟಿಎಂ ಆಗುತ್ತದೆ. ಈ ಎರಡೂ ಪಕ್ಷಗಳೂ ಭ್ರಷ್ಟಾಚಾರದ ಮೂಲಕ ಈ ನೆಲದ ಅಭಿವೃದ್ಧಿಯನ್ನು ತಡೆಯುತ್ತಾ ಬಂದಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ದಾಪುಗಾಲಿಡಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಭ್ರಷ್ಟರು, ಅಪರಾಧಿಗಳು ಮತ್ತು ಕೋಮುವಾದಿಗಳಿಂದ ತುಂಬಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೇಶಕ್ಕೆ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಬಿಜೆಪಿಗೆ ಎರಡು ಬಾರಿ ಅವಕಾಶ ಲಭಿಸಿತ್ತು. ಲಭಿಸಿದ ಮೊದಲ ಅವಕಾಶದಲ್ಲಿ ಬಿಜೆಪಿಯು ದಲಿತರೋರ್ವರನ್ನು ರಾಷ್ಟ್ರಪತಿ ಮಾಡಿದರೆ, ಎರಡನೇ ಅವಕಾಶದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದೆ. ಬೊಮ್ಮಾಯಿ ಸರ್ಕಾರದ ಶಿಫಾರಸ್ಸಿನ ಮೇರೆಗೆ ‘ಬೆಟ್ಟ-ಕುರುಬ’ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲಾಗಿದೆ. ಮೋದಿ ಸರ್ಕಾರದ ಈ ನಿರ್ಧಾರದಿಂದ ಈ ಸಮುದಾಯದ ಸಾವಿರಾರು ಮಂದಿ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
2024 ರ ಜನವರಿ ತಿಂಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಲು ಈಗಲೇ ಕಾಯ್ದಿರಿಸಿ ಆ ವೇಳೆಗೆ ಅಯೋಧ್ಯೆಯಲ್ಲಿ ಬಹುನಿರೀಕ್ಷಿತ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ. ದುರಾದೃಷ್ಟವೆಂದರೆ, ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಈ ಕಾರ್ಯವನ್ನು ಕಾನೂನಿನ ಸರಪಳಿಯಲ್ಲಿ ತಡೆಹಿಡಿದಿತ್ತು. ಪ್ರಧಾನಿ ಮೋದಿಯವರು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000 ರೂಪಾಯಿ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರು ಈ ಯೋಜನೆಗೆ ಹೆಚ್ಚುವರಿಯಾಗಿ 4,000 ರೂಪಾಯಿ ಸೇರಿಸಿ ಪ್ರತಿ ರೈತರಿಗೂ ಒಟ್ಟು 10,000 ರೂಪಾಯಿ ಲಭ್ಯವಾಗುವಂತೆ ಮಾಡಿದರು ಎಂದು ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.