• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಜಟಿಲ ಸಿಕ್ಕುಗಳ ನಡುವೆ ರಂಗಭೂಮಿಯ ಆದ್ಯತೆಗಳು

ನಾ ದಿವಾಕರ by ನಾ ದಿವಾಕರ
September 25, 2023
in ಅಂಕಣ, ಅಭಿಮತ
0
ಜಟಿಲ ಸಿಕ್ಕುಗಳ ನಡುವೆ ರಂಗಭೂಮಿಯ ಆದ್ಯತೆಗಳು
Share on WhatsAppShare on FacebookShare on Telegram

ಸಮಕಾಲೀನ ಸಮಾಜ ಎದುರಿಸುತ್ತಿರುವ ಸಾಂಸ್ಕೃತಿಕ ಬಿರುಕುಗಳನ್ನು ಸರಿಪಡಿಸುವ ತುರ್ತು ಇದೆ

ADVERTISEMENT

(ಮೈಸೂರಿನ ನಿರಂತರ ಫೌಂಡೇಷನ್‌ ದಿನಾಂಕ 24-9-2023ರಂದು ಮೈಸೂರಿನ ಗಾಂಧಿಭವನದ ಆವರಣದಲ್ಲಿ ಆಯೋಜಿಸಿದ್ದ “ ಸಹಜರಂಗ ” ರಂಗ ತರಬೇತಿ ಶಿಬಿರದ ಉದ್ಘಾಟನೆಯ ಸಂದರ್ಭದಲ್ಲಿ ಮಂಡಿಸಿದ ಉಪನ್ಯಾಸ)

21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ನವ ಭಾರತ ವಿಶ್ವದಲ್ಲೇ ಅತಿ ಹೆಚ್ಚಿನ ಯುವಶಕ್ತಿಯನ್ನು ಹೊಂದಿರುವ ದೇಶವಾಗಿದೆ. ಇದು ಎರಡು ರೀತಿಯಲ್ಲಿ ಆಶಾದಾಯಕ. ಮೊದಲನೆಯದು ಈ ಯುವಶಕ್ತಿಯ ಬೌದ್ಧಿಕ ಪರಿಶ್ರಮ ಮತ್ತು ಜ್ಞಾನ ಶಕ್ತಿ ಮುಂದಿನ ಶತಮಾನಗಳಲ್ಲಿ ಭಾರತವನ್ನು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿಸಬಹುದು. ಎರಡನೆಯದು ಈ ಯುವಶಕ್ತಿಯಲ್ಲಿ ಭಾರತದ ಬಹುಸಾಂಸ್ಕೃತಿಕ ಚಿಂತನೆಗಳು, ಬಹುತ್ವದ ಆಲೋಚನೆಗಳು ಮೈಗೂಡಿದ ಪಕ್ಷದಲ್ಲಿ ಇಂದು ಶಿಥಿಲವಾಗುತ್ತಿದೆ ಎನಿಸುವ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳು, ತಮ್ಮ ಮೂಲ ರೂಪಕ್ಕೇ ಹಿಂದಿರುಗಿ ಮತ್ತಷ್ಟು ಗಟ್ಟಿಯಾಗಬಹುದು. ಇಲ್ಲಿ ಎದುರಿಸಬಹುದಾದ ಒಂದು ಅಪಾಯ ಎಂದರೆ ಇಡೀ ಜಗತ್ತು ಮಾರುಕಟ್ಟೆ ಆರ್ಥಿಕತೆಯ ಕಾರ್ಪೋರೇಟ್‌ ಗ್ರಾಹಕ ಸಂಸ್ಕೃತಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಈ ಅಗಾಧ ಯುವ ಶಕ್ತಿ ಮಾರುಕಟ್ಟೆಯ ಅಗ್ಗದ ಶ್ರಮಕೂಲಿಗಳಾಗಿ ಬಳಕೆಯಾಗಬಹುದು ತನ್ಮೂಲಕ ತನ್ನ ಮೂಲ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳಬಹುದು.

ಈ ದ್ವಂದ್ವದ ನಡುವೆಯೇ ನಾವು ಒಂದು ಸಮಾಜವಾಗಿ ವರ್ತಮಾನದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂದಿನ ಭಾರತದ ವೈ಼ಶಿಷ್ಟ್ಯ ಎಂದರೆ ನಮ್ಮ ಮೂಲ ಸಂಸ್ಕೃತಿ ಎಷ್ಟು ವೈವಿಧ್ಯತೆಯನ್ನು ಹೊಂದಿದೆಯೋ, ಈ ಸಂಸ್ಕೃತಿಯು ಎದುರಿಸುತ್ತಿರುವ ಸಿಕ್ಕು-ಸಮಸ್ಯೆ-ಸವಾಲುಗಳೂ ಅಷ್ಟೇ ವೈವಿಧ್ಯತೆಯಿಂದ ಕೂಡಿವೆ. ಇನ್ನೂ ಹೆಚ್ಚಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಹಾಗಾಗಿಯೇ ಸ್ವಾತಂತ್ರ್ಯಪೂರ್ವ ಭಾರತದ ದಾರ್ಶನಿಕ ನಾಯಕರು (ಗಾಂಧಿ-ಅಂಬೇಡ್ಕರ್-ನೆಹರೂ ಆದಿಯಾಗಿ) ಹಾಗೂ ತತ್ವಜ್ಞಾನಿಗಳು  (ವಿವೇಕಾನಂದ-ಠಾಗೂರ್‌ ಇತ್ಯಾದಿ) ಹಾಕಿಕೊಟ್ಟ ಹಾದಿಯನ್ನು ಕ್ರಮಿಸುತ್ತಿರುವಾಗ ನಮಗೆ ಭೂತಕಾಲದ ತಡೆಗೋಡೆಗಳಷ್ಟೇ ಪ್ರಭಾವಶಾಲಿಯಾದ ವರ್ತಮಾನದ ಅಡ್ಡಗೋಡೆಗಳೂ ಎದುರಾಗುತ್ತಿರುತ್ತವೆ. ಶತಮಾನಗಳ ಇತಿಹಾಸವಿರುವ ಭಾರತೀಯ ಸಂಸ್ಕೃತಿಯನ್ನು, ಸಾಂಸ್ಕೃತಿಕ ಪುನರುತ್ಥಾನ, ಧಾರ್ಮಿಕ ಪುನರುಜ್ಜೀವನ ಮತ್ತು ರಾಷ್ಟ್ರೀಯತೆಯ ಸಂಕುಚಿತ ಆವರಣದೊಳಗೆ ಇರುಕಿಸಿ ನಮಗೆ ಬೇಕಾದ ನಿರ್ಬಂಧಿತ ಕೋಶಗಳೊಳಗೆ ಬಂಧಿಸಿ ಹೊಸ ಸ್ವರೂಪ ನೀಡಲು ಪ್ರಯತ್ನಿಸಲಾಗುತ್ತಿದೆ.

ಈ ಧರ್ಮ-ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಪ್ರಯತ್ನಗಳು ನಮ್ಮ ಸಮಾಜ ಮತ್ತು ದೇಶ ಕ್ರಮಿಸಿಬಂದ ಹಾದಿಯನ್ನು ಅಪಮೌಲ್ಯಗೊಳಿಸುವಷ್ಟೇ ಪರಿಣಾಮಕಾರಿಯಾಗಿ ಭವಿಷ್ಯದಲ್ಲಿ ನಾವು ಕ್ರಮಿಸಬೇಕಾದ ಸುದೀರ್ಘ ಪಯಣದ ಪಥದಲ್ಲಿ ಹಲವಾರು ಕುಳಿಗಳನ್ನು, ಕಂದರಗಳನ್ನು ನಿರ್ಮಿಸುತ್ತಿದೆ. ಅಷ್ಟೇ ಅಲ್ಲದೆ ಹಾದಿಯ ಇಕ್ಕೆಲಗಳಲ್ಲಿ ನಮಗೆ ಕಾಣಬಹುದಾದ ಶತಮಾನಗಳಷ್ಟು ಹಳೆಯದಾದ ಆಲದ ರೆಂಬೆಗಳನ್ನು ಕತ್ತರಿಸುತ್ತಾ, ಜಾಲಿ ಗಿಡಗಳನ್ನು, ಮುಳ್ಳುಗಂಟಿಗಳನ್ನು ನೆಡುವ ಒಂದು ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಜಾಲಿಯ ನೆರಳು ನೆರಳಲ್ಲ ಎಂಬ ಪಾರಂಪರಿಕ ಮಾತೊಂದಿದೆ ಆದರೆ ನಾವು ಜಾಲಿಯ ಕಾಡುಗಳನ್ನೇ ನಿರ್ಮಿಸಲು ಮುಂದಾಗಿದ್ದೇವೆ.. ಇಲ್ಲಿ ಜಾತಿ, ಭಾಷೆ, ಪಂಗಡ, ಪಂಥ ಹಾಗೂ ಪ್ರಾದೇಶಿಕತೆಯ ವಿಷದ ಮುಳ್ಳುಗಳನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ. ಮನುಷ್ಯ ಸಮಾಜವನ್ನು ಅಡ್ಡಡ್ಡಲಾಗಿ ಕತ್ತರಿಸುತ್ತಾ ಪಾತಾಳದವರೆಗೂ ವಿಭಜಿಸುವ ಮೂಲಕ ಯಾವುದೋ ಒಂದು ಶ್ರದ್ಧೆ ಅಥವಾ ನಂಬಿಕೆ ಅಥವಾ ಅನುಕರಣೆಯ ಆಚರಣೆಗಳಲ್ಲಿ ಸಮಸ್ತ ಜನಕೋಟಿಯನ್ನೂ ಬಂಧಿಸುವ ಪ್ರಯತ್ನಗಳಿಗೆ ನಾವು ಮುಖಾಮುಖಿಯಾಗುತ್ತಿದ್ದೇವೆ.

ಈ ಮುಖಾಮುಖಿಯ ನಡುವೆಯೇ ವರ್ತಮಾನದ ಯುವ ಸಮೂಹದ ಒಂದೆ ಬೃಹತ್ತಾದ ಸವಾಲು ಸಹ ಎದುರಾಗುತ್ತದೆ. ಭಾರತದ ಸಂವಿಧಾನ ಅಪೇಕ್ಷಿಸುವ ಸಾಮಾಜಿಕ-ಆರ್ಥಿಕ ಸಮಾನತೆ, ಸಾಂಸ್ಕೃತಿಕ ಬಹುತ್ವ, ಜನಜೀವನದ ಸಮನ್ವಯ-ಸಹಬಾಳ್ವೆ ಹಾಗೂ ಮಾನವ ಸಮಾಜದ ಏಕತೆ ಮತ್ತು ಅಖಂಡತೆ- ಇವೆಲ್ಲವನ್ನೂ ಭವಿಷ್ಯಕ್ಕಾಗಿ ಕಾಪಿಡಬೇಕಾದ ಕರ್ತವ್ಯ ಈ ಯುವ ಸಂಕುಲದ ಹೆಗಲಮೇಲಿದೆ. ನಾವು ದೇಶದ ಅಖಂಡತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತೇವೆ ಆದರೆ ಆಂಧ್ರದ ಪ್ರಸಿದ್ಧ ಕವಿ ಗುರ್ಜಡಾ ಅಪ್ಪಾರಾವ್‌ ಅವರ ಕವಿವಾಣಿ “ ದೇಶ ಎಂದರೆ ಮಣ್ಣಲ್ಲವೋ ಮನುಷ್ಯರು ” ಇಂದು ನಮ್ಮ ನಡುವೆ ಮುಂಜಾವಿನ ಸುಪ್ರಭಾತದಂತೆ ಮೊಳಗಬೇಕಿದೆ.  ನಾವು ಸಂರಕ್ಷಿಸಬೇಕಿರುವುದು, ಮುನ್ನಡೆಸಬೇಕಿರುವುದು ಮಾನವ ಸಮಾಜದ ಅಖಂಡತೆಯನ್ನು , ಮನುಜ ಸೂಕ್ಷ್ಮತೆಯ ತಂತುಗಳನ್ನು, ಮನುಜ ಸಂವೇದನೆಯ ತರಂಗಗಳನ್ನು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಚುರುಕಾಗಿಸಬೇಕಿರುವುದು ನಮ್ಮೊಳಗೆ ಸಹಜವಾಗಿಯೇ ಸುಪ್ತವಾಗಿರಬಹುದಾದ ಅಥವಾ ಯಾವುದೋ ಕಾರಣದಿಂದ ಕಲುಷಿತವಾಗಿರಬಹುದಾದ ಮನುಜ ಪ್ರಜ್ಞೆಯನ್ನು.

ಸುತ್ತಲ ಸಮಾಜವು ಸಾಂಸ್ಕೃತಿಕ-ಸಾಮಾಜಿಕ ಪಲ್ಲಟಗಳನ್ನು ಎದುರಿಸಿದಾಗಲೆಲ್ಲಾ, ಮಾನವ ಬದುಕುವ ನೈಸರ್ಗಿಕ ವಾತಾವರಣ ಮತ್ತು ನಿತ್ಯ ಬದುಕಿನ ಪರಿಸರ ಕಲುಷಿತವಾದಾಗಲೆಲ್ಲಾ, ನಾವು ನಿಂತ ನೆಲ, ಅವಲಂಬಿಸುವ ನೆಲೆ ಶಿಥಿಲವಾಗುತ್ತಿರುವಂತೆ ಭಾಸವಾದಾಗಲೆಲ್ಲಾ, ಈ ಮನುಜ ಪ್ರಜ್ಞೆಯನ್ನು ಬಡಿದೆಬ್ಬಿಸುವ ಜವಾಬ್ದಾರಿ ಯಾವುದೇ ಸಾಂಸ್ಕೃತಿಕ ಮನಸ್ಸಿನ ಆದ್ಯತೆ ಮತ್ತು ಕರ್ತವ್ಯವಾಗಿರುತ್ತದೆ. ವರ್ತಮಾನದ ಸನ್ನಿವೇಶದಲ್ಲಿ ಈ ಜವಾಬ್ದಾರಿಯ ನೊಗ ಇರುವುದು ರಂಗಭೂಮಿಯ ಹೆಗಲ ಮೇಲೆ ಎನ್ನುವುದು ನನ್ನ ಖಚಿತ ನಂಬಿಕೆ, ವಿಶ್ವಾಸ ಮತ್ತು ಭರವಸೆ. ಸಾಹಿತ್ಯ, ಕಲೆ ಮತ್ತು ರಂಗಭೂಮಿಯಲ್ಲಿ ಅಂತರ್ಗತವಾಗಿರಬೇಕಾದ ಸೃಜನಾತ್ಮಕ ನೆಲೆಗಳು ಈ ಸಾಂಸ್ಕೃತಿಕ ಲೋಕದ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ನೊಗವನ್ನು ಹೊತ್ತು ಸಮಾಜವನ್ನು ಮುನ್ನಡೆಸುವ ಜೋಡೆತ್ತುಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿರುವ ರಂಗಾಸಕ್ತ ಯುವ ಶಕ್ತಿಯ ನಡುವೆಯೇ ಉಗಮಿಸಬೇಕಲ್ಲವೇ ?

ಈ ಜವಾಬ್ದಾರಿ ದೊಡ್ಡದು, ಇದರ ವ್ಯಾಪ್ತಿ, ಆಲ-ಅಗಲ ಅಪಾರ, ಆದರೆ ನಿಭಾಯಿಸುವುದು ಕಷ್ಟವೇನಲ್ಲ. ರಂಗಭೂಮಿ ಎನ್ನುವುದು ಸಮಾಜವನ್ನು ಕಟ್ಟುವ ಮೇಸ್ತ್ರಿಯಂತೆ ತನ್ನನ್ನು ತಾನು ಅನಾವರಣಗೊಳಿಸಿಕೊಳ್ಳುತ್ತಾ ಜನಸಾಮಾನ್ಯರ ಮನದಾಳವನ್ನು ತಟ್ಟುವ ಕ್ಷಮತೆ, ದಾರ್ಷ್ಟ್ಯ ಮತ್ತು ಬದ್ಧತೆಯನ್ನು ಹೊಂದಿರುವ ಒಂದು ಕ್ಷೇತ್ರ. ನಿಮ್ಮ ಮನಸಿನಲ್ಲಿ ಎರಡು  ಪ್ರಶ್ನೆಗಳು ಏಳಬಹುದು. ಇದು ಹೇಗೆ ಸಾಧ್ಯ ಎನ್ನುವ ಸಂಕೀರ್ಣ ಪ್ರಶ್ನೆಯೊಂದಿಗೇ ನಾವೇ ಏಕೆ ಎನ್ನುವ ಜಟಿಲ ಪ್ರಶ್ನೆ. ಪುರಾಣ-ಚರಿತ್ರೆ ಮತ್ತು ಆಗಿಹೋದ ಕಾಲಮಾನಗಳನ್ನು ಭೇದಿಸಿ ನೋಡುವ ಸಾಮರ್ಥ್ಯ ಇರುವಷ್ಟೇ ವರ್ತಮಾನದ ಸನ್ನಿವೇಶಕ್ಕನುಗುಣವಾಗಿ ಇವುಗಳನ್ನು ಸೃಜನಶೀಲತೆಯಿಂದ ಬಳಸಿಕೊಂಡು ಭವಿಷ್ಯವನ್ನು ಕಟ್ಟುವ ಸುಭದ್ರ ತಳಪಾಯವನ್ನು ನಿರ್ಮಿಸುವ ಅವಕಾಶ ಮತ್ತು ಕ್ಷಮತೆ ರಂಗಭೂಮಿಗೆ ಇರುತ್ತದೆ. ರಂಗಭೂಮಿ ತನ್ನ ಮುಂದಿನ ಸಮಾಜವನ್ನು ಮಾನವನ ದೇಹದಂತೆಯೇ ನೋಡುತ್ತದೆ. Human Anatomy ಯಲ್ಲಿ ನೀವು ಹೇಗೆ ತಲೆಯಿಂದ ಪಾದದವರೆಗೂ ಜೀವಂತಿಕೆಯನ್ನು ಹೊರಹೊಮ್ಮುವ ಜೀವಕೋಶಗಳನ್ನು ಕಾಣುವಿರೋ ಹಾಗೆಯೇ ರಂಗಭೂಮಿಯಲ್ಲಿ ನಿಮ್ಮ ವಿಭಿನ್ನ ಕ್ರಿಯೆಗಳ ಮೂಲಕ (ನಾಟಕ ರಚನೆ, ನಟನೆ, ರಂಗಸಜ್ಜಿಕೆ, ಪ್ರಸಾಧನ, ರಂಗಸಂಗೀತ, ಬೆಳಕಿನ ವಿನ್ಯಾಸ, ನಿರ್ದೇಶನ) ನಿಮ್ಮ ಆಂಗಿಕ ಅಭಿನಯ, ಭಾವುಕ ಅಭಿವ್ಯಕ್ತಿಯನ್ನು ಸಮಾಜದ ನಡುವಿನಲ್ಲೇ ಕಂಡುಕೊಳ್ಳುತ್ತಾ ಪ್ರೇಕ್ಷಕರ ಮನಸ್ಸಿನಲ್ಲಿ ನಾಟುತ್ತೀರಿ. ಹಾಗೆಯೇ ನೀವು ನಿಂತ ನೆಲವನ್ನು, ನಿಮ್ಮ ಸುತ್ತಲಿನ ಜಗತ್ತನ್ನು ಹಾಗೂ ಜನಜೀವನವನ್ನು ಸಂವೇದನಾಶೀಲತೆಯಿಂದ ನೋಡುವ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಳ್ಳುತ್ತೀರಿ.

ಬಾಹ್ಯ ಸಮಾಜದಲ್ಲಿ ಏನೋ ಒಂದು ಆಗಿರುವ ನೀವು ರಂಗ ವೇದಿಕೆಯಲ್ಲಿ ಒಂದು ಪಾತ್ರವಾಗಿ, ತಲ್ಲೀನತೆಯೊಂದಿಗೆ ಕಳೆದುಹೋಗಿರುತ್ತೀರಿ. ಈ ತಲ್ಲೀನತೆ ನಿಮ್ಮನ್ನು ಹೊರಜಗತ್ತಿಗೆ ವಿಮುಖವಾಗಿಸದೆ, ಆ ಜಗತ್ತಿನಲ್ಲಿರುವ ನೋವು-ವೇದನೆ-ಯಾತನೆ-ದೌರ್ಜನ್ಯಗಳ ಸುತ್ತ ನಿಮ್ಮ ಮನದಾಳದ ಅಭಿವ್ಯಕ್ತಿಗೆ ಒಂದು ಭೂಮಿಕೆಯನ್ನು ಒದಗಿಸಬೇಕಾಗುತ್ತದೆ.  ಸೃಜನಶೀಲತೆ ರಂಗಭೂಮಿಯ ಅಂತಃಶಕ್ತಿಯೂ ಹೌದು. ಹಾಗಾಗಿ ನಿಮ್ಮ ಬಾಹ್ಯ ಅಸ್ಮಿತೆಗಳ ಕವಚಗಳನ್ನು ಕಳಚಿಟ್ಟು, ಆಂತರಿಕ ಭಾವನಾತ್ಮಕ ಪೊರೆಗಳನ್ನು ಬದಿಗಿಟ್ಟು ರಂಗಭೂಮಿಯ ಮೇಲೆ ನೀವು ಒಂದು ಪಾತ್ರದ ಮೂಲಕ ಅಭಿವ್ಯಕ್ತಿಸುವ ಭಾವನೆಗಳು ಸಮಾಜವನ್ನು ಸರಿದಾರಿಗೆ ಕರೆದೊಯ್ಯುವ ಒಂದು ನಾವೆಯಾಗಲು ಸಾಧ್ಯವಿದೆ. ಸಾಹಿತ್ಯವೂ ಈ ಕೆಲಸವನ್ನು ಮಾಡಲು ಸಾಧ್ಯ. ಆದರೆ ರಂಗಭೂಮಿ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲದು ಏಕೆಂದರೆ ರಂಗನಿರ್ದೇಶಕರಿಗೆ ಸೃಜನಾತ್ಮಕ ಸ್ವಾತಂತ್ರ್ಯ ಇರುತ್ತದೆ/ಇರಬೇಕಾಗುತ್ತದೆ. ಇತಿಹಾಸದಿಂದ ಹೆಕ್ಕಿ ತೆಗೆದುದನ್ನೂ ಭವಿಷ್ಯದ ಮಾನವ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುವಂತೆ ರಂಗರೂಪಕ್ಕೆ ಇಳಿಸುವ ಸಾವಿರಾರು ಪ್ರಯತ್ನಗಳನ್ನು ನೀವು ನೋಡಿರುತ್ತೀರಿ. ಇಂದು ಇದಕ್ಕೆ ತದ್ವಿರುದ್ಧವಾದ ಪ್ರವೃತ್ತಿಯೂ ಢಾಳಾಗಿ ಕಾಣುತ್ತಿದೆ. ಮತ್ತೊಂದೆಡೆ ಕಾರ್ಪೋರೇಟ್‌ ಮಾರುಕಟ್ಟೆಯು ತನ್ನ ಬಂಡವಾಳದ ತೋಳ್ಬಲವನ್ನು ಅವಲಂಬಿಸಿ ರಂಗಭೂಮಿಯನ್ನೂ ಆಪೋಷನ ತೆಗೆದುಕೊಳ್ಳುವುದೇನೋ ಎಂಬ ಆತಂಕವೂ ನಮ್ಮನ್ನು ಕಾಡಬೇಕಿದೆ.

ಈ ಸವಾಲಿನ ನಡುವೆಯೇ, ರಂಗಭೂಮಿಯನ್ನು ಸಲಹುವ, ರಂಗಕಲೆಯನ್ನು ಕಾಪಾಡುವ ಮತ್ತು ಒಂದು ಆರೋಗ್ಯಕರ-ಸಂವೇದನಾಶೀಲ-ಮನುಜಸೂಕ್ಷ್ಮ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಅಳಿಲು ಸೇವೆ ಸಲ್ಲಿಸುವ ಸದಾವಕಾಶ ನಿಮ್ಮದಾಗಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸಬೇಕಾದರೆ ನಿಮ್ಮಲ್ಲಿ ಇತಿಹಾಸ ಪ್ರಜ್ಞೆ, ವರ್ತಮಾನದ ಕಾಣ್ಕೆ ಮತ್ತು ಭವಿಷ್ಯದ ಮುಂಗಾಣ್ಕೆ ಅವಶ್ಯವಾಗಿ ಇರಲೇಬೇಕಾಗುತ್ತದೆ. ಕನ್ನಡ ರಂಗಭೂಮಿಯ ಇತಿಹಾಸವನ್ನು ಅರಿಯುವುದರೊಂದಿಗೇ ಭಾರತದ ಬಹುಸಾಂಸ್ಕೃತಿಕ ಚರಿತ್ರೆಯನ್ನು ಮನನ ಮಾಡಿಕೊಳ್ಳುತ್ತಾ, ಇಂದು ನಮ್ಮ ಸುತ್ತಲ ಸಮಾಜ ಎದುರಿಸುತ್ತಿರುವ ಸಿಕ್ಕುಗಳನ್ನು, ಜಟಿಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಂಗಭೂಮಿಯನ್ನು ಒಂದು ಸೃಜನಾತ್ಮಕ-ಬೌದ್ಧಿಕ ವಾಹಕವನ್ನಾಗಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಇಂತಹ ಶಿಬಿರಗಳ ಮೂಲಕ, ನೀವು ಅಭಿನಯಿಸಲಿರುವ ರಂಗ್ರಪ್ರಯೋಗಗಳ ಮೂಲಕ ನೀವು ಈ ನೈತಿಕ ಹೊರೆಯನ್ನು  ಯಶಸ್ವಿಯಾಗಿ ಹೊತ್ತು ಒಂದು ಮಾನವೀಯ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೀರೆಂಬ ಸದ್ಭಾವನೆ ಮತ್ತು ಸದಾಶಯದೊಂದಿಗೆ ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯವನ್ನು ಅಪೇಕ್ಷಿಸುತ್ತೇನೆ.

-ನಾ ದಿವಾಕರ

Tags: Human AnatomyMysururangabhumi
Previous Post

ಬಿಗ್‌ ಬಾಸ್‌ ಕನ್ನಡ 10ನೇ ಸೀಸನ್‌ ಆರಂಭ ಯಾವಾಗಿಂದ ಗೊತ್ತಾ..?

Next Post

ಸೆ.26, ಬೆಂಗಳೂರು ಬಂದ್‌: ಮು.ಚಂದ್ರು , ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೂಪುರೇಷೆ ನಿರ್ಧಾರ..!

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 22, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
Next Post
ಸೆ.26, ಬೆಂಗಳೂರು ಬಂದ್‌: ಮು.ಚಂದ್ರು , ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೂಪುರೇಷೆ ನಿರ್ಧಾರ..!

ಸೆ.26, ಬೆಂಗಳೂರು ಬಂದ್‌: ಮು.ಚಂದ್ರು , ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೂಪುರೇಷೆ ನಿರ್ಧಾರ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada