ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಉದ್ಯಮಿ ಹಾಗು ಸ್ನೇಹಿತ ವೈಶಾಕ್ ಆತ್ಮ** ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿ ವೈಶಾಕ್ ಆರ್ಥಿಕ ಸಂಕಷ್ಟದಲ್ಲಿದ್ದರು. ಅವರಿಗೆ ಆಗಾಗ ಹಣ ನೀಡುತ್ತಿದ್ದೆ ಎಂದು ನಟಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ತನಿಖೆ ವೇಳೆ ವೈಶಾಕ್ ಕಳೆದ ಕೆಲವು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು. ಇದೇ ಕಾರಣದಿಂದ ಅವರು ಖಿನ್ನತೆಗೂ ಒಳಗಾಗಿದ್ದರು ಎಂಬ ಮಾಹಿತಿ ಹೊರಬಂದಿದೆ. ಪೊಲೀಸ್ ವಿಚಾರಣೆ ವೇಳೆ ನಟಿ ಕೃಷಿ ತಾಪಂಡ, ಸ್ನೇಹಿತನಿಗೆ ಆಗಾಗ ಆರ್ಥಿಕ ಸಹಾಯ ಮಾಡುತ್ತಿದ್ದ ಬಗ್ಗೆಯೂ ವಿವರಿಸಿದ್ದಾರೆ. 40 ರಿಂದ 50 ಸಾವಿರ ರೂ.ವರೆಗೆ ಹಲವು ಬಾರಿ ಹಣ ವರ್ಗಾವಣೆ ಮಾಡಿದ್ದ ದಾಖಲೆಗಳನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ ಏನು..?
ನಟಿ ಕೃಷಿ ತಾಪಂಡ ಅವರ ಆರ್ಆರ್ ನಗರದ ಮನೆಯಲ್ಲಿ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಅವರು ಇತ್ತೀಚೆಗೆ ನೇಣು ಬಿಗಿದು ಆತ್ಮ** ಮಾಡಿಕೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿತ್ತು. ವೈಶಾಖ್ ಅವರು ಮದುವೆಯಾಗಿದ್ದರೂ, ಅವರು ಪತ್ನಿಯಿಂದ ದೂರವಾಗಿದ್ದರು. ಬಳಿಕ ಸ್ನೇಹಿತೆ ಕೃಷಿ ತಾಪಂಡ ಅವರ ಫ್ಲ್ಯಾಟ್ನಲ್ಲಿ ವಾಸವಾಗಿದ್ದರು. ವೈಶಾಖ್ ಅವರ ಪತ್ನಿ, ಯಾರ ಮೇಲೂ ಅನುಮಾನವಿಲ್ಲ. ಆದರೆ ಆತ್ಮಹತ್ಯೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕೃಷಿ ತಾಪಂಡ ಕೂಡ ತನಿಖೆಯಲ್ಲಿ ಸಹಕರಿಸುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






