ಗೋವಾದಲ್ಲಿ ಉದ್ಭವಿಸಿರುವ ಮಹತ್ತರ ರಾಜಕೀಯ ಬೆಳವಣಿಗೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ನ ಏಳು ಶಾಸಕರು ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಈ ಮಧ್ಯೆ ಇದರ ಲಾಭ ಪಡೆಯಲು ಮುಂದಾಗಿರುವ ಎಎಪಿ ಹಾಗು ಟಿಎಂಸಿ ವಿಪಕ್ಷ ಸ್ಥಾನಕ್ಕೇರಲು ಕಸರತ್ತು ನಡೆಸಿದೆ.
ಸದ್ಯ ಪ್ರತಿಪಕ್ಷ ನಾಯಕನ ಸ್ಥಾನದಿಂದ ಮೈಕಲ್ ಲೋಬೋರನ್ನು ವಜಾಗೊಳಿಸಿರುವ ಕಾಂಗ್ರೆಸ್ ಈ ಇಬ್ಬರು ನಾಯಕರು ಬಿಜೆಪಿಯೊಂದಿಗೆ ಸೇರಿಕೊಂಡು ಹುನ್ನಾರ ಮಾಡುವ ಮೂಲಕ ಚೂರಿ ಹಾಕಿದ್ದಾರೆ ಎಂದು ಕಿಡಿಕಾರಿದೆ.
2022 ಪೇಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಚಾರದ ವೇಳೆ ಎಎಪಿ ಹಾಗು ಟಿಎಂಸಿ ನಾಯಕರು ನೀವು ಕಾಂಗ್ರೆಸ್ಗೆ ಹಾಕುವ ಪ್ರತಿ ಮತ ಬಿಜೆಪಿಗೆ ಹಾಕಿದಂತೆ ಎಂದು ಹೇಳಿದ್ದವು. ಆದರೆ, ಅದು ಇಂದಿನ ದಿನ ನಿಜವಾಗಿದೆ ಎಂದು ಎರಡು ಪಕ್ಷಗಳು ಮಹತ್ತರ ಬೆಳವಣಿಗೆ ನಂತರ ಉಲ್ಲೇಖಿಸಿವೆ.
ಮಹಾರಾಷ್ಟ್ರ ಗೋಮಾಂತಕ ಪಾರ್ಟಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಟಿಎಂಸಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ರವರ ತಂತ್ರಗಾರಿಕೆಯ ಹೊರತಾಗಿಯೂ ಸಹ ಶೇ 5.1ರಷ್ಟು ಮತ ಗಳಿಸಿ 2 ಸ್ಥಾನಗಳನ್ನು ಗೆಲುಲು ಶಕ್ತವಾಯಿತು.
ಮುಂದಿನ ಕಾರ್ಯತಂತ್ರವನ್ನ ಹೆಣೆಯುವ ಸಲುವಾಗಿ ಡೆರೆನ್ ಓ ಬ್ರಿಯಾನ್ ಹಾಗು ಗೋವಾ ಉಸ್ತುವಾರಿ ಕೀರ್ತಿ ಅಜಾದ್ ಪಣಜಿಯಲ್ಲಿ ಬೀಡು ಬಿಟ್ಟಿದ್ದು ಕಾರ್ಯತಂತ್ರವನ್ನ ಹೆಣೆಯುವಲ್ಲಿ ನಿರತರಾಗಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಶೇ 6.77 ಮತಗಳನ್ನ ಪಡೆಯುವ ಮೂಲಕ 2 ಸ್ಥಾನಗಳಿಗೆ ತೃಪಿ ಪಟ್ಟುಕೊಂಡಿತ್ತು.
ಇತ್ತ ಈ ಎರಡು ಪಕ್ಷಗಳ ನಾಯಕರು ಕಾರ್ಯತಂತ್ರ ಹೆಣೆಯುವಲ್ಲಿ ನಿರತವಾಗಿದ್ದು ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.