ನಾಲ್ವರು ರಾಜ್ಯಸಭಾ ಸಂಸದರ ಸಹಿಯನ್ನು ನಕಲು ಮಾಡಿದ ಆರೋಪದಲ್ಲಿ ಹಕ್ಕುಚ್ಯುತಿ ಮಂಡನೆ ಹಿನ್ನೆಲೆ ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಶುಕ್ರವಾರ ಸಂಸತ್ತಿನ ಮೇಲ್ಮನೆಯಿಂದ (ರಾಜ್ಯಸಭೆ) ಅನಿರ್ಧಾಷ್ಟವಧಿಗೆ ಅಮಾನತುಗೊಳಿಸಲಾಗಿದೆ.
ಹಕ್ಕುಚ್ಯುತಿ ಕುರಿತು ರಾಘವ್ ಅವರ ವಿರುದ್ಧದ ಪ್ರಕರಣದ ತನಿಖೆಯ ವಿಶೇಷಾಧಿಕಾರಗಳ ಸಮಿತಿಯು ತನ್ನ ವರದಿ ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅಮಾನತಿನಲ್ಲಿ ಇಡಲು ಸದನದ ನಾಯಕ ಪಿಯೂಷ್ ಗೋಯಲ್ ಮಂಡಿಸಿದ ನಿರ್ಣಯವನ್ನು ರಾಜ್ಯಸಭೆ ಅಂಗೀಕರಿಸಿತು.
ರಾಘವ್ ಚಡ್ಡಾ ಅವರನ್ನು ಅಮಾನತು ಮಾಡಿರುವ ಬಗ್ಗೆ ರಾಜ್ಯಸಭೆ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದೆ. ಇದೇ ವೇಳೆ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಅಮಾನತು ಅವಧಿಯನ್ನು ಸಹ ವಿಸ್ತರಿಸಲಾಗಿದೆ.
ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆಗಸ್ಟ್ 7 ರಂದು ನಿರ್ಣಯದಲ್ಲಿ ರಾಘವ್ ಚಡ್ಡಾ ಸೇರಿಸಿದ್ದಾರೆ ಎಂದು ರಾಜ್ಯಸಭಾ ಸಂಸದರಾದ ಸಸ್ಮಿತ್ ಪಾತ್ರ, ಎಸ್ ಫಾಂಗ್ನಾನ್ ಕೊನ್ಯಾಕ್, ಎಂ ತಂಬಿದುರೈ ಮತ್ತು ನರಹರಿ ಅಮೀನ್ ದೂರಿ ಚಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಬುಧವಾರ ಈ ವಿಷಯವನ್ನು ಪರಿಶೀಲಿಸಲು ವಿಶೇಷಾಧಿಕಾರ ಸಮಿತಿಗೆ ಸಂಸದರ ದೂರುಗಳನ್ನು ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇರಳ ಇನ್ನು ಮುಂದೆ ಕೇರಳಂ | ನಿಲುವಳಿ ಮಂಡಿಸಿದ ಪಿಣರಾಯಿ
ಈ ನಡುವೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಚಡ್ಡಾ ಅವರನ್ನು “ಉದ್ದೇಶಪೂರ್ವಕವಾಗಿ ಸಿಲುಕಿಸಲು ಪ್ರಯತ್ನಿಸುತ್ತಿದೆ” ಎಂದು ಎಎಪಿ ಆರೋಪಿಸಿದೆ.
ರಾಘವ್ ಚಡ್ಡಾ ವಿರುದ್ಧದ ʼನಕಲಿ ಸಹಿʼ ಆರೋಪಗಳು “ಸುಳ್ಳು ಮತ್ತು ರಾಜಕೀಯ ಪ್ರೇರಿತ” ಎಂದು ಪಕ್ಷವು ಹೇಳಿದೆ. ಪಕ್ಷದ ವಿರುದ್ಧ ಮಾತನಾಡುವುದಕ್ಕಾಗಿ ಬಿಜೆಪಿಯು ರಾಘವ್ ಚಡ್ಡಾ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ.