ಬೆಂಗಳೂರು : ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಎದುರಾಳಿ ತಂಡಕ್ಕೆ 256 ರನ್ ಗಳ ಅತ್ಯಧಿಕ ರನ್ ಟಾರ್ಗೆಟ್ ನೀಡಿತ್ತು. ಭಾರತದ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ಗಳಿಸುವಂತಾಗಿದೆ. ಭಾರತದ ತಂಡದ ಗೆಲುವಿನ ಬೆನ್ನಲ್ಲೇ ಇಡೀ ಭಾರತೀಯರು ಸಂಭ್ರಮದಲ್ಲಿದ್ದರು. ಆದರೆ ಈ ಗೆಲುವಿಗೆ ಕಾರಣವಾಗಿದ್ದ ಆಟಗಾರ ದುಖಃದಲ್ಲಿದ್ದರು.
ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವೇನೋ ಅಲಂಕರಿಸಿದೆ. ಆದರೆ ಈ ಗೆಲುವು ತಂದುಕೊಡುವಲ್ಲಿ ಪಾತ್ರವಹಿಸಿದ್ದ ಆಟಗಾರ ಇಶಾನ್ ಕಿಶನ್, ತಮ್ಮ ಬೆನ್ನಿಗೆ ದುಖಃದ ಮೂಟೆಯನ್ನೇ ಹೊತ್ತು ದೇಶಕ್ಕಾಗಿ ಅದರಲ್ಲೂ ಕ್ರಿಕೆಟ್ ಅಭಿಮಾನಿಗಳಿಗಾಗಿ ಫೈನಲ್ ಪಂದ್ಯವಾಡಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನವೇ ಇಶಾನ್ ಕಿಶನ್ ಸಹೋದರಿ ಅಪಘಾತದಲ್ಲಿ ಮೃತಪಟ್ಟಿದ್ದರು.
ಇದನ್ನೂ ಓದಿ : ದೇವಸ್ಥಾನದ ವಾಶ್ರೂಂನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಶವ ಪತ್ತೆ,
ಮ್ಯಾಚ್ಗೂ ಮೊದಲನೇ ದಿನವೇ ಅಂದರೆ ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಅಪಘಾತ ಸಂಭವಿಸಿತ್ತು. ಭೀಕರ ಈ ರಸ್ತೆ ದುರ್ಘಟನೆಯಲ್ಲಿ ಇಶಾನ್ ಕಿಶನ್ ಸಹೋದರಿ ವೈಷ್ಣವಿ ಸಿಂಗ್ ದಂಪತಿ ಅಸುನೀಗಿದ್ದರು, ಆದರೆ ಅಪಘಾತದಲ್ಲಿ ಆರು ತಿಂಗಳು ಹಾಗೂ ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳು ಕಾರಿನಲ್ಲಿದ್ದರು. ಅದೃಷ್ಟವಶಾತ್ ಎನ್ನುವಂತೆ ಈ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.
ಇನ್ನೂ ಈ ಬಗ್ಗೆ ಗೆವುವಿನ ಬಳಿಕ ಮಾಹಿತಿ ಹಂಚಿಕೊಂಡ ಕಿಶನ್, ಈ ಗೆಲುವನ್ನು ನನ್ನ ಸಹೋದರಿಗೆ ಅರ್ಪಿಸುತ್ತೇನೆ. ಅವಳು ನನ್ನ ಈ ಐತಿಹಾಸಿಕ ಕ್ಷಣಗಳನ್ನು ನೋಡಬೇಕೆಂದು ಅಪೇಕ್ಷಿಸಿದ್ದಳು. ಹೀಗಾಗಿ ಈ ಟ್ರೋಫಿಯನ್ನು ನಾನು ಸಹೋದರಿಗೆ ಅರ್ಪಿಸುತ್ತೇನೆ ಎಂದು ಸಹೋದರಿಯನ್ನು ಸ್ಮರಿಸಿ ಇಶಾನ್ ಕಿಶನ್ ಗದ್ಗರಿತರಾದರು. ಅಲ್ಲದೆ ನೆಚ್ಚಿನ ಸಹೋದರಿಯನ್ನು ನೆನೆದ ಕಿಶನ್ ಕಣ್ಣಾಲಿಗಳು ತೇವವಾಗಿದ್ದವು.
ಪ್ರಮುಖವಾಗಿ ದುಖಃದಲ್ಲಿದ್ದ ಆಟಗಾರನಿಗೆ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಧೈರ್ಯ ತುಂಬಿ ಫೈನಲ್ ಪಂದ್ಯ ಆಡುವಂತೆ ಪ್ರೇರೇಪಿಸಿದ್ದರು. ಅಲ್ಲದೆ ಕುಟುಂಬದಲ್ಲಿ ಶೋಕ ಸಾಗರ ಆವರಿಸಿದ್ದರೂ ತಂಡದ ಹಿತ ಹಾಗೂ ದೇಶಕ್ಕಾಗಿ ಆಡುವ ಗಟ್ಟಿ ಮನಸ್ಸು ಮಾಡಿದ್ದರು.
ಈ ಮೂಲಕ ದುಖಃದಲ್ಲೂ ಕೂಡ ಅಮೋಘ, ಅದ್ಭುತ ಪ್ರದರ್ಶನ ನೀಡಿ ಇಶಾನ್ ಕಿಶನ್ ಭಾರತ ತಂಡಕ್ಕೆ ವರ್ಲ್ಡ್ ಕಪ್ ತಂದುಕೊಟ್ಟಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ ಸಹ ದೇಶಕ್ಕಾಗಿ ಪಂದ್ಯದಲ್ಲಿ ಭಾಗವಹಿಸಿರುವ ಇಶಾನ್ ಕಿಶನ್ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.






