ಸ್ಯಾಂಡಲ್ ವುಡ್ ನಲ್ಲಿ ಎಷ್ಟೇ ಸ್ಟಾರ್ ನಟರ, ಸ್ಟಾರ್ ನಿರ್ದೇಶಕರ ಚಿತ್ರಗಳು ಬಿಡುಗಡೆ ಆಗಿ ಹವಾ ಸೃಷ್ಠಿ ಮಾಡಿದರೂ ಹೊಸ ನಟರು ಮತ್ತು ಹೊಸ ನಿರ್ದೇಶಕರ ಚಿತ್ರಗಳಿಗೇನೂ ಬರ ಬಂದಿಲ್ಲ. ಪ್ರತಿವಾರ ಗಾಂಧಿನಗರದ ಅಂಗಳದಲ್ಲಿ ಹೊಸಬರ ಹುಟ್ಟು ಆಗುತ್ತಲೇ ಇರುತ್ತದೆ. ಈ ವಾರ ಕೂಡ ಅಂಥ ಇನ್ನೊಂದು ಹೊಸ ನಿರ್ದೇಶಕರ ಚಿತ್ರ ಬಿಡುಗಡೆ ಆಗಲು ತಯಾರಾಗಿದೆ. ದಿಗಂತ್ ರಂಥ ಅನುಭವಿ ನಟ ಇದ್ದರೂ ಈ ಚಿತ್ರವನ್ನು ನಿರ್ದೇಶಕ ಮತ್ತು ಚಿತ್ರತಂಡದ ಇತರರ ದೃಷ್ಠಿಯಿಂದ ಹೊಸಬರ ಚಿತ್ರ ಎನ್ನಬೇಕಿದೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಿಸಿರುವ “ಹುಟ್ಟುಹಬ್ಬದ ಶುಭಾಶಯಗಳು” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈಗಾಗಲೇ ಹ್ಯಾಪಿ ಬರ್ತ್ ಡೇ ಅನ್ನೋ ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಈಗ ಅದೇ ಹೆಸರಿನ ಕನ್ನಡ ಅನುವಾದದಂತಿರುವ ಹುಟ್ಟು ಹಬ್ಬದ ಶುಭಾಷಯಗಳು ಚಿತ್ರದ ಸರದಿ.

ನಾಗರಾಜ್ ಬೆತ್ತುರ್ ನಿರ್ದೇಶನದ ಈ ಚಿತ್ರದ ನಾಯಕನಾಗಿ ದಿಗಂತ್ ಅಭಿನಯಿಸಿದ್ದಾರೆ. ಕವಿತಾಗೌಡ ಈ ಚಿತ್ರದ ನಾಯಕಿ. ಚೇತನ್ ಗಂಧರ್ವ, ಮಡೆನೂರು ಮನು, ಶರಣ್ಯ ಶೆಟ್ಟಿ, ಸೂರಜ್, ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಸನ್ನ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಆನಂದ್ ರಾಜ್ ವಿಕ್ರಂ ಹಿನ್ನೆಲೆ ಸಂಗೀತ, ಅಭಿಲಾಶ್ ಕಲತ್ತಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸರಾಫ್ ಅವರ ಸಂಕಲನ ಈ ಚಿತ್ರಕ್ಕಿದೆ.






