ಖಾತೆ ಬದಲಾವಣೆ ಕುರಿತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಮ್ಮ ಕ್ಯಾತೆಯ ಖಾತೆ ಬಂದ್ ಮಾಡಿದ್ದಾರೆ. ಅಸಮಾಧಾನಕ್ಕೆ ಶಟರ್ ಎಳೆದಿದ್ದಾರೆ.. ಕೊಟ್ಟ ಖಾತೆಯಲ್ಲಿ ಮುಂದುವರೆಯಲು ಮೌನಂ ಸಮ್ಮತಿ ಲಕ್ಷಣಂ ಅಂತಿದ್ದಾರೆ. ಅಷ್ಟಕ್ಕೂ ಏಕಾಏಕಿ ಎಂಟಿಬಿ ನಾಗರಾಜ್ ಸೈಲೆಂಟ್ ಆಗಿದ್ದೇಕೆ? ಸೈಲೆಂಟ್ ಆಟಕ್ಕೆ ಏನಾದ್ರೂ ಇಳಿದಿದ್ದಾರಾ ಎಂಬ ಚರ್ಚೆಗಳು ಜೋರಾಗಿವೆ.
ಖಾತೆ ಕಿಚ್ಚು, ಸಂಪುಟ ಅಸಮಾಧಾನ. ಇದು ಬೊಮ್ಮಾಯಿ ಸರ್ಕಾರಕ್ಕೆ ಅಂಟಿಕೊಂಡೇ ಜನ್ಮತಾಳಿರುವ ರೋಗ. ಡಜನ್ಗೂ ಹೆಚ್ಚು ನಾಯಕರು ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ತಮಗೆ ಬೇಕಾದ ಖಾತೆ ಸಿಗಲಿಲ್ಲ ಅಂತ ಕೆಲವರೂ ಹೇಳಿದ್ರೆ, ಸಂಪುಟ ಸೇರಿಸಿಕೊಳ್ಳಲೇ ಇಲ್ಲ ಅನ್ನೋ ಸಿಟ್ಟು ಸೆಡವು ಇನ್ನೂ ಹಲವು ನಾಯಕರದ್ದು.
ಅಸಮಾಧಾನ ಬಳಿಕ ಎಂಟಿಬಿ ಸೈಲೆಂಟ್ ಆಗಿದ್ದೇಕೆ?
ಪ್ರಬಲ ಖಾತೆಗಾಗಿ ರಾಜೀನಾಮೆ ತುದಿಗೂ ಬಂದು ಹೋದ ಎಂಟಿಬಿ ನಾಗರಾಜ್ ಈಗ ಮೌನ ತಾಳಿದ್ದಾರೆ. ಎಷ್ಟೇ ಬಂಡಾಯವೆದ್ದಿದ್ರೂ, ಅಸಮಾಧಾನಗೊಂಡ್ರೂ, ಪಟ್ಟು ಹಿಡಿದ್ರೂ ಲಾಭ ಸಿಗಲ್ಲ ಎಂದು ಎಂಟಿಬಿ ಅರ್ಥ ಆಗಿಬಿಟ್ಟಿದೆ. ಸಿಕ್ಕ ಖಾತೆಯಲ್ಲೇ ನೆಮ್ಮದಿ ಕಾಣಲು ಎಂಟಿಬಿ ಬಯಸಿದಂತಿದೆ.
ಎಂಟಿಬಿ ನಾಗರಾಜ್ ಪಡೆದ ಲಾಭದಷ್ಟು ಮತ್ಯಾರು ಪಡೆದಿರಲಾರರು ಅನಿಸುತ್ತೆ.
ಹೊಸಕೋಟೆಯಲ್ಲಿ ಕಮಲ ಅರಳಿಸುವಲ್ಲಿ ವಿಫಲವಾದ ಎಂಟಿಬಿಗೆ ಮೇಲ್ಮನೆಗೆ ಕಳುಹಿಸಿದ್ದಲ್ಲದೇ ಮಂತ್ರಿ ಪಟ್ಟ ಕಟ್ಟಿಸಿಕೊಂಡವರು. ಎಂಟಿಬಿ ಜೊತೆಗೆ ಹೆಜ್ಜೆ ಹಾಕಿದ್ದ ಆರ್.ಶಂಕರ್, ಹೆಚ್.ವಿಶ್ವನಾಥ್ ಮೇಲ್ಮನೆ ಪ್ರವೇಶ ಪಡೆಯಲು ಮಾತ್ರ ಸಾಧ್ಯವಾಗಿತ್ತು. ಆದ್ರೆ, ಈ ವಿಚಾರದಲ್ಲಿ ಎಂಟಿಬಿ ನಾಗರಾಜ್ ಅದೃಷ್ಟವಂತ ಅಂತಾನೇ ಹೇಳಬಹುದು. ಬಿಎಸ್ವೈ ಸರ್ಕಾರದಂತೆ ಬೊಮ್ಮಾಯಿ ಸರ್ಕಾರದಲ್ಲೂ ಸ್ಥಾನಮಾನ ಗಿಟ್ಟಿಸಿದ ಎಂಟಿಬಿ, ಬೇಕಾದ ಖಾತೆಗಾಗಿ ಕೊಸರಾಡಿದ್ದುಂಟು.
ಹೊಸ ಖಾತೆ ಬಗ್ಗೆ ಕ್ಯಾತೆ ಇಲ್ಲ!
ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಎಂಟಿಬಿ ನಾಗರಾಜ್ ಏಕಾಏಕಿ ಸೈಲೆಂಟ್ ಆಗಿದ್ದಾರೆ. ಇಷ್ಟವಾದ ಖಾತೆ ನೀಡಲಿಲ್ಲ ಅಂತ ಬೇಸರ ಹೊಂದಿದ್ದ ಎಂಟಿಬಿ, ಸಿಎಂಗೆ ಹಲವು ಬಾರಿ ಮನವಿ ಮಾಡಿದ್ರೂ ಖಾತೆ ಸಿಕ್ಕಿಲ್ಲ. ಈ ಕಾರಣದಿಂದ ಖಾತೆ ಬದಲಾವಣೆ ಅಸಮಾಧಾನ ವಿಚಾರ ಕೈಬಿಟ್ಟಿದ್ದಾರೆ. ಇಲಾಖೆ ಕಡೆ ಗಮನ ಹರಿಸಲು ತೀರ್ಮಾನಿಸಿದ್ದಾರೆ.
ಅಂದುಕೊಂಡಂತ ಖಾತೆ ಸಿಗೋದಿಲ್ಲ ಅನ್ನೋದು ಖಾತರಿ ಆಗ್ತಿದ್ದಂತೆ ಎಂಟಿಬಿ ಬೇರೆಯದ್ದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕೊಟ್ಟ ಖಾತೆಯನ್ನ ಉತ್ತಮವಾಗಿ ನಿಭಾಯಿಸಿಕೊಂಡು ಹೋಗ್ತೀನಿ ಅನ್ನೋ ಮಾತು ಹೇಳಿದ್ದಾರೆ. ಅಷ್ಟಕ್ಕೂ ಎಂಟಿಬಿ ಹೀಗೆ ದಿಢೀರ್ ವರಸೆ ಬದಲಿಸಲು ಕಾರಣಗಳು ಹಲವು ಇವೆ..
ಎಂಟಿಬಿ ಸೈಲೆಂಟ್ ಗೇಮ್ಗೆ ಕಾರಣಗಳು
- ಹೈಕಮಾಂಡ್ ಮಟ್ಟದಲ್ಲಿ ನಮ್ಮ ಮನವಿಗೆ ಪುರಸ್ಕಾರ ಸಿಗಲ್ಲ
- ಖಾತೆ ಬದಲಾವಣೆ ವಿಚಾರದಲ್ಲಿ ಬೊಮ್ಮಾಯಿ ಅಸಹಾಯಕರು
- ಖಾತೆ ಬದಲಾವಣೆಗೆ ಪಟ್ಟು ಹಿಡಿದ್ರೆ ಸುಮ್ಮನೆ ಅದು ಕಾಲಹರಣ
- ಸದ್ಯ ಕೊಟ್ಟ ಖಾತೆಯನ್ನ ಜವಾಬ್ದಾರಿಯಾಗಿ ನಿರ್ವಹಿಸಬೇಕು
- ಉತ್ತಮವಾಗಿ ಕೆಲಸ ಮಾಡಿದ್ರೆ ಮುಂದೆ ಟಿಕೆಟ್ ಸಿಗಬಹುದು
ಮಂತ್ರಿಗಿರಿ ವಿಚಾರಕ್ಕೆ ಕಿತ್ತಾಟ ನಡೆಸ್ತಾರ ಸಮಯ ವ್ಯರ್ಥ ಮಾಡದೇ 2023ರ ಚುನಾವಣೆಗೆ ಸೋಲಿನ ಸೇಡು ತೀರಿಸಿಕೊಳ್ಳಲು ಎಂಟಿಬಿ ಹವಣಿಸ್ತಿದ್ದಾರೆ. ಸಚಿವ ಸ್ಥಾನಕ್ಕಿಂತಲೂ ಎಂಟಿಬಿಗೆ ಹೊಸಕೋಟೆ ಗೆಲ್ಲಬೇಕು ಅನ್ನೋ ಮಹತ್ವಾಕಾಂಕ್ಷೆಯೇ ಮಿಗಿಲು. ಆ ಕಾರಣದಿಂದಲೇ ಕ್ಷೇತ್ರದಲ್ಲಿ ರಾಜಕೀಯ ಪ್ರಾಬಲ್ಯ ಮೆರೆಯಲು ಎಂಟಿಬಿಗೆ ಮಂತ್ರಿಗಿರಿ ಅನ್ನೋದು ಜಸ್ಟ್ ಒಂದು ಉರುಗೋಲು.