ನೂರು ವರ್ಷದ ಸರ್ಕಾರಿ ಶಾಲೆಗಳು ಎಲ್ಲೆಡೆ ಶತಮಾನೋತ್ಸವದ ಸಂಭ್ರಮದಲ್ಲಿದ್ದರೆ, ಶರಾವತಿ ಹಿನ್ನೀರಿನ ದ್ವೀಪ ಪ್ರದೇಶ ತುಮರಿಯ ಸರ್ಕಾರಿ ಶಾಲೆಯದು ಸಂಕಟದ ಕಥೆ!
1918ರ ಹೊತ್ತಿಗೇ ಅಂದಿನ ಮೈಸೂರು ಸರ್ಕಾರದ ದಿವಾನರಿಂದ ಪ್ರಶಂಸೆಯ ಪತ್ರ(ಶಾಲಾ ಕಟ್ಟಡ ನಿರ್ಮಿಸಿದ ದಾನಿಗಳಿಗೆ) ಪಡೆದ ತುಮರಿಯ ಮಾಧ್ಯಮಿಕ ಶಾಲೆಯ ಅಸ್ತಿತ್ವಕ್ಕೇ ಈಗ ಸವಾಲು ಎದುರಾಗಿದೆ. ನೂರು ವರ್ಷಕ್ಕೂ ಹೆಚ್ಚು ಕಾಲ ಐದಾರು ತಲೆಮಾರುಗಳ ಸಾವಿರಾರು ಮಕ್ಕಳಿಗೆ ವಿದ್ಯೆಯ ಬೆಳಕು ನೀಡಿದ ಈ ದ್ವೀಪದ ಶಾಲೆಯ ಭವಿಷ್ಯಕ್ಕೇ ಈಗ ಮಂಕು ಕವಿದಿದೆ.
ಮೈಸೂರು ಆಡಳಿತದ ಅವಧಿಯಲ್ಲೇ 1900ಕ್ಕೂ ಮುಂಚೆಯೇ ಆರಂಭವಾಗಿರುವ ಈ ಗ್ರಾಮೀಣ ಶಾಲೆಯ ಹಳೆಯ ಕಟ್ಟಡ 1918ರಲ್ಲಿ ನಿರ್ಮಾಣವಾಗಿದ್ದು, ಈಗಲೂ ಆ ಕಟ್ಟಡ ಸುಸಜ್ಜಿತವಾಗಿದೆ. ತರಗತಿಗಳು ಕೂಡ ನಡೆಯುತ್ತಿವೆ. ಜೊತೆಗೆ ಆ ಬಳಿಕ ಹಲವು ಸರ್ಕಾರವೇ ಹಲವು ಕೊಠಡಿಗಳನ್ನೂ ನಿರ್ಮಾಣ ಮಾಡಿದೆ. ಹಾಗೇ ಶಾಲೆಯ ಎದುರಿನ ಬಯಲಿನಲ್ಲಿ ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯ ಪಂಚಾಯ್ತಿಯ ಎಂಜಿಎನ್ ಆರ್ ಇಜಿಎಸ್ ಮುಂತಾದ ವಿವಿಧ ಯೋಜನೆ-ಅನುದಾನಗಳಡಿ ಆಟದ ಮೈದಾನವನ್ನೂ (ಗ್ರಾಮೀಣ ಕ್ರೀಡಾಂಗಣ) ನಿರ್ಮಾಣ ಮಾಡಲಾಗಿದೆ. ಅದೇ ಬಯಲಿನ ಮತ್ತೊಂದು ಬದಿಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೂ ಅದೇ ಕ್ರೀಡಾಂಗಣವೇ ದಶಕಗಳಿಂದ ಬಳಕೆಯಾಗುತ್ತಿದೆ.
ಶಾಲಾಭಿವೃದ್ಧಿ ಸಮಿತಿಯ ಪ್ರಕಾರ, “ಈವರೆಗೆ ತುಮರಿ ಗ್ರಾಮದ ಸರ್ವೆ ನಂಬರ್ 24ರಲ್ಲಿ ಇರುವ ಈ ಶತಮಾನದ ಶಾಲೆ, ಅದರ ಕ್ರೀಡಾಂಗಣ ಮತ್ತು ಅದೇ ಸರ್ವೆ ನಂಬರಿನಲ್ಲಿ ಇರುವ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ದಶಕಗಳಿಂದ ಸರ್ಕಾರವೇ ತರಗತಿ ಕಟ್ಟಡ, ಕಾಂಪೌಂಡು, ಆಟದ ಮೈದಾನ ಸೇರಿ ಹತ್ತಾರು ನಿರ್ಮಾಣಗಳನ್ನು ಮಾಡಿದೆ. ಶತಮಾನದಿಂದ ಸರ್ಕಾರಿ ದಾಖಲೆಗಳಲ್ಲಿ ಕೂಡ ಶಾಲೆ ಮತ್ತು ಕಾಲೇಜುಗಳು ಸರ್ಕಾರಿ ಸ್ವತ್ತಾಗಿ ನಮೂದಾಗಿವೆ. ಹಾಗೇ ತುಮರಿ ಪಂಚಾಯ್ತಿ ವ್ಯಾಪ್ತಿಯ ಕಂದಾಯ ಇಲಾಖೆ ಕಚೇರಿ, ಕೆಪಿಸಿ ಕಚೇರಿ ಮತ್ತು ಹಲವು ವಸತಿ ಕಟ್ಟಡಗಳು ಕೂಡ ಅದೇ ಸರ್ವೇ ನಂಬರಿನಲ್ಲಿ ಕ್ರೀಡಾಂಗಣದ ಬದಿಯಲ್ಲೇ ಇವೆ”.

ಆದರೆ, “ಇದೀಗ ಸಾಗರ ತಹಶೀಲ್ದಾರರು ತುಮರಿ ಸರ್ವೆನಂಬರ್ 24ರ ಭೌತಿಕ ಪರಿಶೀಲನೆ ಮಾಡದೆ, ಖಾಸಗಿ ವ್ಯಕ್ತಿಯೊಬ್ಬರಿಗೆ 70 ವರ್ಷ ಹಳೆಯ ಮಾಲೀಕತ್ವದ ಖಾತೆ ಬದಲಾವಣೆ ಮಾಡಿರುವುದು ಈ ಎಲ್ಲಾ ಸರ್ಕಾರಿ ಕಟ್ಟಡಗಳ ಜಾಗ ಬಹುತೇಕ ಖಾಸಗಿ ವ್ಯಕ್ತಿಯ ಪಾಲಾಗುವ ವಿಚಿತ್ರ ಪರಿಸ್ಥಿತಿ ನಿರ್ಮಿಸಿದೆ. ಅಷ್ಟಕ್ಕೂ ಸರ್ವೆನಂಬರ್ 24ರಲ್ಲಿ ಒಟ್ಟು 32 ಎಕರೆ ಜಮೀನಿದ್ದು, ಆ ವ್ಯಾಪ್ತಿಯಲ್ಲಿ ತುಮರಿ ಊರಿನ ಅರ್ಧಭಾಗದ ಮನೆ-ಅಂಗಡಿ-ಮುಂಗಟ್ಟುಗಳಿವೆ. ಸರ್ಕಾರಿ ಕಟ್ಟಡಗಳೂ ಇವೆ. ಶಾಲಾ-ಕಾಲೇಜು, ಆಟದ ಮೈದಾನವೂ ಇದೆ. ಆದರೆ, ಸರ್ವೆನಂಬರಿನ ಪಕ್ಕಾಪೋಡಿ ಮಾಡದೆ, 1948ರಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಹಂಚಿಕೆಯಾಗಿದ್ದ 8 ಎಕರೆ ಭೂಮಿಯನ್ನು, ಈಗ 71 ವರ್ಷದ ಬಳಿಕ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಈಗ ಆ ಜಮೀನಿನ ಮಾಲೀಕರು ಶಾಲೆ, ಶಾಲೆಯ ಆಟದ ಮೈದಾನ ಕೂಡ ತಮ್ಮ ಹಕ್ಕಿನ ಭೂಮಿಯ ವ್ಯಾಪ್ತಿಗೆ ಸೇರುತ್ತದೆ ಎಂದು ಮೈದಾನ ಅಭಿವೃದ್ಧಿ ಕಾಮಗಾರಿಗೆ ಆಕ್ಷೇಪವೆತ್ತಿದ್ದಾರೆ” ಎಂಬುದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ್ ಅವರ ಆತಂಕದ ಮಾತು. ಶತಮಾನೋತ್ಸವ ಆಚರಣೆಯ ತಯಾರಿ ನಡೆಸಬೇಕಿದ್ದ ಅವರು, ಈಗ ಶಾಲಾ ಕಟ್ಟಡ ಮತ್ತು ಮೈದಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ!
ಖಾಸಗೀ ವ್ಯಕ್ತಿ ಜಾಗದ ವಿಷಯದಲ್ಲಿ ಆಕ್ಷೇಪವೆತ್ತಿದ ಬಳಿಕ ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರಿಗೆ ಆಘಾತವಾಗಿದೆ. ಆ ಬಳಿಕ ದಾಖಲೆ ಪರಿಶೀಲಿಸಿದಾಗ, ಖಾಸಗೀ ವ್ಯಕ್ತಿಯ ಪೂರ್ವಜರ ಹೆಸರಿನ ಖಾತೆಯನ್ನು 2020ರಲ್ಲಿ ಬದಲಾಯಿಸಲಾಗಿದೆ. ಆ ಬದಲಾವಣೆಯ ವೇಳೆ ಆ ಸರ್ವೆನಂಬರಿನ ಒಟ್ಟು 32 ಎಕರೆ ಪೈಕಿ ಯಾವ ಭಾಗದಲ್ಲಿ ಆ ನಿರ್ದಿಷ್ಟ 8 ಎಕರೆ ಜಾಗ ಇದೆ ಎಂಬುದನ್ನು ಗುರುತಿಸುವ ಪಕ್ಕಾ ಪೋಡಿ ಮಾಡಿಲ್ಲದೇ ಇರುವುದು ಈಗ ಬಿಕ್ಕಟ್ಟಿಗೆ ಕಾರಣವಾಗಿದೆ. ಇಲ್ಲಿ ಮುಖ್ಯವಾಗಿ ಸರ್ಕಾರಿ ಕಟ್ಟಡ, ಆಸ್ತಿಪಾಸ್ತಿ ರಕ್ಷಿಸಬೇಕಾದ ಹೊಣೆಗಾರಿಕೆಯ ಸರ್ಕಾರಿ ಅಧಿಕಾರಿಯಾದ ಸಾಗರ ತಹಶೀಲ್ದಾರರು, ಸ್ಥಳದ ಭೌತಿಕ ಪರಿಶೀಲನೆ ನಡೆಸದೆ 70 ವರ್ಷದ ಬಳಿಕ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದು ಶಾಲಾ-ಕಾಲೇಜು ಮತ್ತು ತುಮರಿಯ ಏಕೈಕ ಆಟದ ಮೈದಾನದ ಅಸ್ತಿತ್ವಕ್ಕೆ ಕುತ್ತು ತಂದಿದೆ.
“ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸಲಾಗುತ್ತಿದೆ. ನೂರಾರು ವರ್ಷದ ಶಾಲಾ ಕಟ್ಟಡ ಮತ್ತು ಇಡೀ ಊರಿನ ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರ ಆಟೋಟಗಳಿಗೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಇರುವ ಏಕೈಕ ಮೈದಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೂ ಮಾತುಕತೆ ನಡೆಸುತ್ತಿದ್ದೇವೆ.. “ ಎಂಬುದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ವಿಶ್ವಾಸ.
ಆದರೆ, ಗ್ರಾಮದ ಪ್ರಮುಖರಾದ ಕೃಷ್ಣ ಭಂಡಾರ್ ಪ್ರಕಾರ, “ಸರ್ವೆನಂಬರಿನಲ್ಲಿ ಇರುವ ಭೂಮಿ ಈಗಾಗಲೇ ಶಾಲೆ-ಕಾಲೇಜು-ಮೈದಾನ ಮುಂತಾದ ವಿವಿಧ ಸಾರ್ವಜನಿಕ ಉದ್ದೇಶಕ್ಕೆ ಮತ್ತು ಖಾಸಗಿಯವರ ಮನೆ-ಅಂಗಡಿಗಳಿಗೆ ಬಳಕೆಯಾಗಿದೆ. ಈವರೆಗೆ ಆ ಜಾಗ ಯಾರ ಅನುಭವದಲ್ಲೂ ಇರಲಿಲ್ಲ. ಇತ್ತೀಚೆಗೆ ಮೈದಾನದ ಕಾಮಗಾರಿ ವಿಷಯದಲ್ಲಿ ಖಾಸಗಿಯವರೊಬ್ಬರು ಜಾಗದ ಮಾಲೀಕತ್ವದ ಹಕ್ಕು ಮಂಡಿಸಿದ್ದಾರೆ. ಆದರೆ, ಈಗ ಖಾಲಿ ಇರುವ ಜಾಗವನ್ನು ಅವರು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಗ್ರಾಮಸ್ಥರ ವಿರೋಧವಿಲ್ಲ. ಈಗಾಗಲೇ ನೂರಾರು ವರ್ಷಗಳಿಂದ ಇರುವ ಸರ್ಕಾರಿ ಶಾಲೆ-ಕಾಲೇಜು ಮತ್ತು ಅದರ ಮೈದಾನಗಳ ವಿಷಯದಲ್ಲಿ ನಾವು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ” ಎನ್ನುತ್ತಾರೆ.

ಮುಖ್ಯವಾಗಿ, “ಸರ್ಕಾರಿ ಶಾಲಾ-ಕಾಲೇಜು-ಮೈದಾನಗಳನ್ನು ಪರಿಗಣಿಸದೇ 70 ವರ್ಷ ಹಳೆಯ ಖಾತೆಯನ್ನು ಬದಲಾಯಿಸಿಕೊಟ್ಟಿರುವ ತಹಶೀಲ್ದಾರರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳೇ ಇದಕ್ಕೆ ಹೊಣೆ. ಆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸದೆ, ಪಕ್ಕಾ ಪೋಡಿ ಮಾಡದೆ ಖಾತೆ ಬದಲಾಯಿಸಿಕೊಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಸಾರ್ವಜನಿಕ ಉದ್ದೇಶದ ಮತ್ತು ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಶಾಲೆ, ಕಾಲೇಜು ಮತ್ತು ಆಟದ ಮೈದಾನವನ್ನು ಯಥಾವತ್ತು ಉಳಿಸಿಕೊಡಬೇಕು. ಇಲ್ಲವಾದಲ್ಲಿ ಈ ವಿಷಯದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು” ಎಂಬುದು ಗ್ರಾಮಸ್ಥರ ಹಕ್ಕೊತ್ತಾಯ.
ಒಬ್ಬ ಸರ್ಕಾರಿ ಅಧಿಕಾರಿ ಭೌತಿಕ ಸ್ಥಿತಿಗತಿ ಪರಿಶೀಲಿಸದೆ ಕಚೇರಿಯಲ್ಲೇ ಕೂತು ತೀರ್ಮಾನಗಳನ್ನು ಕೈಗೊಂಡರೆ, ಯಾವ ಪೂರ್ವಪರ ಯೋಚಿಸದೇ ಭೂ ದಾಖಲೆಗಳನ್ನು ಬದಲಾವಣೆ ಮಾಡಿದರೆ ಎಂತಹ ವಿಪರ್ಯಾಸ ಸಂಭವಿಸುತ್ತದೆ ಎಂಬುದಕ್ಕೆ ನೂರು ವರ್ಷ ಇತಿಹಾಸದ ಸರ್ಕಾರಿ ಶಾಲೆ ಇದೀಗ ಖಾಸಗಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದೇ ಸಾಕ್ಷಿ. ತುಮರಿಯಂತಹ ದ್ವೀಪ ಪ್ರದೇಶದಲ್ಲಿ, ಮೂಲಸೌಕರ್ಯ ವಂಚಿತ ಜಾಗದಲ್ಲಿ ಇರುವ ಏಕೈಕ ಸರ್ಕಾರಿ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಮೈದಾನಗಳು ಹೀಗೆ ಅಧಿಕಾರಿಗಳ ಅಂದಾದುಂದಿ ವ್ಯವಹಾರಕ್ಕೆ ಬಲಿಯಾಗಬೇಕೆ? ಎಂಬುದು ಪ್ರಶ್ನೆ. ತುಮರಿಯ ಪ್ರಜ್ಞಾವಂತ ನಾಗರಿಕರು ಕೂಡ ಇದೇ ಪ್ರಶ್ನೆ ಮುಂದಿಟ್ಟುಕೊಂಡು ತಾಲೂಕು ಆಡಳಿತದ ಯಡವಟ್ಟಿನ ವಿರುದ್ಧ ದನಿ ಎತ್ತಿದ್ದಾರೆ.

ಆದರೆ, ತುಮರಿಯ ಶತಮಾನದ ಶಾಲೆ ಶತಮಾನೋತ್ಸವ ಸಂಭ್ರಮದ ಬದಲು, ಹೋರಾಟದ ಕಿಚ್ಚಿನಲ್ಲಿ ಬೇಯುವಂತಾಗಿರುವುದು ಮಾತ್ರ ವಿಪರ್ಯಾಸವೇ ಸರಿ.