ಕಳೆದ ಏಳು ವರ್ಷಗಳಿಂದ ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುತ್ತಲೇ ಇದ್ದೇವೆ. ಕೊಲೆಗಡುಕರು ಶಾಸಕರಾದರು ಸಹಿಸಿಕೊಂಡೆವು. ಹಂತಕರು ಸಂಸದರು ಸಚಿವರಾದರು ಸಹಿಸಿಕೊಂಡೆವು. ಹತ್ಯಾಕಾಂಡಗಳ ರೂವಾರಿಗಳನ್ನು ಸಾಂವಿಧಾನಿಕವಾಗಿ ಗೌರವಿಸಿ ಸಮ್ಮಾನ ನೀಡಿಬಿಟ್ಟೆವು. ಅತ್ಯಾಚಾರಿಗಳಿಗೆ, ಅಸಭ್ಯರಿಗೆ, ಸೌಜ್ಯನಹೀನರಿಗೆ ಸಾಮಾಜಿಕ-ರಾಜಕೀಯ ಸ್ಥಾನಮಾನ ನೀಡಿದೆವು. ಒಂದು ಪಕ್ಷದಲ್ಲಿ ಭ್ರಷ್ಟರಾಗಿದ್ದವರು ಮತ್ತೊಂದಕ್ಕೆ ಹಾರಿ ಪ್ರಾಮಾಣಿಕರಾಗಿಬಿಟ್ಟರು. ಜೈಲಿಗೆ ಹೋದವರನ್ನು, ಅಪರಾಧದ ಹಣೆಪಟ್ಟಿ ಇದ್ದವರನ್ನು ಅಧಿಕಾರಪೀಠದಲ್ಲಿ ಕೂರಿಸಿದೆವು. ಹಿಂಸೆಗೆ ಪ್ರಚೋದಿಸಿದವರನ್ನು, ಗುಂಡಿಟ್ಟು ಕೊಲ್ಲಿ ಎಂದವರನ್ನು ಸಚಿವರಾಗಿ ಒಪ್ಪಿಕೊಂಡೆವು. ಮಹಿಳೆಯರನ್ನು ತುಚ್ಚವಾಗಿ ಕಂಡು ಅವಮಾನಿಸಿದವರನ್ನು ಪ್ರಶ್ನಿಸದೆ ಸುಮ್ಮನಾಗಿಬಿಟ್ಟೆವು.

ಇಷ್ಟು ಸಾಲದಾಗಿತ್ತೇನೋ. ಈಗ ಚುನಾಯಿತ ಮುಖ್ಯಮಂತ್ರಿಯೊಬ್ಬರು ಬಹಿರಂಗವಾಗಿ ‘ಏಟು ಎದಿರೇಟು’ ಭಾಷೆಯಲ್ಲಿ ಮಾತನಾಡುತ್ತಾರೆ. ಹರಿಯಾಣ ಮುಖ್ಯಮಂತ್ರಿ ಖಟ್ಟರ್ ” ಐಸೆ ಕೋ ತೈಸಾ” ಅಂದರೆ ಏಟಿಗೆ ಎದಿರೇಟು ನೀಡಲು ಕೈಗೆ ಲಾಠಿ ಎತ್ತಿಕೊಳ್ಳಲು ಪ್ರಚೋದಿಸುತ್ತಾರೆ. ಜೈಲಿಗೆ ಹೋದರೆ ಪರವಾಗಿಲ್ಲ ಹೊರಬರುವಾಗ ನಾಯಕರಾಗಿರುತ್ತೀರಿ ಎಂದು ಹುರಿದುಂಬಿಸುತ್ತಾರೆ. ಗಬ್ಬರ್, ಮೊಗ್ಯಾಂಬೋ, ಲಯನ್, ಶಾಖಾಲ್ ಈ ಬಾಲಿವುಡ್ ಖಳನಾಯಕರ ನೆನಪಾಗುವಂತಹ ಮಾತುಗಳನ್ನು ಚುನಾಯಿತ “ಜನ” ಪ್ರತಿನಿಧಿಗಳಿಂದ ಕೇಳುತ್ತಿದ್ದೇವೆ. ಈಗ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಸುಪುತ್ರ ತನ್ನ ವಾಹನ ಹರಿಸಿ ನಾಲ್ವರ ಹತ್ಯೆ ಮಾಡಿದ್ದಾನೆ. ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ರೈತರ ಪೈಕಿ ನಾಲ್ವರು ಹುತಾತ್ಮರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. “ಪ್ರತಿಭಟನಾನಿರತರ ಬಳಿ ಮಾರಕಾಸ್ತ್ರಗಳಿದ್ದವು ಅವರು ಭಯೋತ್ಪಾದಕರು ” ಎಂದು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ, ಹತ್ಯಾಕಾಂಡಕ್ಕೆ ಸಮರ್ಥನೆ ನೀಡುವಷ್ಟು ಮಟ್ಟಿಗೆ ನಮ್ಮ ದೇಶದ ಆಡಳಿತ ವ್ಯವಸ್ಥೆ ” ಮುಂದುವರೆದಿದೆ “. ಏನಾಗುತ್ತದೋ ನೋಡೋಣ.
ಉದ್ದೇಶಿತ ಹತ್ಯೆಗಳ ಸಮರ್ಥನೆಗೆ ಕಾನೂನು ಲೋಪಗಳನ್ನು, ಆಧುನಿಕ ತಂತ್ರಜ್ಞಾನವನ್ನು, ಆಡಳಿತ ವ್ಯವಸ್ಥೆಯ ಭ್ರಷ್ಟತೆಯನ್ನು ಜಾಣ್ಮೆಯಿಂದ ಬಳಸಿಕೊಳ್ಳುವುದರಲ್ಲಿ ನಿಷ್ಣಾತರಾಗಿರುವ ” ದಕ್ಷ ” ಆಡಳಿತಗಾರರನ್ನು #ಆತ್ಮನಿರ್ಭರಭಾರತ ತಯಾರು ಮಾಡಿದೆ. ಹಸಿರು ಹೆಚ್ಚಿಸಲು ಗಿಡಗಳನ್ನು ನೆಡುವುದರಲ್ಲಿ ಹಿಂದೆ ಬಿದ್ದಿದ್ದೇವೆ , ಆದರೆ ಅಮಾಯಕರನ್ನು ಅಪರಾಧಿ ಮಾಡಲು , ಅಪರಾಧಿಯನ್ನು ನಿರಪರಾಧಿ ಮಾಡಲು ಲ್ಯಾಪ್ ಟಾಪ್ ಗಳಲ್ಲಿ ಸುಳ್ಳುಸಾಕ್ಷಿಗಳನ್ನು ನೆಡುವುದರಲ್ಲಿ ಪರಿಣತರಾಗಿದ್ದೇವೆ. ಹಾಗಾಗಿ ಹತ್ಯೆಗೊಳಗಾದವರು, ಅತ್ಯಾಚಾರಕ್ಕೀಡಾದವರು, ಹಲ್ಲೆಗೊಳಗಾದವರು ಅಪರಾಧಿಗಳಾಗಿಬಿಡುವುದು ಸಹಜವೇನೋ ಎನ್ನುವಂತಾಗಿಬಿಟ್ಟಿದೆ.

ಶಂಕರ್ ನಾಗ್ ಅವರ ಆ್ಯಕ್ಸಿಡೆಂಟ್ ಚಿತ್ರವನ್ನು ನೆನಪಿಸುವಂತಹ ಹತ್ಯೆ ದೇಶದಲ್ಲಿ ಸಂಭವಿಸಿದೆ. ಸಿನಿಮಾ ಪರದೆಯ ಮೇಲೆ ಕಾರು ಚಾಲಕ ಮದ್ಯದ ನಶೆಯಲ್ಲಿರುತ್ತಾನೆ , ಉತ್ತರಪ್ರದೇಶದಲ್ಲಿ ಸಚಿವರ ಮಗ ಅಧಿಕಾರದ ನಶೆಯಲ್ಲಿ ಹತ್ಯೆ ಮಾಡಿದ್ದಾನೆ. ಈ ಹೇಯ ಕೃತ್ಯಗಳ ವಿರುದ್ಧ ದನಿ ಎತ್ತಬೇಕಾದ ಜನಪ್ರತಿನಿಧಿಗಳು ಪಕ್ಷ ನಿಷ್ಠೆ, ವ್ಯಕ್ತಿ ನಿಷ್ಠೆ, ಅಧಿಕಾರ ವ್ಯಾಮೋಹ, ಕುರ್ಚಿಯ ಪ್ರೀತಿಗೆ ತಮ್ಮ ಸಂವೇದನೆ, ಸೂಕ್ಷ್ಮತೆಗಳನ್ನೂ ಮಾರಿಕೊಂಡು ಬೆತ್ತಲಾಗಿ ನಿಲ್ಲುತ್ತಾರೆ. ವಾಟ್ಸಪ್ ವಿಶ್ವವಿದ್ಯಾಲಯದ “ವಿದ್ವಾಂಸರು” – ” ದೇಶದ್ರೋಹಿ ದಲ್ಲಾಲಿಗಳನ್ನು ಸಂಹರಿಸಿದ ದೇಶಪ್ರೇಮಿ ” ಎಂದು ಸಂಭ್ರಮಿಸಿದರೂ ಅಚ್ಚರಿಯೇನಿಲ್ಲ. ಕೊಲೆ, ಹತ್ಯೆ, ಅತ್ಯಾಚಾರ, ದೌರ್ಜನ್ಯಗಳನ್ನು ಸಂಭ್ರಮಿಸುವ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ, ಇನ್ನೂ ಪೋಷಿಸಲಾಗುತ್ತಿದೆ.
ಈ ಸಂದಿಗ್ಧತೆಗಳ ನಡುವೆ ರಾಜ್ಯ ಸಚಿವರೊಬ್ಬರ ಪುತ್ರ ನಾಲ್ವರ ಹತ್ಯೆ ಮಾಡಿದ್ದಾರೆ. ಅಂಬೇಡ್ಕರ್ ವಿರಚಿತ ಸಂವಿಧಾನಕ್ಕೆ ಬದ್ಧರಾದ, ಗಾಂಧಿ ಹಾಕಿಕೊಟ್ಟ ದಾರಿಯಲ್ಲೇ ನಡೆಯುವ, ವಿವೇಕಾನಂದರ ತತ್ವಗಳನ್ನು ಆರಾಧಿಸುವ ಜನಪ್ರತಿನಿಧಿಗಳು ಇವೆಲ್ಲವನ್ನೂ “ವ್ಯಕ್ತಿನಿಷ್ಠೆ” ಯ ಬಲಿಪೀಠದಲ್ಲಿರಿಸಿ, ಮೌನಕ್ಕೆ ಶರಣಾಗಿಬಿಡುತ್ತಾರೆ. ಆದರೆ ಈ ಹತ್ಯೆಗಳು, ಮಾನವೀಯ ಪ್ರಜ್ಞೆ ಬೇಡ ಬಿಡಿ, ಕನಿಷ್ಠ ಮೃಗೀಯ ಪ್ರಜ್ಞೆ ಇರುವ, ಪ್ರಜೆಗಳನ್ನಾದರೂ ಎಚ್ಚರಿಸಬೇಕಲ್ಲವೇ. ಕನಿಷ್ಠ ಮಾನವ ಪ್ರಜ್ಞೆ ಇರುವ ಪ್ರತಿಯೊಬ್ಬ ಪ್ರಜೆಯೂ ಈ ಹತ್ಯೆಯ ವಿರುದ್ಧ ದನಿ ಎತ್ತಬೇಕಿದೆ, ದನಿ ಎತ್ತೋಣ, ಕ್ಷೀಣವಾದರೂ ಸರಿ ಈ ದನಿ ಕ್ರೂರ ವ್ಯವಸ್ಥೆಯನ್ನು ಎಚ್ಚರಿಸಲಿದೆ.