ತಾಲಿಬಾನ್ ನೇತೃತ್ವದ ಸರ್ಕಾರ ಅಫ್ಘಾನಿಸ್ತಾನದಲ್ಲಿ ರಚನೆಯಾಗುವುದು ಸನ್ನಿಹಿತವಾಗಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಇದು ಪಾಕ್ ಗೆಲುವೆಂದು ಸಂಭ್ರಮಾಚರಣೆ ನಡೆದಿದೆ. ಭಾರತದ ವಿರುದ್ಧ ಏರಿ ಹೋಗಲು ತನಗೆ ತಾಲಿಬಾನ್ನ ಶಕ್ತಿ ಸಿಕ್ಕಿದೆ ಎಂದು ಕೆಲ ಪಾಕಿಸ್ತಾನಿಗರು ಹೇಳಿಕೆ ನೀಡುತ್ತಿರುವುದು ವರದಿಯಾಗಿದೆ. ಆದರೆ, ತಾಲಿಬಾನ್ ಸಂಘಟನೆಯಿಂದ ನೇರವಾಗಿ ಇಂಥ ಯಾವ ಸುಳಿವೂ ಸಿಕ್ಕಿಲ್ಲ. ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಾಲಿಬಾನ್ ಮುಖ್ಯಸ್ಥ ಶೇರ್ ಮೊಹಮ್ಮದ್ ಸ್ಟನಾಕ್ಝೈ ಅವರು ಈ ಸುದ್ದಿಗಳನ್ನ ಅಲ್ಲಗಳೆಯುತ್ತಾರೆ. ಭಾರತದೊಂದಿಗೆ ಈ ಮುಂಚಿನಂತೆ ಉತ್ತಮ ಸಂಬಂಧ ಬಯಸುತ್ತೇವೆ. ಭಾರತ ಅಷ್ಟೇ ಅಲ್ಲ ಎಲ್ಲಾ ನೆರೆ ದೇಶಗಳೊಂದಿಗೂ ಅಫ್ಘಾನಿಸ್ತಾನಕ್ಕೆ ಒಳ್ಳೆಯ ಸಂಬಂಧ ಬೇಕು ಎಂದು ಶೇರ್ ಮೊಹಮ್ಮದ್ ಹೇಳಿದ್ದಾರೆ.
ನಮ್ಮ ಎಲ್ಲಾ ನೆರೆ ದೇಶಗಳು ಹಾಗೂ ಇಡೀ ವಿಶ್ವದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದುವುದು ನಮ್ಮ ವಿದೇಶ ನೀತಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆ 20 ವರ್ಷಗಳಿಂದ ಇದ್ದು ಈಗ ಹಿಂದಿರುಗುತ್ತಿವೆ. ಅಮೆರಿಕದೊಂದಿಗೂ ನಾವು ಸ್ನೇಹಪೂರ್ವಕ ಸಂಬಂಧ ನಿರೀಕ್ಷಿಸುತ್ತೇವೆ. ಅಮೆರಿಕನ್ನರು ಅಫ್ಘಾನಿಸ್ತಾನದ ಪುನಶ್ಚೇತನದ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಬಯಸುತ್ತೇವೆ. ಭಾರತದೊಂದಿಗೂ ಈ ಮುಂಚೆ ಇದ್ದಂತೆ ಉತ್ತಮ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನ ನಿರೀಕ್ಷಿಸುತ್ತೇವೆ. ಭಾರತವಷ್ಟೇ ಅಲ್ಲ ನೆರೆಯ ದೇಶಗಳಾದ ತಜಿಕಿಸ್ತಾನ್, ಇರಾನ್ ಮತ್ತು ಪಾಕಿಸ್ತಾನದೊಂದಿಗೂ ಉತ್ತಮ ಸಂಬಂಧ ನಮಗೆ ಬೇಕಿದೆ ಎಂದು ಅಫ್ಘಾನಿಸ್ತಾನದ ರಾಜಕೀಯ ವಿಭಾಗದ ಮುಖ್ಯಸ್ಥ ಶೇರ್ ಮೊಹಮ್ಮದ್ ತಿಳಿಸಿದ್ದಾರೆ.

ಭಾರತದ ವಿರುದ್ಧ ಸಂಚು ರೂಪಿಸುವುದಿಲ್ಲ.!!
ಇದೇ ವೇಳೆ, ಪಾಕಿಸ್ತಾನದೊಂದಿಗೆ ತಾಲಿಬಾನ್ ಕೈಜೋಡಿಸಿ ಭಾರತಕ್ಕೆ ಮಾರಕವಾಗಬಹುದು ಎಂದು ಹರಿದಾಡುತ್ತಿರುವ ಸುದ್ದಿಯನ್ನು ಶೇರ್ ಮೊಹಮ್ಮದ್ ತಳ್ಳಿಹಾಕಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವುದರಲ್ಲಿ ಬಹುತೇಕವು ಸುಳ್ಳೇ ಆಗಿರುತ್ತವೆ. ಭಾರತದ ವಿರುದ್ಧ ಪಾಕಿಸ್ತಾನದೊಂದಿಗೆ ನಾವು ಕೈಜೋಡಿಸುತ್ತೇವೆ ಎಂಬುದೆಲ್ಲಾ ಸುಳ್ಳು. ಆ ರೀತಿಯ ಹೇಳಿಕೆಯನ್ನು ನಾವೆಂದೂ ನೀಡಿಲ್ಲ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸುದೀರ್ಘ ಕಾಲದಿಂದ ರಾಜಕೀಯ ಮತ್ತು ಭೌಗೋಳಿಕ ವಿವಾದಗಳಿವೆ. ಆ ದೇಶಗಳ ಮಧ್ಯೆ ದೊಡ್ಡ ಗಡಿ ಇದ್ದು ಅಲ್ಲೇ ಪರಸ್ಪರ ಕಾದಾಡಲಿ. ಅವರಿಬ್ಬರ ಕದನದಲ್ಲಿ ಅಫ್ಘಾನಿಸ್ತಾನವನ್ನ ಬಳಸಿಕೊಳ್ಳುವುದಿಲ್ಲ ಎಂದು ಭಾವಿಸಿದ್ದೇವೆ. ಹಾಗೆ ಬಳಸಿಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ತಾಲಿಬಾನ್ ಮುಖಂಡ ಹೇಳಿದ್ಧಾರೆ.
ಅಫ್ಘಾನ್ನಲ್ಲಿರುವ ಭಾರತದ ಹೂಡಿಕೆ ಸೇಫ್.!!
ಅಫ್ಘಾನಿಸ್ತಾನದಲ್ಲಿ ಭಾರತ ಈಗಾಗಲೇ ಅಣೆಕಟ್ಟು, ರಸ್ತೆ, ಕಟ್ಟಡ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ. ಇವುಗಳನ್ನ ನಾಶ ಮಾಡಲಾಗುತ್ತದೆ ಎಂಬಂತಹ ಸುದ್ದಿಯೂ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಅಫ್ಘಾನಿಸ್ತಾನದಲ್ಲಿ ಭಾರತ ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ರಾಷ್ಟ್ರೀಯ ಆಸ್ತಿ. ಭಾರತದ ಯಾವುದಾದರೂ ಅಭಿವೃದ್ಧಿ ಯೋಜನೆಗಳು ಇನ್ನೂ ಬಾಕಿ ಇದ್ದರೆ ಅದನ್ನ ಪೂರ್ಣಗೊಳಿಸಬಹುದು. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಭದ್ರತೆ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ, ಭಾರತದ ನೆಲದಲ್ಲಿ ಪದೇ ಪದೇ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಲಷ್ಕರ್ ಥೈಬಾ ಮತ್ತು ಜೇಷ್ ಸಂಘಟನೆಗಳಿಗೆ ಅಫ್ಘಾನಿಸ್ತಾನ ಆಶ್ರಯ ತಾಣವಾಗಲಿದೆ ಎಂಬ ಸುದ್ದಿಯನ್ನೂ ತಾಲಿಬಾನ್ ಮುಖಂಡ ತಳ್ಳಿಹಾಕಿದ್ದು, ವಿಶ್ವದ ಯಾವುದೇ ದೇಶದ ವಿರುದ್ಧ ಉಗ್ರ ಚಟುವಟಿಕೆ ನಡೆಸಲು ಅಫ್ಘಾನಿಸ್ತಾನದ ನೆಲವನ್ನು ಉಪಯೋಗಿಸಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ತರಬೇತಿ ಪಡೆದಿರುವ ತಾಳಿಬಾನ್ ಮುಖ್ಯಸ್ಥ ಶೇರ್.!!
ಶೇರ್ ಮೊಹಮ್ಮದ್ ಸ್ಟಾನಕ್ಝೈ ಅವರು ಭಾರತದ ಎಎಂಎ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ದಶಕಗಳ ಹಿಂದೆ ಅಫ್ಘಾನಿಸ್ತಾನಕ್ಕೆ ರಷ್ಯನ್ನರು ಬರುವ ಮುಂಚೆ ಐಎಂಎನಲ್ಲಿ ನಾನು ತರಬೇತಿ ಪಡೆದಿದ್ದೆ ಎಂದು ಹೇಳಿರುವ ಅವರು, ಸದ್ಯ ಭಾರತದಲ್ಲಿ ಯಾರೊಂದಿಗೂ ಸಂಪರ್ಕದಲ್ಲಿಲ್ಲ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹಕ್ಕಾನಿ ಸಂಘಟನೆ ಬಾಂಬ್ ಬ್ಲಾಸ್ಟ್ಗಳನ್ನ ಮಾಡಿದರೆ ಐಸಿಸ್ ಸಂಘಟನೆ ಆ ದಾಳಿಗಳ ಹೊಣೆ ಹೊತ್ತುಕೊಳ್ಳುತ್ತದೆ ಎಂಬ ಆರೋಪಗಳ ಬಗ್ಗೆ ಮಾತನಾಡಿರುವ ಸ್ಟಾನಕ್ಝೈ, ಅದೆಲ್ಲಾ ಊಹಾಪೋಹ ಎಂದಿದ್ದಾರೆ. ಅಫ್ಘಾನಿಸ್ತಾನದ ಶತ್ರುಗಳು ಈ ರೀತಿಯ ವದಂತಿಗಳನ್ನ ಹರಿಬಿಡುತ್ತಾರೆ. ಕಾಬೂಲ್ ಬಾಂಬ್ ಸ್ಫೋಟ ಘಟನೆಯ ಹೊಣೆಯನ್ನ ಡಾಯಿಶ್ (ಐಸಿಸ್) ಹೊತ್ತುಕೊಂಡಿದೆ. ಆ ಕೃತ್ಯವನ್ನು ಐಸಿಸ್ನವರೇ ಮಾಡಿರುವುದು ಸ್ಪಷ್ಟವಾಗಿದೆ ಎಂದು ಶೇರ್ ಮೊಹಮ್ಮದ್ ತಿಳಿಸಿದ್ದಾರೆ.






