ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಮಹತ್ವದ ಆದೇಶಗಳು ಹೊರ ಬೀಳುವ ಸಾಧ್ಯತೆ. ಪಕ್ಕದ ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕು, 1 ರಿಂದ 8ನೇ ತರಗತಿ ವರೆಗಿನ ತರಗತಿ ಆರಂಭ ಹಾಗೂ ಗಣೇಶ ಚತುರ್ಥಿ ಆಚರಣೆಗೆ ಆನುಮತಿ ಹೀಗೆ ಹಲವು ವಿಚಾರಗಳ ಕುರಿತು ಇಂದಿನ ಸಭೆಯಲ್ಲಿ ಸಿಎಂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ಮಾಡಲಿದ್ದಾರೆ.
ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಳ : ಗಡಿ ಜಿಲ್ಲೆಗಳಲ್ಲಿ ಆತಂಕ.!!
ಆಗಸ್ಟ್ 26ರಂದು ಕೇರಳದಲ್ಲಿ ಒಂದೇ ದಿನ 30 ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ವರದಿಗಳ ಪ್ರಕಾರ ಇಡೀ ದೇಶದ ದೈನಂದಿನ ಕೊರೋನಾ ಸೋಂಕಿನ ಪ್ರಮಾಣದ ಪೈಕಿ 65% ರಷ್ಟು ಸೋಂಕು ಕೇರಳವೊಂದರಲ್ಲೇ ಇವೆ. ಇದರ ಜೊತೆ ಕೇರಳ ಗಡಿ ಜಿಲ್ಲೆಗಳಿಂದ ಶಿಕ್ಷಣ ಅರಸಿಕೊಂಡು ವಿಧ್ಯಾರ್ಥಿ/ವಿಧ್ಯಾರ್ಥಿನಿಯರು ಕರ್ನಾಟಕ್ಕೆ ಪ್ರತಿದಿನ ಓಡಾಡಿಕೊಂಡಿದ್ದು ಇವರ ಮೇಲೆ ಯಾವ ರೀತಿಯಾಗಿ ನಿಗಾವಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನವಾಗಲಿದೆ. ಈಗಾಗಲೇ 15 ದಿನಗಳಿಗೊಮ್ಮೆ ಅಂತರ್ ರಾಜ್ಯ ವಿಧ್ಯಾರ್ಥಿ/ವಿಧ್ಯಾರ್ಥಿನಿಯರು RTPCR ಟೆಸ್ಟ್ ವರದಿ ಪ್ರಯಾಣಿಸುವ ವೇಳೆ ಸಲ್ಲಿಸುವ ಆದೇಶವನ್ನು ಈ ಹಿಂದೆಯೇ ಸರ್ಕಾರ ನೀಡಿತ್ತಾದರೂ ಕೊರೋನಾ ಹತೋಟಿಗೆ ತರಲು ಮತ್ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿಯಿಂದ ಸರ್ಕಾರ ಸಲಹೆಯನ್ನು ಪಡೆದುಕೊಳ್ಳಲಿದೆ. ಹೀಗಾಗಿ ಕರ್ನಾಟದ ಗಡಿ ಜಿಲ್ಲೆಗಳಾದ ಮಂಗಳೂರು, ಚಾಮರಾಜನಗರ ಕೇರಳದ ಜೊತೆ ನಿಖಟ ಸಂಪರ್ಕ ಹೊಂದಿದ್ದು, ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ. ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ದೇವಿ ಶೆಟ್ಟಿ ಗಡಿಯಲ್ಲಿ ಎಚ್ಚರವಹಿಸುವಂತೆ ಸರ್ಕಾರಕ್ಕೆ ಸಲಹೆಯನ್ನು ಕೊಟ್ಟಿತ್ತು.
2 ಹಂತದಲ್ಲಿ ಶಾಲೆ ಆರಂಭಿಸಲು ಸರ್ಕಾರದ ಚಿಂತನೆ.!!
ಸದ್ಯ ಕೊರೋನಾ ಎರಡನೇ ಅಲೆ ಸಂಪೂರ್ಣವಾಗಿ ಹಿಡಿತಕ್ಕೆ ಬಂದಿದೆ. ಪ್ರತಿ ದಿನ ಸರಾಸರಿ ಸೋಂಕು 1500ರಷ್ಟೇ ಇದೆ. ಹೀಗಾಗಿ ಹಂತ ಹಂತವಾಗಿ ಶಾಲೆ-ಕಾಲೇಜಗಳನ್ನು ಸರ್ಕಾರ ಆರಂಭಿಸುತ್ತಿವೆ. ಇತ್ತೀಚೆಗಷ್ಟೇ 9 ರಿಂದ 12ರ ವರೆಗಿನ ತರಗತಿಗಳ ಚಾಲನೆಗೆ ಸರ್ಕಾರ ಹಸಿರು ನಿಶಾನೆ ಕೊಟ್ಟಿದೆ. ಇದೀಗ 1 ರಿಂದ 8ನೇ ತರಗತಿಗಳನ್ನು ತೆರೆಯುವ ವಿಚಾರ ಬಹಳ ಗಂಭೀರವಾಗಿ ಚರ್ಚೆಯಾಗುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್, ತಜ್ಷರು ಶಾಲೆಗಳನ್ನು ತೆರೆಯುವ ಬಗ್ಗೆ ಸ್ಪಷ್ಟವಾಗಿ ವರದಿಕೊಟ್ಟಿದ್ದಾರೆ. ಅದನ್ನು ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಇವತ್ತಿನ ಸಭೆಯಲ್ಲಿ ಆ ಬಗ್ಗೆಯೂ ಚರ್ಚೆ ನಡೆಯಲಿದ್ದು, ಶೀಘ್ರವೇ 1 ರಿಂದ 8ನೇ ತರಗತಿ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪ್ರತಿಧ್ವನಿ ಜೊತೆ ಮಾತನಾಡಿದ ಸಮಗ್ರ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು, ತಜ್ಙರ ಅಭಿಪ್ರಾಯ ಎರಡು ಹಂತದಲ್ಲಿ ಶಾಲೆ ಆರಂಭಿಸುವ ಬಗ್ಗೆ ಇದೆ. ಹೀಗಾಗಿ ಸರ್ಕಾರವೂ 6 ರಿಂದ 8ನೇ ತರಗತಿ ಮೊದಲ ಹಂತದಲ್ಲಿ ಹಾಗೂ 1 ರಿಂದ 5ನೇ ತರಗತಿ ಎರಡನೇ ಹಂತದಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಗೌರಿ ಗಣೇಶ ಹಬ್ಬಕ್ಕೆ ಅನುಮತಿ ಸಾಧ್ಯತೆ : ಇಂದಿನ ಸಭೆಯಲ್ಲಿ ನಿರ್ಧಾರ.!!
ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳಿವೆ. ಈಗಾಗಲೇ ವರಮಹಾಲಕ್ಷ್ಮಿ, ನಾಗರ ಪಂಚಮಿ ಹಾಗೂ ಮೊಹರಮ್ ಸೇರಿದಂತೆ ಕೆಲ ಹಬ್ಬಗಳು ಮುಗಿದಿದೆ. ಇನ್ನು ಇಂದು ಕೃಷ್ಣಜನ್ಮಾಷ್ಠಮಿ ಹಬ್ಬ ಆಚರಣೆ ಆಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಗಣೇಶ ಚತುರ್ಥಿ (ಚೌತಿ) ಹಬ್ಬ ಆಚರಣೆಯಾಗಲಿದೆ. ಚೌತಿ ಹಬ್ಬ ಬಹಳ ಅದ್ದೂರಿಯಾಗಿ ಆಚರಣೆಯಾಗುತ್ತಿದ್ದು ಕೊರೋನಾ ಕಾರಣಕ್ಕೆ ಕಳೆದರಡು ವರ್ಷಗಳಿಂದ ಸಂಭ್ರಮ ಸಡಗರ ಕುಂದಿಹೋಗಿತ್ತು. ಆದರೆ ಈ ಬಾರಿ ಕೊರೋನಾ ತಣ್ಣಗಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅದ್ದೂರಿಯಾಗಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ಕೊಡಬೇಕು ಎಂಬ ಕೂಗು ಕೇಳಿ ಬಂದಿವೆ. ಈ ಬಗ್ಗೆಯೂ ಡಾ. ದೇವಿ ಶೆಟ್ಟಿ ನೇತೃತ್ವದ ತಾಂತ್ರಿಕ ಸಲಹಾ ಸಮಿತಿ ಚೌತಿ ಆಚರಣೆ ಅನುಮತಿ ಕೊಡುವುದರಲ್ಲಿ ತಪ್ಪೇನಿಲ್ಲ. ಕೊರೋನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದೆ. ಆದರೂ ಸಾರ್ವಜನಿಕರು ಮೈಮರೆಯದೆ ಹಬ್ಬ ಆಚರಿಸಿದರೆ ಅಪಾಯ ತಪ್ಪಿಸಿಬಹುದು ಎಂದು ಹೇಳಿದ್ದರು. ಇಂದಿನ ಸಭೆಯಲ್ಲಿ ಗೌರಿ ಗಣೇಶ ಹಬ್ಬದ ಕುರಿತಾಗಿಯೂ ಚರ್ಚೆಯಾಗಲಿದ್ದು, ಈ ಬಗ್ಗೆ ಆದೇಶ ಇಂದಿನ ಸಭೆಯ ಬಳಿಕ ಹೊರ ಬೀಳುವ ಸಾಧ್ಯತೆ ಇದೆ.
ಹೀಗೆ ಹಲವು ಪ್ರಮುಖ ವಿಚಾರದ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ರಾಜ್ಯದ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲದೆ ಇಡೀ ದೇಶದಲ್ಲಿ ಲಸಿಕೆ ಹಂಚಿಕೆಯಲ್ಲೂ ರಾಜ್ಯ ಮುಂಚೂಣಿಯಲ್ಲಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶಿಕ್ಷಣ, ಹಾಗೂ ಹಬ್ಬ ಆಚರಣೆಗೆ ಹಸಿರು ನಿಶಾನೆ ಸಾಧ್ಯತೆ ದಟ್ಟವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಪ್ರತಿಧ್ವನಿಗೆ ತಿಳಿಸಿದೆ.