ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆ ಅಸಮಾಧಾನ ಶಮನ ಯತ್ನವಾಗಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ನಡೆಸಿದ ಯತ್ನಗಳು ವಿಫಲವಾಗಿದ್ದು, ಇದೀಗ ಖಾತೆ ಕ್ಯಾತೆ ಬಿಕ್ಕಟ್ಟು ದೆಹಲಿಯ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ಸ್ಥಳಾಂತರಗೊಂಡಿದೆ.
ಅಯಕಟ್ಟಿನ ಖಾತೆ ಮೇಲೆ ಕಣ್ಣಿಟ್ಟಿದ್ದ ಆನಂದ್ ಸಿಂಗ್, ತಮ್ಮ ನಿರೀಕ್ಷೆಯ ಆ ಖಾತೆ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಆ ಅಸಮಾಧಾನದ ಹಿನ್ನೆಲೆಯಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅದಕ್ಕಾಗಿ ಸ್ಪೀಕರ್ ಕಚೇರಿಯನ್ನೂ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಹರಿದಾಡಿತ್ತು.
ಆ ಹಿನ್ನೆಲೆಯಲ್ಲಿ ಗುರುವಾರ ಆನಂದ್ ಸಿಂಗ್ ಜೊತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಧಾನ ಸಭೆ ನಡೆಸಿದ್ದರು. ಆದರೆ, ಆ ಸಂಧಾನ ಕೂಡ ಸಿಂಗ್ ಮುನಿಸು ಶಮನಗೊಳಿಸಲು ಯಶಸ್ವಿಯಾಗಿಲ್ಲ. ಹಾಗಾಗಿ ಅವರು ತಮ್ಮ ಅಹವಾಲು ಸಲ್ಲಿಸಲು ಮತ್ತೊಮ್ಮೆ ದೆಹಲಿಗೆ ಪ್ರಯಾಣಬೆಳೆಸಲಿದ್ದಾರೆ. ನೇರವಾಗಿ ಹೈಕಮಾಂಡ್ ಮುಂದೆಯೇ ತಮ್ಮ ಅಪೇಕ್ಷೆಯ ಖಾತೆ ಬಗ್ಗೆ ಕೇಳಲಿದ್ದು, ತಮ್ಮ ಆ ಬೇಡಿಕೆ ಈಡೇರದೇ ಇದ್ದಲ್ಲಿ ತಾವು ಸಚಿವ ಸ್ಥಾನವಷ್ಟೇ ಅಲ್ಲದೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೊಸಪೇಟೆಯ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಅವರ ಅಧಿಕೃತ ಕಚೇರಿಯ ಬೋರ್ಡನ್ನು ಕೂಡ ಕಳೆದ ವಾರ ತೆರವುಗೊಳಿಸಿ, ಕಚೇರಿ ಬಂದ್ ಮಾಡಲಾಗಿತ್ತು. ಗುರುವಾರದ ಸಿಎಂ ಮತ್ತು ಮಾಜಿ ಸಿಎಂ ಸಂಧಾನ ಸಭೆಯ ಬಳಿಕ ಆ ಕಚೇರಿ ಪುನರಾರಂಭದ ನಿರೀಕ್ಷೆಗಳಿದ್ದವು. ಆದರೆ, ಶುಕ್ರವಾರ ಅಂತಹ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಆನಂದ ಸಿಂಗ್ ಅಸಮಾಧಾನ ಶಮನಗೊಂಡಿಲ್ಲ ಎಂಬುದಕ್ಕೆ ಪೂರಕವಾಗಿ ಅವರ ಕಾರ್ಯಾಲಯ ಶುಕ್ರವಾರವೂ ಪುನಾರಂಭ ಆಗಿಲ್ಲ. ಜತೆಗೆ ಕಚೇರಿಗೆ ಜನರ ಭೇಟಿಗೂ ಅವಕಾಶ ನೀಡಲಾಗಿಲ್ಲ. ಕಚೇರಿಯ ಸಿಬ್ಬಂದಿಯೂ ಕಚೇರಿಗೆ ಆಗಮಿಸುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಹುಶಃ ಆ.15ರವರೆಗೆ ಇದೇ ಸ್ಥಿತಿ ಮುಂದುವರಿಯಲಿದ್ದು, ಹೊಸಪೇಟೆಯಲ್ಲಿ ಆ.15ರಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸಚಿವ ಸಿಂಗ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ. ಆ ನಿಟ್ಟಿನಲ್ಲಿ ಅವರು ಈಗಾಗಲೇ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಅವರ ಅಪ್ತ ಮೂಲಗಳು ತಿಳಿಸಿವೆ.
ಹಾಗಾಗಿ, ಸಿಎಂ, ಮಾಜಿ ಸಿಎಂ ಮತ್ತು ಸಚಿವ ಆರ್ ಅಶೋಕ್ ಗುರುವಾರ ಸಂಜೆ ಎಲ್ಲವೂ ಸುಖಾಂತ್ಯಗೊಂಡಿದೆ ಎಂಬಂತೆ ಸಂದೇಶ ಕೊಡುವ ಯತ್ನ ನಡೆಸಿದ್ದರೂ ವಾಸ್ತವವಾಗಿ ಪರಿಸ್ಥಿತಿ ಬದಲಾಗಿಲ್ಲ. ಖಾತೆ ಬದಲಾವಣೆಯ ಸಿಂಗ್ ಪಟ್ಟು ಸಡಿಲಿಸಿಲ್ಲ. ಹಾಗಾಗಿ ಬಿಕ್ಕಟ್ಟು ಕಗ್ಗಂಟಾಗಿದ್ದು, ಇದೀಗ ಹೈಕಮಾಂಡ್ ಅಂಗಳಕ್ಕೆ ಜಿಗಿದಿದೆ.