ದೇಶದಲ್ಲಿ ಮೇ 6 ಸಾರ್ವಕಾಲಿಕ ದಾಖಲೆಯ 4.14 ಲಕ್ಷ ಹೊಸ ಪ್ರಕರಣಗಳ ಬಳಿಕ ನಿರಂತರ ಇಳಿಮುಖವಾಗಿದ್ದ ದೈನಂದಿನ ಕರೋನಾ ಪ್ರಕರಣಗಳು, ಜೂನ್ 28ರಂದು ಎರಡನೇ ಅಲೆಯ ಭೀಕರ ಅವಧಿಯಲ್ಲೇ ಅತಿ ಕನಿಷ್ಟ ಎನ್ನಬಹುದಾದ 37,500ಕ್ಕೆ ಕುಸಿದಿದ್ದವು. ಆದರೆ, ಆ ಬಳಿಕ ಮತ್ತೆ ಹೊಸ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದೆ.
ದೇಶದ ರಾಜಕೀಯ ನೇತಾರರು ಮೊದಲನೆಯ ಅಲೆಯ ಮುಗಿಯುತ್ತಲೇ ಚುನಾವಣೆ ಮತ್ತು ಅಧಿಕಾರದ ಲಾಲಸೆಗಾಗಿ ಧಾವಂತ ತೋರಿ ಲಕ್ಷಾಂತರ ಭಾರತೀಯರ ಜೀವಕ್ಕೆ ಕುತ್ತು ತಂದಂತೆಯೇ ಈಗಲೂ ಗಡಿಬಿಡಿಯಲ್ಲಿ ಲಾಕ್ ಡೌನ್ ತೆರವುಗೊಳಿಸುತ್ತಿದ್ದಾರೆ. ಪ್ರಕರಣಗಳು ಮತ್ತೆ ಏರುಗತಿಯಲ್ಲಿರುವುದು, ಭೀಕರ ಮೂರನೇ ಅಲೆಯ ಎಚ್ಚರಿಕೆ ಮತ್ತು ಅಪಾಯಕಾರಿ ಡೆಲ್ಟಾ ಪ್ಲಸ್ ವೈರಸ್ ದಾಳಿಯ ಆತಂಕಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಈಗಾಗಲೇ ಹೋಟೆಲ್, ಕ್ಲಬ್, ಪ್ರವಾಸ, ಮದುವೆ, ಸಭೆ-ಸಮಾರಂಭಗಳಿಗೆ ತರಾತುರಿಯಲ್ಲಿ ಮುಕ್ತ ಅವಕಾಶ ನೀಡತೊಡಗಿದ್ದಾರೆ.

ವಾಸ್ತವವಾಗಿ ಆಡಳಿತದ ಚುಕ್ಕಾಣಿ ಹಿಡಿದವರ ಈ ಧಾವಂತ, ತರಾತುರಿ, ಗಡಿಬಿಡಿಯ ಹಿಂದೆ ಲಾಕ್ ಡೌನ್ ನಿಂದ ಮೂರಾಬಟ್ಟೆಯಾಗಿರುವ ಜನಜೀವನವನ್ನು ಸುಧಾರಿಸುವ ಕಾಳಜಿಯಾಗಲೀ, ಆರ್ಥಿಕತೆ ಚೇತರಿಕೆಯ ಉದ್ದೇಶವಾಗಲೀ ಇರುವುದಕ್ಕಿಂತ ಹೆಚ್ಚಾಗಿ ತುರ್ತಾಗಿ ಉತ್ತರಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳ ಚುನಾವಣೆಗೆ ಮುಕ್ತ ಅವಕಾಶ ಪಡೆಯುವ ಜನದ್ರೋಹಿ ಹಿತಾಸಕ್ತಿ ಕೆಲಸ ಮಾಡುತ್ತಿರುವಂತಿದೆ. ಕರ್ನಾಟಕದ ಮಟ್ಟಿಗಂತೂ ಈಗಾಗಲೇ ಅವಧಿ ಮುಗಿದಿರುವ ಜಿಪಂ ಮತ್ತು ತಾಪಂ ಚುನಾವಣೆಗಳನ್ನು ನಡೆಸುವುದು ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯ ಆದ್ಯತೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಯೇ ಯಾವ ಹಿಂಜರಿಕೆ ಇಲ್ಲದೆ ಸಾರಿಬಿಟ್ಟಿದ್ದಾರೆ!
ಇಂತಹ ದುರಾದೃಷ್ಟಕರ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸಲು ಇರುವ ಏಕೈಕ ಅಸ್ತ್ರ ಲಸಿಕೆ. ಆದರೆ, ದೇಶದಲ್ಲಿ ಕಳೆದ ಆರು ತಿಂಗಳಲ್ಲಿ ಲಸಿಕೆ ಕಾರ್ಯಕ್ರಮ ಸಾಗುತ್ತಿರುವ ವೇಗ ಮತ್ತು ಭವಿಷ್ಯದಲ್ಲಿ ಎದುರಾಗಲಿರುವ ತೊಡಕುಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಕನಿಷ್ಟ ಇನ್ನು ಆರು ತಿಂಗಳಂತೂ ಲಸಿಕೆ ನೀಡಿಕೆ ವ್ಯವಸ್ಥೆ ಹಳಿಗೆ ಬರುವ ಸೂಚನೆಗಳಿಲ್ಲ.
Also Read: ಕರೋನಾದಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ- ಕೇಂದ್ರ ಸರ್ಕಾರ
ಸ್ವತಃ ಕೇಂದ್ರ ಸರ್ಕಾರ ಕಳೆದ ವಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲೇ ಸದ್ಯದ ಕೆಲವು ತಿಂಗಳಲ್ಲಿ ಲಸಿಕೆ ಕಾರ್ಯಕ್ರಮ ನಿರೀಕ್ಷಿತ ಮಟ್ಟದಲ್ಲಿ ಸಾಗಲಾರದು ಎಂಬುದನ್ನು ಪರೋಕ್ಷವಾಗಿ ಹೇಳಿದೆ. ಈ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯ ಮುಂದಿನ ಡಿಸೆಂಬರ್ ವೇಳೆಗೆ ದೇಶದಲ್ಲಿ 216 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿತ್ತು. ಆದರೆ, ಕಳೆದ ಶನಿವಾರ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಡಿಸೆಂಬರ್ ಹೊತ್ತಿಗೆ ಕೇವಲ 135 ಕೋಟಿ ಲಸಿಕೆ ಮಾತ್ರ ಲಭ್ಯವಾಗಬಹುದು. ಅದೂ ಕೂಡ ಈಗಾಗಲೇ ದೇಶದಲ್ಲಿ ಬಳಕೆಯಲ್ಲಿರುವ ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ಲಸಿಕೆಗಳ ಜೊತೆಗೆ, ಇನ್ನೂ ಪ್ರಯೋಗದ ಹಂತದಲ್ಲಿರುವ ಬಯೋ ಇ ಸಬ್ ಯುನಿಟ್, ಕ್ಯಾಡಿಲಾದ ಡಿಎನ್ ಎ ಲಸಿಕೆಗಳು ಬಳಕೆಗೆ ಅನುಮೋದನೆಗೊಂಡಲ್ಲಿ ಆ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಆ ಎರಡು ಪ್ರಯೋಗ ಹಂತದ ಲಸಿಕೆಗಳು ಮಾನವ ಪ್ರಯೋಗ ಯಶಸ್ವಿಯಾಗಿ ಅನುಮೋದನೆಗೊಳ್ಳದೇ ಹೋದರೆ, ಒಟ್ಟು ಲಭ್ಯ ಲಸಿಕೆಗಳ ಪ್ರಮಾಣ ಇನ್ನಷ್ಟು ಕುಸಿಯಲಿದೆ ಎಂಬುದನ್ನು ತಳ್ಳಿಹಾಕಲಾಗದು.

ಇನ್ನು ಜುಲೈ ತಿಂಗಳ ಲಸಿಕೆ ನೀಡಿಕೆಗಾಗಿ ರಾಜ್ಯಗಳಿಗೆ 12 ಕೋಟಿ ಲಸಿಕೆಗಳನ್ನು ನಿಗದಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆ 12 ಕೋಟಿ ಲಸಿಕೆಗಳ ಪೈಕಿ 10 ಕೋಟಿ ಲಸಿಕೆ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಆಗಿದ್ದರೆ, ಇನ್ನುಳಿದ ಎರಡು ಕೋಟಿ ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಎಂದೂ ಸ್ಪಷ್ಟಪಡಿಸಲಾಗಿದೆ. ಅಂದರೆ, ಜುಲೈ ತಿಂಗಳಲ್ಲಿ ದಿನವೊಂದಕ್ಕೆ ದೇಶಾದ್ಯಂತ 40 ಲಕ್ಷ ಲಸಿಕೆ ನೀಡುವಷ್ಟು ಲಸಿಕೆ ಮಾತ್ರ ಲಭ್ಯವಿವೆ. ಆದರೆ, ಸರ್ಕಾರವೇ ಈ ಮೊದಲು ನಿಗದಿ ಮಾಡಿದ್ದ ದಿನವೊಂದಕ್ಕೆ ಒಂದು ಕೋಟಿ ಲಸಿಕೆ ನೀಡುವ ಗುರಿಗೆ ಹೋಲಿಸಿದರೆ ಈ 40 ಲಕ್ಷ ಲಸಿಕೆ ಪ್ರಮಾಣ ಏನೇನೂ ಅಲ್ಲ ಎಂಬುದು ಕೂಡ ಲಸಿಕೆ ಕಾರ್ಯಕ್ರಮದ ವಿಷಯದಲ್ಲಿ ಕೇಂದ್ರ ಸರ್ಕಾರ ಎಷ್ಟರಮಟ್ಟಿಗೆ ಯೋಜಿತವಾಗಿ, ಸಕಲ ಸಿದ್ಧತೆಯೊಂದಿಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಅತ್ಯುತ್ತಮ ನಿದರ್ಶನ. ಈ ನಡುವೆ ದೇಶದ ಎರಡು ಮುಂಚೂಣಿ ಲಸಿಕೆ ತಯಾರಿಕಾ ಕಂಪನಿಗಳಾದ ಸೀರಂ ಇನ್ ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಗಳೆರಡೂ ತಮ್ಮ ಉತ್ಪಾದನಾ ಸಾಮರ್ಥ್ಯದಲ್ಲಿ ಕಡಿತ ಮಾಡಿವೆ. ಮುಂದಿನ ತಿಂಗಳುಗಳಲ್ಲಿ ಆ ಪ್ರಮಾಣ ಇನ್ನಷ್ಟು ಕಡಿತವಾಗಲಿದೆ ಎಂಬ ಸಂಗತಿಗಳೂ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲೇ ಬೆಳಕಿಗೆ ಬಂದಿವೆ.
Also Read: ಕರೋನಾ ವಿಷಯದಲ್ಲಿ ದುಡ್ಡು ಪಡೆದಿದ್ದು ಕೇಂದ್ರ ಸರ್ಕಾರ, ಲಸಿಕೆಗಳಿಗೆ ಮಾತ್ರ ರಾಜ್ಯ ಸರ್ಕಾರ ಹಣ ಕೊಡಬೇಕೆ?
Also Read: ಚರ್ಚೆ ಮಾಡಿದ್ದು ಸಾಕು, ಎಲ್ಲರಿಗೂ ಉಚಿತವಾಗಿ ಕರೋನಾ ಲಸಿಕೆ ಕೊಡಿ: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಲಹೆ
ಹೀಗೆ ದೇಶಾದ್ಯಂತ ಲಸಿಕೆ ಕಾರ್ಯಕ್ರಮವೇ ನಿರೀಕ್ಷಿತ ಪ್ರಮಾಣದ ಲಸಿಕೆಗಳ ಲಭ್ಯತೆಯ ಕೊರತೆ ಮತ್ತು ಮೂಲಭೂತವಾಗಿ ಯೋಜಿತ ಪ್ರಯತ್ನಗಳ ಕೊರತೆಯ ಕಾರಣಕ್ಕೆ ಮೂರನೇ ಅಲೆಯ ಅಪಾಯದ ಎದುರು ದೇಶದ ಜನರ ಜೀವ ಕಾಯುವ ನಿಟ್ಟಿನಲ್ಲಿ ಮುಗ್ಗರಿಸುವ ಹಾದಿಯಲ್ಲಿದೆ. ಇದು ರಾಷ್ಟ್ರಮಟ್ಟದಲ್ಲಿ ಲಸಿಕೆ ಕಾರ್ಯಕ್ರಮದ ಯಡವಟ್ಟುಗಳಾದರೆ, ರಾಜ್ಯ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮದ ಅವ್ಯವಸ್ಥೆಗಳು ಮತ್ತೊಂದು ಕಡೆ.
Also Read: ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕಾದ ಪ್ರಶ್ನೆಗಳು..
ಪ್ರಧಾನಿ ಮೋದಿಯವರ ಬಿಜೆಪಿ ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದ ಅಧಿಕೃತ ಮಾಹಿತಿಯ ಪ್ರಕಾರವೇ, ದೇಶದ ಖಾಸಗೀ ಆಸ್ಪತ್ರೆಗಳು ದಾಸ್ತಾನು ಮಾಡಿರುವ ಲಸಿಕೆಗಳ ಪ್ರಮಾಣ ಬರೋಬ್ಬರಿ 1.56 ಕೋಟಿ! ಆ ಪೈಕಿ 22.19 ಲಕ್ಷ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡಿರುವ ಕರ್ನಾಟಕದ ಖಾಸಗೀಆಸ್ಪತ್ರೆಗಳು, ಮಹಾರಾಷ್ಟ್ರ ಹೊರತುಪಡಿಸಿ ನಂತರದ ಸ್ಥಾನದಲ್ಲಿವೆ. ಹೀಗೆ ಖಾಸಗೀ ಆಸ್ಪತ್ರೆಗಳ ಲಸಿಕೆ ದಾಸ್ತಾನು ಏರಿಕೆಯಾಗುತ್ತಿರುವ ಹೊತ್ತಿಗೆ, ಕಾಕತಾಳೀಯ ಎಂಬಂತೆ ಸರ್ಕಾರದ ಉಚಿತ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯತೆ ಕ್ಷೀಣಿಸತೊಡಗಿದೆ. ಕಳೆದ ಎರಡು ವಾರಗಳಿಂದೀಚೆಗೆ ವಿಶೇಷ ಲಸಿಕೆ ಅಭಿಯಾನದ ನಡೆದ ದಿನವನ್ನು ಹೊರತುಪಡಿಸಿ ಉಳಿದಂತೆ ಪ್ರತಿನಿತ್ಯವೂ ಬಹುತೇಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದು ಹೊರಬರುವವರ ಪ್ರಮಾಣಕ್ಕಿಂತ ಲಸಿಕೆ ಸಿಗದೆ ಬರಿಗೈಯಲ್ಲಿ ವಾಪಸ್ಸಾಗುತ್ತಿರುವವರ ಪ್ರಮಾಣ ಏರಿಕೆಯಾಗುತ್ತಲೇ ಇದೆ.
Also Read: ನ್ಯಾಯದ ಬಾಹು ಬಲಿಷ್ಠವಾಗಿದೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ
ರಾಜ್ಯ ಆರೋಗ್ಯ ಸಚಿವರ, ಲಸಿಕೆ ಕೊರತೆ ಇಲ್ಲವೇ ಇಲ್ಲ ಎಂಬ ಹೇಳಿಕೆಗಳ ಹೊರತಾಗಿಯೂ ತಳಮಟ್ಟದಲ್ಲಿ ವಾಸ್ತವ ಬೇರೆಯೇ ಇದೆ. ಹಲವು ತಾಲೂಕುಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಲಸಿಕೆ ಕೊರತೆಯ ಕಾರಣದಿಂದ ಲಸಿಕಾ ಕೇಂದ್ರಗಳನ್ನೇ ಮುಚ್ಚಲಾಗುತ್ತಿದೆ. ಈ ಮೊದಲು ಪಂಚಾಯ್ತಿ ಕೇಂದ್ರಗಳಲ್ಲಿ ತೆರೆದಿದ್ದ ತಾತ್ಕಾಲಿಕ ಲಸಿಕಾ ಕೇಂದ್ರಗಳನ್ನು ಕೂಡ ಕೆಲವು ಕಡೆ ಮುಚ್ಚಲಾಗಿದೆ. ಒಂದು ಕಡೆ ಲಾಕ್ ಡೌನ್ ತೆರವು ನಿರಾಳತೆ ಮತ್ತು ಬರಲಿರುವ ಮೂರನೇ ಅಲೆಯ ಭೀತಿಯ ಕಾರಣಕ್ಕೆ ಹೆಚ್ಚು ಹೆಚ್ಚು ಜನ ಲಸಿಕಾ ಕೇಂದ್ರಗಳಿಗೆ ಎಡತಾಕುತ್ತಿದ್ದರೆ, ಮತ್ತೊಂದು ಕಡೆ ಲಸಿಕೆ ಅಲಭ್ಯತೆಯಿಂದಾಗಿ ಒಂದೊಂದಾಗಿ ಲಸಿಕಾ ಕೇಂದ್ರಗಳು ಮುಚ್ಚತೊಡಗಿವೆ.
Also Read: ಮಹಾರಾಷ್ಟ್ರದಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನ: ಕೇಂದ್ರದ ಅನುಮತಿಗಾಗಿ ಕಾಯುವುದಿಲ್ಲ – ಮಹಾ ಸರ್ಕಾರ ಸ್ಪಷ್ಟನೆ
ಈ ನಡುವೆ, ಕಾಲೇಜು ತರಗತಿಗಳು, ವಿವಿಧ ಪರೀಕ್ಷೆಗಳು ಆರಂಭವಾಗುತ್ತಿವೆ, ಅಂತರ್ ರಾಜ್ಯ ಮತ್ತು ವಿದೇಶ ಪ್ರಯಾಣಗಳಿಗೆ ಲಸಿಕೆ ಕಡ್ಡಾಯಗೊಳಿಸಲಾಗುತ್ತಿದೆ. ಹಾಗಾಗಿ ಸಹಜವಾಗೇ ಲಸಿಕೆ ತೆಗೆದುಕೊಳ್ಳಲು ಜನ ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಆದರೆ, ಇಂತಹ ಹೊತ್ತಲ್ಲಿ ಹೆಚ್ಚುವರಿ ಲಸಿಕೆಗಳನ್ನು ಒದಗಿಸಿ, ಲಸಿಕಾ ಕಾರ್ಯಕ್ರಮಕ್ಕೆ ವೇಗ ಕೊಡಬೇಕಾಗಿದ್ದ ಸರ್ಕಾರ, ವ್ಯತಿರಿಕ್ತ ದಿಕ್ಕಿನಲ್ಲಿ ಹೊರಟಿದೆ. ಮೂರನೇ ಅಲೆಯ ಭೀಕರತೆಯ ಹಿನ್ನೆಲೆಯಲ್ಲಿ ಅಪಾಯಕಾರಿ ಅಲೆ ಆರಂಭಕ್ಕೆ ಮುನ್ನ ದೇಶದ ವಯಸ್ಕರು, ಅಪಾಯಕಾರಿ ರೋಗಪೀಡಿತರು ಮತ್ತು ಮೂರನೇ ಅಲೆಗೆ ಸುಲಭವಾಗಿ ತುತ್ತಾಗಬಹುದು ಎನ್ನಲಾಗುತ್ತಿರುವ ಮಕ್ಕಳಿಗೆ ಲಸಿಕೆ ನೀಡಿ ಅವರ ಜೀವ ರಕ್ಷಿಸುವ ಬದಲು, ದಿನದಿಂದ ದಿನಕ್ಕೆ ಲಸಿಕೆ ಲಭ್ಯತೆ ಪ್ರಮಾಣ ಕ್ಷೀಣಿಸತೊಡಗಿದೆ.
ದೇಶದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡುವುದಾಗಿ ಸುಪ್ರೀಂಕೋರ್ಟ್ ಮುಂದೆ ಕಿವಿಹಿಡಿದುಕೊಂಡು ತಪ್ಪೊಪ್ಪಿಗೆ ಹೇಳಿಕೆ ನೀಡಿದ ಮೋದಿಯವರ ಸರ್ಕಾರ, ನಿಜಕ್ಕೂ ತನ್ನ ಆ ಮಾತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಮತ್ತು ಅದೇ ಹೊತ್ತಿಗೆ ವಾಸ್ತವ ಬೆಲೆಗಿಂತ ನಾಲ್ಕಾರು ಪಟ್ಟು ದುಬಾರಿ ಬೆಲೆಯಲ್ಲಿ ಲಸಿಕೆ ನೀಡುವ ಖಾಸಗೀ ಆಸ್ಪತ್ರೆಗಳಿಗೆ ಇಡೀ ವ್ಯವಸ್ಥೆಯನ್ನು ಹೇಗೆ ಪೂರಕವಾಗಿ ಪರಿವರ್ತಿಸಲಾಗುತ್ತಿದೆ ಎಂಬುದಕ್ಕೆ ಈ ಲಸಿಕಾ ಅವಾಂತರ ಸಾಕ್ಷಿ. ಹಾಗೆ ನೋಡಿದರೆ, ಪರೋಕ್ಷವಾಗಿ ಖಾಸಗೀ ಆಸ್ಪತ್ರೆಗಳ ದಂದೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಉಚಿತ ಲಸಿಕೆ ಕಾರ್ಯಕ್ರಮವನ್ನು ಹಳಿತಪ್ಪಿಸುವ ಯತ್ನಗಳು ನಡೆಯುತ್ತಿವೆಯೇ ಎಂಬ ಅನುಮಾನಗಳಿಗೂ ಸರ್ಕಾರದ ಈ ನಡೆ ಕಾರಣವಾಗಿದೆ.