ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅವರ ಸಂಪುಟ ಸಹೋದ್ಯೋಗಿಗಳು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು, ವಿಶೇಷವಾಗಿ ಬಿಜೆಪಿಯ ಐಟಿ ಸೆಲ್ ಮತ್ತು ಘನ ಮಾಧ್ಯಮಗಳು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅದಕ್ಕೂ ಮಿಗಿಲಾಗಿ ಅಪಹಾಸ್ಯ ಮಾಡಲಾಗುತ್ತದೆ. ಆದರೂ ರಾಹುಲ್ ಗಾಂಧಿ ಅವರು ಮಾತ್ರ ತಮ್ಮ ಅಮೂಲ್ಯ ಸಲಹೆ ನೀಡುವುದನ್ನು ಬಿಟ್ಟಿಲ್ಲ. ಮತ್ತು ಮಾತನಾಡಲೇಬೇಕಾದ ವಿಷಯವನ್ನು ಗಟ್ಟಿ ದನಿಯಲ್ಲಿ ಮಾತನಾಡುವುದನ್ನು ನಿಲ್ಲಿಸಿಲ್ಲ. ಇದಕ್ಕೆ ಇನ್ನೊಂದು ಸೇರ್ಪಡೆ; ಈಗ ಅವರು ಕರೊನಾ ಲಸಿಕೆಗಳನ್ನು ಉಚಿತವಾಗಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿರುವುದು.
ಈ ನಡುವೆ ಬಹಳ ತೀಕ್ಷ್ಣವಾದ ಟ್ವೀಟ್ ಗಳನ್ನು ಮಾಡುವ ಮೂಲಕ ಕೇಂದ್ರ ಸರ್ಕಾರದ ತಪ್ಪು ನಡೆಗಳನ್ನು ಬಹಿರಂಗಗೊಳಿಸುತ್ತಿರುವ, ಆಗಬೇಕಾದ ಕೆಲಸಗಳ ಬಗ್ಗೆ ಗಟ್ಟಿ ದನಿಯಲ್ಲಿ ಹೇಳುತ್ತಿರುವ ರಾಹುಲ್ ಗಾಂಧಿ ಅವರು ಈಗ “ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಚರ್ಚೆ ಸಾಕು. ಜನ ಲಸಿಕೆಗಳನ್ನು ಉಚಿತವಾಗಿ ಪಡೆಯಬೇಕು. ಭಾರತವನ್ನು ಬಿಜೆಪಿ ನೇತೃತ್ವದ ವ್ಯವಸ್ಥೆಗೆ ಬಲಿಗೊಡಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಅವರು ಎರಡು ವಿಷಯ ಪ್ರಸ್ತಾಪಿಸಿದ್ದಾರೆ. ಒಂದು, ‘ಚರ್ಚೆಯನ್ನು ಸಾಕು ಮಾಡಿ’ ಎಂದು. ಅದರ ಅರ್ಥ ಬೇಗ ಕರೋನಾ ಲಸಿಕೆಗಳನ್ನು ಕೊಡಿ ಎಂದು. ಇನ್ನೊಂದು, ಕರೋನಾ ಲಸಿಕೆಗಳನ್ನು ಉಚಿತವಾಗಿ ನೀಡಿ ಎಂದು.
ಕೇಂದ್ರ ಸರ್ಕಾರವು ಮೇ 1ನೇ ತಾರೀಖಿನಿಂದ ‘ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೋವಿಡ್ ವ್ಯಾಕ್ಸಿನೇಷನ್ ಸ್ಟಾಟರ್ಜಿ’ ಅಡಿಯಲ್ಲಿ ಮೂರು ವಿಭಿನ್ನ ಬೆಲೆಗಳಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕರೋನಾ ಲಸಿಕೆ ನೀಡಲಾಗುವುದು ಎಂದು ಹೇಳಿದೆ. ಇದಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ಪೈಕಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ‘ಸಂಪೂರ್ಣವಾಗಿ ನೀವೇ (ಕೇಂದ್ರ ಸರ್ಕಾರವೇ) ಕರೋನಾ ಲಸಿಕೆಗಳನ್ನು ಖರೀದಿ ಮಾಡಿ, ನೀವೇ ಉಚಿತವಾಗಿ ನೀಡಿ’ ಎಂದು ವಿನಂತಿಸಿಕೊಂಡಿದ್ದಾರೆ.
ಇದಲ್ಲದೆ ಕರ್ನಾಟಕ, ಕೇರಳ, ಛತ್ತೀಸ್ಗಡ, ರಾಜಸ್ಥಾನ, ಜಾರ್ಖಾಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಒರಿಸ್ಸಾ, ಗುಜರಾತ್, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕರೋನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಪೈಕಿ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ನೀವೇ ಉಚಿತವಾಗಿ ಲಸಿಕೆ ಕೊಡಿ ಎಂದು ಒತ್ತಾಯ ಮಾಡಿ ಸಾಕಾಗಿ ಕಡೆಗೆ ತಾವೇ ಘೋಷಿಸಿವೆ. ಉದಾಹರಣೆಗೆ ಎಡಪಕ್ಷದ ಆಳ್ವಿಕೆಯ ಕೇರಳ, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಾದ ಛತ್ತೀಸ್ಗಡ, ಜಾರ್ಖಂಡ್, ರಾಜಸ್ಥಾನ ಮತ್ತು ಮಹಾರಾಷ್ಟ್ರ. ಇದಾದ ಬಳಿಕ ಒತ್ತಡ ತಡೆಯಲಾರದೆ ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಮಧ್ಯಪ್ರದೇಶಗಳಲ್ಲೂ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಭಾರೀ ಸುಧಾರಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಒತ್ತಡ ಹೆಚ್ಚಾದ ಬಳಿಕ ಏಪ್ರಿಲ್ 26ರಂದು ‘ಉಚಿತ’ ಎಂದು ಘೋಷಿಸಿದರು. ಏಪ್ರಿಲ್ 25ರಂದು ಒರಿಸ್ಸಾ ಘೋಷಿಸಿದೆ.
ಹೀಗೆ 13 ರಾಜ್ಯಗಳು ಉಚಿತವಾಗಿ ಲಸಿಕೆ ಕೊಡಲಾಗುವುದು ಎಂದು ಘೋಷಣೆ ಮಾಡಿದ್ದರೂ ಇನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ಬಗ್ಗೆ ಚರ್ಚೆ ಆಗುತ್ತಲೇ ಇದೆ. ‘ಪಿಎಂ ಕೇರ್ಸ್’ ಮೂಲಕ ದೇಣಿಗೆ ವಸೂಲಿ ಮಾಡಿರುವ ಜಿಎಸ್ ಟಿ ಮೂಲಕ ತೆರಿಗೆ ವಸೂಲಿ ಮಾಡಿರುವ ಕೇಂದ್ರ ಸರ್ಕಾರ ಎಲ್ಲಾ ಹಣವನ್ನು ತಾನೇ ಬಾಚಿಕೊಂಡಿದೆ. ಕೇಂದ್ರ ಸರ್ಕಾರ ಲಸಿಕೆಯೊಂದಕ್ಕೆ (ಡೋಸ್) 150 ಕೋಟಿ ರೂಪಾಯಿ ಕೊಟ್ಟು ಖರೀದಿಸುತ್ತಿದೆ. ಒಬ್ಬರಿಗೆ ಎರಡು ಡೋಸ್ ಎಂದರೆ 300 ರೂಪಾಯಿ ಆಗಲಿದೆ. ದೇಶದಲ್ಲಿ 136 ಕೋಟಿ ಜನರಿದ್ದು ಎಲ್ಲರಿಗೂ ಲಸಿಕೆ ನೀಡಲು 40,800 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ಈಗಾಗಲೇ ಈ ಪೈಕಿ ಈಗಾಗಲೇ 15 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಜೊತೆಗೆ ಕೋವಿಡ್ ನಿರ್ವಹಣೆಗೆ 35,000 ಕೋಟಿ ತೆಗೆದಿಡಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರವೇ ಕರೊನಾ ಲಸಿಕೆ ನೀಡಲಿ ಎಂಬುದು ರಾಜ್ಯ ಸರ್ಕಾರಗಳ ವಾದ.
ರಾಜ್ಯ ಸರ್ಕಾರಗಳ ವಾದಕ್ಕೆ ಕೇಂದ್ರ ಸರ್ಕಾರ ಸೊಪ್ಪು ಹಾಕಲ್ಲ ಎಂಬುದು ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ಈಗ ಅನಗತ್ಯವಾಗಿ ಚರ್ಚೆ ಮಾಡುತ್ತಾ ಕೂರಬೇಡಿ. ಎಲ್ಲರಿಗೂ ಉಚಿತವಾಗಿ ಕರೋನಾ ಲಸಿಕೆ ನೀಡಿ ಎಂದು ರಾಹುಲ್ ಗಾಂಧಿ ಅವರು ಸಲಹೆ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅವರ ಈ ಸಲಹೆಯನ್ನಾದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆಯಾ ಎಂಬುದನ್ನು ಕಾದುನೋಡಬೇಕು.