ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸತ್ ಸ್ಥಾಯಿ ಸಮಿತಿಯು ಶುಕ್ರವಾರ ಟ್ವಿಟರ್ ಗೆ ಚಾಟಿ ಬೀಸಿದೆ. ಟ್ವಿಟರ್ ನ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಈ ನೆಲದ ಕಾನೂನುಗಳು ಎಲ್ಲರಿಗಿಂತಲೂ ಮಿಗಿಲು. ಸಾಮಾಜಿಕ ಜಾಲತಾನಗಳು ಈ ಕಾನೂನುಗಳ ಪಾಲನೆ ಮಾಡಬೇಕು ಎಂದು ಹೇಳಿದೆ.
ಈ ಕುರಿತಾಗಿ ಮೂಲಗಳನ್ನು ಆಧರಿಸಿ ವರದಿ ಮಾಡಿರುವ ಪಿಟಿಐ, ದೇಶದ ಕಾನೂನನ್ನು ಉಲ್ಲಂಘಿಸಿರುವುದಕ್ಕಾಗಿ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು? ಎಂದು ಪ್ರಶ್ನಿಸಿದೆ
ಕಾಂಗ್ರೆಸ್ ನಾಯಕರಾದ ಶಶಿ ತರೂರ್ ನೇತೃತ್ವದ ಸಮಿತಿಯು ಈ ಸಭೆಯನ್ನು ನಡೆಸಿತ್ತು. ಇದರಲ್ಲಿ ಟ್ವಿಟರ್ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆಯನ್ನು ತಡೆಗಟ್ಟುವ ಕುರಿತು ಸಮಿತಿಯ ಸದಸ್ಯರಿಗೆ ಮಾಹಿತಿ ನಿಡಿದ್ದರು. ಈ ಮಾಹಿತಿಯನ್ನು ಕೇವಲ ಟ್ವಿಟರ್ ಮಾತ್ರವಲ್ಲದೇ ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ದೊಡ್ಡ ಪಾಲು ಹೊಂದಿರುವ ಫೇಸ್ಬುಕ್ ಸೇರಿದಂತೆ ಇತರ ಕಂಪನಿಗಳಿಂದಲೂ ಕೇಳಲಾಗಿದೆ.

ಇಂದು ಟ್ವಿಟರ್ ಜತೆ ನಡೆದ ಸಭೆಯಲ್ಲಿ ಟ್ವಿಟರ್ ವಿರುದ್ದ ಈವರೆಗೆ ಕೇಳಿ ಬಮದ ಆರೋಪಗಳ ಕುರಿತು ಪ್ರಶ್ನಿಸಲಾಗಿದೆ. ಈವರೆಗೆ ಟ್ವಿಟರ್ ಹಲವು ಬಾರಿ ಕಾನೂನು ಉಲ್ಲಂಘನೆ ಮಾಡಿದ್ದು, ಮಹಿಳಾ ದೌರ್ಜನ್ಯದ ಪ್ರಕರಣವೂ ಇದರಲ್ಲಿ ಸೇರಿದೆ. ಟ್ವಿಟರ್ ಗೆ ಭಾರತದಲ್ಲಿ ನೀಡಲಾದ ಕಾನೂನು ರಕ್ಷಣೆಯನ್ನು ವಾಪಾಸ್ ಪಡೆಯಲಾಗಿದೆ. ಇದರಿಂದಾಗಿ ಟ್ವಿಟರ್ ಭಾರತದ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ, ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸಿದ ನಂತರ ಟ್ವಿಟರ್ ಮತ್ತು ಕೇಂದ್ರದ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ಈ ಹಿಂದೆಯೂ ಟ್ವಿಟರ್ ಹೊಸ ನಿಯಮಗಳನ್ನು ಪಾಲಿಸಲೇ ಬೇಕು ಎಂದು ಕೇಂದ್ರ ಖಡಾಖಂಡಿತವಾಗಿ ಹೇಳಿತ್ತು. ಆದರೆ, ಕೇಂದ್ರದ ಯಾವ ಮಾತುಗಳಿಗೂ ಬಗ್ಗದ ಟ್ವಿಟರ್, ತನ್ನ ಕಂಪನಿಯ ನೀತಿಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿತ್ತು.





