ಮೊದಲನೇ ಅಲೆಗಿಂತ ಎರಡನೇ ಅಲೆಯ ವೇಳೆ ಕೊರೋನಾ ಅಬ್ಬರದಿಂದ ದೇಶ ತತ್ತರವಾಗಿದೆ. ಮೊದಲ ಅಲೆಯ ವೇಳೆ ಮೊತ್ತ ಮೊದಲ ಕೊರೋನಾ ಪ್ರಕರಣ ಕಂಡುಬಂದಿದ್ದಕ್ಕೂ ದಿನವೊಂದರಲ್ಲಿ ಹತ್ತಿರ ಹತ್ತಿರ ಒಂದು ಲಕ್ಷದಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗುವುದಕ್ಕು ಏಳೂವರೆ ತಿಂಗಳು ಹಿಡಿದಿತ್ತು. ಅಂದರೆ ದೇಶದಲ್ಲಿ ಚೊಚ್ಚಲ ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದು 2020ರ ಜನವರಿ 30ರಲ್ಲಿ, ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು 2020ರ ಸೆಪ್ಟೆಂಬರ್ 17ರಂದು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ ಲಕ್ಷವನ್ನು ಮುಟ್ಟಿರಲಿಲ್ಲ. 98,795 ಪ್ರಕರಣಗಳಷ್ಟೇ ಪತ್ತೆಯಾಗಿದ್ದವು.
ಆ ಏಳೂವರೆ ತಿಂಗಳ ನಡುವೆ ಏಳೇಳು ಜನ್ಮಕ್ಕೆ ಬಂದೊದಗಬಹುದಾದಷ್ಟು ಕಷ್ಟಗಳು ಬಂದೆರಗಿದವು. ಅಥವಾ ಆಳುವ ಸರ್ಕಾರದ ಅಂಥ ಕಷ್ಟಗಳನ್ನು ಸೃಷ್ಟಿಸಿತು. ಉದಾಹರಣೆಗೆ ಮುನ್ನೆಚ್ಚರಿಕೆ ಇಲ್ಲದ ಲಾಕ್ಡೌನ್ ಘೋಷಣೆ. ಈಗ ಎರಡನೇ ಅಲೆ ಇನ್ನೂ ಭೀಕರವಾಗಿದೆ. ಶುರುವಾದ ಒಂದೂವರೆ ತಿಂಗಳಲ್ಲಿ ದಿನವೊಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗತೊಡಗಿವೆ. ಉದಾಹರಣೆಗೆ ಏಪ್ರಿಲ್ 4ರಂದು 1,03,558 ಹೊಸ ಪ್ರಕರಣಗಳು ಮತ್ತು ಏಪ್ರಿಲ್ 6ರಂದು 1,15,736 ಹೊಸ ಪ್ರಕರಣಗಳು ಕಂಡು ಬಂದಿವೆ.

ಸಹಜವಾಗಿ ಇದು ಆತಂಕವನ್ನು ಸೃಷ್ಟಿಸಿದೆ. ಈಗಾಗಲೇ ಒಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದರು. ಆದರೆ ಆ ಸಭೆಯ ಬಳಿಕ ಯಾವುದೇ ನಿರ್ದಿಷ್ಟ ಕ್ರಮಗಳು ಆಗಲಿಲ್ಲ. ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯಗಳ ಹೆಗಲಿಗೇರಿದ ಕೇಂದ್ರ ಸರ್ಕಾರ ನೆಪಮಾತ್ರಕ್ಕೆ ಸಭೆ ನಡೆಸಿದಂತಿತ್ತು. ಮೊನ್ನೆ (ಏಪ್ರಿಲ್ 6ರಂದು) ದೇಶದ ಒಟ್ಟು ಕೊರೋನಾ ಪೀಡಿತರ ಪೈಕಿ ಶೇಕಡಾ 90ರಷ್ಟು ಪ್ರಕರಣಗಳು ಪತ್ತೆಯಾಗುತ್ತಿರುವ 11 ರಾಜ್ಯಗಳ ಆರೋಗ್ಯ ಸಚಿವರ ಜೊತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಭೆ ನಡೆಸಿದ್ದಾರೆ. ಆರೋಗ್ಯ ಸಚಿವರ ಸಭೆಯಲ್ಲೂ ಪರಿಣಾಮಕಾರಿ ಫಲಿತಾಂಶ ಹೊರಬಿದ್ದಿಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದಾರೆ. ಹಿಂದಿನ ಸಭೆಯಂತೆ ಇವತ್ತು ಕೂಡ ಕೆಲವು ಮುಖ್ಯಮಂತ್ರಿಗಳು, ವಿಶೇಷವಾಗಿ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಗೆ ಹೆಚ್ಚು ಕೊರೋನಾ ಲಸಿಕೆ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಆರೋಗ್ಯ ಸಚಿವರ ಸಭೆಯಲ್ಲೂ ಇದೇ ಬೇಡಿಕೆ ಬಂದಿದೆ. ಕರ್ನಾಟಕದ ಆರೋಗ್ಯ ಸಚಿವ ಡಾ. ಸುಧಾಕರ್ ಕೂಡ ಇಂತಹುದೇ ಬೇಡಿಕೆ ಇಟ್ಟಿದ್ದಾರೆ. ಇಂದಿನ ಸಭೆಯಲ್ಲಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡುತ್ತಾರಾ? ಭರವಸೆ ನೀಡುತ್ತಾರಾ? ಎಂಬುದನ್ನು ಕಾದುನೋಡಬೇಕಾಗಿದೆ.
ಈಗಾಗಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ 25 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡಲು ಅನುಮತಿ ನೀಡುವಂತೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸದ್ಯ 45 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಮಾತ್ರ ಲಸಿಕೆ ನೀಡಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯ ಎಲ್ಲರಿಗೂ ಲಸಿಕೆ ನೀಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಸೋಂಕು ವಿಪರೀತ ಆಗುತ್ತಿರುವ ಹಿನ್ನಲೆಯಲ್ಲಿ ‘ಆರೋಗ್ಯ ಸಚಿವರ ಸಭೆ’ಯಲ್ಲೂ ವಯೋಮಿತಿ ಸಡಿಲಿಸುವ ಬಗ್ಗೆ ಚರ್ಚೆ ನಡೆದಿದೆ. ಲಸಿಕೆ ನೀಡಲು ವಯೋಮಿತಿ ನಿಗದಿ ಪಡಿಸಿರುವ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ‘ಇದನ್ನು ಹಾಸ್ಯಾಸ್ಪದ’ ಎಂದು ವ್ಯಾಖ್ಯಾನಿಸಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಪಡೆಯುವ ಅರ್ಹತೆ ಇದೆ. ಎಲ್ಲರಿಗೂ ಲಸಿಕೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಯೋಮಿತಿ ಬಗ್ಗೆ ಮತ್ತು ಹೆಚ್ಚು ಲಸಿಕೆಗಳನ್ನು ನೀಡುವ ಬಗ್ಗೆ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕು ಶರವೇಗದಲ್ಲಿ ಸಾಗುತ್ತಿರುವುದರಿಂದ ಲಸಿಕೆ ಪೂರೈಸುವುದಾಗಿ ಕೂಡ ತಿಳಿಸಬೇಕಾಗುತ್ತದೆ.
ಹಿಂದೆ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಮತ್ತಿತರ ಕಠಿಣ ಕ್ರಮಗಳನ್ನು ಜರುಗಿಸಲಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಜನರಿಗೆ ‘ಜೀವನ ನಿರ್ವಹಣೆ’ ಮುಖ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನ ಮಂತ್ರಿ ಮೋದಿಯೂ ಸೇರಿದಂತೆ ಅವರ ಸಂಪುಟ ಸಹೋದ್ಯೋಗಿಗಳೇ ಸಹಸ್ರಾರು ಸಂಖ್ಯೆಯ ಜನರಿರುವ ಚುನಾವಣಾ ಸಭೆ – ಸಮಾರಂಭಗಳಲ್ಲಿ ಭಾಗವಹಿಸುತ್ತಿರುವುದರಿಂದ ಜನರಿಗೆ ‘ಮನೆಯಲ್ಲೇ ಇರಿ’ ಎಂದು ಹೇಳಲು ಅವರಿಗೆ ಬಾಯಿ ಇಲ್ಲದಂತಾಗಿದೆ. ಹೇಳಿದರೂ ಜನ ಕೇಳುವ ಸ್ಥಿತಿಯಲ್ಲಿ ಇಲ್ಲ. ಆದುದರಿಂದ ಕೊರೋನಾ ಹರಡದಂತೆ ತಡೆಯಲು ಬೇರಾವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದರ ಪರಮಾರ್ಶೆ ನಡೆಯಬೇಕಿದೆ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಬೇಕಾಗುತ್ತದೆ. ಆನಂತರ ಇಚ್ಛಾಶಕ್ತಿಯಿಂದ ಪರ್ಯಾಯವಾದ, ಪರಿಣಾಮಕಾರಿಯಾದ ಮಾರ್ಗಸೂಚಿಯನ್ನು ರೂಪಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿ ಮೊದಲಿಗಿಂತಲೂ ಬಿಗಡಾಯಿಸುವುದರತ್ತ ಸಾಗುತ್ತಿದ್ದು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ಸೂಕ್ತ ಪರಿಹಾರ ದೊರಕುವುದೇ ಎಂಬುದನ್ನು ಕಾದುನೋಡಬೇಕಾಗಿದೆ.





