ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿ 4 ತಿಂಗಳ ಬಳಿಕ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಬಹಿರಂಗವಾಗಿ ಅಧಿಕಾರ ಸ್ವೀಕಾರ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಹುರುಪು ತುಂಬುವ ಕೆಲಸ ಮಾಡಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಲು ಸಿದ್ದರಾಮಯ್ಯ ಬಣದ ವಿರೋಧ ಎದುರಿಸಿದ್ದ ಕನಕಪುರದ ಬಂಡೆ, ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಕೊಟ್ಟ ಆಶ್ವಾಸನೆಯಂತೆ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ತನ್ನ ಬಣದ ಮೂವರು ನಾಯಕರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯ ತಾನೂ ಕೂಡ ನಿನ್ನಷ್ಟೇ ಪ್ರಭಾವಿ ಎಂಬ ಸಂದೇಶ ರವಾನಿಸಿದ್ದರು. ಆದರೀಗ ಎಲ್ಲಾ ಅಡೆ ತಡೆಗಳನ್ನು ನಿವಾರಿಸಿರುವ ಡಿ ಕೆ ಶಿವಕುಮಾರ್, ಕಾಂಗ್ರೆಸ್ನಲ್ಲಿ ಹಿಡಿತ ಸಾಧಿಸಿದ್ದಾರೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಕೂಡ.
ಪ್ರಧಾನಿಯನ್ನೇ ಫಾಲೋ ಮಾಡಿದ ಬಂಡೆ..!
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗುವ ಮುನ್ನವೇ ಕಾರ್ಯಕ್ರಮ ಆಯೋಜನೆಯಲ್ಲಿ ಶಿಸ್ತು ತಂದಿದ್ದರು. ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸುತ್ತಿದ್ದ ಭಾರತೀಯ ಜನತಾ ಪಾರ್ಟಿ, ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ಮೂಡಿ ಬರುವಂತೆ ನೋಡಿಕೊಳ್ಳುತ್ತಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನೇ ಸಂಪೂರ್ಣವಾಗಿ ಖಾಸಗಿ ಸಂಸ್ಥೆಗೆ ವಹಿಸುವ ಮೂಲಕ ಯಾವುದೇ ಅಡೆತಡೆ ಬರದಂತೆ ನೋಡಿಕೊಳ್ಳಲಾಗ್ತಿತ್ತು. ಇದೇ ಕೆಲಸವನ್ನು ಕಾಂಗ್ರೆಸ್ ಇಲ್ಲೀವರೆಗೂ ಅಳವಡಿಸಿಕೊಂಡಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ರಾಹುಲ್ ಗಾಂಧಿ ಕಾರ್ಯಕ್ರಮಗಳನ್ನು ಶಿಸ್ತಿನಿಂದ ಆಯೋಜಿಸಿರಲಿಲ್ಲ. ಆದರೆ ಇಂದು ಡಿ ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಆ ಶಿಸ್ತು ಎದ್ದು ಕಾಣುತ್ತಿತ್ತು. ಸಂಪೂರ್ಣ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.
ಮಾಧ್ಯಮಗಳ ನಿರ್ವಹಣೆಯಲ್ಲೂ ಮೋದಿ ಸೂತ್ರ..!
ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಬಾಯಿ ಕಟ್ಟಿದ್ದಾರೆ ಎನ್ನುವ ಮಾತೊಂದಿದೆ. ಪ್ರಧಾನಿ ನರೇಂದ್ರ ಮೋದಿ ಮೀಡಿಯಾ ಮ್ಯಾನೇಜ್ಮೆಂಟ್ ಮಾಡುವ ಕೆಲಸವನ್ನು ಬಿಟ್ಟು ದೇಶವನ್ನು ಅಭಿವೃದ್ಧಿ ಕೊಂಡೊಯ್ಯಲಿ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಕೊಡುವ ಮೊದಲೇ ಪ್ರಶ್ನಾವಳಿ ಸಿದ್ಧಪಡಿಸಿ ಕೊಡಲಾಗಿರುತ್ತದೆ ಎನ್ನುವ ಮಾತುಗಳಿವೆ. ಇನ್ನೂ ತನ್ನ ಅಧಿಕಾರದ ಪ್ರಭಾವ ಬಳಸಿ ಮಾಧ್ಯಮಗಳನ್ನು ಉಸಿರುಗಟ್ಟಿಸುವ ವಾತಾವರಣದಲ್ಲಿ ಹಿಡಿದಿಟ್ಟಿದ್ದಾರೆ ಎನ್ನುವ ಆರೋಪಗಳೂ ಇವೆ. ಈ ವಿಚಾರದಲ್ಲೂ ಪ್ರಧಾನಿ ನರೇಂದ್ರ ಮೋದಿಯನ್ನೇ ಹಿಂಬಾಲಿಸಿರುವ ಡಿ ಕೆ ಶಿವಕುಮಾರ್, ಇದೇ ಮೊದಲ ಬಾರಿಗೆ ಎಲ್ಲಾ ಮಾಧ್ಯಗಳಲ್ಲೂ ಗಂಟೆಗಟ್ಟಲೆ ಕಾರ್ಯಕ್ರಮ ಪ್ರಸಾರವಾಗುವಂತೆ ನೋಡಿಕೊಂಡಿದ್ದಾರೆ. ಎಲ್ಲಾ ದೃಶ್ಯ ಮಧ್ಯಮಗಳಲ್ಲೂ ಸತತ 2 ಗಂಟೆಗಳ ಕಾಲ ನಿರಂತರವಾಗಿ ಪ್ರಸಾರವಾಗಿದೆ.
ವಾಗ್ಮಿ ಮೋದಿಗೇನು ಕಡಿಮೆ ಇರಲಿಲ್ಲ ಡಿಕೆಶಿ..!
ವೇದಿಕೆ ಮೇಲೆ ನಿಂತರೆ ನಿರರ್ಗಳವಾಗಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ನೆರೆದಿರುವ ಜನರನ್ನು ತನ್ನ ಮಾತಿನ ಶೈಲಿಯಲ್ಲೇ ಸೆಳೆದುಬಿಡುತ್ತಾರೆ. ದೇಹದ ಹಾವಭಾವ, ಮಾತಿನ ಏರಿಳಿತ, ಮಧ್ಯ ಮಧ್ಯೆ ಎದುರಾಳಿಗಳ ಕುರಿತು ವ್ಯಂಗ್ಯಗಳು ಕಾರ್ಯಕರ್ತರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇವತ್ತಿನ ಭಾಷಣ ಪ್ರಧಾನಿ ನರೇಂದ್ರ ಮೋದಿಗೆ ಕಡಿಮೆ ಏನೂ ಇರಲಿಲ್ಲ. ಒಂದೊಂದೇ ಅಂಶಗಳನ್ನು ಎತ್ತಿಕೊಂಡು ಮಾತನಾಡಿದ ಡಿ ಕೆ ಶಿವಕುಮಾರ್, ಕಾರ್ಯಕರ್ತರನ್ನು ಮುಟ್ಟುವಲ್ಲಿ ಯಶಸ್ವಿಯಾದರು. ಕೆಲವು ಕಡೆ ಭಾವನಾತ್ಮಕ, ಇನ್ನೂ ಕೆಲವು ಕಡೆ ಆಕ್ರೋಶಭರಿತರಾಗಿ ಮಾತನಾಡುತ್ತಾ, ತನ್ನನ್ನು ಕ್ಷುಲ್ಲಕ ಕಾರಣಕ್ಕೆ ಜೈಲಿಗೆ ಕಳುಹಿಸಲಾಯ್ತು. ನಾನು ಯಾರಿಗೂ ದ್ರೋಹ ಮಾಡಿಲ್ಲ, ಸುಳ್ಳು ಹೇಳಿಲ್ಲ ಎಂದು ಕಾರ್ಯಕರ್ತರ ಎದುರು ನಾನು ಕ್ಲೀನ್ ಎಂದು ಬಹಿರಂಗವಾಗಿ ಪಕ್ಷದ ವೇದಿಕೆಯಲ್ಲಿ ತಿಳಿಸಿದ್ರು. ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಭಾಷೆ ಮೇಲೆ ಹಿಡಿತವಿದೆ ಎಂಬುದನ್ನು ಸಾರಿ ಹೇಳಿದ್ರು. ಪ್ರಧಾನಿ ನರೇಂದ್ರ ಮೋದಿ ಸ್ಕ್ರಿಪ್ಟ್ ನೋಡಿಕೊಂಡು ಭಾಷಣ ಮಾಡುತ್ತಾರೆ. ಆದರೆ ಡಿಕೆ ಶಿವಕುಮಾರ್ ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿದರು ಅಷ್ಟೆ ವ್ಯತ್ಯಾಸ.
ಕಾಂಗ್ರೆಸ್ನಲ್ಲೂ ಡಿಕೆಶಿ ಭಾಷಣಕ್ಕೆ ಫುಲ್ ಮಾರ್ಕ್ಸ್..!
ಭಾಷಣದುದ್ದಕ್ಕೂ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎನ್ನುವ ಜಂಭ ಪ್ರದರ್ಶನ ಮಾಡದ ಡಿ ಕೆ ಶಿವಕುಮಾರ್, ನನ್ನನ್ನು ಕನಕಪರದ ಬಂಡೆ ಎನ್ನುತ್ತಾರೆ. ಆದರೆ ನಾನು ಬಂಡೆ ಆಗುವುದಕ್ಕೆ ಇಷ್ಟಪಡುವುದಿಲ್ಲ. ಕಲ್ಲನ್ನು ಕೆತ್ತಿ ಶಿಲೆಯನ್ನಾಗಿ ಮಾಡಬಹುದು. ಆದರೆ ನಾನು ಶಿಲೆಯಾಗುವುದಿಲ್ಲ. ವಿಧಾನಸೌಧದ ಮೆಟ್ಟಿಲಿನ ಚಪ್ಪಡಿಯಾಗಲು ಬಯಸುತ್ತೇನೆ. ನೀವೆಲ್ಲರೂ ಅದನ್ನು ತುಳಿದುಕೊಂಡು ವಿಧಾನಸೌಧದ ಮೂರನೇ ಮಹಡಿಗೆ ಹೋಗಬೇಕು ಎನ್ನುವ ಮೂಲಕ ನನಗೆ ಯಾವುದೇ ಅಧಿಕಾರದ ಆಸೆ ಆಕಾಂಕ್ಷೆಗಳಿಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ ಎಂದು ಎಲ್ಲರ ಮನಸ್ಸಿಗೆ ಹತ್ತಿರವಾಗುವ ಚಾಕಚಕ್ಯತೆ ಪ್ರದರ್ಶನ ಮಾಡಿದ್ರು.
ಇನ್ನು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ ಕೆ ಶಿವಕುಮಾರ್, ಬಿಜೆಪಿ ದೇಶಪ್ರೇಮ ದೇಶಪ್ರೇಮ ಎಂದುಕೊಂಡು ಅಧಿಕಾರಕ್ಕೆ ಬಂದಿದೆ. ನಿಜವಾದ ದೇಶಭಕ್ತರು ನಾವು ಕಾಂಗ್ರೆಸ್ಸಿಗರು. ನಾವು ನಿಜವಾದ ದೇಶಪ್ರೇಮಿಗಳು ಎಂದು ಭಾರತೀಯ ಜನತಾ ಪಾರ್ಟಿಗೆ ಕುಟುಕಿದ್ದಾರೆ.
ಡಿ ಕೆ ಶಿವಕುಮಾರ್ಗೆ ಉಘೇ ಎಂದ ನಾಯಕರು..!
ನನಗೆ ಗುಂಪುಗಾರಿಕೆಯಲ್ಲಿ ನಂಬಿಕೆಯಿಲ್ಲ, ನನಗೆ ಗೊತ್ತಿರುವುದು ಕೇವಲ ಕಾಂಗ್ರೆಸ್ ಮಾತ್ರ. ನನಗೆ ಇನ್ನೂ ಸಾಕಷ್ಟು ಕಾಟ ಇರಬಹುದು ಆದರೆ ಈ ಡಿ ಕೆ ಯಾವುದಕ್ಕೂ ಹೆದರುವುದಿಲ್ಲ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಆದರೆ ನಾನು ಯಾವುದೇ ದ್ರೋಹದ ಕೆಲಸ ಮಾಡಿಲ್ಲ. ನಾನು ಇಲ್ಲಿ ಅಧ್ಯಕ್ಷನಾಗಿ ವೇದಿಕೆ ಮೇಲೆ ನಿಂತಿರಬಹುದು. ಆದರೆ ನಾನು ಸಾಮಾನ್ಯ ಕಾರ್ಯಕರ್ತ. ಯಾವುದೇ ಕಾರಣಕ್ಕೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಿಲ್ಲ. ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿದೆ ಎನ್ನುವ ಮೂಲಕ ಎಲ್ಲರೂ ಒಟ್ಟಾಗಿ ಪಕ್ಷ ಮುನ್ನಡೆಸೋಣ ಎನ್ನುವ ಮನದಾಸೆ ಬಿಚ್ಚಿಟ್ಟರು.
ರೈತರು ಬೆಳೆಯುವ ಅನ್ನಕ್ಕೆ ಜಾತಿ ಇಲ್ಲ. ಅದೇ ರೀತಿ ಸಿದ್ದರಾಮಯ್ಯನವರು ಜಾತಿ ನೋಡಿ ಅನ್ನಭಾಗ್ಯ ಕಾರ್ಯಕ್ರಮ ಮಾಡಲಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯರನ್ನು ಸೆಳೆಯುವ ತಂತ್ರಗಾರಿಕೆ ಭಾಷಣದಲ್ಲಿ ಅಡಗಿತ್ತು.
ಡಿ ಕೆ ಶಿವಕುಮಾರ್ ಬಳಿಕ ಭಾಷಣ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ನನ್ನ ಸಂಪುಟದಲ್ಲೂ ಸಚಿವರಾಗಿ ಕೆಲಸ ಮಾಡಿದ್ದರು. ಇದೀಗ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸ್ತೇನೆ. ಕಾಂಗ್ರೆಸ್ ಪಕ್ಷ ಎಂದರೆ ಅದೊಂದು ಚಳವಳಿ. ದೇಶದ ರಕ್ಷಣೆಗಾಗಿ ಹುಟ್ಟಿಕೊಂಡ ಪಕ್ಷ. ಇವತ್ತು ನಮಗೆ ಹಿನ್ನಡೆಯಾಗಿರಬಹುದು. ಆದರೆ ದುರ್ಬಲ ಅಂತ ತಿಳಿಯಬಾರದು. ನಮಗೆ ಸ್ಥಾನಗಳು ಕಡಿಮೆ ಬಂದಿರಬಹುದು. ಆದರೆ ಅವರಷ್ಟೇ ಮತಗಳು ನಮಗೂ ಬಂದಿದೆ. ನಾವು ನೀಡಿದ್ದ ಭರವಸೆಯನ್ನು ನೂರಕ್ಕೆ ನೂರಷ್ಟನ್ನು ಈಡೇರಿಸಿದ್ದೇವೆ. ಆದರೂ, ಅಪಪ್ರಚಾರದಿಂದ ನಮಗೆ ಸೋಲಾಯ್ತು. ಮತ್ತೆ ಗೆಲ್ತೀವಿ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಡಿ ಕೆ ಶಿವಕುಮಾರ್. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಸಾಕಷ್ಟು ವಿಚಾರಗಳಲ್ಲಿ ಹಿಂಬಾಲಿಸಿರುವ ಡಿ ಕೆ ಶಿವಕುಮಾರ್, ಕಾರ್ಯಕ್ರಮ ಯಶಸ್ಸು ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಮನಸ್ಸು ಗೆಲ್ಲುವುದಕ್ಕೂ ಭಾಷಣವನ್ನು ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಮುನ್ನಡೆಸುತ್ತಾರೆ ಎನ್ನುವುದನ್ನು ಕಾದು ನೋಡ್ಬೇಕು.