ದೇಶಾದ್ಯಂತ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ, ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ, ತೀವ್ರ ರೋಗದಿಂದ ಬಳಲುತ್ತಿರುವವರು ಹತ್ತಾರು ಆಸ್ಪತ್ರೆಗಳಿಗೆ ಅಲೆದು ನಡುಬೀದಿಯಲ್ಲಿ ಸಾವು ಕಾಣುತ್ತಿರುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ.
ಇದಕ್ಕೆ ಕಾರಣ ಗೊತ್ತೇ ಇದೆ. ಮೊದಲನೆಯದು; ಮಾರ್ಚ್ ಮಧ್ಯಂತರದ ಹೊತ್ತಿಗೆ ತೀವ್ರ ಸಾವುನೋವು ಕಂಡಿದ್ದ ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕದಂತಹ ದೇಶಗಳಲ್ಲಿ ಆಗಿರುವ ಅನಾಹುತಗಳಿಂದ ಎಚ್ಚೆತ್ತು ದೇಶದ ಅಪಾರ ಜನಸಂಖ್ಯೆ ಸೋಂಕು ನಿರ್ವಹಣೆಗೆ ಒಡ್ಡಬಹುದಾದ ಬೃಹತ್ ಸವಾಲು ಅಂದಾಜಿಸಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಬದಲು, ನಮ್ಮ ಸರ್ಕಾರ, 21 ದಿನಗಳಲ್ಲಿ ಲಾಕ್ ಡೌನ್ ಹೇರಿ ಕರೋನಾ ಸದೆಬಡಿಯುವ ಪ್ರಧಾನಿ ಮೋದಿಯವರ ‘ಕುರುಕ್ಷೇತ್ರ ಸಮರ ಪ್ರೇರಿತ’ ಘೋಷಣೆ ನೆಚ್ಚಿ ಕೈಕಟ್ಟಿ ಕುಳಿತಿತ್ತು. ಎರಡನೆಯದು; ಸೋಂಕಿನ ಸ್ವರೂಪ ಮತ್ತು ತೀವ್ರತೆಯ ಆಧಾರದ ಮೇಲೆ ಸೋಂಕಿತರೆಲ್ಲರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕಾಗಿಲ್ಲ ಮತ್ತು ಎಲ್ಲರಿಗೂ ತೀವ್ರ ನಿಗಾ ಘಟಕ ಬೇಕಾಗಿಲ್ಲ ಎಂಬುದನ್ನು ಅರಿಯದೆ ಸಾರಾಸಗಟಾಗಿ ಪಾಸಿಟಿವ್ ಬಂದ ಎಲ್ಲರನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದು.
ಈ ಎರಡು ಕಾರಣಗಳಿಂದಾಗಿ ಇಂದು ದೇಶಾದ್ಯಂತ ಕೋವಿಡ್-19 ಆಸ್ಪತ್ರೆಗಳು ಸೋಂಕಿತರಿಂದ ತುಂಬಿಹೋಗಿವೆ. ನಿಜಕ್ಕೂ ತುರ್ತು ಚಿಕಿತ್ಸೆ ಬೇಕಾದ ಗಂಭೀರ ರೋಗಿಗಳಿಗೂ ಸಕಾಲದಲ್ಲಿ ಚಿಕಿತ್ಸೆ ನೀಡಲಾಗದೆ ಹಲವರು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಇದು ಎಬೋಲಾದಂತಹ ಭೀಕರ ಸಾಂಕ್ರಾಮಿಕ ರೋಗವಲ್ಲ. ಸೂಕ್ತ ಚಿಕಿತ್ಸೆ ಮತ್ತು ಔಷಧಿ ಲಭ್ಯವಿಲ್ಲದ ಈ ಸೋಂಕಿನಿಂದ ಪಾರಾಗಲು ಮುಂಜಾಗ್ರತೆಯೇ ಮದ್ದು, ಕೈತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕವೇ ಬಹುತೇಕ ಈ ವೈರಾಣುವಿನ ದಾಳಿಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಗೊತ್ತಿದ್ದರೂ ಕಳೆದ ನಾಲ್ಕು ತಿಂಗಳಿನಿಂದ ರೋಗದ ತೀವ್ರತೆ ಗಮನಿಸದೆ ಕೇವಲ ಪಾಸಿಟಿವ್ ಬಂದವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಇಂದು ಕೇವಲ ರೋಗಿಗಳ ಸಾವನ್ನಷ್ಟೇ ಅಲ್ಲ, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಕೋವಿಡ್ ನಿರ್ವಹಣೆ ಮುಂದಾಳುಗಳ ಜೀವಕ್ಕೂ ಅಪಾಯ ಬಂದೊದಗಿದೆ. ಆ ಮೂಲಕ ಇಡೀ ದೇಶದ ಆರೋಗ್ಯ ವ್ಯವಸ್ಥೆಯೇ ಕುಸಿದುಬೀಳುವ ಹಂತ ತಲುಪಿದ್ದೇವೆ.
ಹಾಗಾದರೆ, ನಿಜಕ್ಕೂ ಏನು ಮಾಡಬಹುದಿತ್ತು? ಈಗಲೂ ಸರ್ಕಾರಗಳು ಮತ್ತು ಸಾರ್ವಜನಿಕರು ಕೋವಿಡ್ ವಿಷಯದಲ್ಲಿ ಯಾವೆಲ್ಲಾ ವಿವೇಚನೆಯ, ಜಾಣ್ಮೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ವ್ಯಕ್ತಿಯೊಬ್ಬನಲ್ಲಿ ಸೋಂಕು ದೃಢವಾದರೆ ಆತ ಗಮನಿಸಬೇಕಾದ ಸಂಗತಿಗಳಾವುವು? ಮತ್ತು ಆ ಮೂಲಕ ದೇಶದ ಆರೋಗ್ಯ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆ ಮಾಡಿ, ನಿಜಕ್ಕೂ ಚಿಕಿತ್ಸೆ ಅಗತ್ಯವಿರುವ ಗಂಭೀರ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗುವಂತೆ ನೋಡಿಕೊಳ್ಳಲು ಏನು ಮಾಡಬಹುದು ಎಂಬ ಕುರಿತು ಹಾರ್ವರ್ಡ್ ವಿವಿಯ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ತುರ್ತು ಚಿಕಿತ್ಸೆ ಮತ್ತು ಜಾಗತಿಕ ಆರೋಗ್ಯ ವಿಷಯ ಪ್ರಾಧ್ಯಾಪಕರಾಗಿರುವ ಡಾ ಸತ್ಚಿತ್ ಬಲ್ಸಾರಿ ಮತ್ತು ಮುಂಬೈನ ಪಿ ಡಿ ಹಿಂದೂಜಾ ಆಸ್ಪತ್ರೆಯ ಫಿಜಿಷಿಯನ್ ಡಾ ಝರೀರ್ ಉದ್ವಾಡಿಯಾ ವಿವರಿಸಿದ್ದಾರೆ.
ಪ್ರಮುಖ ಇಂಗ್ಲಿಷ್ ದೈನಿಕ ‘ದ ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಪ್ರಕಟವಾಗಿರುವ ವಿವರ ಲೇಖನದಲ್ಲಿ, ಅವರು ಮುಂದಿನ ದಿನಗಳಲ್ಲಾದರೂ ಕನಿಷ್ಟ, ದೇಶದ ನಗರ, ಪಟ್ಟಣ, ಹಳ್ಳಿಗಳ ಜನ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸೋಂಕಿನ ಕುರಿತು ಹೊಂದಿರಬೇಕಾದ ಪ್ರಾಥಮಿಕ ಮಾಹಿತಿ ಮತ್ತು ಆರೋಗ್ಯ ವ್ಯವಸ್ಥೆ ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರೋನಾ ಸೋಂಕಿತರನ್ನು ಸೋಂಕಿನ ಸ್ವರೂಪವನ್ನು ಆಧಾರಿಸಿ ಮುಖ್ಯವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲನೆಯದು ರೋಗಲಕ್ಷಣ ರಹಿತ(ಅಸಿಂಪ್ಟೋಮ್ಯಾಟಿಕ್), ಎರಡನೆಯದು ರೋಗಲಕ್ಷಣ ಕಾಣಿಸಿಕೊಳ್ಳುವ ಪೂರ್ವಭಾವಿ ಸ್ಥಿತಿ ಮತ್ತು ಮೂರನೆಯದು ಸ್ಪಷ್ಟವಾಗಿ ರೋಗ ಲಕ್ಷಣ ಕಾಣಿಸಿಕೊಂಡವರು.
ರೋಗಲಕ್ಷಣರಹಿತರಲ್ಲಿ:
ವೈರಾಣು ಸಂಪರ್ಕಕ್ಕೆ ಬಂದವರ ಪೈಕಿ ಬಹುತೇಕರಿಗೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣ ಕಾಣಿಸಿಕೊಳ್ಳದೇ ಹೋದರೂ, ಅವರು ಇತರರಿಗೆ ಸೋಂಕು ಹರಡುತ್ತಿರುತ್ತಾರೆ. ಸೋಂಕು ಲಕ್ಷಣಗಳಾದ ಕೆಮ್ಮು, ಸೀನು ಇರುವವರು ಹರಡುವಷ್ಟು ಪ್ರಮಾಣದಲ್ಲಿ ಅಲ್ಲದೇ ಹೋದರೂ ಕೆಲಮಟ್ಟಿಗಾದರೂ ಸೋಂಕು ಹರಡುತ್ತಾರೆ. ರೋಗಲಕ್ಷಣರಹಿತರು ಸೋಂಕು ಹರಡುವುದಿಲ್ಲ ಎಂಬುದು ಈವರೆಗೆ ಸಾಬೀತಾಗಿಲ್ಲ. ಆದರೆ, ಈ ವರ್ಗದ ಸೋಂಕಿತರಿಗೆ ಚಿಕಿತ್ಸೆಯ ಅಗತ್ಯವಿರುವುದಿಲ್ಲ.
ರೋಗಲಕ್ಷಣಪೂರ್ವ:
ರೋಗಲಕ್ಷಣ ಹೊಂದಿರುವ ಎಲ್ಲರೂ ಆರಂಭದಲ್ಲಿ ಲಘು ಲಕ್ಷಣ ಹೊಂದಿರುತ್ತಾರೆ ಅಥವಾ ಲಕ್ಷಣ ಕಾಣಿಸಿಕೊಳ್ಳುವ ಪೂರ್ವ ಸ್ಥಿತಿಯಲ್ಲಿರುತ್ತಾರೆ. ವೈರಸ್ ಸಂಪರ್ಕಕ್ಕೆ ಬಂದ ಬಳಿಕ ಸ್ಪಷ್ಟ ಲಕ್ಷಣದ ಕಾಣಿಸಿಕೊಳ್ಳುವ ಮುನ್ನ ಸುಮಾರು ಎರಡು ಅಥವಾ ಮೂರು ದಿನ ಈ ಸ್ಥಿತಿಯಲ್ಲಿರುತ್ತಾರೆ. ಆ ಅವಧಿಯಲ್ಲಿ ಅವರಲ್ಲಿ ಸ್ಪಷ್ಟ ರೋಗಲಕ್ಷಣ ಕಾಣಿಸಿಕೊಳ್ಳದೇ ಇದ್ದರು ಇತರರಿಗೆ ಅವರು ವೈರಸ್ ಹರಡುತ್ತಾರೆ. ಬಳಿಕ ಕ್ರಮೇಣ ಅವರಲ್ಲಿ ರೋಗದ ಲಕ್ಷಣಗಳಾದ ವಾಸನೆಗ್ರಹಿಕೆ ಮತ್ತು ರುಚಿ ಗ್ರಹಿಕೆ ಕಳೆದುಕೊಳ್ಳುವುದು, ಕೆಮ್ಮು, ಜ್ವರ ಮುಂತಾದವು ಕಾಣಿಸಿಕೊಳ್ಳುತ್ತವೆ.
ಈ ರೋಗಲಕ್ಷಣಗಳು ಕೂಡ ಈ ವರ್ಗದ ಸೋಂಕಿತರಲ್ಲಿ ತೀರಾ ತೀವ್ರವಾಗೇನೂ ಇರುವುದಿಲ್ಲ ಮತ್ತು ಜ್ವರ, ಕೆಮ್ಮು ಮತ್ತು ಮೈಕೈನೋವು ನಿವಾರಣೆಯ ಮಾತ್ರೆ- ಔಷಧಗಳ ಮೂಲಕವೇ ವೈದ್ಯರು ಮನೆಯಲ್ಲೇ ಸೋಂಕಿತರನ್ನು ಗುಣಪಡಿಸಬಹುದು.
ಲಘು ರೋಗ ಲಕ್ಷಣ:
ರೋಗ ಲಕ್ಷಣಪೂರ್ವದ ಸ್ಥಿತಿಯಲ್ಲೇ ಬಹುತೇಕ ಮಂದಿ ಸೋಂಕುಮುಕ್ತರಾದರೆ, ಆ ಪೈಕಿ ಕೆಲವರಲ್ಲಿ ಲಘು ರೋಗ ಲಕ್ಷಣಗಳು ಕಾಣಿಸಿಕೊಂಡು ಕ್ರಮೇಣ ಸಾಮಾನ್ಯ ರೋಗ ಲಕ್ಷಣಗಳು ತೀವ್ರವಾಗುತ್ತಾ ಹೋಗುತ್ತವೆ. ಈ ಎರಡು (ಸಾಮಾನ್ಯ ರೋಗಲಕ್ಷಣ ಮತ್ತು ತೀವ್ರ ರೋಗಲಕ್ಷಣ) ವರ್ಗದ ಸೋಂಕಿತರಿಗೆ ಮಾತ್ರ ವ್ಯವಸ್ಥಿತ ಚಿಕಿತ್ಸೆ, ವೈದ್ಯಕೀಯ ನೆರವು ಅಗತ್ಯವಿರುತ್ತದೆ.
ಲಘು ರೋಗ ಲಕ್ಷಣದವರಿಗೆ ಆಕ್ಸಿಜನ್ ಥೆರಫಿ ಬೇಕಾಗುತ್ತದೆ. ಹೊಟ್ಟೆ ಅಡಿಯಾಗಿ ಮಲಗಿ ದೀರ್ಘ ಉಸಿರಾಟದ ವ್ಯಾಯಾಮ ಬೇಕಾಗುತ್ತದೆ. ಹೀಗೆ ಮಾಡುವುದರಿಂದ ಶ್ವಾಸಕೋಶದ ಹಿಂಭಾಗದ ಗಾಳಿ ಚೀಲಗಳು ಸ್ವಸ್ಥಿತಿಗೆ ಮರಳಿ ರಕ್ತಕ್ಕೆ ಹೆಚ್ಚಿನ ಆಮ್ಲಜನಕ ಸರಬರಾಜಾಗುತ್ತದೆ. ಈ ಕ್ರಮದಿಂದ ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವೇ ಇಲ್ಲದೆ ರೋಗಿ ಗುಣಮುಖನಾಗುವುದು ಕೂಡ ಇದೆ.
ಆದರೆ, ಸಾಮಾನ್ಯಕ್ಕಿಂತ ತೀವ್ರವಾದ ರೋಗ ಲಕ್ಷಣಗಳು ಕಾಣಿಸಿಕೊಂಡವರಿಗೆ ಮಾತ್ರ ಕೃತಕ ಆಮ್ಲಜನಕದ ಅಗತ್ಯ ಹೆಚ್ಚಿರುತ್ತದೆ. ಅದಕ್ಕಾಗಿ ಆಕ್ಸಿಜನ್ ಸಿಲಿಂಡರ್ ಅಥವಾ ಚಿಕ್ಕದಾದ ಆಕ್ಸಿಜನ್ ಕಾಂಸ್ನೆಂಟೇಟರ್ ಬಳಸಬೇಕಾಗುತ್ತದೆ. ಇಂಥವರಿಗೆ ಕೂಡ ವೆಂಟಿಲೇಟರ್ ಅಥವಾ ತೀವ್ರ ನಿಗಾ ಘಟಕದ ವಿಶೇಷ ತಜ್ಞರ ನೆರವು ಬೇಕಾಗುವುದಿಲ್ಲವಾದ್ದರಿಂದ ಇವರನ್ನು ಐಸಿಯುಗಳಿಗೆ ದಾಖಲಿಸುವುದು ಕೂಡ ಬಹುತೇಕ ಸಂದರ್ಭದಲ್ಲಿ ಅಗತ್ಯವಿರುವುದಿಲ್ಲ.
ತೀವ್ರ ಗಂಭೀರ ಪ್ರಕರಣ:
ತೀವ್ರ ರೋಗ ಲಕ್ಷಣ ಹೊಂದಿರುವ ಸೋಂಕಿತರಲ್ಲಿ ದಿಢೀರನೇ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಇಂಥವರಿಗೆ ವೆಂಟಿಲೇಟರ್ ಬೇಕಾಗುತ್ತದೆ. ಆದರೆ, ಈ ವೆಂಟಿಲೇಟರ್ ಎಂಬ ಕೃತಕ ಉಸಿರಾಟದ ಯಂತ್ರಗಳು ತೀರಾ ಸೂಕ್ಷ್ಮ ಮತ್ತು ಸಂಕೀರ್ಣವಾದುದರಿಂದ ಅವುಗಳನ್ನು ನಿರ್ವಹಿಸಲು ತರಬೇತಾದ ತಜ್ಞರೇ ಬೇಕು. ಮೂಗಿನ ನಾಳದಲ್ಲಿ ಮೃದು ಪ್ಲಾಸ್ಟಿಕ್ ಕೊಳವೆ ಅಳವಡಿಸಿ ನಡೆಸುವ ಈ ಉಸಿರಾಟ ಕ್ರಿಯೆಗೆ ರೋಗಿಯನ್ನು ನಿದ್ರಾವಸ್ಥೆಯಲ್ಲಿಡಬೇಕಾಗುತ್ತದೆ. ಸೆಡೇಟಿವ್ಸ್ ನೀಡಬೇಕಾದ್ದರಿಂದ ನಿರ್ದಿಷ್ಟ ಪ್ರಮಾಣ ಮತ್ತು ಸಮಯಾಂತರ ನಿರ್ವಹಣೆ ಮುಖ್ಯ. ಅದರಲ್ಲಿ ಹೆಚ್ಚುಕಡಿಮೆಯಾದರೂ ರೋಗಿಯ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಜೊತೆಗೆ ಕೆಲವು ಪ್ರಕರಣಗಳಲ್ಲಿ ಪ್ಲಾಸ್ಮಾ ಚಿಕಿತ್ಸೆ ಕೂಡ ಬೇಕಾಗುತ್ತದೆ. ಇವೆಲ್ಲಾ ಐಸಿಯು ವಾರ್ಡಿನ ಪ್ರಕ್ರಿಯೆಗಳು.
ಹಾಗಾಗಿ ಈಗಾಗಲೇ ದೇಶದಲ್ಲಿ ತುಂಬಿಹೋಗಿರುವ ಆಸ್ಪತ್ರೆಗಳ ಮೇಲೆ ಮತ್ತಷ್ಟು ಒತ್ತಡ ಉಂಟಾಗದಂತೆ ನೋಡಿಕೊಳ್ಳುವ ದಿಸೆಯಲ್ಲಿ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲದ ಸೋಂಕಿತರನ್ನು ಸ್ಪಷ್ವವಾಗಿ ಗುರುತಿಸಿ ಅವರನ್ನು ಆಸ್ಪತ್ರೆಯಿಂದ ದೂರವಿಟ್ಟೇ ನಿಗಾ ವಹಿಸಬೇಕು. ಉಸಿರಾಟದ ವೇಗ(ಒಂದು ನಿಮಿಷಕ್ಕೆಎಷ್ಟು ಬಾರಿ ಉಸಿರಾಡುತ್ತಾರೆ- ಸಾಮಾನ್ಯರು 12 ಬಾರಿ ಉಸಿರಾಡುತ್ತಾರೆ)ದ ಮೇಲೆ ನಿಗಾ ಇಡುವುದು ಮತ್ತು ಅವರ ಬೆರಳ ತುದಿಯಲ್ಲಿ ಪಲ್ಸ್ ಆಕ್ಸಿಮೀಟರ್ ಅಳವಡಿಸಿ ಆಕ್ಸಿಜನ್ ಸಾಂಧ್ರತೆ ಅಳೆಯುವ ಮೂಲಕ ಮನೆಯಲ್ಲಿಯೇ ಸೋಂಕಿತ ಬಹುತೇಕರನ್ನು ನಿರ್ವಹಿಸಬಹುದು. ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಕೆಲವು ತರಬೇತಾದ ಆರೋಗ್ಯ ಸ್ವಯಂ ಸೇವಕರೇ ಈ ಕಾರ್ಯ ನಿರ್ವಹಿಸಬಹುದು. ಒಂದು ವೇಳೆ ಆಮ್ಲಜನಕ ಸಾಂಧ್ರತೆ ಉಂಟಾದಲ್ಲಿ ಅಥವಾ ಉಸಿರಾಟದ ತೊಂದರೆಯಾದಲ್ಲಿ ಅವರಿಗೆ ತುರ್ತಾಗಿ ಆಕ್ಸಿಜನ್ ಥೆರಫಿ ಬೇಕಾಗುತ್ತದೆ. ಅಂಥವರನ್ನು ಮನೆಯಲ್ಲೇ ಕೃತಕ ಆಮ್ಲಜನಕ ನೀಡಿ ಚಿಕಿತ್ಸೆ ನೀಡಬಹುದು ಇಲ್ಲವೇ, ಹತ್ತಿರದ ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಬಹುದು.
ನ್ಯೂಯಾರ್ಕಿನಲ್ಲಿ ಏಪ್ರಿಲ್ ಆರಂಭದಲ್ಲಿ ಸೋಂಕು ತೀವ್ರವಾದಾಗ ಇದೇ ಚಿಕಿತ್ಸಾ ಮಾದರಿಯನ್ನು ಅನುಸರಿಸುವ ಮೂಲಕ ಹಲವು ಜೀವಗಳನ್ನು ರಕ್ಷಿಸಲಾಗಿತ್ತು. ರೋಗಲಕ್ಷಣ ಕಂಡುಬಂದವರಲ್ಲಿ ಆದ್ಯತೆಯ ಮೇಲೆ ಪಲ್ಸ್ ಆಕ್ಸಿಮೀಟರ್ ಮತ್ತು ಆಕ್ಸಿಜನ್ ಕಾನ್ಸೆಂಟೇಟರ್ ನೀಡಿ ಮನೆಗೆ ವಾಪಸು ಕಳಿಸಲಾಗಿತ್ತು. ಭಾರತದಲ್ಲಿ ಕೂಡ ಈ ಹಂತದಲ್ಲಿ ಇಂತಹ ಪ್ರಯತ್ನವನ್ನು ಮಾಡಬಹುದು.
ಹೀಗೆ ಆಕ್ಸಿಜನ್ ಥೆರಫಿಗೆ ಒಳಗಾಗಿಯೂ ಪರಿಸ್ಥಿತಿ ಸುಧಾರಿಸದೇ ಇದ್ದಸಂದರ್ಭದಲ್ಲಿ ಅವರನ್ನು ತೀವ್ರ ಗಂಭೀರ ರೋಗಿಗಳೆಂದು ಪರಿಗಣಿಸಿ ಹೆಚ್ಚಿನ ವೈದ್ಯಕೀಯ ಚಿಕತ್ಸೆಗೆ ಒಳಪಡಿಸಬೇಕಾಗುತ್ತದೆ. ಆದರೆ, ಸದ್ಯದ ದೇಶದ ವೈದ್ಯಕೀಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ನೋಡಿದರೆ; ಈ ಕೊನೆಯ ವರ್ಗದ ಸೋಂಕಿತರಲ್ಲಿ ಬಹುತೇಕ ಮಂದಿಗೆ ಅಗತ್ಯ ಪ್ರಮಾಣದ ಚಿಕಿತ್ಸೆ ಸಕಾಲದಲ್ಲಿ ಲಭ್ಯವಾಗುವುದಿಲ್ಲ ಎಂಬುದು ಕಟುಸತ್ಯ. ಅಂತಹ ದುರಾದೃಷ್ಟಕರ ಪರಿಸ್ಥಿತಿಗೆ ಕಾರಣವಾದ, ವೈದ್ಯಕೀಯ ರಂಗದ ಕುರಿತ ದಶಕಗಳ ಕಾಲದ ನಿರಂತರ ಸರ್ಕಾರಗಳ ನಿರ್ಲಕ್ಷ್ಯವನ್ನು ಈಗ, ಜಾಗತಿಕ ಮಹಾಮಾರಿ ಮೇಲೆರಗಿರುವಾಗ ದಿಢೀರನೇ ಸರಿಪಡಿಸುವುದು ಕೂಡ ಸಾಧ್ಯವಿಲ್ಲ!