ಕರೋನಾ ತಂದಿಟ್ಟ ಆರ್ಥಿಕ ಸಂಕಷ್ಟದ ಬಿಸಿ ರಾಜ್ಯ ಸರ್ಕಾರಕ್ಕೂ ತಟ್ಟಿದೆ. ಲಾಕ್ಡೌನ್ ಹಿನ್ನಲೆಯಲ್ಲಿ ಖಾಸಗಿ ಉದ್ಯಮ ರಂಗದಲ್ಲಿ ಭಾರೀ ಉದ್ಯೋಗ ಕಡಿತ, ವೇತನ ಕಡಿತದ ಬೆನ್ನಿಗೆ ಕರ್ನಾಟಕ ರಾಜ್ಯ ಸರ್ಕಾರವು 9 ಸಾವಿರಕ್ಕೂ ಹೆಚ್ಚು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕೈ ಬಿಡುವಂತೆ ಅಧಿಕೃತವಾಗಿ ಸೂಚನೆ ನೀಡಿದೆ.
ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕರೋನಾ ಲಾಕ್ ಡೌನ್ ಸಂಧರ್ಭದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ಸಾಧ್ಯವಾದಷ್ಟು ಬಳಸಿಕೊಳ್ಳಲಾಗಿತ್ತು. ಆದರೆ ಇದೀಗ ಸಾಮಾಜಿಕ ಬಿಕ್ಕಟ್ಟಿನ ಸಂಧರ್ಭದಲ್ಲಿ ಪೋಲಿಸ್, ಅಗ್ನಿಶಾಮಕ ಇಲಾಖೆಗಳಿಗೆ ಒತ್ತಾಸೆಯಾಗಿ ಸೇವೆ ನೀಡುತ್ತಿದ್ದ ಗೃಹ ರಕ್ಷಕ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಕೈ ಬಿಡಲು ಸರ್ಕಾರ ನಿರ್ಧರಿಸಿದೆ.
ಅದರಂತೆ ಕಾನ್ಸ್ಟೇಬಲ್ ಹುದ್ದೆಗಳ ರಿಕ್ತ ಸ್ಥಾನಕ್ಕೆ ಅನುಗುಣವಾಗಿ ಜೂನ್ 1 ರಿಂದ ಅನ್ವಯವಾಗುವಂತೆ ಗೃಹ ರಕ್ಷಕ ಸಿಬ್ಬಂದಿಯನ್ನು ಮರು ಹಂಚಿಕೆ ಮಾಡಿ ಎಡಿಜಿಪಿ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಈ ಸುತ್ತೋಲೆಯ ಅನ್ವಯ ಎಡಿಜಿಪಿ, ಕಮಿಷನರೇಟ್ ಮತ್ತು ಎಲ್ಲ ವಲಯಗಳಿಗೆ ಸೇರಿ 3,695 ಗೃಹರಕ್ಷಕ ಸಿಬ್ಬಂದಿಗಳನ್ನು ಮಾತ್ರ ನೇಮಿಸಲು ಅವಕಾಶವಿದೆ. ರಾಜ್ಯದಲ್ಲಿ ಒಟ್ಟು 25 ಸಾವಿರ ಗೃಹರಕ್ಷಕ ಸಿಬ್ಬಂದಿಗಳಿದ್ದು ಅದರಲ್ಲಿ 12 ಸಾವಿರ ಮಂದಿ ಪೋಲಿಸ್ ಇಲಾಖೆಯೊಂದರಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಏಕಾಏಕಿ ಗೃಹ ಇಲಾಖೆಯ ಸಿಬ್ಬಂದಿಗಳ ಸೇವೆ ನಿರಾಕರಿಸುವುದರಿಂದ ಮೊದಲೇ ಸಿಬ್ಬಂದಿ ಕೊರತೆಯನ್ನೆದುರಿಸುತ್ತಿರುವ ಪೋಲಿಸ್ ಇಲಾಖೆಗೆ ದೊಡ್ಡ ಹೊರೆ ಬೀಳಲಿದೆ.