ಬೆಂಗಳೂರು : ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಜೊತೆಗಿನ ದೀರ್ಘಕಾಲದ ದಾಂಪತ್ಯ ಜೀವನಕ್ಕೆ ಅಂತ್ಯ ಬಿದ್ದಂತಾಗಿದೆ. ದಂಪತಿ ಸಲ್ಲಿಸಿದ್ದ ವಿಚ್ಚೇದನ ಅರ್ಜಿಯನ್ನು ವಿಚಾರಿಸಿದ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವು ಇಬ್ಬರ ದಾಂಪತ್ಯ ಬದುಕಿಗೆ ಇತಿಶ್ರೀ ಹಾಡಿದೆ. ಈ ಮೂಲಕ ಇಬ್ಬರ ನಡುವಿನ ವೈಮನಸ್ಸಿಗೆ ಶಾಶ್ವತವಾಗಿಯೇ ಕಾನೂನಾತ್ಮಕವಾಗಿ ತೆರೆ ಬಿದ್ದಿದೆ.
ಇಂದು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರ ಪೀಠ ವಿಚ್ಛೇದನ ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ. ವಿಜಯ್ ತಮ್ಮ ಪತ್ನಿ ನಾಗರತ್ನರಿಗೆ 2 ಕೋಟಿ ರೂಪಾಯಿ ಏಕಕಾಲಕ್ಕೆ ಜೀವನಾಂಶ (permanent alimony) ಪಾವತಿಸುವಂತೆ ನಟ ವಿಜಯ್ಗೆ ಆದೇಶಿಸಿದೆ.
ಹೈಕೋರ್ಟ್ ಮೊರೆ ಹೋಗಿದ್ದ ವಿಜಯ್
ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಕೌಟುಂಬಿಕ ಭಿನ್ನಾಭಿಪ್ರಾಯಗಳು ಈ ಹಿಂದೆ ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನ ತಿರಸ್ಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಮುಖವಾಗಿ ಈ ಜೀವನಾಂಶವನ್ನು 3 ತಿಂಗಳೊಳಗೆ ಪಾವತಿ ಮಾಡಬೇಕು. ಅಲ್ಲದೆ ದಂಪತಿಯ ಮೂವರು ಮಕ್ಕಳಾದ ಮೋನಿಶಾ, ಮೋನಿಕಾ ಹಾಗೂ ಸಾಮ್ರಾಟ್ ಇವರ ಸಂಪೂರ್ಣ ಜವಾಬ್ದಾರಿಯನ್ನು ವಿಜಯ್ ಹೊರಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮಕ್ಕಳ ಭವಿಷ್ಯದ ಬಗ್ಗೆ ನ್ಯಾಯಾಲಯ ಗಂಭೀರವಾಗಿ ಚಿಂತಿಸಿದ್ದು, ಸಮಾಜದಲ್ಲಿ ನಟನಿಗಿರುವ ಸ್ಥಾನಮಾನ, ಆರ್ಥಿಕ ಸ್ಥಿತಿ ಹಾಗೂ ವೃತ್ತಿಯಲ್ಲಿನ ಆದಾಯ ಎಲ್ಲವನ್ನೂ ಸಹ ಕೂಲಂಕುಷವಾಗಿ ಪರಿಗಣಿಸಿ ಕೋರ್ಟ್ 2 ಕೋಟಿ ಜೀವನಾಂಶಕ್ಕೆ ಸೂಚಿಸಿದೆ. ಈ ಆದೇಶದಿಂದ ಇಬ್ಬರ ನಡುವಿನ 9 ವರ್ಷಗಳ ಕಾನೂನು ಸಮರ ಅಂತ್ಯವಾಗಿದೆ.