ಬೆಂಗಳೂರು : ಕಾಡಿನಲ್ಲಿರುವ ಆದಿವಾಸಿ ಜನರ ಬದುಕು ಬದಲಾಯಿಸಲು ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಉಳುವವನಿಗೆ ಭೂಮಿ ಕೊಡುವ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಪ್ರಕೃತಿಯ ಮೇಲೆ ಪ್ರೀತಿಯನ್ನಿಟ್ಟುಕೊಂಡು ಬದುಕುತ್ತಿರುವ ನಿಮ್ಮ ಬದುಕು ಶ್ರೇಷ್ಠವಾದದ್ದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ (ರಿ) ಮತ್ತು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ (ರಿ) ವತಿಯಿಂದ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಆದಿವಾಸಿಗಳೆಲ್ಲರೂ ವಿದ್ಯಾವಂತರಾಗಬೇಕು. ಆದರೆ ಮೂಲ ಕಸುಬಿನಿಂದ ದೂರ ಹೋಗಬಾರದು. ನಿಮ್ಮ ಮೂಲ ಸಿದ್ಧಾಂತವನ್ನು ಕಾಪಾಡಿಕೊಂಡು ಹೋಗಿ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ : ಹೋಟೆಲ್ಗಳಲ್ಲಿ ಆಹಾರ ಸುರಕ್ಷತೆಗೆ ಹೊಸ ರೂಲ್ಸ್: ಈ ನಿಯಮ ಮೀರಿದ್ರೆ ಕಾನೂನು ಕ್ರಮ!
ಕಂದಾಯ ಗ್ರಾಮಗಳಲ್ಲಿ ಈಗಾಗಲೇ ವಾಸದ ಹಕ್ಕುಪತ್ರ ಕೊಟ್ಟಿದ್ದೇವೆ. ಕೆಲವರಿಗೆ ಮನೆ ಹಾಗೂ ಜಮೀನುಗಳನ್ನು ಕೊಟ್ಟಿದ್ದೇವೆ. ಅಲೆಮಾರಿ ಹಾಗೂ ಆದಿವಾಸಿ ಜನರ ಆಯೋಗ ರಚಿಸುವಂತೆ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಮನವಿ ಮಾಡಿದ್ದಾರೆ. ಒಂದು ತಿಂಗಳಲ್ಲೇ ಆಯೋಗ ರಚನೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಅಜಯ್ ಸಿಂಗ್, ಚಿತ್ರರಂಗದ ಹಿರಿಯ ನಟ ಪ್ರಕಾಶ್ ರಾಜ್ ಹಾಗೂ ಹಿರಿಯ ಸಾಮಾಜಿಕ ನ್ಯಾಯ ಹೋರಾಟಗಾರ ಡಾ. ಸಿ. ಎಸ್. ದ್ವಾರಕಾನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.






