ಬೆಂಗಳೂರು : ಬಜೆಟ್ ಅಧಿವೇಶನದ ಕೊನೆಯ ದಿನವಾದ ನಿನ್ನೆ ಸದನದಲ್ಲಿ ಚರ್ಚೆಯಾಗಿರುವ ವಿಷಯ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಿರುವುದಕ್ಕೆ ಸಾಕಷ್ಟು ವಲಯಗಳಿಂದಲೂ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ಈ ಶಾಸಕರ ಬೇಜವಾಬ್ದಾರಿಯ ಮಾತುಗಳ ಕುರಿತು ವ್ಯಾಪಕ ಚರ್ಚೆಗಳು ಹಾಗೂ ಟೀಕಗಳು ಜೋರಾಗಿವೆ.

ಆದರೆ ಈಗ ರಾಜಕೀಯದಲ್ಲಿ ಕ್ರಿಕೆಟ್ ಬಂದದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಕ್ರಿಕೆಟ್ ಪಂದ್ಯಕ್ಕೆ ನಮಗೆ ಟಿಕೆಟ್ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡಿರುವುದು ಎಷ್ಟು ಸರಿ ಎಂಬ ವಾದಗಳು ನಡೆಯುತ್ತಿವೆ. ಒಬ್ಬ ಶಾಸಕನ ಕುಟುಂಬಕ್ಕೆ 4 ಐಪಿಎಲ್ ಟಿಕೆಟ್ ಕೊಡಬೇಕಂತೆ. ಆದರೆ ಇವರಿಗೇಕೆ ಟಕೆಟ್ ನೀಡಬೇಕು ಎಂಬ ಪ್ರಶ್ನೆಯು ಜನಸಾಮಾನ್ಯನಿಂದ ವ್ಯಕ್ತವಾಗುತ್ತಿದೆ.
ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಾದ ವಿಧಾನಸಭೆಯಲ್ಲಿ ಈ ದಿನ ಮಾರ್ಧನಿಸಿದ್ದು ಶಾಸಕರ ಸ್ವಯಂ ಹಿತಾಸಕ್ತಿಯ ಸದ್ದು ಎನ್ನುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ‘ಶಾಸಕರಿಗೆ ಒಂದು ಐಪಿಎಲ್ ಟಿಕೆಟ್ ಕೊಡುತ್ತಾರೆ. ಮನೆಯವರನ್ನೆಲ್ಲಾ ಕರೆದುಕೊಂಡು ಹೋಗೋದು ಹೇಗೆ..? ಶಾಸಕರಿಗೆ ಗೌರವ ಇಲ್ಲವೇ..? ಜನಸಾಮಾನ್ಯರ ಜೊತೆ ಹೊರಗೆ ನಾವು ಕ್ಯೂನಲ್ಲಿ ನಿಲ್ಬೇಕಾ..? ನಾವು ಅಲ್ಲಿಗೆ ಹೋದರೆ ಮರ್ಯಾದೆ ಇಲ್ಲ. ಶಾಸಕರ ಕುಟುಂಬಕ್ಕೆ ಐದು ಐಪಿಎಲ್ ಟಿಕೆಟ್ ಕೊಡಿಸಿ. ಶಾಸಕರು ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಿಸಿ ಎಂದು ಒಬ್ಬ ಮಹಾನುಭಾವ ಶಾಸಕ ಬಾಯಿ ಬಡಿದುಕೊಳ್ಳುತ್ತಾನೆ.
ಇದನ್ನೂ ಓದಿ : ಮೊದಲ ತರಗತಿ ಪ್ರವೇಶಕ್ಕೆ ವಯೋಮಿತಿ ಎಷ್ಟಿರಬೇಕು? ಸರ್ಕಾರದ ಹೊಸ ಅಪ್ಡೇಟ್ ಇಲ್ಲಿದೆ
ಆದರೆ ಪಾಪ..! ಇದೇ ಜನರ ಕೈ ಕಾಲು ಬಿದ್ದು, ಅವರ ಮತಗಳನ್ನೇ ಪಡೆದು ತಾನೊಬ್ಬ ಶಾಸಕನಾಗಿದ್ದೇನೆ ಎಂದು ಕನಿಷ್ಠ ಪರಿಜ್ಞಾನವೂ ಇಲ್ಲದ ಸ್ಥಿತಿ ಈ ಶಾಸಕರಿಗೆ ಬರಬಾರದಿತ್ತು. ಚುನಾವಣೆಯ ಸಮಯದಲ್ಲಿ ಜನರ ಮನೆ ಮನೆಗೆ ತೆರಳಿ ಅವರ ಭೇಟಿಗಾಗಿ ಕ್ಯೂನಲ್ಲಿ ನಿಲ್ಲುವ ಈ ರಾಜಕಾರಣಿಗಳು ಅಧಿಕಾರ ಬಂದ ತಕ್ಷಣ ಜನರಿಂದ ಬೇರೆಯಾಗುವ ಹೀನ ಮನಸ್ಥಿತಿ ಪ್ರದರ್ಶಿಸುತ್ತಿರುವುದು ನಿಜಕ್ಕೂ ದುರ್ದೈವದ ವಿಚಾರವಾಗಿದೆ.
ಕ್ರಿಕೆಟಿನವರಿಗೆ ದುಡ್ಡಿನ ಕೊರತೆನಾ..? ಅವರ ಬಳಿ ಸಾವಿರಾರು ಕೋಟಿ ದುಡ್ಡಿದೆ ಎಂದು ಇನ್ನೊಬ್ಬ ಶಾಸಕ ಹೇಳಿದರೆ ಅದಕ್ಕೆ ಧ್ವನಿಗೂಡಿಸಿದ್ದು ವಿರೋಧ ಪಕ್ಷದ ನಾಯಕ, ನಮಗೆ ಅಲ್ಲಿ ಒಂದು ಪಾಸ್ ಕೊಡಲ್ಲ ಶಾಸಕರಿಗೆ, ನನ್ನ ಹೆಸರಲ್ಲೇ ಟಿಕೆಟ್ ಕಳುಹಿಸುತ್ತಾರೆ. ಅದರಲ್ಲಿ ನನ್ನ ಹೆಂಡ್ತಿನೂ ಕಳುಹಿಸೋಕೆ ಆಗಲ್ಲ, ಮಗನನ್ನು ಕಳುಹಿಸೋಕೂ ಆಗಲ್ಲ ಎಂದು ಆರ್.ಅಶೋಕ್ ಬೇಜವಾಬ್ದಾರಿಯ ಮಾತುಗಳನ್ನಾಡುತ್ತಾರೆ.
ಇದನೆಲ್ಲಾ ಕೇಳಿಸಿಕೊಂಡ ಸ್ಪೀಕರ್ ಖಾದರ್ ಅವರು, ಶಾಸಕರ ಕುಟುಂಬಕ್ಕೆ 4 ಟಿಕೆಟ್ ನೀಡಲು ತಿಳಿಸಿ ಎಂದು ಸರ್ಕಾರಕ್ಕೆ ನಿರ್ದೇಶನ ಕೊಡುತ್ತಾರಂದ್ರೆ ಇದರರ್ಥ ಏನು..? ಯಾವ ಸದನದಲ್ಲಿ ರಾಜ್ಯದ ನೋವು, ಸಂಕಷ್ಟ, ರೈತನ ಕಣ್ಣೀರು, ಕೂಲಿ ಕಾರ್ಮಿಕರ ಬೆವರಿನ ಬಗ್ಗೆ ಚರ್ಚೆಯಾಗಬೇಕಿತ್ತೋ ಅಲ್ಲಿಯೇ ತಮ್ಮ ಸ್ವಾರ್ಥದ, ಮೋಜು ಮಸ್ತಿಯ ಬಗ್ಗೆ ಚರ್ಚೆಯಾಗಿದ್ದು ಮಾತ್ರ ನಿಜಕ್ಕೂ ದುರಂತ..!
ಅಷ್ಟಕ್ಕೂ ಈ ಶಾಸಕರು ಹಾಗೂ ಅವರ ಕುಟುಂಬದವರು ಈ ಐಪಿಎಲ್ ಪಂದ್ಯಗಳನ್ನು ನೋಡದೇ ಹೋದರೆ ಜಗತ್ತು ಪ್ರಳಯವಾಗುವುದಿಲ್ಲ ಅಷ್ಟೇ ಅಲ್ಲದೆ ಈ ಕ್ರಿಕೆಟ್ ಪಂದ್ಯಗಳೂ ನಿಲ್ಲುವುದಿಲ್ಲ ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ. ಆದರೆ ಈಗಾಗಲೇ ವಿಐಪಿ ಸಂಸ್ಕೃತಿಯಿಂದ ಸರ್ಕಾರ ಪೆಟ್ಟು ತಿಂದಿದೆ. ಆದರೂ ಸಹ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದ್ದ ಜಾಗದಲ್ಲಿ ಟಿಕೆಟ್ ಬಗ್ಗೆ ಚರ್ಚೆಯಾಗಿರುವುದು ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದಲ್ಲದೆ, ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಯನ್ನು ಎತ್ತಿತೋರಿಸಿ ನಗೆಪಾಟಲಿಗೀಡಾಗುವಂತಾಗಿದೆ.






