ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆಯು ಇನ್ನೂ ತಣ್ಣಗಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ಶಾಸಕರು ತಮ್ಮ ತಮ್ಮ ನಾಯಕನ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಆದರೆ ಸಿಎಂ ಹುದ್ದೆಯ ವಿಚಾರದಲ್ಲಿ ಈ ಶಾಸಕರು ಪ್ರತ್ಯೇಕವಾಗಿ ಭಿನ್ನಾಭಿಪ್ರಾಯವನ್ನು ಹೊಂದಿದ್ದರೆ, ಮಂತ್ರಿಗಿರಿಯ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಧ್ವನಿ ಎತ್ತುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಸಭೆ ಸೇರಿದ್ದ ಕಾಂಗ್ರೆಸ್ ಹಿರಿಯ ಶಾಸಕರು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಇಡುವುದರ ಜೊತೆಗೆ ಅಧಿವೇಶನದ ಬಳಿಕ ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಮೇಲೂ ಒತ್ತಡ ಹೇರುವ ತೀರ್ಮಾನಕ್ಕೆ ಬಂದಿದ್ದರು. ಅದರಂತೆ ಇಂದು ಬಜೆಟ್ ಅಧಿವೆಶನದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ : ನೆತನ್ಯಾಹು ಸಾವಿನ ವದಂತಿ: ಇಸ್ರೇಲ್ ರಾಯಭಾರಿ ಸ್ಪಷ್ಟನೆ
ಸಚಿವ ಸಂಪುಟ ಪುನಾರಚನೆ ಸಮಯದಲ್ಲಿ 20 ಜನ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿಧಾನಸೌಧ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಶಾಸಕರು ಮನವಿ ಮಾಡಿದ್ದಾರೆ. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾದ ಕಾಂಗ್ರೆಸ್ ಹಿರಿಯ ಶಾಸಕರು 3ಕ್ಕೂ ಅಧಿಕ ಬಾರಿ ನಾವು ಎಂಎಲ್ಎಗಳಾಗಿದ್ದೇವೆ. ಹೀಗಾಗಿ ನಮಗೂ ಅವಕಾಶ ನೀಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಶಾಸಕರಾದ ಅಶೋಕ ಪಟ್ಟಣ, ಎನ್.ಎ.ಹ್ಯಾರಿಸ್, ಹಂಪನಗೌಡ ಬಾದರ್ಲಿ, ಬಾಲಕೃಷ್ಣ, ಎಸ್. ಎನ್. ನಾರಾಯಣಸ್ವಾಮಿ, ಯಶವಂತರಾಯಗೌಡ ಪಾಟೀಲ್, ತನ್ವೀರ್ ಸೇಠ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ 16 ಶಾಸಕರು ಮನವಿ ಮಾಡಿದ್ದಾರೆ.
ಇನ್ನೂ ಶಾಸಕರ ಮನವಿ ಆಲಿಸಿದ ಸಿದ್ದರಾಮಯ್ಯ, ಉಪಚುನಾವಣೆಯ ಬಳಿಕ ಸಂಪುಟ ವಿಸ್ತರಣೆಯನ್ನು ಮಾಡಲಾಗುವುದು. ನಿಮ್ಮೆಲ್ಲರ ಪರವಾಗಿ ನಾನೇ ಖುದ್ದಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿಗಳು ನಮಗೆ ಭರವಸೆ ನೀಡಿದ್ದಾರೆ. ನೀವು ನಿಮ್ಮ ಬೇಡಿಕೆಯನ್ನು ಪಕ್ಷದ ನಾಯಕರ ಮುಂದಿಡಿ, ನಾನು ಮಾತನಾಡುತ್ತೇನೆ. ಸಂಪುಟ ವಿಸ್ತರಣೆಯನ್ನು ಶೀಘ್ರದಲ್ಲೇ ಮಾಡುತ್ತೇನೆ ಅಂತ ನಮಗೆ ಸಿಎಂ ತಿಳಿಸಿದ್ದಾರೆ.
– ಅಶೋಕ ಪಟ್ಟಣ, ಸರ್ಕಾರದ ಮುಖ್ಯ ಸಚೇತಕರು ಹಾಗೂ ಶಾಸಕರು ರಾಮದುರ್ಗ ವಿಧಾನಸಭಾ ಕ್ಷೇತ್ರ







