ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ವಿಸ್ತರಣೆಯ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಹಿಂದೆ ಗುಜರಾತ್ ಕಾಂಗ್ರೆಸ್ ನಾಯಕರಿಗೆ ರಾಜ್ಯದಲಿ ಆಸರೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಮತ್ತೊಮ್ಮೆ ಅದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಶೀಘ್ರದಲ್ಲೇ ನಡೆಯಲಿರುವ ಒಡಿಶಾದ ರಾಜ್ಯಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದ್ದು, ಆಪರೇಷನ್ ಕಮಲದ ಭೀತಿಯ ಹಿನ್ನೆಲೆಯಲ್ಲಿ ಅಲ್ಲಿನ 14 ಜನ ಕಾಂಗ್ರೆಸ್ ಶಾಸಕರು ರಾಜ್ಯಕ್ಕೆ ಆಗಮಿಸಿದ್ದಾರೆ. ರಾಮನಗರದ ಬಿಡದಿಯ ವಂಡರ್ ಲಾ ರೆಸಾರ್ಟ್ನಲ್ಲಿ ಅವರಿಗೆ ಆತಿಥ್ಯ ನೀಡಲಾಗುತ್ತಿದೆ. ಖುದ್ದು ಇದರ ಸಂಪೂರ್ಣ ಜವಾಬ್ದಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ವಹಿಸಿಕೊಂಡಿದ್ದಾರೆ.
ಇನ್ನೂ ಪ್ರಮುಖವಾಗಿ ಒಡಿಶಾದ ಕಾಂಗ್ರೆಸ್ ಶಾಸಕರು ಬಿಡದಿಗೆ ಆಗಮಿಸಿರುವುದರ ಸುತ್ತ-ಮುತ್ತಲಿನ ವಿಚಾರಗಳನ್ನು ಗಮನಿಸಿದಾಗ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜು ಜನತಾ ದಳ (BJD) ಸಂಯುಕ್ತ ಅಭ್ಯರ್ಥಿಯಾಗಿರುವ ಖ್ಯಾತ ನ್ಯೂರೋಲಾಜಿಸ್ಟ್, ಒಡಿಶಾ ಮೆಡಿಕಲ್ ಯೂನಿವರ್ಸಿಟಿ ಮಾಜಿ ನಿರ್ದೇಶಕ ಡಾ. ದತ್ತೇಶ್ವರ್ ಹೋಟ ಗೆಲ್ಲಲು 30 ಮತಗಳ ಅವಶ್ಯಕತೆಯಿದೆ.
ಇದನ್ನೂ ಓದಿ : ವಿಲಾಸ್ ರಾವ್ ದೇಶಮುಖ್ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ : ಟ್ರಬಲ್ ಶೂಟರ್ ಆದ ಡಿಕೆ ಶಿವಕುಮಾರ್..
ಮತದ ಲೆಕ್ಕಾಚಾರ ಹೀಗಿರುವಾಗ ಲಭ್ಯವಾಗುವ ಒಟ್ಟು ಮತಗಳು 32, ಅದರಲ್ಲಿ ಬಿಜೆಡಿ -18, ಕಾಂಗ್ರೆಸ್ – 14
ಹಾಗೂ ಸಿಪಿಐ (ಎಂ)ನ 1 ಮತವಿದೆ. ಆದರೆ ಇದರಲ್ಲಿ ಮುಖ್ಯವಾಗಿ ಮೊದಲ ಬಾರಿ ಗೆದ್ದಿರುವ 8 ಮಂದಿ ಕಾಂಗ್ರೆಸ್ ಶಾಸಕರು ವಿಪಕ್ಷಗಳ ಟಾರ್ಗೆಟ್ ಆಗಿದ್ದಾರೆ. ಇದೇ ಕಾರಣಕ್ಕಾಗಿಯೇ ಸದ್ಯ ಬಿಡದಿಯಲ್ಲಿರುವ 8 ಶಾಸಕರೆಲ್ಲಾ ಮೊದಲ ಬಾರಿಗೆ ಗೆದ್ದಿರುವವರೇ ಇದ್ದಾರೆ ಎನ್ನುವುದು ಗಮನಾರ್ಹ.

ಅಲ್ಲದೆ ಒಡಿಶಾ ವಿಧಾನಸಭೆಯ ಒಟ್ಟು ಸದಸ್ಯ ಬಲ 147 ಆಗಿದ್ದು, 4 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 5 ಮಂದಿ ಸ್ಪರ್ಧಿಸಿದ್ದಾರೆ. ಬಿಜೆಪಿ 3, ಬಿಜೆಡಿ 1 ಹಾಗೂ ಬಿಜೆಡಿ+ಕಾಂಗ್ರೆಸ್ ಸಂಯುಕ್ತದ 1 ಅಭ್ಯರ್ಥಿಯಿದ್ದಾರೆ. ಆದರೆ ಇದರಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 30 ಮತಗಳು ಬೇಕಾಗಿವೆ. ಈ ಕಾರಣಕ್ಕಾಗಿಯೇ ತನ್ನ ಶಾಸಕರನ್ನು ರಕ್ಷಿಸಿ ಅಡ್ಡಮತದಾನ ತಡೆಯಲು ಕಾಂಗ್ರೆಸ್ ಹೈಕಮಾಂಡ್ ಒಡಿಶಾ ರಾಜ್ಯಸಭಾ ಚುನಾವಣೆಯ ಹೊಣೆಯನ್ನು ಡಿಕೆ ಶಿವಕುಮಾರ್ ಹೆಗಲಿಗೆ ಹೊರಿಸಿದೆ ಎನ್ನಲಾಗಿದೆ.
ರಾಜನ್ ಎಕ್ಕ, ಅಶೋಕ್ ದಾಸ್, ಅಪ್ಪಲ ಕುಮಾರ್ ಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ, ಪ್ರಫುಲ್ಲ ಪ್ರಧಾನ್, ಸತ್ಯಜಿತ್ ಗೋಮಂಗೋ ನೂತನವಾಗಿ ಆಯ್ಕೆಯಾಗಿರುವ ಈ ಶಾಸಕರು ರೆಸಾರ್ಟ್ ರಾಜಕೀಯಕ್ಕೆ ಹೊರಳಿದ್ದಾರೆ.
ಆದರೆ ಡಿಕೆ ಶಿವಕುಮಾರ್ಗೆ ಕಾಂಗ್ರೆಸ್ ಪಕ್ಷ ಅತ್ಯಂತ ಹತ್ತಿರದ ಹಾಗೂ ಭಾವನಾತ್ಮಕ ಸಂಗತಿಯಾಗಿದೆ. ಇದೇ ಕಾರಣಕ್ಕಾಗಿಯೇ ಮುಖ್ಯುಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪಕ್ಷ ನಿಷ್ಠೆಯನ್ನು ಶ್ಲಾಘಿಸುತ್ತಿರುತ್ತಾರೆ. ಆದರೆ ಕಾಂಗ್ರೆಸ್ ಹೈಕಮಾಂಡಿಗೆ ಸಂಕಟದ ಸಮಯದಲ್ಲಿ ನೆನಪಾಗುವುದೇ ಡಿಕೆ ಶಿವಕುಮಾರ್ ಎಂಬುವುದು ಅವರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.






