ಬೆಂಗಳೂರು, ಮಾರ್ಚ್ 5:
ಹದಿನಾರು ಬಜೆಟ್ಗಳನ್ನು ಮಂಡಿಸಿರುವವರು ಇದೀಗ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು ಹರಿಸಿರುವುದು ದುರಂತಕರ ಬೆಳವಣಿಗೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಗುರುವಾರ ನಡೆದ ಮಾಲೂರು ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಹೂಡಿ ವಿಜಯಕುಮಾರ್ ಅವರ ಪಕ್ಷ ಸೇರ್ಪಡೆ ಹಾಗೂ ಅವರ ನೇತೃತ್ವದ ಸ್ವಾಭಿಮಾನಿ ಜನತಾ ಪಕ್ಷದ ವಿಲೀನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನದಿಯ ನೀರು ಕೊಡುತ್ತೇವೆ ಎಂದು ಹೇಳಿ ಕೊನೆಗೆ ರಾಜಧಾನಿಯ ಕೊಳಚೆ ನೀರನ್ನೇ ಆ ಜಿಲ್ಲೆಗಳ ಜನರಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಒಂದು ಕಾಲದಲ್ಲಿ ಕೋಲಾರದ ಟೊಮ್ಯಾಟೊ ಜಗತ್ತಿಗೇ ಪ್ರಸಿದ್ಧವಾಗಿತ್ತು. ಆದರೆ ಈಗ ಅದನ್ನು ತಿನ್ನಬೇಡಿ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಇದಕ್ಕೆ ಗಲೀಜು ನೀರು ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಅವರು ದೂರಿದರು.

ನಾನು ಮುಖ್ಯಮಂತ್ರಿ ಆಗುವ ಮೊದಲು ರಾಜ್ಯ ಖಜಾನೆ ಖಾಲಿಯಾಗಿತ್ತು. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕೋಲ್ಕತಾದ ಪಿಯರ್ ಲೆಸ್ ಕಂಪನಿಯಿಂದ 200 ಕೋಟಿ ರೂ. ಸಾಲ ಪಡೆದಿದ್ದರು. ಅಂತಹ ಸಂದರ್ಭದಲ್ಲಿ ನಾನು ರಾಜ್ಯವನ್ನು ಹೇಗೆ ನಡೆಸಿದ್ದೆ ಎಂಬುದನ್ನು ಜನರು ಊಹಿಸಬಹುದು ಎಂದು ದೇವೇಗೌಡರು ಹೇಳಿದರು.
ಅಂದು ಇಂದಿನ ಮುಖ್ಯಮಂತ್ರಿಗಳು ನನ್ನ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದರು. ಅವರಿಗೆ ಈ ಎಲ್ಲಾ ವಿಚಾರಗಳು ಗೊತ್ತಿವೆ. ಧರ್ಮಸಿಂಗ್ ಸರ್ಕಾರದಲ್ಲಿ ಹಣಕಾಸು ಖಾತೆ ಮಾತ್ರ ನೀಡಿ ಅಬಕಾರಿ ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಮುನಿಸಿಕೊಂಡಿದ್ದರು ಎಂದು ಅವರು ಟೀಕಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳ ಮೂಲಕ ಉಚಿತ ಮನೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ ಹಾಗೂ ಉದ್ಯೋಗದ ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ಕೊನೆಯ ಕ್ಷಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜನರನ್ನು ಸೆಳೆದಿತು. ಈಗ ಅದೇ ಗ್ಯಾರಂಟಿಗಳು ರಾಜ್ಯ ಬೊಕ್ಕಸಕ್ಕೆ ಹೊರೆ ಆಗಿವೆ ಎಂದು ಅವರು ಹೇಳಿದರು.
ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು, ನಾವು ಎನ್ಡಿಎ ಮೈತ್ರಿಯಲ್ಲಿದ್ದೇವೆ. ಮೈತ್ರಿಯನ್ನು ಉಳಿಸಿಕೊಂಡು ಪಕ್ಷವನ್ನು ಇನ್ನಷ್ಟು ಸಂಘಟಿಸುವ ಕೆಲಸ ಮುಂದುವರೆಯಲಿದೆ. ಮಾಲೂರು ಮುಖಂಡರ ಸೇರ್ಪಡೆ ಅದಕ್ಕೆ ಒಂದು ಆರಂಭ ಮಾತ್ರ ಎಂದು ದೇವೇಗೌಡರು ಹೇಳಿದರು.






