ಬೆಂಗಳೂರು : ಪ್ರಸ್ತುತ ನಡೆಯುತ್ತಿರುವ ಸಿಎಂ ಕಪ್ ಶಟಲ್ ಬ್ಯಾಡ್ಮಿಂಟರ್ ಕ್ರೀಡಾಕೂಟದಲ್ಲಿನ ತಂಡವಾಗಿರುವ ಎಸ್ಥೆಟೆಕ್ ಅಟ್ಯಾಕರ್ಸ್ ತಂಡದ ಒಡತಿ, ಉದ್ಯಮಿ ಹಾಗೂ ಯುವ ರಾಜಕಾರಣಿ ರೂಪಾ ಶೇಖರ್ ಅವರು ನಡೆದು ಬಂದ ದಾರಿ ನಿಜಕ್ಕೂ ಮಾದರಿಯಾಗಿದೆ.

ಸಿಎಂ ಕಪ್ನಲ್ಲಿ ತಂಡದ ಬೆನ್ನೆಲುಬಾಗಿ ನಿಂತು ಬ್ಯಾಡ್ಮಿಂಟನ್ ಟೂರ್ನಿಯ ಸಿಎಂ ಕಪ್ ಎತ್ತಿ ಹಿಡಿಯಲು ತಂಡಕ್ಕೆ ಹುರಿದುಂಬಿಸುತ್ತಿದ್ದಾರೆ. ರಾಜಕಾರಣ, ರಾಜಕಾರಣಿಗಳು ಅಂದ್ರೆ ಮೂಗು ಮುರಿಯುವ ಈಗಿನ ಕಾಲಘಟ್ಟದಲ್ಲಿ ರಾಜಕಾರಣ ಎಂಬುದು ಕೇವಲ ಅಧಿಕಾರದ ಛಾಯೆಯಲ್ಲಿಯೇ ಇರುವ ವೃತ್ತಿಯಲ್ಲ, ಬದಲಿಗೆ ಸಮಾಜ ಸೇವೆಗೆ ಒಂದು ಮಾರ್ಗ ಎಂಬುದನ್ನು ತೋರಿಸಿಕೊಟ್ಟವರು ಈ ಯುವ ಉದ್ಯಮಿ ರೂಪಾ ಶೇಖರ್.
ರಾಜಕೀಯ, ಜನಸೇವೆ ಅನ್ನೋದು ರೂಪಾ ಶೇಖರ್ ಅವರಿಗೆ ರಕ್ತಗತವಾಗಿ ಬಂದಿರುವ ಬಳುವಳಿ. ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿರುವ ತಾಯಿ ಜಯಶೀಲಾ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಉಡಿಗಾಲ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದವರು ತಂದೆ ಯು.ಎಸ್. ರಾಜಶೇಖರ್. ಹೀಗೆ ರಾಜಕಾರಣದ ಕುಟುಂಬದಿಂದ ಬಂದಿರುವ ರೂಪಾಶೇಖರ್, ತಾನೂ ಕೂಡ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ-ತಾಯಿಯ ಅನುಭವವನ್ನು ಮುಂದಿಟ್ಟುಕೊಂಡು ಚಾಮರಾಜನಗರ ಜಿಲ್ಲೆಯಲ್ಲಿ ತಮ್ಮದೇ ರೀತಿಯ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ : CM CUP : ಒತ್ತಡ, ಆಯಾಸಕ್ಕೆ ಬ್ಯಾಡ್ಮಿಂಟನ್ ಮದ್ದು ; ಚಿಂತಾಮಣಿಯ ಮಾಣಿಕ್ಯ ಡಾ. ಎಂ.ಸಿ. ಸುಧಾಕರ್ ಸ್ಫೂರ್ತಿದಾಯಕ ಪಯಣ..!
ಭಾರತೀಯ ಕಿಸಾನ್ ಸಂಘದ ಮಹಿಳಾ ಪ್ರಮುಖ ಹುದ್ದೆಯಲ್ಲಿರುವ ರೂಪಾಶೇಖರ್, ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದಾರೆ. ಅದರಲ್ಲೂ ಚಾಮರಾಜನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ಹೋರಾಟ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನ್ನದಾತರ ನೋವಿಗೆ ಧ್ವನಿ ಮತ್ತು ಪರಿಹಾರವಾಗಿ ಕೆಲಸ ಮಾಡಿದ್ದಾರೆ.

ಇಡೀ ವಿಶ್ವವೇ ತಲ್ಲಣಿಸುವಂತೆ ಮಾಡಿದ್ದ ಕೋವಿಡ್ 19 ಸೋಂಕಿನ ಸಮಯದಲ್ಲಿ ಚಾಮರಾಜನಗರದ ಜನತೆಯ ಸೇವೆಗೆ ನಿಂತಿದ್ದವರು ರೂಪಾಶೇಖರ್. ಯಾರೂ ಮನೆಯಿಂದ ಹೊರಬಾರದ ಕಠಿಣ ಸಮಯದಲ್ಲಿಯೂ ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಹಸಿದವರಿಗೆ ಆಹಾರ, ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯ ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಿದ್ದರು. ಚಾಮರಾಜನಗರ ಸರ್ಕಾರಿ ಆಸ್ಪತ್ರೆ, ಮನೆಗಳಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮಹಾಮಾರಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಬೇಕಾಗುವ ಸಾಮಗ್ರಿಗಳನ್ನು ಪೂರೈಸಿ ಜವಾಬ್ದಾರಿ ಮೆರೆದಿದ್ದರು.
ಇನ್ನು, ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ನಾವು ಆರೋಗ್ಯವಾಗಿರುತ್ತೇವೆ ಎಂಬ ಧ್ಯೇಯ ರೂಪಾಶೇಖರ್ ಅವರದ್ದು. ಅದಕ್ಕಾಗಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಚಾಮರಾಜನಗರದಲ್ಲಿ ಸ್ವಚ್ಛತೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಇವುಗಳ ಜತೆಗೆ ಲಯನ್ಸ್ ಕ್ಲಬ್ ಸದಸ್ಯೆಯಾಗಿರುವ ರೂಪಾಶೇಖರ್, ನೊಂದವರ ಬದುಕಿಗೆ ಆಸರೆಯಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಬೇಕಾಗಿರುವ ಅಗತ್ಯತೆಗಳನ್ನು ಪೂರೈಸುತ್ತಿದ್ದಾರೆ. ಚಾಮರಾಜನಗರದ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಶ್ಯೂ, ಪುಸ್ತಕಗಳನ್ನು ವಿತರಿಸಿ ಅವರ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಅದರೊಂದಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಸಮಿತಿ ಸದಸ್ಯೆಯಾಗಿಯೂ ಕೆಲಸ ಮಾಡುತ್ತಿದ್ದು, ವೀರಶೈವ ಲಿಂಗಾಯತ ಸಮುದಾಯದ ಏಳಿಗೆಗೆ ಅವಿರತ ಶ್ರಮಿಸುತ್ತಿದ್ದಾರೆ.
ರಾಜಕಾರಣಿಯಾಗಿಯಷ್ಟೇ ಅಲ್ಲದೆ ಯಶಸ್ವಿ ಮಹಿಳಾ ಉದ್ಯಮಿಯಾಗಿಯೂ ರೂಪಾಶೇಖರ್ ಗುರುತಿಸಿಕೊಂಡಿದ್ದಾರೆ. ಆರ್.ಆರ್ ಇಂಡಸ್ಟ್ರೀಸ್ ಮೂಲಕ ಚಾಮರಾಜನಗರ, ಮೈಸೂರು ಭಾಗದ ನೂರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ಇವರ ಕಾರ್ಯ ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ. ಸಮಾಜದ ಏಳಿಗೆಯಲ್ಲಿ, ಸಮಸ್ಯೆಗಳ ನಿವಾರಣೆಯಲ್ಲಿ ತಮ್ಮದೇ ಆದ ರೀತಿಯ ಕೊಡುಗೆ ನೀಡುತ್ತಿರುವ ಉದ್ಯಮಿ, ಯುವ ರಾಜಕಾರಣಿ ರೂಪಾಶೇಖರ್ ಅವರು ಸಿಎಂ ಕಪ್ ಬ್ಯಾಡ್ಮಿಂಟನ್ ಭಾಗವಾಗಿರುವ ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ರೂಪಾ ಶೇಖರ್ ಅವರು ಎಸ್ಥೆಟೆಕ್ ಅಟ್ಯಾಕರ್ಸ್ ತಂಡದ ಒಡತಿಯಾಗಿದ್ದಾರೆ ಎನ್ನುವುದೇ ಸಂತಸದ ಸಂಗತಿಯಾಗಿದೆ.






