ಬೀದರ್: ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಮೊಳಕೇರಾ ಗ್ರಾಮ ಸಮೀಪದ ಆರ್.ಟಿ.ಒ. ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ಸೋಮವಾರ ತಡರಾತ್ರಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
ವಾಹನ ಸವಾರರು ಹಾಗೂ ಸರಕು ಸಾಗಣೆ ವಾಹನಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ಈ ದಾಳಿ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ ಮೂರು ಗಂಟೆಗೆ ದಾಳಿ ನಡೆಸಲಾಗಿದ್ದು, ಈಗಲೂ ಶೋಧ ಕಾರ್ಯ ಮುಂದುವರೆದಿದೆ.ಲೋಕಾಯುಕ್ತ ಎಸ್. ಪಿ. ಬಿ.ಕೆ. ಉಮೇಶ್ ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳು ಹೆದ್ದಾರಿಯ ಇತರೆ ಭಾಗಗಳಲ್ಲೂ ದಾಳಿ ನಡೆಸಿವೆ.
ಲೋಕಾಯುಕ್ತ ಡಿವೈಎಸ್ಪಿಗಳಾದ ಗೀತಾ ಬೆನಾಳ, ಹನುಮಂತ್ ರಾಯ. ಡಿವೈಎಸ್ಪಿ ಇನ್ಸ್ಪೆಕ್ಟರ್ ಅರುಣ್ ಕುಮಾರ್, ಇನ್ ಸ್ಪೆಕ್ಟರ್.ಅಕ್ಕಮಹಾದೇವಿ, ಸಿಬ್ಬಂದಿ ಪ್ರದೀಪ್, ಮಸೂದ್, ಬಸವರಾಜ, ಶರಣು, ಯಮನೂರಪ್ಪ, ರಾಜೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.