ಬರ್ತ್ಡೇ ಪಾರ್ಟಿ ಮಾಡಲು ದುಬೈಗೆ ಕರೆದುಕೊಂಡು ಹೋಗಿಲ್ಲ ಎಂದು ಪತ್ನಿಯೇ ಪತಿಯನ್ನು ಹೊಡೆದು ಕೊಂದಿರುವ ಪ್ರಕರಣದ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ತನ್ನ ಹುಟ್ಟುಹಬ್ಬವನ್ನು ಆಚರಿಸಲು ದುಬೈಗೆ ಕರೆದೊಯ್ಯಬೇಕು ಎಂದು ಪತ್ನಿ ಒತ್ತಾಯ ಪಡಿಸುತ್ತಿದ್ದರೂ, ಪತಿ ಅದನ್ನು ಕೇಳಲಿಲ್ಲ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಆತನ ಪತ್ನಿ, ಗಂಡನ ಮುಖಕ್ಕೆ ಬಾರಿಸಿದ್ದು, ತೀವ್ರ ಪೆಟ್ಟಿನಿಂದ ಗಾಯಗೊಂಡ ಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವನ್ವಾಡಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಮೃತ ನಿಖಿಲ್ ಖನ್ನಾ (38) ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
“ತನಿಖೆಯ ಸಮಯದಲ್ಲಿ, ವ್ಯಕ್ತಿಯ 36 ವರ್ಷದ ಪತ್ನಿ ರೇಣುಕಾಳ ತನ್ನ ಬರ್ತ್ಡೇಯನ್ನು ದುಬೈನಲ್ಲಿ ಆಚರಿಸಲು ಬಯಸಿದ್ದಳು, ಆದರೆ ಆಕೆಯ ಪತಿ ಅವರ ಬೇಡಿಕೆಯನ್ನು ಈಡೇರಿಸಲಿಲ್ಲ” ಎಂದು ವನವಾಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ, ನವೆಂಬರ್ 5 ರಂದು ಆನಿವರ್ಸರಿ ದಿನವೂ ಪತಿಯಿಂದ ಉತ್ತಮ ಉಡುಗೊರೆ ಸಿಗಲಿಲ್ಲ ಎಂದು ಪತ್ನಿ ಕೋಪಗೊಂಡಿದ್ದಳು. ಈ ವಿಚಾರವಾಗಿ ಶುಕ್ರವಾರ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ, ಮಹಿಳೆ ತನ್ನ ಪತಿಯ ಮೂಗಿಗೆ ಹೊಡೆದಿದ್ದು, ಅಪಾರ ರಕ್ತಸ್ರಾವದ ಬಳಿಕ ಪತಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ.
ನೆರೆಹೊರೆಯವರಿಂದ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ಸಂತ್ರಸ್ತ ಪತಿಯನ್ನು ಸಾಸೂನ್ ಜನರಲ್ ಆಸ್ಪತ್ರೆಗೆ ಕರೆದೊಯ್ದರಾದರೂ, ತೀವ್ರ ರಕ್ತಸ್ರಾವದಿಂದ ಪತಿ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಹಿಳೆ ತನ್ನ ಪತಿಗೆ ತನ್ನ ಮುಷ್ಟಿಯನ್ನು ಬಳಸಿ ಅಥವಾ ಯಾವುದಾದರೂ ವಸ್ತುವಿನಿಂದ ಹೊಡೆದಿದ್ದಾಳೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾವು ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಮತ್ತು ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ (IPC) 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.