ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರ್ತಿದ್ದಾರೆ. ಚಂದ್ರಯಾನ – 3 ಯಶಸ್ಸು ಸಾಧಿಸಿದ ಬಳಿಕ ಇಸ್ರೋ ವಿಜ್ಞಾನಿಗಳನ್ನು ಅಬಿನಂದಿಸಲು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನುವಾಗಲೇ ರಾಜಕೀಯದ ವಾಸನೆ ಬಡಿದಿತ್ತು. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗ್ತಿದ್ದ ಹಾಗೆ ಪ್ರಧಾನಿ ನರೇಂದ್ರ ಮೋದಿ, ಭಾಷಣ ಶುರು ಮಾಡಿದ್ದರು. ವಿಜ್ಞಾನಿಗಳು ಸಂಭ್ರಮದ ಬಗ್ಗೆ ಮಾತನಾಡುವ ಸಮಯದಲ್ಲಿ ಮೋದಿ ಮಾತು ಶುರು ಮಾಡಿಕೊಂಡಿದ್ದು, ವೀಕ್ಷಕರ ಮನಸ್ಸಿಗೆ ಘಾಸಿ ಉಂಟು ಮಾಡಿತ್ತು. ಇಸ್ರೋ ನೇರಪ್ರಸಾರದಲ್ಲಿ ನೋಡುತ್ತಿದ್ದ ಬರೋಬ್ಬರಿ 80 ಲಕ್ಷ ಜನರಲ್ಲಿ 40 ಲಕ್ಷ ಜನರು ಪ್ರಧಾನಿ ಮೋದಿ ಭಾಷಣ ಆರಂಭ ಆಗುತ್ತಿದ್ದ ಹಾಗೆ ಎಕ್ಸಿಟ್ ಆಗಿದ್ದರು. ಇದರ ಜೊತೆಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ರಾಜಕೀಯ ಮಾಡಲು ಮುಂದಾಗಿರುವುದು ಅನೇಕರದಲ್ಲಿ ಬೇಸರ ಮೂಡಿಸಿದೆ.
ಶನಿವಾರ ಬೆಂಗಳೂರಿನಲ್ಲಿ ಮೋದಿ ಭರ್ಜರಿ ರೋಡ್ ಶೋ..!
ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಈಗಾಗಲೇ ಅಭಿನಂದನೆ ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ಬಂದು ನೇರವಾಗಿ ಅಭಿನಂದನೆ ಸಲ್ಲಿಸಲಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿತ್ತು. ಆ ಬಳಿಕ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಶನಿವಾರ ಬೆಳಗ್ಗೆ ಗ್ರೀಸ್ನಿಂದ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿರುವ ಪ್ರಧಾನಿ ಮೋದಿಯನ್ನು ಸುಮಾರು 5 ಸಾವಿರ ಜನ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಆ ಬಳಿಕ ಪೀಣ್ಯದಿಂದ ಇಸ್ರೋ ಕೇಂದ್ರದ ತನಕ 1 ಕಿಲೋ ಮೀಟರ್ ರೋಡ್ ಶೋ ನಡೆಸಲು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ತಯಾರಿ ಮಾಡಿಕೊಳ್ತಿದ್ದಾರೆ.

ಮೋದಿ ಭದ್ರತೆಗೆ ಬೆಂಗಳೂರಿಗೆ ಬಂದಿಳಿದ SPG ಕಮಾಂಡೋ..!
ರೋಡ್ ಶೋ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಬಿಜೆಪಿ ಘಟಕಕ್ಕೆ ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ತಯಾರಿಗಲು ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಲೋಕಸಭೆ ಚುನಾವಣೆ ಇರೋದ್ರಿಂದ ರೋಡ್ ಶೋ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಪೀಣ್ಯದಲ್ಲಿರುವ ಇಸ್ರೋ ಸಂಸ್ಥೆಗೆ ಈಗಾಗಲೇ SPG ಕಮಾಂಡೋ ಟೀಮ್ ಆಗಮಿಸಿದ್ದು, ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ನಾಯಕರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಇಸ್ರೋ ಕೇಂದ್ರ ಸ್ಥಳ ಪರಿಶೀಲನೆ ನಡೆಸಿದ್ರು.. ನಳಿನ್ ಕುಮಾರ್ ಕಟೀಲ್, ಆರ್.ಅಶೋಕ್, ದಾಸರಹಳ್ಳಿ ಶಾಸಕ ಮುನಿರಾಜು ಸೇರಿ ಅನೇಕರು ಹಾಜರಿದ್ದರು.
ಬಿಜೆಪಿ ಬಾವುಟ ಬೇಡ, ಕಾರ್ಯಕರ್ತರನ್ನು ಕರೆತನ್ನಿ..!
ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ ಹಾಗೂ ಜಂಟಿ ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ವೇಳೆ ಭದ್ರತೆ ಕೈಗೊಳ್ಳಬೇಕಾದ ಕುರಿತಂತೆ ಚರ್ಚೆ ನಡೆಸಲಾಯ್ತು. ಆಗಸ್ಟ್ 26 ಬೆಳಗ್ಗೆ 4:30 ರಿಂದ ಬೆಳಗ್ಗೆ 9:30 ರವರೆಗೆ ನಗರದ ಕೆಲವು ರಸ್ತೆಗಳ ಸಂಚಾರ ಮಾರ್ಗ ಬದಲಾಯಿಸಲು ನಿರ್ಧಾರ ಮಾಡಲಾಯ್ತು. ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಿದ್ದಾರೆ. ಇನ್ನೂ ರೋಡ್ ಶೋ ವೇಳೆ ಯಾರೂ ಬಿಜೆಪಿ ಬಾವುಟ ತೋರಿಸದಂತೆ ಕಾರ್ಯಕರ್ತರಿಗೆ ಸೂಚಿಸುತ್ತೇವೆ. ಪ್ರಧಾನಿ ಮೋದಿ ಬಂದಾಗ ರಾಷ್ಟ್ರಧ್ವಜ ಮಾತ್ರ ಪ್ರದರ್ಶಿಸುವಂತೆ ತಿಳಿಸುತ್ತೇವೆ ಅಂತಾ ಬಿಜೆಪಿ ನಾಯಕರು ತಿಳಿಸಿದ್ದಾರೆ. ಆದರೆ ಚಂದ್ರಯಾನಕ್ಕೂ ಬಿಜೆಪಿ ರಾಜಕೀಯ ಲೆಕ್ಕಾಚಾರಕ್ಕೂ ಎಲ್ಲಿಯ ಸಂಬಂಧ ಅಂತಿದ್ದಾರೆ ಬೆಂಗಳೂರಿಗರು.