ಬೆಂಗಳೂರು: ಜೂನ್.೦5: ಬೆಂಗಳೂರಿನಲ್ಲಿ ಕರೆದಿದ್ದ ಸರ್ವಪಕ್ಷ ಸಭೆಗೆ ತಡವಾಗಿ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಯನ್ನು ಬಿಜೆಪಿ ಶಾಸಕರು ಮತ್ತು ಸಂಸದರು ಖಂಡಿಸಿದ್ದಾರೆ. ಡಿಸಿಎಂ ಸಭೆಗೆ ವಿಳಂಬವಾದ ಕಾರಣ ಕೆಲ ಬಿಜೆಪಿ ಶಾಸಕರು ಸಭಾತ್ಯಾಮ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷಗಳ ಸಭೆಗೆ ಕೆಲ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ್ದಾರೆ. ಸೋಮವಾರ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿತ್ತು.

ಈ ಸಭೆಗೆ ವಿರೋಧ ಪಕ್ಷದ ಬಿಜೆಪಿ ಶಾಸಕರು ಸಕಾಲದಲ್ಲಿ ಆಗಮಿಸಿದ್ದರು. ಆದರೆ, ಸಭೆ ಆರಂಭವಾಗುವದಕ್ಕೆ ವಿಳಂಬವಾದ ಕಾರಣ ಅಸಮಾಧಾನಗೊಂಡ ಮಾಜಿ ಸಚಿವರಾದ ಅಶ್ವತ್ಥ ನಾರಾಯಣ, ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ್, ಮುನಿರತ್ನ, ಎಸ್ ಆರ್ ವಿಶ್ವನಾಥ್ ಸಭಾತ್ಯಾಗ ಮಾಡಿದರು. ಇಂದು ಬೆಳಗ್ಗೆ 11 ಗಂಟೆಗೆ ಶುರುವಾಗಬೇಕಾದ ಸಭೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಒಂದು ತಾಸು ತಡವಾಗಿ ಆಗಮಿಸಿದರು. ಇದರಿಂದ ಅಸಮಾಧಾನಗೊಂಡ ಮಾಜಿ ಸಚಿವರು ಡಿಸಿಎಂ ನಡವಳಿಕೆ ಸಿಟ್ಟಾಗಿ ಸಭೆ ಆರಂಭಕ್ಕೂ ಮೊದಲೇ ಹೊರನಡೆದರು.

ಮನವೊಲಿಕೆಗೆ ಯತ್ನಿಸಿದ ಸಚಿವ ಜಮೀರ್ : ಇತ್ತ ಕೆಲ ಬಿಜೆಪಿ ಶಾಸಕರು ಸಭಾತ್ಯಾಗ ಮಾಡುತ್ತಿದ್ದ ಹಾಗೆ ಸಚಿವ ಜಕೀರ್ ಅಹಮ್ಮದ್ ಹೊರ ಬಂದು ಮನವೊಲಿಕೆಗೆ ಯತ್ನಿಸಿದರು. ಆದರೆ ಬಿಜೆಪಿ ಶಾಸಕರು ಸಮಾಧಾನವಾಗದೇ ಹೊರ ನಡೆದರು. ಇದೇ ವೇಳೆ ಡಿಸಿಎಂ ಡಿಕೆಶಿ ಸಭೆಗೆ ಆಗಮಿಸಿದರು. ಇದಾದ ಬಳಿಕ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿತ್ತು. ಆದರೆ ಡಿಸಿಎಂ ನಮ್ಮನ್ನು ಸಭೆಗೆ ಕರೆದು ಒಂದು ಗಂಟೆಗಳಿಂದ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಆಗಮಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ತಡವಾಗಿ ಆಗಮಿಸುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಿನ್ನೆ ಸಂಜೆ ವಾಟ್ಸ್ಆ್ಯಪ್ ಮೂಲಕ ಸಭೆಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡುವಳಿಕೆ ಪ್ರದರ್ಶಿಸಿದ್ದಾರೆ. ಹೀಗಾಗಿ ಸಭೆಯಿಂದ ನಿರ್ಗಮಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಭೈರತಿ ಬಸವರಾಜು, ಸುಮಾರು ಒಂದು ಗಂಟೆಯಾದರೂ ಸಭೆ ಆರಂಭವಾಗಿಲ್ಲ. ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಆಗಮಿಸಿದ್ದೆವು. ಆದರೆ ಸಭೆ ನಡೆಯುವುದೇ ತಡವಾಗಿದೆ ಎಂದು ಕಿಡಿ ಕಾರಿದರು.
ಬಿಜೆಪಿ ಸಂಸದರು, ಇತರ ಬಿಜೆಪಿ ಶಾಸಕರು ಭಾಗಿ: ಇತ್ತ ಐವರು ಬಿಜೆಪಿ ಶಾಸಕರು ಸಭೆ ವಿಳಂಬ ಹಿನ್ನೆಲೆ ಸಭಾತ್ಯಾಗ ಮಾಡಿದರೆ, ಇತ್ತ ಇತರ ಬೆಂಗಳೂರು ಬಿಜೆಪಿ ಶಾಸಕರು, ಸಂಸದರು ಸಭೆಯಲ್ಲಿ ಭಾಗಿಯಾದರು. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಬಿಜೆಪಿ ಶಾಸಕರಾದ ರವಿ ಸುಬ್ರಮಣ್ಯ, ಮಂಜುಳಾ, ಉದಯ್ ಗರುಡಾಚಾರ್, ಎಂ.ಕೃಷ್ಟಪ್ಪ, ಮಾಜಿ ಸಚಿವ ಗೋಪಾಲಯ್ಯ, ಸಿ.ಕೆ.ರಾಮಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು.