
ವಯನಾಡ್(ಕೇರಳ): ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಳೆದ ರಾತ್ರಿ ಭಾರೀ ಮಳೆಯಿಂದಾಗಿ ಇಂದು ಮುಂಜಾನೆ ಭೂಕುಸಿತ ಉಂಟಾಗಿದ್ದು, ಅವಶೇಷಗಳಡಿ ಸಿಲುಕಿ ಇಬ್ಬರು ಮಕ್ಕಳು ಸೇರಿ 9 ಮಂದಿ ಸಾವನ್ನಪ್ಪಿರುವ ಕುರಿತು ವರದಿ ಆಗಿದೆ. ಈ ಭುಕುಸಿತದಲ್ಲಿ ಹತ್ತಾರು ಮಂದಿ ಸಿಕ್ಕಿಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದ ಕೂಡಲೇ ರಕ್ಷಣಾ ತಂಡಗಳು ಪರಿಹಾರ ಕಾರ್ಯ ನಡೆಸುತ್ತಿವೆ.
ಮೆಪ್ಪಾಡಿ ಸಮೀಪದ ಗುಡ್ಡಗಾಡು ಪ್ರದೇಶಗಳಲ್ಲಿ ಮೊದಲು ರಾತ್ರಿ 1 ಗಂಟೆ ಸುಮಾರಿಗೆ ಭೂಮಿ ಕುಸಿದಿದೆ. ನಂತರ ಬೆಳಗಿನ ಜಾವ 4.10ರ ಸುಮಾರಿಗೆ ಕಲ್ಪೆಟ್ಟಾದಲ್ಲಿ ಭೂಕುಸಿತ ಸಂಭವಿಸಿತು. ಪರಿಣಾಮ, ಹಲವು ಕುಟುಂಬಗಳು ಕಣ್ಮರೆಯಾಗಿವೆ. ಅಲ್ಲದೇ, ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳನಲ್ಲೂ ಭೂಕುಸಿತವಾಗಿದೆ. ಇಲ್ಲಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಧಾರಾಕಾರ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ.

ಘಟನಾ ಸ್ಥಳಕ್ಕೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA), ಅಗ್ನಿಶಾಮಕ ದಳ ಮತ್ತು NDRF ತಂಡಗಳು ದೌಡಾಯಿಸಿವೆ. ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳನ್ನೂ ರವಾನಿಸಲಾಗಿದೆ. ಕಣ್ಣೂರಿನಿಂದ ರಕ್ಷಣಾ ಭದ್ರತಾ ದಳದ ಎರಡು ತಂಡಗಳನ್ನು ವಯನಾಡ್ಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಕೆಎಸ್ಡಿಎಂಎ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಜನರ ಸ್ಥಳಾಂತರಕ್ಕೆ ಹೆಲಿಕಾಪ್ಟರ್ ನಿಯೋಜನೆ: ಚೂರಲ್ಮಲಾ ಪಟ್ಟಣದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರೆ, ತೊಂಡರ್ನಾಡ್ ಗ್ರಾಮದಲ್ಲಿ ನೇಪಾಳ ಮೂಲದ ಕುಟುಂಬದ ಒಂದು ವರ್ಷದ ಮಗು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ”ಭೂ ಕುಸಿತ ಪೀಡಿತದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್ಗಳು ಶೀಘ್ರದಲ್ಲೇ ಸೂಲೂರಿನಿಂದ ವಯನಾಡ್ ತೆರಳಲಿವೆ” ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ, ಶಾಸಕ ಟಿ.ಸಿದ್ದಿಕ್, ”ಮುಂಡಕ್ಕೈ ಪ್ರದೇಶದಿಂದ ಸಂತ್ರಸ್ತ ಜನರನ್ನು ಏರ್ಲಿಫ್ಟ್ ಮಾಡಲು ಅಧಿಕಾರಿಗಳು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಪ್ರಸ್ತುತ, ಭೂಕುಸಿತದಲ್ಲಿ ಕಾಣೆಯಾದ ಮತ್ತು ಸತ್ತವರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇಲ್ಲ. ಹಲವು ಪ್ರದೇಶಗಳು ಸಂಪರ್ಕ ಕಡಿತಗೊಂಡಿವೆ. ಎನ್ಡಿಆರ್ಎಫ್ ಸಿಬ್ಬಂದಿ ಘಟನಾ ಸ್ಥಳಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆ ಹಲವಾರು ಕುಟುಂಬಗಳನ್ನು ಸುರಕ್ಷಿತವಾಗಿರುವ ಅವರ ಸಂಬಂಧಿಕರ ಮನೆಗಳು ಹಾಗೂ ವಿವಿಧ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.