ಬಿ.ಜಯಾ
ನನ್ನ ಬದುಕು ಒಂದು ರೀತಿ ಸಿನಿಮಾದ ಕತೆಯಂತೆಯೇ ಇದೆ. ಆ ದೇವರೇ ಚಿತ್ರಕಥಾ ಲೇಖಕ. ಬುದ್ಧಿ ಅರಿಯುವ ಮುನ್ನವೇ ನಾಟಕಕ್ಕೆ ಬಣ್ಣ ಹಚ್ಚಿದ್ದೆ. ನನಗೇ ಅರಿವಿಲ್ಲದಂತೆ ನಟಿಯಾಗಿ ಬದುಕು ಕಟ್ಟಿಕೊಂಡೆ. ಇದಕ್ಕೆ ಒತ್ತಾಸೆಯಾಗಿದ್ದು ಅಪ್ಪ. ಹಾಗೆ ನೋಡಿದರೆ ನಮ್ಮ ಮನೆತನದ ಮೂಲ ಕಸುಬು ಪಂಚಾಂಗ ಹೇಳೋದು, ಲಗ್ನ ಕಟ್ಟೋದು, ಔಷಧ ಪಾಂಡಿತ್ಯ. ತಾತ ಪಂಡಿತ್ ಮಲ್ಲಪ್ಪನವರ ಮೂಲ ನೆಲೆ ಕೊಳ್ಳೇಗಾಲ. ಅಪ್ಪ (ಬಸಪ್ಪ) ಚಿಕ್ಕವರಿದ್ದಾಗಲೇ ತಾತ ಬೆಂಗಳೂರಿಗೆ ಬಂದು ಪೇಟೆಯ ಭಾಗವಾಗಿದ್ದ ಚಾಮರಾಜಪೇಟೆಯಲ್ಲಿ ನೆಲೆ ನಿಂತರು. ನನ್ನಪ್ಪನಿಗೂ ತಾತ ಕುಲಕಸುಬು ಕಲಿಸಿದ್ದರು. ಆದರೆ ಅಪ್ಪನದ್ದು ಬೇರೆಯದ್ದೇ ಹಾದಿ. ಲೋವರ್ ಸೆಕೆಂಡರಿ ಓದಿದ ನಂತರ ಬಿನ್ನಿ ಮಿಲ್ಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಅವರಿಗೆ ವಿಪರೀತ ನಾಟಕದ ಗೀಳು. ಕೆಲಸದ ಜೊತೆಗೆ ನಾಟಕಗಳಲ್ಲೂ ಅಭಿನಯಿಸುತ್ತಿದ್ದರು. ಮುಂದೆ ನಾಟಕದ ಗೀಳಿಗೆ ಬಿದ್ದು, ಕೆಲಸ ಬಿಟ್ಟು ಪೈಲ್ವಾನ್ ಟಿ.ಅಣ್ಣಯ್ಯನವರ ಚಾಮುಂಡೇಶ್ವರಿ ನಾಟಕ ಮಂಡಳಿಯಲ್ಲಿ ಖಾಯಂ ನಟರಾದರು.
ನಾವು ಏಳು ಮಕ್ಕಳು. ನಾಲ್ಕು ಹೆಣ್ಣು, ಮೂರು ಗಂಡು. ನಾನು ನಾಲ್ಕನೆಯ ಹೆಣ್ಣುಮಗಳು. ನನ್ನ ನಂತರ ಮೂರು ಗಂಡುಮಕ್ಕಳು. ಚಿಕ್ಕಂದಿನಲ್ಲಿ ನಾನು ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಿದ್ದೆನಂತೆ. ಅಪ್ಪನಿಗೆ ನಾನೆಂದರೆ ತುಂಬಾ ಪ್ರೀತಿ. ತಮ್ಮೊಂದಿಗೆ ನನ್ನನ್ನು ನಾಟಕಗಳಿಗೆ ಕರೆದೊಯ್ಯುತ್ತಿದ್ದರು. ರಂಗದ ಮೇಲೆ ಅಪ್ಪನನ್ನು ನೋಡುತ್ತಲೇ ನಾನೂ ನಟನೆಯೆಡೆ ಆಕರ್ಷಿತಳಾದೆ. ಮೊದಲ ಬಾರಿ ನಾಟಕಕ್ಕೆ ಬಣ್ಣ ಹಚ್ಚಿದಾಗ ನನಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿಯ ‘ಭಕ್ತ ಪ್ರಹ್ಲಾದ’ ನಾಟಕದ ಪ್ರಹ್ಲಾದನ ಪಾತ್ರದೊಂದಿಗೆ ನಾನು ರಂಗಭೂಮಿಗೆ ಪದಾರ್ಪಣೆ ಮಾಡಿದೆ. ಮುಂದೆ ಇದೇ ಕಂಪನಿಯ ನಾಟಕಗಳಲ್ಲಿ ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳನ್ನು ಮಾಡಿದೆ. ಆಗ ಚಿತ್ರಸಾಹಿತಿ ಸಿ.ವಿ.ಶಿವಶಂಕರ್ ನನಗೆ ನೃತ್ಯದ ಪ್ರಾಥಮಿಕ ಪಾಠ ಹೇಳಿಕೊಟ್ಟರು. ವೆಂಕಟರಾಮ್ ಹಾಡು ಕಲಿಸಿದರು.
ಭಕ್ತ ಪ್ರಹ್ಲಾದ
ಒಮ್ಮೆ ರಂಗಭೂಮಿ ಮತ್ತು ಸಿನಿಮಾ ನಟ, ನಿರ್ದೇಶಕ ಸುಬ್ಬಯ್ಯನಾಯ್ಡು ನಾಟಕ ನೋಡಲು ಬಂದಿದ್ದರು. ಆ ದಿನಗಳಲ್ಲಿ ಅವರು ‘ಭಕ್ತ ಪ್ರಹ್ಲಾದ’ ಸಿನಿಮಾ ಮಾಡಲು ತಯಾರಿ ನಡೆಸಿದ್ದರು. ಚಿತ್ರಕ್ಕಾಗಿ ಬಾಲಕಲಾವಿದರ ತಲಾಶೆಯಲ್ಲಿದ್ದ ಅವರಿಗೆ ನಾಟಕದಲ್ಲಿ ಜಯಾ ಕಣ್ಣಿಗೆ ಬಿದ್ದರು. ಜಯಾರನ್ನು ಕರೆದುಕೊಂಡು ಮದರಾಸಿಗೆ ಬರುವಂತೆ ತಂದೆ ಬಸಪ್ಪನವರಿಗೆ ಸೂಚಿಸಿದರು. ಪುತ್ರಿಯನ್ನು ಸಿನಿಮಾ ನಟಿಯನ್ನಾಗಿ ರೂಪಿಸಲು ಪಣತೊಟ್ಟ ಬಸಪ್ಪನವರು ಅದೊಂದು ದಿನ ಪುತ್ರಿಯೊಂದಿಗೆ ಮದರಾಸಿನ ರೈಲು ಹತ್ತಿದರು. ‘ಭಕ್ತ ಪ್ರಹ್ಲಾದ’ ಚಿತ್ರದ ‘ನಾಗರಾಜ’ ಬಾಲನಟನ ಪಾತ್ರದೊಂದಿಗೆ ನನ್ನ ಬೆಳ್ಳಿತೆರೆ ಅಭಿಯಾನ ಆರಂಭವಾಯ್ತು. ಆಗ ವರ್ಷವೊಂದಕ್ಕೆ ತಯಾರಾಗುತ್ತಿದ್ದುದು ಐದಾರು ಕನ್ನಡ ಚಿತ್ರಗಳಷ್ಟೆ. ಹೊಟ್ಟಪಾಡಿಗೆ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದೆವು. ಅಪ್ಪ ಸಿನಿಮಾಗಳ ಚಿಕ್ಕ-ಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸತೊಡಗಿದರು. ಒಮ್ಮೆ ‘ಬೆಟ್ಟದ ಹುಲಿ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅಪ್ಪ ಸವಾರಿ ಮಾಡುತ್ತಿದ್ದ ಕುದುರೆ ಗಾಡಿ ಕಲ್ಲಿಗೆ ಬಡಿದು ಮಗುಚಿ ಬಿತ್ತು. ಆಕಸ್ಮಿಕದಲ್ಲಿ ಕಾಲಿಗೆ ತೀವ್ರ ಪೆಟ್ಟು ಬಿದ್ದ ನಂತರ ಅಪ್ಪ ನಟನೆಯಿಂದ ದೂರ ಉಳಿದರು. 1972ರಲ್ಲಿ ಅಪ್ಪ ಅಸುನೀಗಿದ ನಂತರ ಕುಟುಂಬದ ಹೊಣೆಗಾರಿಕೆ ನನ್ನ ಹೆಗಲಿಗೆ ಬಿತ್ತು.
ಕನ್ನಡ ಸಿನಿಮಾ ಕಲಾವಿದರಿಗೆ ಮದರಾಸಿನ ಆರಂಭದ ದಿನಗಳು ದುಸ್ತರವಾಗಿದ್ದವು. ಆಗ ಜನ್ಮ ತಳೆದಿದ್ದು ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’. ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ.ಅಯ್ಯರ್ ಮುಂದಾಲೋಚನೆಯ ಕೂಸು ಇದು. ಸಿನಿಮಾ ಶೂಟಿಂಗ್ ಇಲ್ಲದಾಗ ಈ ತಂಡದೊಂದಿಗೆ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ಈ ತಂಡದಲ್ಲಿ ನಾನು ಸಕ್ರಿಯ ಕಲಾವಿದೆಯಾದೆ. ಚಿಕ್ಕವಳೆಂದು ನನ್ನ ಮೇಲೆ ಎಲ್ಲರಿಗೂ ಪ್ರೀತಿ. ನಾಟಕಗಳಿಂದಾಗಿ ಚಿತ್ರರಂಗದ ಎಲ್ಲಾ ಕಲಾವಿದರೂ ಹತ್ತಿರವಾದರು. ಎಪ್ಪತ್ತರ ದಶಕದಲ್ಲಿ ನಾನು ಸಿನಿಮಾಗಳ ಜೊತೆ ನಾಟಕಗಳಲ್ಲಿಯೂ ಹೆಚ್ಚು ಹೆಚ್ಚಾಗಿ ನಟಿಸತೊಡಗಿದೆ. ಕುಟುಂಬದ ಜವಾಬ್ದಾರಿ ಇದ್ದುದರಿಂದ ಇದು ಅನಿವಾರ್ಯವೂ ಆಗಿತ್ತು.
ರೇಡಿಯೋ ನಾಟಕ
ಮದರಾಸಿನಲ್ಲಿದ್ದಾಗ ಸಂಸಾರ ತೂಗಿಸುವುದು ತುಂಬಾ ಕಷ್ಟವಾಗಿತ್ತು. ಆಗ ಆಕಾಶವಾಣಿ ನಾಟಕಗಳ ಸಂಪಾದನೆ ಕೈಹಿಡಿಯುತ್ತಿತ್ತು. ವಾರಕ್ಕೆರೆಡು ದಿನ ರೇಡಿಯೋ ನಾಟಕಗಳಿರುತ್ತಿದ್ದವು. ಅರ್ಧ ಗಂಟೆಯ ಲೈವ್ ನಾಟಕಗಳಲ್ಲಿ ಪಾಲ್ಗೊಂಡರೆ ಕಲಾವಿದರಿಗೆ 25 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಆಗ ಅಲ್ಲಿನ ರೇಡಿಯೋ ಸ್ಟೇಷನ್ನಲ್ಲಿ ಕನ್ನಡತಿ ವಿಜಯವಲ್ಲಿ ನಿರ್ದೇಶಕಿಯಾಗಿದ್ದರು. ಕನ್ನಡದ ಕಲಾವಿದರ ಮೇಲಿನ ಅವರ ಪ್ರೀತಿಯಿಂದ ಅಲ್ಲಿ ನಮಗೆಲ್ಲಾ ಉತ್ತಮ ಅವಕಾಶ ಸಿಗುತ್ತಿದ್ದವು. ರಂಗದ ಮೇಲಿನ ನಾಟಕಗಳಲ್ಲಿ ಕಲಾವಿದರಾದ ನಾವು ಪ್ರೇಕ್ಷಕರನ್ನು ನೇರವಾಗಿ ಮುಖಾಮುಖಿಯಾಗುತ್ತೇವೆ. ಆದರೆ ರೇಡಿಯೋ ಭಿನ್ನ ಮಾಧ್ಯಮ. ಭಾವಾಭಿವ್ಯಕ್ತಿಗಿಂತ ಇಲ್ಲಿ ಧ್ವನಿಯಲ್ಲಿನ ಏರಿಳಿತ ಮುಖ್ಯ. ನಟಿಯಾಗಿ ಬೆಳೆಯಲು ಕಲಿಕೆಗೆ ನನಗೆ ರೇಡಿಯೋ ನಾಟಕಗಳು ನೆರವಿಗೆ ಬಂದವು.
ಕುಮಾರೇಶ್ವರ ನಾಟಕ ಸಂಘ
80ರ ದಶಕದ ಆರಂಭದ ಹೊತ್ತಿಗೆ ಕನ್ನಡ ಚಿತ್ರರಂಗದ ಮದರಾಸು ನಂಟು ಕಡಿತಗೊಂಡಿತ್ತು. ಅಲ್ಲಿ ನೆಲೆಸಿದ್ದ ಕನ್ನಡದ ಕಲಾವಿದರು ಬೆಂಗಳೂರು, ಮೈಸೂರಿಗೆ ಹಿಂದಿರುಗಿದ್ದರು. ಆಗ ನಾನು ಹೊಸ ಸವಾಲುಗಳನ್ನು ಎದುರಿಸಬೇಕಾಯ್ತು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ತೆಲುಗು, ತಮಿಳು ನಿರ್ದೇಶಕರು ಹಾಗೂ ನಿರ್ಮಾಪಕರು ಉದ್ಯಮದಲ್ಲಿದ್ದರು. ಅವರ ಚಿತ್ರಗಳಲ್ಲಿ ಅಲ್ಲಿನ ಕಲಾವಿದರಿಗೇ ಆಧ್ಯತೆ. ಸಿನಿಮಾದಲ್ಲಿ ಪಾತ್ರ ಕೊಡಿ ಎಂದು ಬೇಡಲು ನನಗೆ ಸ್ವಾಭಿಮಾನ ಅಡ್ಡಿಯಾಯ್ತು. ಆಗ ನಾನೇ ‘ಕುಮಾರೇಶ್ವರ ನಾಟಕ ಸಂಘ’ ಆರಂಭಿಸಿದೆ. 1983ರಲ್ಲಿ ಆರಂಭವಾದ ಕಂಪನಿ ಬಹುಬೇಗ ಹೆಸರು ಗಳಿಸಿತು. ನನ್ನ ಕಂಪನಿಯಲ್ಲಿ ಹತ್ತಾರು ಪ್ರಮುಖ ಸಿನಿಮಾ ನಟ-ನಟಿಯರು ಅಭಿನಯಿಸುತ್ತಿದ್ದರು. ನಾಟಕಗಳಿಗೆ ಜನ ಬರುವುದು ಕಡಿಮೆಯಾಗುತ್ತಿದ್ದಂತೆ 1992ರಲ್ಲಿ ಕಂಪನಿ ಮುಚ್ಚಿದೆ.
ಸಿನಿಮಾ
ಮೇರುನಟ ಬಾಲಕೃಷ್ಣ ಜೋಡಿಯಾಗಿ ನಾನು ನಟಿಸಿದ ಮೊದಲ ಸಿನಿಮಾ ‘ದೈವಲೀಲೆ’ (1962). ಇದೇ ವರ್ಷ ತೆರೆಕಂಡ ‘ವಿಧಿ ವಿಲಾಸ’ದಲ್ಲಿ ನರಸಿಂಹರಾಜು ಅವರಿಗೆ ನಾಯಕಿಯಾದೆ. ಮುಂದಿನ ಐದಾರು ವರ್ಷ ಈ ಇಬ್ಬರು ದೊಡ್ಡ ನಟರೊಂದಿಗೆ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದೆ. ದ್ವಾರಕೀಶ್ ಅವರಿಗೆ ನಾನು ಜೋಡಿಯಾಗಿದ್ದು ‘ಬೆಳ್ಳಿಮೋಡ’ದಲ್ಲಿ (1967). ಕನ್ನಡ ಚಿತ್ರರಂಗ ಕಂಡ ಮೂವರು ಮೇರು ಹಾಸ್ಯ ಕಲಾವಿದರ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ ಎನ್ನುವುದೇ ಹೆಗ್ಗಳಿಕೆ. ಸಿದ್ದಲಿಂಗಯ್ಯ ನಿರ್ದೇಶನದ ‘ನ್ಯಾಯವೇ ದೇವರು’ (1971) ನನ್ನ ವೃತ್ತಿಬದುಕಿಗೆ ತಿರುವು ಕೊಟ್ಟ ಸಿನಿಮಾ. ಚಿತ್ರದಲ್ಲಿನ ಮೂಗಿ ಪಾತ್ರ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಮುಂದೆ ಬೆಂಗಳೂರಿಗೆ ಮರಳಿದ ನಂತರ ಮುಂದೆ ಪೋಷಕ ಪಾತ್ರಗಳತ್ತ ಹೊರಳಿದೆ. ಶಿವರಾಜಕುಮಾರ್ ಅಭಿನಯದ ‘ಚಿರಬಾಂಧವ್ಯ’ (1993) ಚಿತ್ರದ ಉತ್ತಮ ಪಾತ್ರದೊಂದಿಗೆ ಮತ್ತೆ ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ರಾಜಕುಮಾರ್ ಅವರೊಂದಿಗೆ ‘ಶಬ್ದವೇಧಿ’ ನನ್ನ ಕೊನೆಯ ಚಿತ್ರವಾಯ್ತು.
ನಾಟಕ ಮತ್ತು ಸಿನಿಮಾಗಳಲ್ಲಿ ನನ್ನ ಆತ್ಮೀಯ ಹಿರಿಯ ಗೆಳತಿಯಾಗಿದ್ದವರು ಎಂ.ಎನ್.ಲಕ್ಷ್ಮೀದೇವಿ. ಪ್ರತಿ ಹಂತದಲ್ಲೂ ನನ್ನನ್ನು ಪೊರೆಯುತ್ತಾ ಬಂದ ಅವರು ಸದಾ ಅವಶ್ಯ ಸಲಹೆ, ಸೂಚನೆ ನೀಡುತ್ತಾ ಬೆನ್ನಿಗೆ ನಿಂತಿದ್ದರು. ‘ದೇವರು ಕೊಟ್ಟ ತಂಗಿ’ಯಲ್ಲಿ ನಾವಿಬ್ಬರೂ ನರಸಿಂಹರಾಜು ಅವರ ಪತ್ನಿಯರಾಗಿ ನಟಿಸಿದ್ದೆವು ಎನ್ನುವುದು ವಿಶೇಷ. ‘ಪ್ರೇಮಪಾಶ’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುವ ಅವಕಾಶ ಒದಗಿಬಂದಿತ್ತು. ಹಿಂದೆ ನಾಟಕಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸುವಾಗ ನಟ ರಾಜಕುಮಾರ್ ನನಗೆ ನಟನೆಯ ಪಾಠ ಹೇಳಿಕೊಡುತ್ತಿದ್ದರು. ಚಿಕ್ಕ-ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸದೆ ಒಳ್ಳೆಯ ಮಾತನಾಡುತ್ತಾ ಆತ್ಮವಿಶ್ವಾಸ ತುಂಬುತ್ತಿದ್ದರು. ರಾಜ್ ಕುಟುಂಬದ ನೆರವು, ಲಕ್ಷ್ಮೀದೇವಮ್ಮ ಮತ್ತು ಲೀಲಾವತಿ ಅವರ ಒಡನಾಟದಿಂದಾಗಿ ಮದರಾಸಿನ ದಿನಗಳು ಕಷ್ಟಗಳನ್ನು ಮರೆಸುತ್ತಿದ್ದವು.
ಕಿರುತೆರೆ
ಸಿನಿಮಾದಲ್ಲಿ ಸಿಗದ ಅದೆಷ್ಟೋ ಪಾತ್ರಗಳು ನನಗೆ ಸೀರಿಯಲ್ಗಳಲ್ಲಿ ಸಿಕ್ಕಿವೆ. ನವರಸಗಳಿರುವ ಹತ್ತಾರು ಪಾತ್ರಗಳಲ್ಲಿ ನಾನು ನಟಿಸಿದ್ದೇನೆ. ಹಾಸ್ಯ ಕಲಾವಿದೆಯಾಗಿ ನನಗೆ ಸಂಪೂರ್ಣ ತೃಪ್ತಿ ಕೊಟ್ಟ ಮಾಧ್ಯಮ ಕಿರುತೆರೆ. ವೈವಿಧ್ಯಮಯ ಪಾತ್ರಗಳ ಜೊತೆ ಕಿರುತೆರೆ ಬದುಕಿಗೂ ಆರ್ಥಿಕ ಭದ್ರತೆ ಒದಗಿಸುತ್ತಿದೆ. ಕೆಲವು ಧಾರಾವಾಹಿಗಳಲ್ಲಿ ನನಗೆಂದೇ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ‘ಮಹಾನ್ ಮರೆಗುಳಿಗಳು’ ಧಾರಾವಾಹಿಯಿಂದ ಶುರುವಾದ ನಂಟು ಈ ಹೊತ್ತಿಗೂ ಮುಂದುವರಿದಿದೆ. ಕನ್ನಡದ ಮೊದಲ ಮೆಗಾ ಧಾರಾವಾಹಿ ‘ಮನೆತನ’ದಲ್ಲಿ ನಟ ಶಿವರಾಂ ಪತ್ನಿಯಾಗಿ ಕಾಣಿಸಿಕೊಂಡಿದ್ದೆ. ‘ಗಲಿಬಿಲಿ ಸಂಸಾರ’, ‘ದೇವ್ರು ದೇವ್ರು’, ‘ದಂಡಪಿಂಡಗಳು’, ‘ಪ್ರೇಮ ಪಿಶಾಚಿ’, ‘ಅದೃಷ್ಟ ಲಕ್ಷ್ಮಿಯರು’ ಹಾಸ್ಯ ಧಾರಾವಾಹಿಗಳಲ್ಲಿ ಜನರು ನನ್ನನ್ನು ತುಂಬಾ ಇಷ್ಟಪಟ್ಟರು. ಕುಟುಂಬದ ವಾತಾವರಣ ಇರುವ ಧಾರಾವಾಹಿ ಸೆಟ್ಗಳಲ್ಲಿ ಶೂಟಿಂಗ್ ಮುಗಿಯುವೇ ಗೊತ್ತಾಗುವುದಿಲ್ಲ. ಅಲ್ಲಿನ ಕಲಾವಿದರು ಹಾಗೂ ತಂತ್ರಜ್ಞರಿಗೆ ನಾನು ಸದಾ ಋಣಿಯಾಗಿರುತ್ತೇನೆ.
ಪ್ರಶಸ್ತಿ – ಗೌರವ
ನಾಟಕಗಳಲ್ಲಿ ನಟಿಸುವಾಗ ಪ್ರೇಕ್ಷಕರಿಂದ ಸಿಗುತ್ತಿದ್ದ ಚಪ್ಪಾಳೆ, ಶಿಳ್ಳೆಗಳೇ ನಿಜವಾದ ಪ್ರಶಸ್ತಿ ಎಂದು ನಾನು ಭಾವಿಸಿದ್ದೇನೆ. ನನಗೆ ಮೊಟ್ಟಮೊದಲ ಪ್ರಶಸ್ತಿ ಸಿಕ್ಕಿದ್ದು ‘ಪ್ರತಿಜ್ಞೆ’ (1964) ಚಿತ್ರಕ್ಕೆ. ಅತ್ಯುತ್ತಮ ಹಾಸ್ಯನಟಿ ಎಂದು ಚಿತ್ರಪ್ರೇಮಿಗಳ ಸಂಘ ಈ ಮನ್ನಣೆ ನೀಡಿತ್ತು. ಮುಂದೆ ಚಿತ್ರಪ್ರೇಮಿಗಳ ಸಂಘದಿಂದ ‘ಬೆಟ್ಟದ ಹುಲಿ’, ‘ನ್ಯಾಯವೇ ದೇವರು’ ಚಿತ್ರಗಳಲ್ಲಿನ ಪಾತ್ರಗಳಿಗೂ ಗೌರವ ಸಂದಿತ್ತು. ಎಸ್.ಮಹೇಂದರ್ ನಿರ್ದೇಶನದ ‘ಗೌಡ್ರು’ ಚಿತ್ರದ ಪೋಷಕ ಪಾತ್ರದ ಉತ್ತಮ ನಟನೆಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಗೌರವ ಸಿಕ್ಕಿದ್ದೊಂದು ಸವಿನೆನಪು. ಕನ್ನಡ ಟೆಲಿವಿಷನ್ ಅಸೋಸಿಯೇಷನ್ನವರು ಗುರುತಿಸಿ ಪ್ರೀತಿಯಿಂದ ಸತ್ಕರಿಸಿದ್ದಾರೆ. ಸರ್ಕಾರದಿಂದ ಸಿಕ್ಕ ರಾಜ್ಯೋತ್ಸವ ಗೌರವ (2012) ನನಗೆ ಹೆಮ್ಮೆ ತಂದಿದೆ.
ಕೊನೆಯುಸಿರಿರುವವರೆಗೂ…
ಕನ್ನಡ ಚಿತ್ರರಂಗಕ್ಕೆ ನನ್ನದೂ ಚಿಕ್ಕ ಅಳಿಲು ಸೇವೆ ಸಂದಿದೆ ಎಂದುಕೊಂಡಿದ್ದೇನೆ. ಆರಂಭದಲ್ಲಿ ಜೀವನಕ್ಕಾಗಿ ನಟಿಸಿದೆನೇನೋ… ನಂತರ ನಟನೆಯೇ ಜೀವನವಾಯ್ತು. ನನಗೆ ನಟನೆ ಇಷ್ಟ. ಬುದ್ಧಿ ತಿಳಿದಾಗಿನಿಂದ ನಟಿಸುತ್ತಲೇ ಇದ್ದೇನೆ. ಕೊನೆಯುಸಿರಿರುವವರೆಗೂ ನಟಿಸುತ್ತಲೇ ಇರಬೇಕೆಂದು ಅಪೇಕ್ಷಿಸುತ್ತೇನೆ.