ಸಂಸತ್ತಿನಲ್ಲಿ ಪೆಗಾಸಸ್ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿತ್ತು. ವಿರೋಧ ಪಕ್ಷದ ನಾಯಕರು ಪೆಗಾಸಸ್ ಪ್ರಕರಣದ ವಿರುದ್ದ ಉನ್ನತ ಮಟ್ಟದ ತನಿಖೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರ ಮಾತ್ರ ಇದು ಗಂಭೀರವಾದ ವಿಚಾರವೇ ಅಲ್ಲ ಎಂದು ಕೈ ತೊಳೆದುಕೊಂಡಿದೆ. ಆದರೂ, ಪಟ್ಟು ಬಿಡದ ವಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿವೆ.
ಬುಧವಾರ ಪೆಗಾಸಸ್ ವಿಚಾರವಾಗಿ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ ಆರು ಜನ ತೃಣಮೂಲ ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭೆಯ 255ನೇ ನಿಯಮದ ಪ್ರಕಾರ ಸದನದಲ್ಲಿ ತಪ್ಪಾದ ನಡವಳಿಕೆಯನ್ನು ಪ್ರದರ್ಶಿಸಿದ ಕಾರಣಕ್ಕಾಗಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಧ್ಯಕ್ಷರಾಗಿರುವ ವೆಂಕಯ್ಯ ನಾಯ್ಡು ಅವರು ಈ ತೀರ್ಮಾನ ಕೈಗೊಂಡಿದ್ದಾರೆ.
ಟಿಎಂಸಿಯ ಡೋಲಾ ಸೇನ್, ಮದೀಮುಲ್ ಹಕ್, ಅರ್ಪಿತಾ ಘೋಷ್, ಮೌಸಮ್ ನೂರ್, ಶಾಂತಾ ಛೇತ್ರಿ ಮತ್ತು ಅಬೀರ್ ರಂಜನ್ ಬಿಸ್ವಾಸ್ ಅಮಾನತುಗೊಂಡಿರುವ ಸಂಸದರು. ಸಂಸತ್ತಿನಲ್ಲಿ ಪೆಗಾಸಸ್ ಕುರಿತು ಚರ್ಚೆ ನಡೆಸಲೇಬೇಕೆಂದು ಟಿಎಂಸಿ ನಾಯಕರು ಪಟ್ಟು ಹಿಡಿದಿದ್ದರು.
ನಂತರ ಪ್ರತಿಭಟನೆಗೆ ಮುಂದಾದ ಸಂಸದರನ್ನು ತಮ್ಮ ಸ್ಥಾನಕ್ಕೆ ಮರಳುವಂತೆ ವೆಂಕಯ್ಯ ನಾಯ್ಡು ಅವರು ಮನವಿ ಮಾಡಿದರು. ಕೈಯಲ್ಲಿ ಪ್ಲಕಾರ್ಡ್ ಹಿಡಿದು ಪ್ರತಿಭಟಿಸುತ್ತಿರುವವರ ವಿರುದ್ದ 255ನೇ ನಿಯಮದಡಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು. ಆದರೆ, ಇದಾವುದಕ್ಕೂ ಬಗ್ಗದ ಟಿಎಂಸಿ ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು.
ಈ ಕಾರಣಕ್ಕಾಗಿ, ಸಂಸತ್ತಿನ ಪೀಠದ ಆದೇಶ ಪಾಲಿಸದ ಹಿನ್ನೆಲೆ ಹಾಗೂ ಪ್ಲಕಾರ್ಡ್ ಪ್ರದರ್ಶಿಸಿದ ಕಾರಣಕ್ಕೆ 255ನೇ ನಿಯಮದಂತೆ ಪ್ರತಿಭಟನಾ ನಿರತ ನಾಯಕರು ಸದನ ಬಿಟ್ಟು ಹೊರ ನಡೆಯಬೇಕು ಎಂದು ಸಭಾಧ್ಯಕ್ಷರು ಆದೇಶ ನೀಡಿದರು.
ಇದು ಬಿಜೆಪಿಯ ಮೋದಿ ಸರ್ಕಾರದ ಸೋಲು- ಅಭಿಷೇಕ್ ಬ್ಯಾನರ್ಜಿ
ಟಿಎಂಸಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಸಂಸದರ ಅಮಾನತಿನ ವಿರುದ್ದ ಕಿಡಿ ಕಾರಿದ್ದಾರೆ. ಪೆಗಾಸಸ್ ವಿವಾದದ ಕುರಿತು ಚರ್ಚೆ ನಡೆಸದೇ ಪ್ರತಿಭಟನಾ ನಿರತ ಸಂಸದರನ್ನು ಅಮಾನತುಗೊಳಿಸಿರುವುದು ಮೋದಿ ಆಡಳಿತದ ಸೋಲು ಎಂದು ಟೀಕಿಸಿದ್ದಾರೆ.
ಸತ್ಯಕ್ಕಾಗಿ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿರುವ ಬ್ಯಾನರ್ಜಿ, ನೀವು ನಮ್ಮನ್ನು ಅಮಮಾನತುಗೊಳಿಸಬಹುದು ಆದರೆ, ಮೌನವಾಗಿಸಲು ಸಾಧ್ಯಂವಿಲ್ಲ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
“ಸಂಸದರ ಮೇಲೆ ಕ್ರಮ ಕೈಗೊಂಡಿರುವುದು ಬಿಜೆಪಿಯ 56 ಇಂಚು ಎದೆಯುಳ್ಳ ಗಾಡ್ ಫಾದರ್ ಸೋಲೊಪ್ಪಿಕೊಂಡಂತೆ. ನಮ್ಮನ್ನು ಅಮಾನತುಗೊಳಿಸಬಹುದು. ಆದರೆ, ಮೌನವಾಗಿಸಲು ಸಾಧ್ಯವಿಲ್ಲ. ಸತ್ಯಕ್ಕಾಗಿ ಹಾಗೂ ನಮ್ಮ ಜನಗಳಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ನಾವು ಒಂದಿಂಚೂ ಕದಲುವುದಿಲ್ಲ. ನಮ್ಮ ಕೊನೆಯುಸಿರಿನ ವರೆಗೂ ಹೊರಾಡುತ್ತೇವೆ,” ಎಂದು ಟ್ವೀಟರ್’ನಲ್ಲಿ ಬರೆದುಕೊಂಡಿದ್ದಾರೆ.