ಬೆಂಗಳೂರು: ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಪೌರ ಕಾರ್ಮಿಕರಿಗೆ ಆದೇಶ ಪ್ರತಿ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆದಿದ್ದು, ಒಟ್ಟು 12,692 ಮಂದಿಗೆ ನೇರ ನೇಮಕಾತಿ ಮಾಡಿ ಸರ್ಕಾರ ಆದೇಶ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶ ಪ್ರತಿ ಹಸ್ತಾಂತರ ಮಾಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಪೌರ ಕಾರ್ಮಿಕರರು ದೇವರ ಮಕ್ಕಳು, ಸ್ವಚ್ಚತಾ ರಾಯಭಾರಿಗಳು ಎಂದು ಭಾವಿಸುತ್ತೇನೆ. ಇಂದು ಬೆಂಗಳೂರು ನಗರಕ್ಕೆ ವಿಶ್ವಮಾನ್ಯತೆ ಸಿಕ್ಕಿರೋದರ ಹಿಂದೆ ನಿಮ್ಮ ಕೊಡುಗೆಯೂ ಇದೆ. ಇಂದಿನ ಕಾರ್ಯಕ್ರಮವನ್ನು ನಡೆಸ್ತಿರೋದು ಪೌರಕಾರ್ಮಿಕರ ಮಕ್ಕಳು. ಪೌರಕಾರ್ಮಿಕರ ಮಕ್ಕಳು ಕೂಡ ದೇಶದ ಉನ್ನತ ಸ್ಥಾನಕ್ಕೆ ಏರಬೇಕು ಎನ್ನುವುದು ನಮ್ಮ ಕನಸು. ಪೌರಕಾರ್ಮಿಕರ ಬದುಕಿನಲ್ಲಿ ಇಂದು ದೊಡ್ಡ ಬದಲಾವಣೆ ಆಗ್ತಿದೆ. ಇವತ್ತಿನಿಂದ 12,692 ಪೌರಕಾರ್ಮಿಕರು ಸರ್ಕಾರದ ನೌಕರರಾಗಿ ನೇಮಕ ಆಗ್ತಿದ್ದೀರಿ. ಪರಮೊಚ್ಛ ನಾಯಕರು ಇದ್ದ ಜಾಗದಲ್ಲಿ ಇವತ್ತು ನಮ್ಮ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎಂದಿದ್ದಾರೆ.

ಖರ್ಗೆ ಅವರು ಕಾರ್ಮಿಕರ ಸಚಿವರಾಗಿದ್ದಾಗ ಮಾಡಿದ ಬದಲಾವಣೆಯ ಫಲ ಇಂದು ದೇಶ ನೋಡುತ್ತಿದೆ. ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಕೆಲಸಕ್ಕೆ ಪಾಲಿಕೆ ಬಜೆಟ್ನಲ್ಲಿ 600 ಕೋಟಿ ಮೀಸಲು ಇಡಲಾಗಿದೆ. ಇಷ್ಟು ಜನರಿಗೆ ಮಾತ್ರ ಅಲ್ಲ.. ಎಲ್ಲಾ ಪೌರಕಾರ್ಮಿಕರಿಗೂ ನಾವು ಕಾಯಂ ಮಾಡುತ್ತೇವೆ. ಎಲ್ಲಾ ಪೌರಕಾರ್ಮಿಕರರಿಗೂ ನಾವು ಹಂತ ಹಂತವಾಗಿ ದಾಖಲೆ ಪರಿಶೀಲಿಸಿ ನೇಮಕ ಮಾಡುತ್ತೇವೆ. ಇದು ನಿಮ್ಮ ಸರ್ಕಾರ.. ನಮ್ಮ ಸರ್ಕಾರ.. ನಮ್ಮೆಲ್ಲರ ಸರ್ಕಾರ ಎಂದಿರುವ ಡಿಸಿಎಂ, ಇದು ಕನಸು ಮಾತ್ರ ಅಲ್ಲ.. ಇದು ನಮ್ಮ ಸರ್ಕಾರದ ಸಂಕಲ್ಪ ಹಾಗೂ ಬದ್ಧತೆ. ಐಪಿಡಿ ಸಾಲಪ್ಪನ್ನವರನ್ನು ಈ ಕ್ಷಣ ನಾವು ನೆನಪಿಸಿಕೊಳ್ಳಲೇ ಬೇಕು. ಐಪಿಡಿ ಸಾಲಪ್ಪನವರ ವರದಿಯನ್ನು ನಾವು ಜಾರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

ಪೌರಕಾರ್ಮಿಕರ ಮಕ್ಕಳು ಕೂಡ ಐಎಎಸ್, ಕೆಎಎಸ್, ಇಂಜಿನಿಯರ್, ಡಾಕ್ಟರ್ ಗಳು ಆಗಬೇಕು, ಕೊರೋನಾ ಸಮಯದಲ್ಲಿ ಯೋಧರಂತೆ ನೀವು ಕೆಲಸ ಮಾಡಿದ್ದೀರಿ. ನಿಮ್ಮ ಪ್ರಾಣ ಪಣಕ್ಕಿಟ್ಟು ನೀವು ನಮ್ಮ ರಾಜ್ಯಕ್ಕಾಗಿ ಕೆಲಸ ಮಾಡಿದ್ದೀರಿ. ಪೌರಕಾರ್ಮಿಕರರನ್ನು ಯಾರೂ ಕೂಡ ಕೀಳಾಗಿ ಕಾಣಬಾರದು ಎಂದು ಮನವಿ ಮಾಡುತ್ತೇನೆ. ಬಿಬಿಎಂಪಿ ಕಮಿಷನರ್ ಗೆ ಎಷ್ಟು ಗೌರವ ಕೊಡ್ತೇವೆ ಅಷ್ಟೇ ಗೌರವ ಪೌರಕಾರ್ಮಿಕರಿಗೂ ಕೊಡಬೇಕು ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇದೊಂದು ಐತಿಹಾಸಿಕ ದಿನ.. ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ದೇಶದ ಇತಿಹಾಸದಲ್ಲಿ ಏಕಕಾಲದಲ್ಲಿ ಇಷ್ಟೊಂದು ಪೌರಕಾರ್ಮಿಕರ ಕೆಲಸ ಕಾಯಂ ಆಗಿರಲಿಲ್ಲ. ಹೀಗಾಗಿ ಇದೊಂದು ಐತಿಹಾಸಿಕ ಕಾರ್ಯಕ್ರಮ ಹಾಗೂ ಕೆಲಸ. ಕೇವಲ ಹೋರಾಟಕ್ಕೆ ಮಾತ್ರ ಸೀಮಿತ ಆಗಿ ಹೋಗಿತ್ತು. ಆದರೆ ಇಂದು ನನಸಾಗಿದೆ. ಸರ್ಕಾರಕ್ಕೆ ನನ್ನದೊಂದು ಸೂಚನೆ ಇದೆ, ಇನ್ನು ಮುಂದಕ್ಕೆ ಇನ್ನುಳಿದಿರುವ ಪೌರಕಾರ್ಮಿಕರನ್ನು ನೇಮಕಾತಿ ಮಾಡಬೇಕು ಎಂದಿದ್ದಾರೆ.