ಇಡೀ ದೇಶದ ವಿದ್ಯುನ್ಮಾನ ಮಾಧ್ಯಮಗಳು ಯುದ್ಧೋನ್ಮಾದವನ್ನು ದೇಶವ್ಯಾಪಿ ಬಿತ್ತುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಚೀನಾ ದೇಶದ ಯಾವಭಾಗವನ್ನು ಅತಿಕ್ರಮಿಸಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ 20 ಮಂದಿ ವೀರಯೋಧರು ಮಡಿದದ್ದು ಏಕೆ? ಹೇಗೆ? ಮತ್ತು ಎಲ್ಲಿ? ಎಂಬ ನಿವೃತ್ತ ಹಿರಿಯ ಸೈನ್ಯಾಧಿಕಾರಿಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಸುನಾಮಿಯೋಪಾದಿಯಲ್ಲಿ ಎದ್ದು ಬಂದಿರುವ ಪ್ರಶ್ನೆಗಳಿಗೆ 56 ಇಂಚಿನ ‘ಧೈರ್ಯ’(?)ದೆದೆಯ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಲು ಆಸಕ್ತಿ ತೋರಿಸಿಲ್ಲ. ಪ್ರಧಾನಿ ಮೋದಿ ಬಳಸಿದ ಪದಗಳಲ್ಲೇ ಆಟವಾಡಿರುವ ಪ್ರಧಾನಮಂತ್ರಿ ಕಾರ್ಯಾಲಯವು ಸ್ಪಷ್ಟನೆ ನೀಡುವ ಹತಾಶಯತ್ನ ಸಫಲವಾಗಿಲ್ಲ.
ಪ್ರಧಾನಿ ಮೋದಿ ಮತ್ತು ಮೋದಿ ನೇತೃತ್ವದ ಸರ್ಕಾರ ಈಗ ಅಡಕತ್ತರಿಯಲ್ಲಿ ಸಿಕ್ಕಿಬಿದ್ದಿದೆ. ರಕ್ಷಣಾ ಸಚಿವರು, ವಿದೇಶಾಂಗ ಸಚಿವರು ಮತ್ತು ಪ್ರಧಾನಿ ನರೇಂದ್ರಮೋದಿ ಈ ಮೂವರ ಹೇಳಿಕೆಗಳ ನಡುವೆ ತಾಳೆಯೇ ಆಗುತ್ತಿಲ್ಲ ಎಂದುದೇ ಮೋದಿ ಸರ್ಕಾರ ಏನೋ ಎಡವಟ್ಟು ಮಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯ ಸಮಸ್ಯೆ ಇರುವುದೇ ಇಲ್ಲಿ. ಏಕಮೇವಾದ್ವಿತೀಯನಂತೆ ಮೆರೆಯುವ ಹುಮ್ಮಸ್ಸು ಅವರದು. ಆರ್ಥಿಕ ವಿಷಯವಾಗಲೀ ರಕ್ಷಣೆಯ ವಿಷಯವಾಗಲೀ ವಿದೇಶಾಂಗ ನೀತಿಯ ವಿಷಯವಾಗಲೀ ತಜ್ಞರ ಸಲಹೆಯನ್ನು ಪಡೆಯುವ ಸಾಂವಿಧಾನಿಕ ಸತ್ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ತಾವೇ ಹೊಸದಾಗಿ ಏನನ್ನೋ ಮಾಡುವ ಉಮೇದಿನಲ್ಲಿರುತ್ತಾರೆ. ಈ ಉಮೇದು ಮತ್ತು ಹುಮ್ಮಸ್ಸು ಸಂಬಂಧಿಸಿದ ವಿಷಯಗಳಲ್ಲಿ ಪರಿಣತಿ ಇದ್ದರೆ ಮಾತ್ರ ಒಳ್ಳೆಯದು. ಇಲ್ಲದಿದ್ದರೆ, ಅದರಿಂದಾಗುವ ಅನಾಹುತಗಳಿಗೆ ಇಡೀ ದೇಶದ ನಾಗರಿಕರು ಪರಿತಪಿಸಬೇಕಾಗುತ್ತದೆ.
ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆ ಸಿಕ್ಕಿರುವುದೇ ತನಗೆ ಅನಿಸಿದ್ದನ್ನೆಲ್ಲ ಮಾಡಲು ಸಿಕ್ಕಿರುವ ಅಧಿಕಾರ ಎಂಬ ತಪ್ಪು ತಿಳುವಳಿಕೆ ಇರುವಂತಿದೆ. ಇಲ್ಲದಿದ್ದರೆ, ಪಾಕಿಸ್ತಾನದ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಲು, ಯುವಪ್ರೇಮಿಯಂತೆ ಅಚ್ಚರಿಯ ಭೇಟಿ ನೀಡುವ ದುಸ್ಸಾಹಸ ಮಾಡುತ್ತಿರಲಿಲ್ಲ. ಹಾಗೆಯೇ ಚೀನಾಕ್ಕೂ ಅತ್ತೆ ಮನೆಗೆ ಭೇಟಿ ನೀಡುವಂತೆ ವರ್ಷಕ್ಕೊಮ್ಮೆ ಭೇಟಿ ನೀಡುತ್ತಿರಲಿಲ್ಲ. ಇದು ವಿದೇಶಾಂಗ ನೀತಿಯ ಬಗ್ಗೆ ಮತ್ತು ವಿದೇಶಗಳಲ್ಲಿ ಭಾರತದ ಗೌರವ, ಘನತೆಯನ್ನು ಕಾಪಾಡುವ ಬಗ್ಗೆ ಒಂದೋ ಮೋದಿ ಅವರಿಗೆ ತಿಳುವಳಿಕೆ ಇಲ್ಲ ಅಥವಾ ಕಾಳಜಿ ಇದ್ದಂತಿಲ್ಲ.
ವಿದೇಶಾಂಗ ನೀತಿಯಷ್ಟೇ ಅಲ್ಲಾ, ಆರ್ಥಿಕ ವಿಷಯದಲ್ಲೂ ಮೋದಿ ಕೈಗೊಂಡ ನಿರ್ಧಾರಗಳು ಇಡೀ ದೇಶದ ಆರ್ಥಿಕತೆಗೆ ಚೇತರಿಸಿಕೊಳ್ಳಲಾರದಷ್ಟು ಪೆಟ್ಟುಕೊಟ್ಟಿದೆ. ನೋಟ್ ಬ್ಯಾನ್ ಮಾಡುವ ಮುನ್ನ ಮುಖ್ಯ ಆರ್ಥಿಕ ಸಲಹೆಗಾರರ ಸಲಹೆ ಪಡೆಯುವುದಿರಲಿ, ಅವರನ್ನೇ ಕತ್ತಲಲ್ಲಿಡಲಾಗಿತ್ತು. ಹೀಗಾಗಿ ಅರವಿಂದ್ ಸುಬ್ರಮಣಿಯನ್ ಅವಧಿಗೂ ಮುನ್ನವೇ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದರು. ಅರವಿಂದ್ ಸುಬ್ರಮಣಿಯನ್ ರಾಜೀನಾಮೆ ನೀಡಿ ಅಮೆರಿಕಕ್ಕೆ ತೆರಳಿದ ತಮ್ಮ ನೆಚ್ಚಿನ ಉದ್ಯೋಗ ಮುಂದುವರೆಸಿದರು. ಆದರೆ, ನೋಟ್ ಬ್ಯಾನ್ ನಂತರ ಆದ ಅಧ್ವಾನಗಳಿಂದಾಗಿ ದೇಶದ ಜಿಡಿಪಿ ಸುಮಾರು ಶೇ.2.5-3 ರಷ್ಟು ಕುಸಿಯಿತು. ಇದರಿಂದ ಸುಮಾರು 8 ಕೋಟಿ ಉದ್ಯೋಗ ನಷ್ಟವಾಯಿತು. ಅದಕ್ಕೆ ಹೊಣೆ ಹೊರುವವರು ಯಾರು? ಒಂದು ವೇಳೆ ಮೋದಿ ಆರ್ಥಿಕತಜ್ಞರ ಅಭಿಪ್ರಾಯ ಪಡೆದಿದ್ದರೆ, ತರ್ಕರಹಿತ ಮತ್ತು ಮೂರ್ಖತನದ ನೋಟ್ ಬ್ಯಾನ್ ನಿರ್ಧಾರ ಕೈಬಿಟ್ಟಿದ್ದರೆ, ದೇಶದ ಜಿಡಿಪಿ ಕೊರೊನಾ ಸಂಕಷ್ಟದ ನಡುವೆಯೂ ಶೇ.4-5ರ ಆಜುಬಾಜಿನಲ್ಲಿ ಅಭಿವೃದ್ಧಿ ದಾಖಲಿಸುವ ಶಕ್ತಿಹೊಂದುತ್ತಿತ್ತು.
ವಿದೇಶಾಂಗ, ಆರ್ಥಿಕತೆ ಒಂದುಕಡೆಗಿರಲಿ, ಸಾಮಾನ್ಯಾ ಆಡಳಿತದಲ್ಲೂ ಮೋದಿ ತಜ್ಞರ ಅಭಿಪ್ರಾಯ ಪಡೆಯುತ್ತಿಲ್ಲ. ಹೀಗಾಗಿಯೇ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಿ ಕೋಟ್ಯಂತರ ವಲಸೆ ಕಾರ್ಮಿಕರನ್ನು ನಿರ್ಗತಿಕರನ್ನಾಗಿ ಮಾಡಿದರು, ಬರಿಗಾಲಲ್ಲಿ ನೂರಾರು ಮೈಲುಗಳ ದೂರ ಬರಿಗಾಗಲಲ್ಲಿ ನಡೆವಂತೆ ಮಾಡಿದರು, ಈ ಸಂದರ್ಭದಲ್ಲಿ ಅದೆಷ್ಟೋ ಅಮಾಯಕರು ಪ್ರಾಣಕಳೆದುಕೊಂಡರು. ನೋಟ್ ಬ್ಯಾನ್ ಅವಧಿಯಲ್ಲೂ ಹೀಗೆ ಅಮಾಯಕರು ಪ್ರಾಣಕಳೆದುಕೊಂಡಿದ್ದರು. ಪ್ರಧಾನಿ ಮೋದಿಗೆ ಜನರ ಮತ್ತು ಸೈನಿಕರ ಪ್ರಾಣದ ಮೇಲೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಏಕೆಂದರೆ ಇಂತಹ ಸಂಭವನೀಯ ಅಘಾತಗಳನ್ನು ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಮಾಡುತ್ತಲೇ ಇಲ್ಲ.
ಮೋದಿ ಪ್ರಧಾನಿ ಹುದ್ದೆಗೆ ಏರಿದ ನಂತರವೂ ಪಕ್ಷದ ಎಲ್ಲಾ ಹೊಣೆಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಬಹುತೇಕ ಎಲ್ಲಾ ಚುನಾವಣೆಗಳನ್ನೂ ತನ್ನದೇ ನೇತೃತ್ವದಲ್ಲಿ ಗೆಲ್ಲಬೇಕೆಂಬ ಹಠ ತೊಟ್ಟಿದ್ದಾರೆ. ಇದು ದೇಶದ ದಿನ ನಿತ್ಯದ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೋದಿ ತಾನು ದೇಶಕ್ಕೆ ಪ್ರಧಾನಿ ಎಂಬುದನ್ನು ಮರೆತು ಬಿಜೆಪಿ ಪ್ರಧಾನಿ ಎಂದುಭಾವಿಸಿರುವಂತಿದೆ. ಪ್ರಧಾನಿ ಹುದ್ದೆಗೇರಿದ ಮೇಲೆ ರಾಜ್ಯಗಳ ಚುನಾವಣೆ ಕುರಿತಂತೆ ಚಿಂತಿಸಿದರೆ ಆಗ ಪ್ರಧಾನಿ ಹುದ್ದೇಗೇರಿದ ವ್ಯಕ್ತಿ ಕೇವಲ ರಾಜಕಾರಣಿಯಾಗಿಯೇ ಉಳಿಯುತ್ತಾನಾಗಲೀ, ರಾಜತಾಂತ್ರಿಕನಾಗಲಾರ. ಮೋದಿ ಅವರು ಎಂದೂ ರಾಜತಾಂತ್ರಿಕನಂತೆ ಯೋಜಿಸುವ ಗೋಚಿಗೆ ಹೋದಂತಿಲ್ಲ. ಅದರ ದುಷ್ಪರಿಣಾಮವನ್ನು ಇಡೀ ದೇಶವೇ ಅನುಭವಿಸುತ್ತಿದೆ.
ಮೋದಿ ಅಧಿಕಾರಕ್ಕೆ ಬಂದ ನಂತರ ಈ ದೇಶಕ್ಕೆ ಎದುರಾಗಿರುವ ಅತಿದೊಡ್ಡ ಸಮಸ್ಯೆ ಎಂದರೆ ವಿಶ್ವಾಸದ ಕೊರತೆ! ಮೋದಿ ಸರ್ಕಾರ ಪ್ರಕಟಿಸುವ ಅಭಿವೃದ್ಧಿ ಕುರಿತಾದ ಅಂಕಿ ಅಂಶಗಳನ್ನು ವಿಶ್ವಬ್ಯಾಂಕ್, ಐಎಂಎಫ್, ಜಾಗತಿಕ ರೇಟಿಂಗ್ ಏಜೆನ್ಸಿಗಳು ಅನುಮಾನದಿಂದಲೇ ನೋಡುತ್ತಿವೆ. ಅಷ್ಟೇ ಏಕೆ ಬಿಜೆಪಿ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರೀಯ ಸಾಂಖ್ಯಿಕ ಇಲಾಖೆ ಪ್ರಕಟಿಸಿದ್ದ ಜಿಡಿಪಿ ಕುರಿತ ಅಂಕಿ ಅಂಶಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಇದೇ ಕೇಂದ್ರೀಯ ಸಾಂಖ್ಯಿಕ ಇಲಾಖೆ ಪ್ರಕಟಿಸಿದ್ದ ವಿವಿಧ ಆರ್ಥಿಕ ವಲಯಗಳ ಅಭಿವೃದ್ಧಿ ಕುರಿತಾದ ಅಂಕಿ ಅಂಶಗಳ ವಿಶ್ವಾಸಾರ್ಹತೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಸಿ. ರಂಗರಾಜನ್ ಅವರು ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟೇ ಏಕೆ ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯಲ್ಲಿದ್ದಾಗಲೇ ಮೋದಿ ನೇತೃತ್ವದ ಸರ್ಕಾರದ ಅಸಹಿಷ್ಣತಾ ನೀತಿಯು ಆರ್ಥಿಕ ಅಭಿವೃದ್ಧಿಗೆ ಅಡಚಣೆ ಆಗುತ್ತದೆ ಎಂಬುದನ್ನು ಹೇಳಿದ್ದರು.
ಪುಲ್ವಾಮಾ ಘಟನೆಯ ನಂತರ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರ ಭಾವನೆಯನ್ನು ಎಲ್ಲಿ ಯಾವಾಗ ಕೆರಳಿಸಬೇಕು, ಮಾಧ್ಯಮಗಳನ್ನು ಯಾವಾಗ ಹುರಿದುಂಬಿಸಬೇಕು ಎಂಬುದರ ಕಲೆ ಕರಗತವಾಗಿದೆ. ಹೀಗಾಗಿ ಚೀನಾ ಸೈನಿಕರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ನಮ್ಮ ಸೈನಿಕರನ್ನು ‘ಬಿಹಾರಿ’ಗಳು ಎಂಬಂತೆ ಉದ್ದೇಶಪೂರ್ವಕವಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಾರಣ ಏನೆಂಬುದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ.
ಭಾರತ- ಚೀನಾ ಗಡಿಯಲ್ಲಿ ಮಡಿದ ಸೈನಿಕರ ಕುರಿತಂತೆ ಪ್ರಧಾನಿ ನೀಡಿದ ಹೇಳಿಕೆಯು ಇಡೀ ದೇಶದ ಜನರನ್ನು ಗೊಂದಲಕ್ಕೀಡು ಮಾಡಿದೆ. ಪ್ರಧಾನಿ ಮೋದಿಯ ಉದ್ದೇಶವೂ ಜನರನ್ನು ಗೊಂದಲಕ್ಕೀಡುವುದಾಗಿದೆ. ಪ್ರಧಾನಿ ಹೇಳಿದ್ದನ್ನೆಲ್ಲ ನಂಬುವ ಅಭಿಮಾನಿಗಳು, ಮೋದಿ ಹೇಳಿದ್ದೇ ಸತ್ಯ ಎಂದು ಪ್ರಚಾರ ಮಾಡುತ್ತಾರೆ. ಮೋದಿ ಹೇಳುವ ಸುಳ್ಳುಗಳನ್ನು ಪ್ರಶ್ನಿಸುವವರಿಗೆ ಅವರ ಅಭಿಮಾನಿಗಳೇ ದೇಶದ್ರೋಹಿಗಳ ಪಟ್ಟಕಟ್ಟಿಬಿಡುತ್ತಾರೆ.
ಈ ಹೊತ್ತಿನಲ್ಲಿ ಮೋದಿಯವರ ಉದ್ದೇಶವಾದರೂ ಏನು? ಪ್ರಧಾನಿ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ಸರ್ಕಾರ ವಿಶ್ವಾಸಾರ್ಹತೆ ಪಾತಾಳಕ್ಕೆ ಇಳಿಯುತ್ತಿದೆ. ದೇಶ ತೀವ್ರವಾದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ವಿದೇಶಾಂಗ ನೀತಿ ನಿರ್ವಹಣೆಯಲ್ಲಿ ದೇಶ ಹಿಂದೆಂದೂ ಕಂಡುಕೇಳರಿಯಂತಹ ವೈಫಲ್ಯವನ್ನು ಕಂಡಿದೆ. ದೇಶದ ಆರ್ಥಿಕತೆ ಕುಸಿತದ ಹೊಣೆಯನ್ನು ಕೊರೊನಾ ಸೋಂಕಿನ ಹೇಗಲಿಗೇರಿಸಿದ ಪ್ರಧಾನಿ ಮೋದಿ, ಕೊರೊನಾ ಸೋಂಕು ನಿಯಂತ್ರಿಸುವಲ್ಲಿನ ವೈಫಲ್ಯವನ್ನು ಭಾರತ-ಚೀನಾ ಗಡಿ ಯುದ್ಧದ ಮೂಲಕ ಮರೆಸುವ ಪ್ರಯತ್ನ ಮಾಡುತ್ತಿದ್ದಾರೆ.
ದೇಶದ ಸುರಕ್ಷತೆ ವಿಷಯ ಬಂದಾಗ ಜನತೆ ಹೇಗೂ ಸರ್ಕಾರವನ್ನು ಬೆಂಬಲಿಸುತ್ತಾರೆ. ಆ ನಂಬಿಕೆಯಿಂದಲೇ ಭಾರತ-ಚೀನಾ ಗಡಿ ಕುರಿತಂತೆ ಮೋದಿ ಗೊಂದಲದ ಹೇಳಿಕೆ ನೀಡಿದ್ದಾರೆ. ಇಡೀ ದೇಶದ ಜನತೆ ಮೋದಿ ಹೇಳಿದ್ದು ಸುಳ್ಳೋ ನಿಜವೋ? ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದು ಸುಳ್ಳೋ ನಿಜವೋ? ವಿದೇಶಾಂಗ ಸಚಿವ ಜಯಶಂಕರ್ ಹೇಳಿದ್ದು ಸುಳ್ಳೋ ನಿಜವೋ? ಚೀನಾ, ಅಮೆರಿಕಾ ಹೇಳಿದ್ದು ಸುಳ್ಳೋ ನಿಜವೋ? ಎಂದು ತಲೆಕೆಡಿಸಿಕೊಂಡು ಗೊಂದಲದಲ್ಲಿ ಮುಳುಗುತ್ತಾರೆ. ಅಷ್ಟರಲ್ಲಿ ಮೋದಿ ಸರ್ಕಾರದ ಆರ್ಥಿಕ ವೈಫಲ್ಯಗಳು, ಆಡಳಿತಾತ್ಮಕ ವೈಫಲ್ಯಗಳು ಹಿಂಬದಿಗೆ ಸರಿಯುತ್ತವೆ.
ಪ್ರಧಾನಿ ಮೋದಿ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕುಸಿದರೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸಿಕೊಂಡು ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಾರೆ. ದರ ಏರಿಕೆ ಬಗ್ಗೆ ಜನರ ದನಿಯನ್ನೇ ಉಡುಗಿಸಿಬಿಟ್ಟಿದ್ದಾರೆ. ಚೀನಾ-ಭಾರತದ ಗಡಿ ವಿಷಯದ ಬಗ್ಗೆ ಜನತೆಗೆ ಒಂದು ಸ್ಪಷ್ಟತೆ ಬಂದು ಮೋದಿ ಏನೋ ಗಂಡಾಂತರ ಮಾಡಿದ್ದಾರೆ ಎಂಬುದು ಅರಿವಾಗುವಷ್ಟರ ಹೊತ್ತಿಗೆ ಚಾಣಾಕ್ಷ ಮೋದಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತೊಂದು ವಿಷಯವನ್ನು ಮುನ್ನೆಲೆಗೆ ತರುತ್ತಾರೆ. ಅಂದಹಾಗೆ ಅಕ್ಟೋಬರ್ ತಿಂಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಗೂ ಮೋದಿಯೇ ಪ್ರಚಾರದ ನೇತೃತ್ವ ವಹಿಸಲಿದ್ದಾರೆ!