“ಕಾರ್ಯಾಂಗ, ನ್ಯಾಯಾಂಗ, ಆಡಳಿತ ವರ್ಗ ಹಾಗೂ ಸಶಸ್ತ್ರ ಪಡೆಗಳನ್ನ ಟೀಕಿಸುವುದನ್ನ ನಿಯಂತ್ರಿಸಲಾಗದು. ಒಂದು ವೇಳೆ ಅದನ್ನ ನಿಯಂತ್ರಿಸಿದರೆ ನಾವು ಪ್ರಜಾಪ್ರಭುತ್ವದ ಬದಲು ಪೊಲೀಸ್ ರಾಜ್ಯ ಆಗಿ ಬದಲಾಗುತ್ತೇವೆ” ಅಂತಾ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ದೀಪಕ್ ಗುಪ್ತಾ ಹೇಳಿದ್ದಾರೆ. ಅಹ್ಮದಾಬಾದ್ ನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ವಕೀಲರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನ ನೀಡಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ತಿಳುವಳಿಕೆ ಸ್ವಾತಂತ್ರ್ಯ.. ಇದೆಲ್ಲಕ್ಕೂ ಮುಖ್ಯವಾಗಿ ಭಿನ್ನಾಭಿಪ್ರಾಯದ ಸ್ವಾತಂತ್ರ್ಯ. ಪ್ರತಿಯೊಂದು ಸಮಾಜವೂ ತನ್ನದೇ ಆದ ನಿಯಮಗಳನ್ನ ಹೊಂದಿವೆ. ತನ್ನ ಹಳೆಯ ನಿಯಮ ಮತ್ತು ಸಂಪ್ರದಾಯಗಳಿಗೆ ಅಂಟಿಕೊಂಡಾಗ ಅಂತಹ ಸಮಾಜದ ಅಭಿವೃದ್ಧಿ ಅನ್ನೋದು ಕ್ಷೀಣಿಸುತ್ತದೆ” ಎಂದರು.
“ಸಮಾಜದ ಒಂದಿಷ್ಟು ವಿಚಾರಗಳು ಒಪ್ಪಿಕೊಳ್ಳದೇ ಇದ್ದಾಗ ಹೊಸ ಚಿಂತಕರು ಹುಟ್ಟಿಕೊಳ್ಳುತ್ತಾರೆ. ಒಂದೇ ಮಾರ್ಗದಲ್ಲಿ ಸಂಚರಿಸುತ್ತಲೇ ಇದ್ದರೆ, ಅಲ್ಲಿ ಹೊಸ ಮಾರ್ಗಗಳು ಹುಟ್ಟಿಕೊಳ್ಳಲು ಸಾಧ್ಯವಾಗದು. ಅದೇ ರೀತಿ ಓರ್ವ ವ್ಯಕ್ತಿ ಎಲ್ಲಿಯವರೆಗೆ ಹಳೆಯ ಸಂಪ್ರದಾಯಗಳನ್ನ ಪ್ರಶ್ನಿಸುವುದಿಲ್ಲವೋ, ಅಲ್ಲಿವರೆಗೆ ಹೊಸ ಚಿಂತನೆಗಳು ಹುಟ್ಟಿಕೊಳ್ಳದು ಮತ್ತು ಮನೋ ವಿಕಾಸಗೊಳ್ಳಲು ಸಾಧ್ಯವಾಗದು. ಹಳೆಯ ಸಂಪ್ರದಾಯಗಳನ್ನ ಪ್ರಶ್ನಿಸಿದಾಗ ಹೊಸ ಚಿಂತನೆಗಳು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಬದಲಾವಣೆ ಆಗಬಹುದು” ಅಂತಾ ತಿಳಿಸಿದರು.
“ಒಂದು ವೇಳೆ ಸರಕಾರದ ವಿರುದ್ಧ ಮಾತನಾಡಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನ ʼದೇಶದ್ರೋಹಿʼ ಎನ್ನುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಭಾರತೀಯ ಪ್ರಜೆಯಾದವನಿಗೆ ಸರಕಾರವನ್ನ ಟೀಕಿಸುವ ಎಲ್ಲಾ ಹಕ್ಕುಗಳಿವೆ. ಅಂತಹ ಟೀಕೆಗಳನ್ನ ʼದೇಶದ್ರೋಹʼ ಎಂದು ಭಾವಿಸಲು ಸಾಧ್ಯವಾಗದು. ಏಕೆಂದರೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಒಬ್ಬ ವ್ಯಕ್ತಿಗೆ ದೇಶದ ಪ್ರಜಾಪ್ರಭುತ್ವ ನೀಡಿರುವ ಮೂಲಭೂತ ಹಕ್ಕಾಗಿದೆ” ಎಂದರು.
“ಅಲ್ಲದೇ ನಾವು ಏನಾದರೂ ಸರಕಾರವನ್ನ ಟೀಕಿಸುತ್ತಿರುವ ವಿದ್ಯಾರ್ಥಿಗಳನ್ನ ಹಾಗೂ ಸಂಸ್ಥೆಗಳನ್ನ ನಿಯಂತ್ರಿಸ ಹೊರಟರೆ, ನಾವು ಪ್ರಜಾಪ್ರಭುತ್ವದ ಬದಲಿಗೆ ಪೊಲೀಸ್ ರಾಜ್ಯವಾಗಿ ಬದಲಾಗುತ್ತೇವೆ” ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗಿನ ವರುಷಗಳಲ್ಲಿ ಆಳುವ ಸರಕಾರದ ಕಾನೂನುಗಳನ್ನ ವಿರೋಧಿಸಿದ ಕಾರಣಕ್ಕಾಗಿ ಹಲವು ವಿದ್ಯಾರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ʼದೇಶದ್ರೋಹʼ ದ ಪ್ರಕರಣ ದಾಖಲಿಸಲಾಗಿತ್ತು. ಅದರಲ್ಲೂ ಮೂರು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಜೈಲಿನಿಂದ ಹೊರಬರಲು ಸಾಧ್ಯವಾಗದೇ ಹೋದ ಗರ್ಭಿಣಿ ಸಫೂರಾ ಝರ್ಗಾರ್ ಪ್ರಕರಣಗಳು ಜಸ್ಟಿಸ್ ದೀಪಕ್ ಗುಪ್ತಾ ಹೇಳಿಕೆಯಿಂದ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಅನ್ನೋದು ಗಮನಾರ್ಹ.