“ಪ್ರೀತಿಗಾಗಿ ಪ್ರತಿಭಟನೆ ! ಜಾತಿ-ಧರ್ಮ-ವರ್ಗ-ಲಿಂಗ-ಲೈಂಗಿಕತೆ ಕಟ್ಟಿರುವ ಗೋಡೆಗಳನ್ನು ಹೊಡೆಯೋಣ” ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕದ ಮಹಿಳಾ, ದಲಿತ, ಮುಸ್ಲಿಂ, ಲಿಂಗತ್ವ ಹಾಗು ಲೈಂಗಿಕ ಅಲ್ಪಸಂಖ್ಯಾತರ, ಮಾನವ ಹಕ್ಕುಗಳ ಸಂಘಟನೆಗಳ ಜಂಟಿ ಆಂದೋಲನ ಸಮಿತಿಯು ಬಿಜೆಪಿ ಸರ್ಕಾರ ತರ ಹೊರಟಿರುವ ಕಾನೂನಿನ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದೆ.
ಡಿಸೆಂಬರ್ 01, ಮಧ್ಯಾಹ್ನ 3.30 ಘಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಜರುಗಳಿದೆ ಎಂದು ಆಂದೋಲನ ಸಮಿತಿಯ ಪತ್ರಿಕಾ ಪ್ರಕಟನೆಯು ತಿಳಿಸಿದೆ.
#loveisnotacrime #ಪ್ರೀತಿಸೋದುತಪ್ಪಾ pic.twitter.com/RUPNi4aBDI
— ಪ್ರೀತಿಸೋದು ತಪ್ಪಾ? (@ourright2love) November 30, 2020
ʼಲವ್ ಜಿಹಾದ್ ನಂತಹ ಇಲ್ಲದಿರೋ ಬಿಕ್ಕಟ್ಟುಗಳು, ಅದನ್ನು ನಿಯಂತ್ರಿಸಲು ತರಲಿರುವ ಕೋಮುವಾದಿ ಕಾನೂನುಗಳನ್ನು ತಿರಸ್ಕರಿಸೋಣ! ಎಂದು ಕರೆ ನೀಡಿರುವ ಆಂದೋಲನ ಸಮಿತಿಯು, ಕೋವಿಡ್ ಸೋಂಕಿನಿಂದ ದೇಶದ ಬಡಜನರು, ಶೋಷಿತ ಸಮುದಾಯದವರು ನರಳುತ್ತಿದ್ದಾರೆ. ಕರ್ನಾಟಕದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ, ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ರೈತರು ಮತ್ತು ಕಾರ್ಮಿಕರು ಸಂಸತ್ ರೂಪಿಸಿರುವ ಜನ ವಿರೋಧಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೂಲಭೂತ ಸಮಸ್ಯೆಗಳನ್ನು ಎದುರಿಸಲು ಕ್ರಮ ತೆಗೆದುಕೊಳ್ಳುವ ಬದಲು, ಜನರ ಕೋಪವನ್ನು ಬೇರೆಡೆ ಸೆಳೆಯುವುದಕ್ಕಾಗಿ ರಾಜಕರಣಿಗಳು ಇಲ್ಲದಿರೋ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದ್ದಾರೆ. ಅದರಲ್ಲಿ ‘ಲವ್ ಜಿಹಾದ್’ ಒಂದು ಎಂದು ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ಪ್ರಕಾರ ಯುವತಿಯರು ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಯಾರನ್ನು ಪ್ರೀತಿಸಬೇಕು/ಪ್ರೀತಿಸ ಬಾರದು ಎನ್ನುವ ಬಗ್ಗೆ ಕಾನೂನನ್ನು ತರಲು ಹೊರಟಿದ್ದಾರೆ. ನಮ್ಮ ಕರ್ನಾಟಕದಲ್ಲೂ ಸಹ ಕೆಲವು ಬಿಜೆಪಿ ನಾಯಕರು ಇಂತಹ ಕಾನೂನು ತರಬೇಕು ಎಂದಿದ್ದಾರೆ. ಪ್ರೀತಿಸುವುದು ಅಪರಾಧವಲ್ಲ ! ಈ ಕಾನೂನು ಅಂತರ-ಧರ್ಮದ ವಿವಾಹಗಳನ್ನು ನಿಬಂ೯ಧಿಸಲು ಹೊರಟಿರುವ ಕಾನೂನು. ಆಷ್ಟೇ ಅಲ್ಲ ಈ ಕಾನೂನು ಮಹಿಳೆಯರ ರಕ್ಷಣೆಯ ಹೆಸರಲ್ಲಿ ಮಹಿಳೆಯರು ಯಾರನ್ನ ಪ್ರೀತಿಸಬಹುದು ಮತ್ತು ಯಾರನ್ನ ಮದುವೆ ಯಾಗಬಹುದು ಎಂದು ನಿಯಂತ್ರಿಸುವ ಹುನ್ನಾರವನ್ನು ಹೊಂದಿದೆ ಎಂದು ಆರೋಪಿಸಿದೆ.
Also Read: ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯ ನಿರಾಕರಿಸುವ ಷಡ್ಯಂತ್ರ್ಯ -AILAJ
“ಬಸವಣ್ಣ, ಪೆರಿಯಾರ್, ಗಾಂಧಿ, ಅಂಬೇಡ್ಕರ್ ಮತ್ತು ಇತರ ನಾಯಕರು, ನಾಯಕಿಯರು ಅಂತರ್ಜಾತಿ ಮತ್ತು ಅಂತರ್ಧಮ್ರ ಸಂಬಂಧಗಳು ಮುಖ್ಯ, ಇದರಿಂದ ಬೆಳೆಯುವ ಭಾತೃತ್ವದಿಂದಲೇ ಸಮಾನತಾವಾದ ಸಮಾಜವನ್ನು ಕಟ್ಟಲು ಸಾಧ್ಯವೆಂದು ಹೇಳಿದ್ದಾರೆ. ಹಾಗಿರಬೇಕಾದರೆ ಇಂತಹ ಕಾನೂನುಗಳ ಮೂಲಕ ಸಮಾಜವನ್ನು ಇನ್ನಷ್ಟು ವಿಭಜನೆ ಮಾಡಲು ಹೊರಟಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇದು ಮುಸ್ಲಿಂ ಸಮುದಾಯದ ನಾಗರಿಕತೆಗೆ ಇನ್ನಷ್ಟು ಧಕ್ಕೆ ತರುವಂತಹ ಕಾಯ್ದೆಯು ಹೌದು. ‘ಜಿಹಾದ್’ ಪದವನ್ನು ಉಪಯೋಗಿಸಿ ಈ ಸಮುದಾಯವನ್ನು ಇನ್ನು ದ್ವೇಷಕ್ಕೆ ಒಳಪಡಿಸುವಂತಹ ಕಾರ್ಯತಂತ್ರ ಇದಾಗಿದೆ. ಇಷ್ಟೆಲ್ಲಾ ದುಷ್ಪರಿಣಾಮವಿರೋ ಈ ಕಾನೂನಿಗೆ ಯಾವುದಾದರೂ ಆಧಾರವಿದೆಯೇ? ಇಲ್ಲ! ಫೆಬ್ರವರಿ 2020 ರಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ದೇಶದಲ್ಲಿ ಯಾವುದೇ ‘ಲವ್ ಜಿಹಾದ್ ಪ್ರಕರಣಗಳು ಇಲ್ಲ ಎಂದು ಸರ್ಕಾರವೇ ತಿಳಿಸಿತು. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲೂ ಸಹ ‘ಲವ್ ಜಿಹಾದ್ ಎಂಬುವುದು ಇಲ್ಲವೇ ಇಲ್ಲ ಎಂದು ಸರ್ಕಾರದ ಪರ ವಕೀಲರೇ ಹೇಳಿದ್ದಾರೆ. ಹಾಗಾಗಿ ಅಪ್ಪಟ್ಟ ಸುಳ್ಳು ಸುದ್ದಿ ಹಬ್ಬಿಸಿ, ಜನಸಾಮಾನ್ಯರಲ್ಲಿ ಭಯ ಹುಟ್ಟಿಸುವುದಕ್ಕೆ ಹೊರಟ್ಟಿದ್ದಾರೆ ಈ ಪ್ರೀತಿ ವಿರೋಧಿ ಸರ್ಕಾರಗಳು” ಎಂದು ತಿಳಿಸಿದೆ.

For love, for our right to choose.#right2love #ಪ್ರೀತಿಸೋದುತಪ್ಪಾ https://t.co/NnWcxIrFoZ
— Swathi/ಸ್ವಾತಿ (@SwathiShivanand) November 30, 2020
ನಮ್ಮ ಪ್ರೀತಿಯ ಹಕ್ಕುಗಳ ಬಗ್ಗೆ ಸಂವಿಧಾನ ಏನು ಹೇಳುತ್ತದೆ, ನ್ಯಾಯಲಯಗಳು ಏನು ಹೇಳಿವೆ? ದೇಶದ ಸರ್ವೋಚ್ಚ ನ್ಯಾಯಾಲಯ, ವಯಸ್ಸಿಗೆ ಬಂದ ಪ್ರತಿ ಪ್ರಜೆಗೆ, ತಮ್ಮ ಬಾಳ ಸಂಗಾತಿ ಯಾರೆಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ, ಇದನ್ನು ನಿಬಂ೯ಧಿಸುಲು ಸರ್ಕಾರ ಅಥವಾ ಬೇರೆ ಯಾರಿಗೆ ಸಹ ಹಕ್ಕಿಲ್ಲ ಮತ್ತು ದೇಶದಲ್ಲಿ ನಡೆಯುವ ಅಂತರ್ ಜಾತಿ-ಧರ್ಮ ವಿವಾಹದ ಜೋಡಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕಾಗಿದೆ ಎಂದು ಘೋಷಿಸಿದೆ. ಈ ಆಧುನಿಕ ಕಾಲದಲ್ಲೂ ಸಹ ಅಂತರ್-ಜಾತಿ ಮದುವೆಯಾದವರನ್ನು ಸಮಾಜಕ್ಕೆ ಅವಮಾನ ಮಾಡಿದರೆಂಬ ಹೆಸರಿನಲ್ಲಿ ಕೊಲ್ಲಲ್ಪಡುತ್ತಿರುವ ಈ ಸಂಧರ್ಭದಲ್ಲೂ ಸಹ ಸರ್ಕಾರಗಳು ಇಂತಹ ಕೋಮುವಿರೋದಿ ಕಾನೂನುಗಳನ್ನು ತರುತ್ತಿದೆ ಎಂದರೆ, ಸರ್ಕಾರದ ವೈಫಲ್ಯತೆಗೆ ಕೈಗನ್ನಡಿ ಹಿಡಿದಂತಾಗಿದೆ.
ಹಾಗೆಯೇ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಸಹ ತಮ್ಮ ಬಾಳ ಸಂಗತಿಯನ್ನು ಆಯ್ಕೆ ಅಥವಾ/ಹಾಗೂ ಮದುವೆ ಮಾಡಿಕೊಳ್ಳಲು ಇಚ್ಚಿಸುತ್ತಾರೆ, ಮದುವೆ ಮಾಡಿಕೊಂಡಿರುವವರು ಇದ್ದಾರೆ. ಹೀಗಿರುವಾಗ ಈ ಸಮುದಾಯದವರಿಗೆ ತಾವು ಇಚ್ಚಿಸುವಂತೆ ಮದುವೆ ಮಾಡಿಕೊಳ್ಳಲು ಅನುವು ಮಾಡಿಕೊಡುವುದನ್ನು ಬಿಟ್ಟು ಸರ್ಕಾರ ಪ್ರೀತಿಯ ಮೇಲೆ ಇನ್ನೂ ಹೆಚ್ಚು ನಿಬಂಧವನ್ನು ಹೇರುತ್ತಿದೆ.
Also Read: ಕಾಲ್ಪನಿಕ ಲವ್ ಜಿಹಾದ್ ಮೂಲಕ ಯಶಸ್ವಿ ಅಪಪ್ರಚಾರ ನಡೆಸುತ್ತಿರುವ ಸಂಘ ಪರಿವಾರ
ಇದು ಮಹಿಳೆಯರ, ವಿಶೇಷವಾಗಿ ಹಿಂದೂ ಧರ್ಮದ ಮಹಿಳೆಯರ, ಸ್ವಯಂಪ್ರೇರಿತ ಆಯ್ಕೆಗಳನ್ನು ತುಳಿದು, ಪಿತೃಪ್ರಧಾನ, ಜಾತಿಪ್ರಧಾನದ ದೌಲತ್ತಿಗೆ ತಲೆ ಬಾಗಿಸಿವಂತೆ ಮಾಡುವ ಕಾನೂನು ಮಹಿಳೆಯರೇಕೆ ತಮ್ಮ ವೈಯಕ್ತಿಕ ಆಸೆಗಳನ್ನು, ನಾಗರೀಕ ಹಕ್ಕುಗಳನ ತ್ಯಾಗ ಮಾಡಬೇಕು? ಇದನ್ನು ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ. ಜಾತಿ-ಧರ್ಮ-ಲಿಂಗ-ಲೈಂಗಿಕತೆ ಎನ್ನುವ ಬೇಧ-ಭಾವಗಳನ್ನು ಬಿಟ್ಟು ಎಲ್ಲರಿಗೂ ಸ್ವಾತಂತ್ರವುಳ್ಳ ಮತ್ತು ಘನತೆಯುಳ್ಳ ಸಮಾಜ ನಿರ್ಮಾಣ ಮಾಡಬೇಕೆಂಬುವುದು ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಎಲ್ಲ ಸ್ವತಂತ್ರ ಹೋರಾಟಗಾರರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವ ಕಡೆ ನಡೆಯೋಣ, ದ್ವೇಷ ಬಿಟ್ಟು ಪ್ರೀತಿಯನ್ನು ಆಯ್ಕೆ ಮಾಡೋಣ ಎಂದು ಕರ್ನಾಟಕದ ಮಹಿಳಾ, ದಲಿತ, ಮುಸ್ಲಿಂ, ಲಿಂಗತ್ವ ಹಾಗು ಲೈಂಗಿಕ ಅಲ್ಪಸಂಖ್ಯಾತರ, ಮಾನವ ಹಕ್ಕುಗಳ ಸಂಘಟನೆಗಳ ಜಂಟಿ ಆಂದೋಲನ ಸಮಿತಿಯು ಹೋರಾಟಕ್ಕೆ ಕರೆ ಕೊಟ್ಟಿದೆ.
Also Read: ಲವ್ ಜಿಹಾದ್: ಮಹಿಳೆಯ ಆಯ್ಕೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಷಡ್ಯಂತ್ರ






