ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ನೆರೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬರೆದ ಪತ್ರದಲ್ಲಿ 10 ಸಾವಿರ ಕೋಟಿ ವಿಶೇಷ ಅನುದಾನ ನೀಡುವಂತೆ ಕೋರಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ನಷ್ಟವುಂಟಾಗಿದೆ ಎಂದಿರುವ ಸಿಎಂ ಯಡಿಯೂರಪ್ಪ, ಪರಿಸ್ಥಿತಿಯನ್ನು ಎದುರಿಸಲು ಹಣದ ಕೊರತೆಯಿಲ್ಲ ಎಂದು ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭೀಮಾ, ಕೃಷ್ಣ ಮತ್ತು ಅದರ ಉಪನದಿಗಳ ಪ್ರವಾಹದಿಂದಾಗಿ ಸುಮಾರು 6.3 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ ಎಂದು ಸರ್ಕಾರದ ಪ್ರಾಥಮಿಕ ಅಂದಾಜುಗಳು ಸೂಚಿಸುತ್ತವೆ.
“ವೈಮಾನಿಕ ಸಮೀಕ್ಷೆಯ ನಂತರ ನಾವು ಪ್ರವಾಹದ ನಷ್ಟದ ಪ್ರಮಾಣವನ್ನು ನಿರ್ಣಯಿಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಪ್ರವಾಹದ ಪ್ರಮಾಣ ಹೆಚ್ಚು” ಎಂದು ಯಡಿಯುರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಮೇಲೆ ಪರಿಣಾಮ ಬೀರಿದ 2019 ರ ಪ್ರವಾಹವು ನೂರು ವರ್ಷಗಳಲ್ಲಿ ಅತಿ ಭೀಕರವಾಗಿದೆ.
ಸಂತ್ರಸ್ತರ ಕಲ್ಯಾಣಕ್ಕಾಗಿ ರಾಜ್ಯವು ಕೇಂದ್ರದಿಂದ ಸಹಾಯವನ್ನು ಕೋರಿದೆ, ಪರಿಹಾರ ಮತ್ತು ಪುನರ್ವಸತಿಗೆ ಯಾವುದೇ ಹಣಕಾಸಿನ ಅಡಚಣೆಗಳಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಯಡಿಯೂರಪ್ಪ 10,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಕೋರಿದ್ದಾರೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ತೀವ್ರ ಮಳೆಯಿಂದಾಗಿ ಸುಮಾರು 21,500 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಆಗಸ್ಟ್ 1 ರಿಂದ ಸೆಪ್ಟೆಂಬರ್ 15 ರ ನಡುವಿನ ಮೊದಲ ಪ್ರವಾಹದಲ್ಲಿ 9,441 ಕೋಟಿ ರೂ. ನಷ್ಟವಾಗಿದ್ದು, ಸೆಪ್ಟೆಂಬರ್ ಎರಡನೇ ಹದಿನೈದು ದಿನಗಳಲ್ಲಿ 5,668 ಕೋಟಿ ರೂ. ನಷ್ಟವಾಗಿದೆ ಹಾಗೂ ಅಕ್ಟೋಬರ್ 10 ರಂದು ಪ್ರಾರಂಭವಾದ ಮಳೆಯಿಂದಾಗಿ ಸುಮಾರು 6,500 ಕೋಟಿ ರೂ. ನಷ್ಟವಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.