ತಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ ಬಂದಾಗ ಎಂತಹ ಗಟ್ಟಿ ಮನುಷ್ಯನೂ ಮೆತ್ತಗಾಗುತ್ತಾನೆ. ರಾಜಕೀಯ ಕ್ಷೇತ್ರದಲ್ಲಿರುವವರೂ ಇದಕ್ಕೆ ಹೊರತಲ್ಲ ಎಂಬುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಉದಾಹರಣೆ. ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ, ತನ್ನ ಮಾತು ನಡೆಯದಿದ್ದರೆ ನನ್ನ ದಾರಿ ನನಗೆ ಎಂಬಂತೆ ಇರುತ್ತಿದ್ದ ಯಡಿಯೂರಪ್ಪ ಅವರು ಈ ಕಾರಣಗಳಿಂದಾಗಿಯೇ ಮಾಧ್ಯಮಗಳಿಂದ ರಾಜಾಹುಲಿ ಎಂದು ಕರೆಸಿಕೊಳ್ಳುತ್ತಿದ್ದಾರೆ. ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು, ಕೇವಲವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಬಿಜೆಪಿಯನ್ನೇ ತೊರೆದು ಹೊಸ ಪಕ್ಷ ಕಟ್ಟಿದ್ದರು. ಬಳಿಕ ಬದಲಾದ ಸನ್ನಿವೇಶದಲ್ಲಿ ಬಿಜೆಪಿಗೆ ಮರಳಿ ಮುಖ್ಯಮಂತ್ರಿಯೂ ಆದರು. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ, ಮಂತ್ರಿಮಂಡಲ ರಚನೆ ವಿಚಾರದಲ್ಲಿ ವರಿಷ್ಠರ ಕಡೆಯಿಂದ ಸಹಕಾರ ಸಿಗದೇ ಇದ್ದಾಗ ಅವರಿಗೇ ಸೆಡ್ಡು ಹೊಡೆಯಲು ಮುಂದಾಗಿ ಸಚಿವ ಸಂಪುಟದಲ್ಲಿ ಬಹುತೇಕ ತಮಗೆ ಬೇಕಾದವರನ್ನು ಸೇರಿಸಿಕೊಂಡಿದ್ದರು.
ಆದರೆ, ಅಂತಹ ಯಡಿಯೂರಪ್ಪ ಇದೀಗ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಂಪೂರ್ಣ ಮೆತ್ತಗಾಗಿದ್ದಾರೆ. ಮತ್ತೆ ವರಿಷ್ಠರೊಂದಿಗೆ ಮಾತನಾಡಲು ದೆಹಲಿಗೆ ಹೋಗುವುದಿಲ್ಲ ಎನ್ನುತ್ತಿದ್ದವರು ಈಗ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಮಂತ್ರಿ ಸ್ಥಾನ ನೀಡುವುದಾಗಿ ಹಿಂದೆ ನೀಡಿದ್ದ ಭರವಸೆಯನ್ನು ಬದಿಗಿಟ್ಟು ಹೈಕಮಾಂಡ್ ನಾಯಕರ ಮಾತಿನಂತೆ ನಡೆದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗುತ್ತದೆ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿ ಗೆದ್ದು ಬಂದಿರುವ 11 ಶಾಸಕರ ಪೈಕಿ ಎಷ್ಟು ಮಂದಿ ಸಂಪುಟ ಸೇರುತ್ತಾರೆ ಎಂಬುದು ಕೊನೇ ಘಳಿಗೆಯವರೆಗೂ ಬಹಿರಂಗವಾಗುತ್ತಿಲ್ಲ. ಇದೇ ಯಡಿಯೂರಪ್ಪ ಮೊದಲಿನಂತೆ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸಂಪುಟ ರಚನೆಯಾಗಿ ಖಾತೆಗಳನ್ನೂ ಹಂಚಿಕೆ ಮಾಡುತ್ತಿದ್ದರು. ವರಿಷ್ಠರು ವಿಳಂಬ ಮಾಡಿದರೆ ಅವರ ವಿರುದ್ಧವೇ ತಿರುಗಿ ಬಿದ್ದು ತಮಗೆ ಬೇಕಾಗಿದ್ದನ್ನು ಸಾಧಿಸುತ್ತಿದ್ದರು.
ಆದರೆ, ಈ ಬಾರಿ ಹಿಂದಿನಂತೆ ತಮಗೆ ಬೇಕಾದವರನ್ನು ಸಂಪುಟಕ್ಕೆ ಸೇರಿಸಿಕೊಂಡು ವರಿಷ್ಠರಿಗೆ ಸೆಡ್ಡು ಹೊಡೆಯಲು ಯಡಿಯೂರಪ್ಪ ಮನಸ್ಸು ಮಾಡುತ್ತಿಲ್ಲ. ರಾತ್ರಿ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಸಂಪುಟ ವಿಸ್ತರಣೆಯ ಚಿತ್ರಣ ಹೊರಬರಲಿದೆ. ಇದರಲ್ಲಿ ನೂತನ ಶಾಸಕರು ಎಷ್ಟು ಮಂದಿ ಇರುತ್ತಾರೆ? ಹಿರಿಯ ಶಾಸಕರಿಗೆ ಎಷ್ಟು ಸ್ಥಾನ ಸಿಗುತ್ತದೆ? ಎಂಬುದು ನಂತರವಷ್ಟೇ ಗೊತ್ತಾಗುತ್ತದೆ. ಯಡಿಯೂರಪ್ಪ ಅವರೂ ಇಂತಿಷ್ಟೇ ಸಚಿವರನ್ನು ನೇಮಕ ಮಾಡಬೇಕು ಎಂದು ಪಟ್ಟು ಹಿಡಿಯುತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲವನ್ನೂ ಬಿಟ್ಟಿದ್ದಾರೆ.
ಹಾಗಿದ್ದರೆ ಯಡಿಯೂರಪ್ಪ ಅವರ ಈ ಬದಲಾವಣೆಗೆ ಕಾರಣವೇನು?
ಹೆಸರಿಗೆ ತಕ್ಕಂತೆ ರಾಜಾ ಹುಲಿಯಂತೆ ಇದ್ದ ಯಡಿಯೂರಪ್ಪ ಮೃದುವಾಗಲು ಕಾರಣ ಪುತ್ರ ಬಿ.ವೈ.ವಿಜಯೇಂದ್ರ ಅವರ ರಾಜಕೀಯ ಭವಿಷ್ಯ. ಯಡಿಯೂರಪ್ಪ ಅವರ ಇಬ್ಬರು ಪುತ್ರರ ಪೈಕಿ ಹಿರಿಯವರಾದ ಬಿ.ವೈ.ರಾಘವೇಂದ್ರ ಪ್ರಸ್ತುತ ಸಂಸದರಾಗಿದ್ದಾರೆ. ಅವರು ರಾಜ್ಯ ರಾಜಕೀಯಕ್ಕೆ ಬರುವ ಸಾಧ್ಯತೆಯೂ ಇಲ್ಲ. ಹೀಗಾಗಿ ಕಿರಿಯ ಪುತ್ರ ವಿಜಯೇಂದ್ರ ಅವರನ್ನು ರಾಜ್ಯ ರಾಜ್ಯಕೀಯಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಬೇಕು ಎಂಬುದು ಯಡಿಯೂರಪ್ಪ ಅವರ ಆಲೋಚನೆ. 2018ರ ವಿಧಾನಸಭೆ ಚುನಾವಣೆ ವೇಳೆಯೇ ಅವರು ಇದಕ್ಕೆ ಚಾಲನೆ ನೀಡಿದ್ದರು. ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲು ಮುಂದಾಗಿದ್ದರು. ಆದರೆ, ಹೈಕಮಾಂಡ್ ಅದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ವರುಣಾ ಕ್ಷೇತ್ರದ ಉಸ್ತುವಾರಿಯನ್ನು ವಿಜಯೇಂದ್ರ ಅವರಿಗೆ ವಹಿಸಲಾಗಿತ್ತು. ಇದರ ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿ 37 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಏರಿತ್ತು. ಜೆಡಿಎಸ್ ಮೂರನೇ ಸ್ಥಾನಕ್ಕೆ ಇಳಿದಿತ್ತು.
ಇದಾದ ಬಳಿಕ ತಮ್ಮ ಹುಟ್ಟೂರು ಮಂಡ್ಯ ಜಿಲ್ಲೆಯಲ್ಲಿ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸಿದ್ಧಪಡಿಸಲು ನಿರ್ಧರಿಸಿದ್ದ ಯಡಿಯೂರಪ್ಪ ಅವರು ಅದಕ್ಕೆ ಆರಿಸಿಕೊಂಡಿದ್ದು ಕೆ.ಆರ್.ಪೇಟೆ ಕ್ಷೇತ್ರವನ್ನು. ಮೈತ್ರಿ ಸರ್ಕಾರ ಉರುಳಿಸಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ನಾರಾಯಣಗೌಡ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ವಿಜಯೇಂದ್ರ ಅವರಿಗೆ ವಹಿಸಲಾಗಿತ್ತು. ಇದರಲ್ಲಿ ಅವರು ಯಶಸ್ಸನ್ನೂ ಸಾಧಿಸಿದ್ದರು. ಇದರ ಜತೆಗೆ ಯಡಿಯೂರಪ್ಪ ಅವರ ಎಲ್ಲಾ ಪ್ರಮುಖ ನಿರ್ಧಾರಗಳಿಗೆ ಬೆನ್ನೆಲುಬಾಗಿ ವಿಜಯೇಂದ್ರ ನಿಲ್ಲುತ್ತಿದ್ದು, ಭವಿಷ್ಯದಲ್ಲಿ ಯಡಿಯೂರಪ್ಪ ಅವರಿಗೆ ಉತ್ತರಾಧಿಕಾರಿ ಎನಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪುತ್ರನಿಗೆ ಉತ್ತಮ ರಾಜಕೀಯ ಭವಿಷ್ಯ ರೂಪಿಸುವ ಕೆಲಸವನ್ನು ಯಡಿಯೂರಪ್ಪ ಮಾಡಬೇಕಿದ್ದು, ಅದಕ್ಕಾಗಿಯೇ ಹುಲಿಯಂತಿದ್ದ ಯಡಿಯೂರಪ್ಪ ಮೃದುವಾಗಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ತನ್ನ ಹಿರಿಯ ನಾಯಕರಿಗೆ ಚುನಾವಣೆಯಿಂದ ನಿವೃತ್ತಿ ನೀಡುತ್ತಿದೆ. 75 ವರ್ಷ ದಾಟಿದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಅಲಿಖಿತ ನಿಯಮವೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಅದಕ್ಕೆ ಪೂರಕ ಎಂಬಂತೆ ಯಡಿಯೂರಪ್ಪ ಅವರೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ಯೋಚನೆ ಮಾಡಿದ್ದಾರೆ. ಅಂದರ ಅದರ ಅರ್ಥ ತಮ್ಮ ಬದಲು ಪುತ್ರ ವಿಜಯೇಂದ್ರ ಇನ್ನು ಮುಂದೆ ರಾಜ್ಯ ರಾಜಕೀಯದಲ್ಲಿ ಇರುತ್ತಾರೆ ಎಂಬುದು.
ಹೀಗಿರುವಾಗ ಹೈಕಮಾಂಡ್ ನಾಯಕರನ್ನು ಎದುರು ಹಾಕಿಕೊಂಡರೆ ಪುತ್ರನ ರಾಜಕೀಯ ಭವಿಷ್ಯಕ್ಕೆ ಮಾರಕವಾಗಬಹುದು ಎಂಬ ಆತಂಕ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ರಾಜಕೀಯ ಮತ್ತು ಚುನಾವಣಾ ತಂತ್ರಗಾರಿಕೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿರುವ ವಿಜಯೇಂದ್ರ ತಮ್ಮಂತೆ ರಾಜಕೀಯವಾಗಿ ಮೇಲೆ ಬರಬೇಕಾದರೆ ಹೈಕಮಾಂಡ್ ಸಹಕಾರ ಬೇಕೇ ಬೇಕು. ಒಂದೊಮ್ಮೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ವಿಜೇಯೇಂದ್ರ ಅವರ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಬೀಳುತ್ತದೆ.
ಸದ್ಯ ಹೈಕಮಾಂಡ್ ನಾಯಕರನ್ನು ಎದುರು ಹಾಕಿಕೊಂಡು ತಮಗೆ ಬೇಕಾದಂತೆ ಸಂಪುಟ ವಿಸ್ತರಣೆ ಮಾಡುವುದು, ಬೇಕಾದವರಿಗೆ ಸಚಿವ ಸ್ಥಾನ ನೀಡುವುದು ಯಡಿಯೂರಪ್ಪ ಅವರಿಗೆ ಕಷ್ಟದ ಕೆಲಸವೇನೂ ಅಲ್ಲ. ಸರ್ಕಾರ ಉಳಿಸಿಕೊಳ್ಳುವ ತಾಕತ್ತೂ ಅವರಿಗೆ ಇದೆ. ಏಕೆಂದರೆ, ವೈಯಕ್ತಿಕವಾಗಿ ಉತ್ತಮ ವರ್ಚಸ್ಸು ಹೊಂದಿರುವ ಯಡಿಯೂರಪ್ಪ ಅವರಿಗೆ ಎದುರು ನಿಲ್ಲುವ ಯಾವೊಬ್ಬ ನಾಯಕರೂ ರಾಜ್ಯ ಬಿಜೆಪಿಯಲ್ಲಿ ಇಲ್ಲ. ಮೇಲಾಗಿ ರಾಜಕೀಯವಾಗಿ ಪ್ರಬಲವಾಗಿರುವ ವೀರಶೈವ-ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಬೆನ್ನಿಗಿದೆ. ದಿಟ್ಟತನದಿಂದ ಅವರು ನಿರ್ಧಾರಗಳನ್ನು ಕೈಗೊಂಡರೆ ಹೈಕಮಾಂಡ್ ಆದಿಯಾಗಿ ಯಾರೂ ಕೂಡ ಅದನ್ನು ವಿರೋಧಿಸಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ.
ಆದರೆ, ತಮಗೆ ತೊಂದರೆಯಾಗದೇ ಇದ್ದರೂ ಮುಂದೆ ತಮ್ಮ ಪುತ್ರನ ಬಗ್ಗೆ ಹೈಕಮಾಂಡ್ ನಾಯಕರು ಅಸಮಾಧಾನಗೊಳ್ಳಬಹುದು. ತಮ್ಮ ಕಾರಣಕ್ಕಾಗಿ ಪಕ್ಷದಲ್ಲಿ ಪುತ್ರನಿಗೆ ಉತ್ತಮ ಅವಕಾಶಗಳು ಸಿಗದೇ ಇರಬಹುದು. ರಾಜ್ಯ ಬಿಜೆಪಿಯಲ್ಲಿ ತಮ್ಮ ಮತ್ತು ಪುತ್ರನಿಗೆ ಮನ್ನಣೆ ಸಿಗದೇ ಇರಬಹುದು. ಯಡಿಯೂರಪ್ಪ ಅವರೇನೋ ಈಗ ರಾಜಕೀಯ ಮುಸ್ಸಂಜೆಯಲ್ಲಿದ್ದಾರೆ. ಆದರೆ, ಅವರ ಪುತ್ರ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಹೀಗಾಗಿ ತಮ್ಮ ನಿರ್ಧಾರಗಳು ಪುತ್ರನ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಡುವಂತಾಗಬಾರದು ಎಂಬ ಕಾರಣಕ್ಕೆ ಯಡಿಯೂರಪ್ಪ ಅವರು ತಮ್ಮೆಲ್ಲಾ ದಿಟ್ಟತನ, ದೈರ್ಯವನ್ನು ಬದಿಗಿಟ್ಟು ಹೈಕಮಾಂಡ್ ಮುಂದೆ ತಲೆತಗ್ಗಿಸಿ ನಿಂತಿದ್ದಾರೆ.