ಕಳೆದ ಎರಡು ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಟ್ವಿಟರ್ ಸಮರ ಸಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಳಿನ್ ವಿರುದ್ಧ ಸರಣಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗಳಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
ನಳಿನ್ ಕಟೀಲ್ ಯಡಿಯೂರಪ್ಪರನ್ನು ಕೆಡವುವ ಟಾಸ್ಕ್ ನಲ್ಲಿದ್ದಾರೆ ಎಂದಿದ್ದ ಸಿದ್ದರಾಮಯ್ಯ ರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಕಳೆದ ಚುನಾವಣೆಯ ಸಮಯದಲ್ಲಿ “ಇದೇ ನನ್ನ ಕೊನೆಯ ಚುನಾವಣೆ” ಎಂದಿದ್ದಿರಿ. ಇತ್ತೀಚೆಗೆ “ಮತ್ತೊಮ್ಮೆ ಮುಖ್ಯಮಂತ್ರಿಯಾದರೆ…” ಎಂಬ ಹೊಸ ಆಸೆಯನ್ನು ವ್ಯಕ್ತಪಡಿಸಿದ್ದೀರಿ. ಇದು ಯಾರನ್ನು “ಕೆಡವುವ ಟಾಸ್ಕ್?” ಎಂದು ನಾವು ಕೇಳಬಹುದಲ್ಲವೇ ಮಾಜಿ ಮುಖ್ಯಮಂತ್ರಿಯವರೆ? ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಸ ಗುಡಿಸುವವರ,ಬಂಡೆ ಒಡೆಯುವ ಶ್ರಮಿಕ ವರ್ಗದ ಬಗೆಗಿನ ನಿಮ್ಮ ಹೇಳಿಕೆಗಳು ಅವರ ವೃತ್ತಿ ಧರ್ಮಕ್ಕೆ ಅವಮಾನ ಮಾಡುವಂತದ್ದು. ಪೂಜ್ಯ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವದ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂಬುದನ್ನು ಶ್ರುತಪಡಿಸುತ್ತದೆ. ಶ್ರಮಿಕ ವರ್ಗ ಗೌರವಯುತವಾಗಿ ಬದುಕುವ ಮನುಷ್ಯರು ಎಂದು ಅರ್ಥ ಮಾಡಿಕೊಳ್ಳಿ ಮಾಜಿ ಮುಖ್ಯಮಂತ್ರಿಯವರೆ ಎಂದು ಸಿಟಿ ರವಿ ಸಿದ್ದರಾಮಯ್ಯರ ವಿರುದ್ದ ಟೀಕೆ ಮಾಡಿದ್ದಾರೆ.
ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಅವರ ಬಗ್ಗೆ ನೀವು ಆಡಿರುವ ಮಾತುಗಳು ಯಾವುದೇ ಪ್ರತಿಕ್ರಿಯೆಗೆ ಯೋಗ್ಯವಾದದ್ದಲ್ಲ. ಬದುಕಿನಲ್ಲಿ ನೋವು, ಬೇಸರ ಸಾಮಾನ್ಯ, ಆದರೆ ನೋವನ್ನು ಹೇಳಿಕೊಳ್ಳುವ ಮತ್ತದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಗಳಿದ್ದಾವೆ. ಅದಿಲ್ಲದಿದ್ದಾಗ ನಾಲಗೆ ಹರಿಬಿಡುವುದೊಂದೆ ದಾರಿಯಾಗುತ್ತದೆ. ಅಂತಹ ಪರಿಸ್ಥಿತಿ ತಮಗೆ ನಿರ್ಮಾಣವಾಗಿರುವುದು ವಿಷಾದನೀಯ ಮಾಜಿ ಮುಖ್ಯಮಂತ್ರಿಗಳೆ ಎಂದು ಸಿದ್ದರಾಮಯ್ಯರ ಕಾಲೆಳೆದಿದ್ದಾರೆ ಸಿಟಿ ರವಿ.