ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಗೆಲ್ಲಲು ಆಡಳಿತರೂಢ ಪಕ್ಷ ಎಐಎಡಿಎಂಕೆ, ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಕಾಂಗ್ರೆಸ್, ಬಿಜೆಪಿ, ಕಮಲ್ ಹಾಸನ್ ನಾಯಕತ್ವದ ಮಕ್ಕಳ್ ನೀದಿ ಮೈಯಂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಸದ್ದಿಲ್ಲದೇ ತಯಾರಿ ನಡೆಸಿವೆ. ಹೀಗಿರುವಾಗಲೇ ನಟ ಸೂಪರ್ ಸ್ಟಾರ್ ರಜನಿಕಾಂತ್ ಸಕ್ರಿಯ ರಾಜಕೀಯಕ್ಕೆ ಕಾಲಿರಿಸಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಲ್ಲೇ ಇತ್ತು. ಇದೀಗ ಸಕ್ರಿಯ ರಾಜಕೀಯಕ್ಕೆ ರಜನಿ ಯಾವಾಗ ಪ್ರವೇಶಿಸುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಡಿಸೆಂಬರ್ 31ನೇ ತಾರೀಕು ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ರಜನೀ ದಶಕಗಳ ಉಹಾಪೋಹಕ್ಕೆ ಬ್ರೇಕ್ ಹಾಕಿದ್ದಾರೆ.
ತಮಿಳುನಾಡಿನಲ್ಲಿ ಬದಲಾವಣೆ ತರಲು ಇದು ಸೂಕ್ತ ಸಮಯ, ನಾನೀಗ ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿದ್ದೇನೆ. ನನ್ನಿಂದ ಜನರಿಗಾಗಿ ಇದೊಂದು ಸಣ್ಣ ಪ್ರಯತ್ನವಷ್ಟೇ. ನಾನು ಇದರಲ್ಲಿ ಯಶಸ್ವಿಯಾದರೆ ಅದು ಜನರ ಯಶಸ್ಸು. ನಾನು ಸೋತರೆ, ಅದು ಜನರ ಸೋಲು. ರಾಜ್ಯದ ಬದಲಾವಣೆಗಾಗಿ ನನ್ನನ್ನು ಬೆಂಬಲಿಸಿ. ಎಲ್ಲರೂ ಸೇರಿ ರಾಜ್ಯ ಬದಲಿಸೋಣ ಎಂದು ಕರೆ ರಜನಿಕಾಂತ್ ಕರೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಯೊಬ್ಬರಿಗೂ ಹಣೆಬರಹ ಇರುತ್ತದೆ. ಅಂತೆಯೇ ತಮಿಳುನಾಡಿಗೂ ಹಣೆಬರಹವಿದೆ. ಈಗ ರಾಜ್ಯದ ಹಣೆಬರಹ ಬದಲಾಯಿಸುವ ಸಮಯ. ಇದು ಜನರ ಬೆಂಬಲದಿಂದ ಮಾತ್ರ ಸಾಧ್ಯ. ಮುಂದಿನ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸುತ್ತೇವೆ. ನಮ್ಮಿಂದಲೇ ಇಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕವಾದ ರಾಜಕೀಯ ಮುನ್ನೆಲೆಗೆ ಬರಲಿದೆ. ಭ್ರಷ್ಟಾಚಾರವಿಲ್ಲದ, ಜಾತಿ-ಧರ್ಮಗಳ ಹೊರತಾದ ರಾಜಕೀಯ ಇದಾಗಿರಲಿದೆ ಎಂದು ರಜನಿ ಭರವಸೆ ನೀಡಿದ್ದಾರೆ.
ಹಲವು ದಶಕಗಳಿಂದ ರಜನಿ ರಾಜಕೀಯ ಪ್ರವೇಶ ಕುರಿತು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿತ್ತು. ಇವರು ಯಾವಾಗ ಸಕ್ರಿಯ ರಾಜಕೀಯಕ್ಕೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈಗ ಎಲ್ಲದ್ದಕ್ಕೂ ಉತ್ತರ ರಜನಿಕಾಂತ್ ಕೊಟ್ಟಿದ್ದಾರೆ.
ஜனவரியில் கட்சித் துவக்கம்,
டிசம்பர் 31ல் தேதி அறிவிப்பு. #மாத்துவோம்_எல்லாத்தையும்_மாத்துவோம்#இப்போ_இல்லேன்னா_எப்பவும்_இல்ல pic.twitter.com/9tqdnIJEml— Rajinikanth (@rajinikanth) December 3, 2020
ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯತೆ:
ಪ್ರಧಾನಿ ಮೋದಿ ಸರ್ಕಾರದ ಅನೇಕ ಯೋಜನೆಗಳನ್ನು ಹೊಗಳುತ್ತಲೇ ಇದ್ದ ರಜನಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷದ ರೂಪುರೇಷೆ, ಉದ್ದೇಶ, ಚುನಾವಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಹಲವರೊಂದಿಗೆ ಚರ್ಚಿಸಿರುವ ರಜನಿ, ಎಐಎಡಿಎಂಕೆ-ಬಿಜೆಪಿ ಮೈತ್ರಿಯೊಂದಿಗೆ ಕೈಜೋಡಿಸುವ ಬಗ್ಗೆಯೂ ಚಿಂತಿಸಿದ್ದಾರಂತೆ.
ಕಮಲ್- ರಜನಿ ಮೈತ್ರಿ:
ಕಮಲ್ ಹಾಸನ್ ತಮ್ಮನ್ನು ವಿಚಾರವಾದಿ ಎಂದು ಗುರುತಿಸಿಕೊಂಡಿದ್ದಾರೆ. ರಜನಿಕಾಂತ್ ಅವರದು ಆಧ್ಯಾತ್ಮಿಕ ರಾಜಕೀಯದ ಕಡೆಗೆ ಒಲವಿದೆ. ಇವರಿಬ್ಬರ ನಡುವೆ ರಾಜಕೀಯ ಚದುರಂಗದಾಟದಲ್ಲಿ ಹೊಂದಾಣಿಕೆ ನಡೆಯಲು ಎಷ್ಟು ಸಾಧ್ಯ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.
Also Read: ತಮಿಳುನಾಡು ರಾಜಕೀಯ: ಅಂದು ಎಂಜಿಆರ್-ಶಿವಾಜಿ ಗಣೇಶನ್; ಇಂದು ರಜಿನಿ-ಕಮಲ್
ತಮಿಳುನಾಡು ರಾಜಕೀಯಕ್ಕಿಂತ ಹೆಚ್ಚಾಗಿ ಈ ಪ್ರಶ್ನೆ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಕಮಲ್ ಹಾಸನ್ ಈಗಾಗಲೇ ಸೂಪರ್ಸ್ಟಾರ್ ರಜನಿಕಾಂತ್ ಜತೆ ಕೈಜೋಡಿಸುವ ಕುರಿತು ಕಾಲವೇ ಉತ್ತರ ಕೊಡುತ್ತದೆ ಎಂದಿದ್ದಾರೆ. ಅಲ್ಲದೇ ನಮ್ಮ ವಿಭಿನ್ನ ದೃಷ್ಟಿಕೋನಗಳು ಮೈತ್ರಿಗೆ ಅವಕಾಶ ನೀಡುತ್ತವೆಯೇ ಎಂಬುದನ್ನು ಚಿಂತಿಸಬೇಕಿದೆ,” ಎಂದು ಕಮಲ್ ಪ್ರತಿಕ್ರಿಸಿದ್ದಾರೆ.
ಕಮಲ್ ಹಾಸನ್ ಮುಂದೊಂದು ದಿನ ರಜನಿ ಜತೆ ರಾಜಕೀಯ ಮೈತ್ರಿ ಸಾಧಿಸುವ ಸುಳಿವು ನೀಡಬಹುದು ಎನ್ನುತ್ತಿದ್ದ ಮೂಲಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ ಕಷ್ಟ ಎನ್ನುತ್ತಿವೆ. ರಜನಿಕಾಂತ್ ಕೂಡ ಮೈತ್ರಿ ಪ್ರಶ್ನೆಗೆ ಕಾಲವೇ ಉತ್ತರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ”ಒಂದು ವೇಳೆ ಇವರಿಬ್ಬರ ನಡುವೆ ಹೊಂದಾಣಿಕೆ ನಡೆದಿದ್ದೇ ಆದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷವನ್ನು ಧೂಳಿಪಟ ಮಾಡಬಹುದು ಎನ್ನುತ್ತಾರೆ ರಾಜಕೀಯ ತಜ್ಞರು.
ಏಕಂಗಿ ಸ್ಪರ್ಧೆ:
‘ಆಧ್ಯಾತ್ಮಿಕ ರಾಜಕೀಯ’ ಮಂತ್ರ ಪಠಿಸುವ ರಜನಿಕಾಂತ್ ಎಲ್ಲರಿಗಿಂತಲೂ ಭಿನ್ನ. ತಮಿಳುನಾಡು ತನಗಿರುವ ವರ್ಚಸ್ಸಿನ ಆಧಾರದ ಮೇರೆಗೆ ಏಕಾಂಗಿಯಾಗಿ ಚುನಾವಣೆಗೆ ಹೋಗಬಹುದು.






