ಮುನ್ನೆಚ್ಚರಿಕೆ ವಹಿಸಿ ಸೋಂಕು ಹರಡುವುದನ್ನು ತಡೆಯುವ ಮೂಲಕವಷ್ಟೇ ‘ಕೋವಿಡ್-19’ ಅನ್ನು ಮಣಿಸಲು ಸಾಧ್ಯ ಎಂಬ ಸಾರ್ವತ್ರಿಕ ಸತ್ಯವನ್ನು ಇಡೀ ಜಗತ್ತೇ ಕಂಡುಕೊಂಡಿದೆ. ಮುನ್ನೆಚ್ಚರಿಕೆ ವಹಿಸದ ಅಮೆರಿಕ, ಇಟಲಿ, ಸ್ಪೇನ್, ಇಂಗ್ಲೆಂಡ್ ಇನ್ನಿತರ ದೇಶಗಳಲ್ಲಿ ಸಾವಿನ ತೆಕ್ಕೆಗೆ ಸಿಕ್ಕವರ ಸಂಖ್ಯೆ ತ್ವರಿತ ಗತಿಯಲ್ಲಿ ಜಿಗಿಯುತ್ತಿದೆ. ಭಾರತದಲ್ಲೂ ‘ಕೋವಿಡ್-19’ ಮಾರಿಗೆ ಬಲಿಯಾದವರ ಸಂಖ್ಯೆ ಶತಕ ದಾಟಿದೆ. ಸೋಂಕಿತರ ಸಂಖ್ಯೆಯು 3 ಸಾವಿರದ ಗಡಿ ದಾಟಿದೆ. ಭಾರಿ ಜನಸಂಖ್ಯೆ ಮತ್ತು ಕಳಪೆ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಭಾರತದ ಇದುವರೆಗಿನ ಜೀವಹಾನಿ ಮತ್ತು ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಸಮಾಧಾನ ಎನಿಸುತ್ತದೆ.
ಅದಕ್ಕೆ ಕಾರಣಗಳೇನು? ಸರ್ಕಾರ ಮತ್ತು ಸರ್ಕಾರದ ಪರವಾಗಿರುವ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಅವರ ಧೀರೋದಾತ್ತ ಕಟ್ಟುನಿಟ್ಟಿನ ನಿರ್ಧಾರಗಳೇ ಕಾರಣ ಎನ್ನುತ್ತಿವೆ. ತಟಸ್ಥ ಮಾಧ್ಯಮಗಳ ಪ್ರಕಾರ ಇದುವರೆಗೆ ಭಾರತದಲ್ಲಿ ನಡೆದಿರುವ ಸೋಂಕು ಪರೀಕ್ಷೆ ಪ್ರಮಾಣವು ತೀರಾ ಅತ್ಯಲ್ಪ. ಹೀಗಾಗಿ ಸೋಂಕು ಪೀಡಿತರ ನಿಜವಾದ ಸಂಖ್ಯೆ ಗೊತ್ತಾಗುತ್ತಿಲ್ಲ. ಮೇಲ್ನೋಟಕ್ಕೆ ಇದು ನಿಜ ಕೂಡಾ. ಇದುವರೆಗೆ ನೇರವಾಗಿ ಸೋಂಕು ಪೀಡಿತರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಸೋಂಕು ಪೀಡಿತರ ಕುರಿತಂತೆ ಸರ್ಕಾರದ ಪರವಾಗಿರುವ ಮಾಧ್ಯಮಗಳು ಆಯ್ದ ಪ್ರಕರಣಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಪ್ರಚಾರ ನೀಡುತ್ತಿವೆ. ದಕ್ಷಿಣ ಭಾರತದ ಎರಡು ಪ್ರಮುಖ ಧಾರ್ಮಿಕ- ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ ಭಕ್ತಗಣ ಸಮಾಗಮದಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ಮತ್ತು ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ದೇಶಿಯರು ಕ್ವಾರಂಟೈನ್ ನಲ್ಲಿ ಇದ್ದಾರೆಂಬ ವರದಿಗಳಿಗೆ ಹೆಚ್ಚಿನ ಮಹತ್ವ ಬಂದಿಲ್ಲ.
ಈಗ ತಬ್ಲೀಗ್ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಸೋಂಕು ವ್ಯಾಪಕವಾಗಿ ಹರಡಿರುವ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ತಬ್ಲೀಗ್ ಜಮಾತ್ ಮಾದರಿಯ ಧಾರ್ಮಿಕ ಸಮಾವೇಶಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡದೇ ದೊಡ್ಡ ಅನಾಹುತವನ್ನು ತಪ್ಪಿಸಿದೆ. ಕೇಂದ್ರ ಗೃಹ ಸಚಿವಾಲಯದಿಂದ ಹೆಚ್ಚು ಕಮ್ಮಿ ಏಳು ಕಿ.ಮೀ. ದೂರದಲ್ಲಿ ನಡೆದ ತಬ್ಲಿಗ್ ಜಮಾತ್ ಸಮಾವೇಶವನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಡೆಯುವ ಪ್ರಯತ್ನ ನಡೆಯಲಿಲ್ಲ. ಸರ್ಕಾರದ ಪರವಾಗಿರುವ ಮಾಧ್ಯಮಗಳು ಚಾಣಾಕ್ಷ ಎಂದು ಬಣ್ಣಿಸುವ ಮತ್ತು ದೇಶದ ಆಂತರಿಕ ಭದ್ರತೆಯ ಜವಾಬ್ದಾರಿ ಹೊತ್ತಿರುವ ಗೃಹ ಸಚಿವರು ಆ ಹೊತ್ತಿಗೆ ಮಧ್ಯ ಪ್ರದೇಶದ ‘ರಾಜತಾಂತ್ರಿಕ’ ಕಾರ್ಯಭಾರದಲ್ಲಿ ಮಗ್ನರಾಗಿದ್ದರು. ‘ತಬ್ಲೀಗ್ ಜಮಾತ್ ಸಮಾವೇಶ ನಡೆಸಿದ ಸಂಘಟನೆಯ ಮುಖ್ಯಸ್ಥರನ್ನು ಮೊದಲು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ, ಆದರೆ ತಬ್ಲೀಗ್ ಜಮಾತ್ ಪ್ರಕರಣ ಮುಂದಿಟ್ಟುಕೊಂಡು ನಿರಾಶ್ರಿತರ ಸಮಸ್ಯೆಯನ್ನು ಮರೆಮಾಚಿ ಅದರ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ ಎಂದು ಖ್ಯಾತ ಚಿತ್ರ ಸಾಹಿತಿ ಜಾವೆದ್ ಅಖ್ತರ್ ಸಕಾಲಿಕ ಎಚ್ಚರಿಕೆ ನೀಡಿದ್ದಾರೆ.
ಅದೇನೆ ಇರಲಿ, ಪ್ರಧಾನಿ ನರೇಂದ್ರ ಮೋದಿ ಕೊವಿಡ್-19 ಹಾವಳಿ ತಡೆಗೆ ಏಪ್ರಿಲ್ 22ರಂದು ಒಂದು ದಿನ ‘ಜನತಾ ಕರ್ಫ್ಯೂ’ ಹೇರಿ ಅಂದು ಸಂಜೆ 5 ಗಂಟೆಗೆ ಸತತ ಐದು ನಿಮಿಷ ಚಪ್ಪಾಳೆ, ತಟ್ಟೆ, ಸೌಟು, ಜಾಗಟೆ ಮೂಲಕ ಸದ್ದು ಮಾಡಲು ಕರೆಕೊಟ್ಟರು. ಮೋದಿ ಅಭಿಮಾನಿಗಳು ಅದನ್ನು ಯಥಾವತ್ತಾಗಿ ಪಾಲಿಸಿದರು. ಬರುವ ಭಾನುವಾರ ರಾತ್ರಿ 9 ಗಂಟೆಗೆ ವಿದ್ಯುತ್ ಲೈಟ್ ಆಫ್ ಮಾಡಿಕೊಂಡು ಕ್ಯಾಂಡಲ್, ಮೊಬೈಲ್ ಅಥವಾ ಎಣ್ಣೆ ದೀಪ ಬೆಳಗುವಂತೆ ಕರೆಕೊಟ್ಟಿದ್ದಾರೆ. ಸರ್ಕಾರದ ಪರವಾಗಿರುವ ಮಾಧ್ಯಮಗಳು ಅದಕ್ಕೆ ವ್ಯಾಪಕವಾಗಿ ಪ್ರಚಾರ ನೀಡುತ್ತಿವೆ. ಮೋದಿ ಮಹಾನುಭಾವರ ‘ದೀಪ ಗಣಿತ’ ಕುರಿತಂತೆ ಗಂಭೀರ ಚರ್ಚೆ ಪ್ರಾರಂಭವಾಗಿದೆ. ಕರೋನಾಗೆ ಬೆದರಿ ಹೋಗಿದ್ದ ಜ್ಯೋತಿಷಿಗಳು ಚಾನಲ್ಗಳಲ್ಲಿ ಕೂತು ಮತ್ತೆ ತಮ್ಮ ಪ್ರಚಂಡ ಪ್ರಕಾಂಡ ಪಾಂಡಿತ್ಯ ಪ್ರದರ್ಶಿಸುತ್ತಿದ್ದಾರೆ. ಇತ್ತ ಮೋದಿ ವಿರೋಧಿಸುವವರು ಮೋದಿಯ ನಿರ್ಧಾರ ಮೂರ್ಖತನದ್ದು- ಚಪ್ಪಾಳೆ ತಟ್ಟೋದ್ದರಿಂದ, ದೀಪ ಹಚ್ಚುವುದರಿಂದ ಸೋಂಕು ನಿವಾರಿಸಲು ಸಾದ್ಯ ಇಲ್ಲ ಎಂದು ವಾದಿಸುತ್ತಿದ್ದಾರೆ. ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಹೇಳುವ ಪ್ರಧಾನಿ ಮೋದಿ ನಿರ್ಧಾರ ಮೂರ್ಖತನದ್ದೇ? ಮೋದಿ ವಿರೋಧಿಗಳು ಮಾತ್ರ ಹಾಗೆ ಹೇಳುತ್ತಿದ್ದಾರೆ. ಚಪ್ಪಾಳೆ ತಟ್ಟುವಂತೆ, ದೀಪ ಹಚ್ಚುವಂತೆ ಕರೆ ನೀಡುವ ಮೋದಿ ನಿರ್ಧಾರ ಅತ್ಯಂತ ಜಾಣತನದ್ದು. ಬೇಕಾದರೆ “ಚಾಣಕ್ಷ ನಡೆ” ಎಂದರೂ ತಪ್ಪಿಲ್ಲ.
ಏಪ್ರಿಲ್ 22 ರಂದು ಇಡೀ ದೇಶವೇ ಚಪ್ಪಾಳೆ ತಟ್ಟುವಂತೆ ಮಾಡಿದ ಮೋದಿಯ ನಡೆಗೆ ಬಿಜೆಪಿ ಕಾರ್ಯಕರ್ತರು ಪ್ರತ್ಯೇಕವಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮೋದಿ ಮಾಡಿದ ಸಾಧನೆ ಏನಪ್ಪಾ ಅಂದರೆ ಇಡೀ ದೇಶವೇ ಕೋವಿಡ್-19 ಸಂಕಷ್ಟದಲ್ಲಿ ನಲುಗುತ್ತಿದ್ದರೂ ಸದ್ದಿಲ್ಲದೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಪ್ರತಿಷ್ಠಾಪಿಸಿದರು. ಜನರ ಗಮನ ಅತ್ತ ಸುಳಿಯಲೇ ಇಲ್ಲಾ. “ವಾಹ್ ಮೋದಿಜಿ ವಾಹ್ಹ್” ಎಂದರು ಬಿಜೆಪಿ ಕಾರ್ಯಕರ್ತರು!
ಈಗ ಇಡೀ ದೇಶದ ಜನತೆ ವಿದ್ಯುತ್ ದೀಪಾ ಆರಿಸಿ ಕ್ಯಾಂಡಲ್, ಟಾರ್ಚ್, ಮೊಬೈಲ್ ಅಥವಾ ಎಣ್ಣೆ ದೀಪದ ಮೂಲಕ ಅದೂ 9 ಗಂಟೆಗೆ 9 ನಿಮಿಷಗಳ ಕಾಲವೇ ಬೆಳಗಿಸಬೇಕೇ? “ಕೋವಿಡ್-19” ಪೂರ್ವದ ಮತ್ತು ನಂತರದ ಹತ್ತು ಹಲವು ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಿಲ್ಲ. “ಕೋವಿಡ್-19” ವಿರುದ್ದ ಹೋರಾಟ ಮಾಡಲು ದೇಣಿಗೆ ಎತ್ತಲು ಪ್ರಾರಂಭಿಸಿರುವ ‘ಪಿಎಂ- ಕೇರ್ಸ್’ ಕುರಿತಂತೆ ಹಲವು ಅನುಮಾನ ಮತ್ತು ಪ್ರಶ್ನೆಗಳೆದ್ದಿವೆ. ಅವುಗಳಿಗೆ ಉತ್ತರಿಸಿಲ್ಲ. ಕೋವಿಡ್-19 ವಿರುದ್ಧ ಸೆಣಸುತ್ತಿರುವ ವೈದ್ಯರು, ಮತ್ತು ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಪರಿಕರಗಳನ್ನು(ಪಿಪಿಇ) ಒದಗಿಸಿಲ್ಲ. ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆ ಪಿಪಿಇ ಗಾಗಿ ಏಮ್ಸ್ (ಎಐಐಎಂಎಸ್) ಗೆ ನೀಡಿದ 50 ಲಕ್ಷ ರೂಪಾಯಿಗಳನ್ನು ಪಿಎಂ-ಕೇರ್ಸ್ ಗೆ ವರ್ಗಾಹಿಸಲಾಗಿದೆ. ಹಾಗಾದರೆ ಪಿಎಂ-ಕೇರ್ಸ್ ಉದ್ದೇಶವೇನು?
ವೈದ್ಯರಿಗೆ ಸುರಕ್ಷತಾ ಪರಿಕರ ಒದಗಿಸಲಾರದಷ್ಟು ಕೇಂದ್ರ ಸರ್ಕಾರದ ಬೊಕ್ಕಸ ಬರಿದಾಗಿದೆಯೇ? ಆರ್ಬಿಐನಿಂದ ಪಡೆದ 1.70 ಲಕ್ಷ ಕೋಟಿ ರೂಪಾಯಿಗಳು ಎಲ್ಲಿ ಮತ್ತು ಹೇಗೆ ವಿನಿಯೋಗವಾಗಿದೆ? ಕರೋನಾ ಚೀನಾದಲ್ಲಿ ಹರಡಿ ವ್ಯಾಪಕವಾಗಿ ಹರಡಿದ್ದರೂ ನಮಸ್ತೆ ಟ್ರಂಪ್ ಆಯೋಜಿಸುವ ಜರೂರತ್ತು ಏನಿತ್ತು? ಮಾರ್ಚ್ ಎರಡನೇ ವಾರದಲ್ಲೂ ‘ಕರೋನಾ ತುರ್ತು ನಿಗಾ ನೀಡುವ ಹಂತದಲ್ಲಿ ಇಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇಕೆ? ಹೀಗೆ ಪ್ರಧಾನಿ ಮೋದಿ ಉತ್ತರಿಸಲೇಬೇಕಾದ ಆದರೆ ಉತ್ತರಿಸಲಾರದ ಹತ್ತಾರು ಪ್ರಶ್ನೆಗಳಿವೆ. ಜನರು ಪ್ರಶ್ನೆ ಕೇಳಬಾರದು ಅಷ್ಟೇ!!

ಪ್ರಧಾನಿ ಮೋದಿ ಅದನ್ನು ಅತ್ಯಂತ ಜಾಣತನದಿಂದ ನಿಭಾಯಿಸುತ್ತಿದ್ದಾರೆ. ಮೋದಿ ವಿರೋಧಿಗಳು ಮೂರ್ಖತನದ ನಿರ್ಧಾರ ಎಂದು ಟೀಕಿಸುವ, ವಿಶ್ಲೇಷಿಸುವ, ವಿವರಿಸುವ ಹಪಾಹಪಿಯಲ್ಲಿ ಮೋದಿ ಅವರನ್ನು ಪ್ರಶ್ನೆ ಮಾಡುವುದನ್ನೇ ಮರೆಯುತ್ತಾರೆ. ಹತ್ತಾರು ಸಾವಿರ ನಿರಾಶ್ರಿತರು ದೆಹಲಿ-ಉತ್ತರಪ್ರದೇಶ ಗಡಿ ಭಾಗ ಆನಂದ ವಿಹಾರ್ ಟರ್ಮಿನಲ್ ನಲ್ಲಿ ಅನುಭವಿಸಿದ ಸಂಕಟಗಳು, ಇನ್ನೂರು ಮುನ್ನೂರು ಮೈಲಿಗಳ ದೂರವನ್ನು ಮಕ್ಕಳನ್ನು ಹೊತ್ತು ಬರಿಗಾಲಲ್ಲಿ ಹಸಿದ ಹೊಟ್ಟೆಯಲ್ಲಿ ಕ್ರಮಿಸಿದ ಸ್ವಾತಂತ್ರ್ಯೋತ್ತರ ಮಾನವ ದುರಂತವನ್ನು ಮರೆಯುತ್ತಾರೆ. ಆ ದುರಂತಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣವಾದ ನರೇಂದ್ರ ಮೋದಿ ಸರ್ಕಾರಕ್ಕೆ ಪ್ರಶ್ನಿಸುವುದನ್ನು ಮರೆಯುತ್ತಾರೆ.
ಪ್ರಧಾನಿ ಮೋದಿ ಅವರಿಗೆ ಅದೇ ಬೇಕಿದೆ. ಜನತೆ ತಮ್ಮನ್ನು ಟೀಕಿಸುತ್ತಿರಬೇಕು. ಪ್ರಶ್ನಿಸಬಾರದು!
ತಾವೇ ತೋಡಿದ ತರ್ಕರಹಿತ, ವಿವೇಚನೆ ರಹಿತ ಆರ್ಥಿಕ ನೀತಿಗಳ ಮಹಾಕಂದಕಕ್ಕೆ ದೇಶವನ್ನು ದೂಡಿರುವ ಪ್ರಧಾನಿ ಮೋದಿ ಅವರು ಕರೋನಾ ವೈರಸ್ ಅನ್ನೇ ‘ಏಣಿ’ಯಾಗಿ ಬಳಸಿಕೊಂಡು ಕಂದಕದಿಂದ ಮೇಲೇರುತ್ತಾರೆ. ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಕರೋನಾ ತಲೆಗೆ ಕಟ್ಟಿ ತಾವು ಆರೋಪ ಮುಕ್ತರಾಗುತ್ತಾರೆ!! ಮೋದಿ ವಿರೋಧಿಗಳು ಮಾತ್ರ ಅವರನ್ನು ಮೂರ್ಖತನದ ನಿರ್ಧಾರ ಕೈಗೊಳ್ಳುತ್ತಾರೆ ಅನ್ನುತ್ತಾರೆ. ಆದರೆ ಮೋದಿ ಏನೇ ಮಾಡಿದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ. ನೆಗೆಟಿವ್ ಆಗಿರಲಿ- ಪಾಸಿಟಿವ್ ಆಗಿರಲಿ ದೇಶದಲ್ಲಿ ತಮ್ಮ ಬಗ್ಗೆಯೇ ಚರ್ಚೆ ನಡೆಯುವಂತೆ ಮಾಡಿಬಿಟ್ಟಿದ್ದಾರೆ. ಕರೋನಾ ಹೆಸರಲ್ಲಿ ಮೂರು ಪ್ರೈಮ್ ಟೈಮ್ ಭಾಷಣ ಮಾಡಿದ್ದಾರೆ. ಇಷ್ಟಾದರೂ ಮೋದಿ ವಿರೋಧಿಗಳು ಮಾತ್ರ ಮೋದಿ ನಿರ್ಧಾರಗಳನ್ನು ಮೂರ್ಖತನದ ನಿರ್ಧಾರಗಳು ಎಂದು ಟೀಕಿಸುತ್ತಾರೆ!






