ಶುಕ್ರವಾರದಂದು ತಮಿಳುನಾಡಿನ ಮಟ್ಟಿಗೆ ದಾಖಲೆ ಮಟ್ಟದ ಕರೋನಾ ಪಾಸಿಟಿವ್ ಕಂಡುಬಂದಿದೆ. ಒಂದೇ ದಿನ 1,982 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 40,698 ತಲುಪಿದೆ. ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದರೂ ತಮಿಳುನಾಡಿನಲ್ಲಿ ಕರೋನಾ ಮಾರಣಾಂತಿವಾಗಿ ಪರಿಣಮಿಸಿಲ್ಲ. ನಿನ್ನೆಯವರೆಗೂ ಕರೋನಾ ಪತ್ತೆಯಾದವರಲ್ಲಿ ಶೇಕಡಾ 54 ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಶೇಕಡಾವಾರು ಅಂಕಿಅಂಶದಲ್ಲಿ ಮರಣ ಪ್ರಮಾಣವು ಕರ್ಣಾಟಕಕ್ಕಿಂತ ಕಡಿಮೆಯಿದೆ. ವಿಪರೀತ ಪ್ರಮಾಣದಲ್ಲಿ ಕರೋನಾ ಪ್ರಕರಣ ಇರುವ ತಮಿಳುನಾಡಿನಲ್ಲಿ ಕರೋನಾದಿಂದ ಮರಣ ಹೊಂದಿದವರು 0.92% ಮಾತ್ರ.
ಇನ್ನು ಗುಜರಾತಿನಲ್ಲಿ ನಿನ್ನೆ ಸಂಜೆಯ ವೇಳೆಗಾಗುವಾಗ ಹೊಸದಾಗಿ 495 ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 22,562 ತಲುಪಿದೆ. ಮೋದಿ ತವರು ರಾಜ್ಯದಲ್ಲಿ ಕರೋನಾ ಮರಣ ಪ್ರಮಾಣ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚಿದೆ. ಅದೇ ವೇಳೆಗೆ ಚೇತರಿಸುವವರ ಪ್ರಮಾಣವು ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳಿಗಿಂತ ಹೆಚ್ಚೇ ಇದೆ. ಇದುವರೆಗೂ ಗುಜರಾತಿನಲ್ಲಿ 15,501 ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದು ರಾಜ್ಯದ ಒಟ್ಟು ಕರೋನಾ ಸೋಂಕಿತರ 68.7 ಶೇಕಡಾದಷ್ಟು. ಚೇತರಿಕೆಯಲ್ಲಿ ಈ ಪ್ರಗತಿಯು ಗಣನೀಯವಾದದ್ದೆ. ಆದರೆ ಚೇತರಿಕೆಯ ಪ್ರಮಾಣಕ್ಕೆ ಸೆಡ್ಡು ಹೊಡೆಯುವಂತೆ ಅಸುನೀಗುವವರ ಪ್ರಮಾಣ ಹೆಚ್ಚುತ್ತಲಿದೆ. ಶುಕ್ರವಾರ 31 ಮಂದಿ ಕರೋನಾದಿಂದಾಗಿ ಅಸುನೀಗಿದ್ದು ಒಟ್ಟು 1416 ಮಂದಿ ಅಸುನೀಗಿದ್ದಾರೆ. ಇದು ಒಟ್ಟು ಸೋಂಕಿತರ 6.2 ಶೇಕಡಾದಷ್ಟಾಗುತ್ತದೆ. ಇಡೀ ದೇಶದಲ್ಲಿ ಕರೋನಾ ಸೋಂಕಿತರ ಮರಣ ಪ್ರಮಾಣ 2.85 ಇದೆ. ಇಡೀ ದೇಶಕ್ಕೆ ಹೋಲಿಸಿಕೊಂಡರೆ ಗುಜರಾತಿನ ಮರಣ ಪ್ರಮಾಣವು ದೇಶದ ಮರಣ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಿದೆ.

ಭಾರತದ ಒಟ್ಟು ಕರೋನಾ ಪ್ರಕರಣಗಳಲ್ಲಿ 1/3 ಭಾಗ ಪ್ರಕರಣವು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಇದೆ. ಮುಂಬೈ ಭಾರತದ ವಾಣಿಜ್ಯ ನಗರಿಯಾಗಿರುವುದರಿಂದ ಹಾಗೂ ಉಳಿದೆಲ್ಲಾ ಕಡೆಗಳಿಂತ ಚಟುವಟಿಕೆಗಳು ಹೆಚ್ಚಿರುವುದು ಅಲ್ಲಿ ದೊಡ್ಡ ಪ್ರಮಾಣದ ಸೋಂಕು ಹರಡಲು ಕಾರಣವೆಂದು ಅಂದಾಜಿಸಲಾಗಿದೆ. ನಿನ್ನೆ ಒಟ್ಟು 3,717 ಹೊಸ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಇದುವರೆಗೂ 47,793 ಮಂದಿ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಂದರೆ ಶೇಕಡಾ 47.2 ಸೋಂಕಿತರು ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಿನ್ನೆ ದಿನ 127 ಮಂದಿ ಸೋಂಕು ತಗುಲಿದವರು ಅಸುನೀಗಿದ್ದಾರೆ. ಹಾಗಾಗಿ ಒಟ್ಟು ಮೃತಪಟ್ಟವರ ಸಂಖ್ಯೆ 3,493 ತಲುಪಿದೆ. ಒಟ್ಟು ಸೋಂಕಿತರಲ್ಲಿ ಇದುವರೆಗೂ ಶೇಕಡಾ 3.43 ರಷ್ಟು ಮಂದಿ ಮೃತಪಟ್ಟಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 34,687 ಪ್ರಕರಣಗಳು ದಾಖಲಾಗಿದೆ. ಇದುವರೆಗೂ 12,731 ಜನರಷ್ಟೇ ಸೋಂಕಿನಿಂದ ಚೇತರಿಕೊಂಡಿದ್ದಾರೆ. ದೆಹಲಿಯಲ್ಲಿ ಚೇತರಿಕೆ ಕಂಡುಬರುತ್ತಿರುವವರ ಪ್ರಮಾಣ ನಿರಾಶೆ ಮೂಡಿಸುವಷ್ಟು ಕಡಿಮೆಯಿದೆ. ದೇಶದಲ್ಲಿ 49.32 ಶೇಕಡಾ ಮಂದಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದರೆ, ಆದರೆ ದೆಹಲಿಯಲ್ಲಿ ಚೇತರಿಸಿಕೊಳ್ಳುವವರ ಪ್ರಮಾಣ 36.7 ಅಷ್ಟೇ ಇದೆ. ಇದಕ್ಕೆ ಕಾರಣವೂ ಇದೆ. ಭಾರತದಲ್ಲಿ ದೆಹಲಿಯಷ್ಟು ವಾತಾವರಣ ಹದಗೆಟ್ಟಿರುವ ನಗರ ಬೇರಾವುದು ಇಲ್ಲ. ಕಳೆದ ವರುಷ ವಾತಾವರಣದಲ್ಲಿ ಶುದ್ಧ ಗಾಳಿ ಇಲ್ಲದ ಕಾರಣ ದೆಹಲಿ ಶಾಲೆಗಳೆಲ್ಲಾ ಮುಚ್ಚಿತ್ತು. ದೆಹಲಿ ಗಾಳಿ ಅಷ್ಟೊಂದು ಕಲುಷಿತಗೊಂಡಿದೆ. ಸಹಜವಾಗಿಯೇ ದೊಡ್ಡ ಪ್ರಮಾಣದ ದೆಹಲಿ ನಿವಾಸಿಗಳಿಗೆ ಶ್ವಾಸಕೋಶ ಸಂಬಂಧಿತ ರೋಗಗಳಿವೆ.
ಕರೋನಾ ಸೋಂಕು ಕೂಡ ಶ್ವಾಸಕೋಶವನ್ನು ಹಾನಿಗೊಳಿಸುವುದರಿಂದ ಅಲ್ಲಿ ಚೇತರಿಸಿಕೊಳ್ಳುವವರ ಪ್ರಮಾಣ ಕಡಿಮೆಯಿದೆ ಎಂದು ಅಂದಾಜಿಸಲಾಗಿದೆ. ದೆಹಲಿಯಲ್ಲಿ ನಿನ್ನೆಯವರೆಗೂ 1,085 ಮಂದಿ ಮರಣ ಹೊಂದಿದ್ದರು. ಇದು ಒಟ್ಟು ಸೋಂಕಿತರ ಶೇಕಡಾ 3.12 ಇದೆ. ಕರೋನಾ ಎದುರಿಸಲು ದೆಹಲಿಗಿರುವ ಸವಾಲುಗಳು ಉಳಿದ ರಾಜ್ಯಗಳಿಗಿಂತ ಹೆಚ್ಚೇ ಇದೆ. ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಧಿಕಾರದ ಮಿತಿಯು ಕಡಿಮೆಯಿದೆ. ಉಳಿದ ರಾಜ್ಯಗಳಿಗಿರುವಷ್ಟು ಸ್ವಾತಂತ್ರ್ಯ ದೆಹಲಿ ಆಡಳಿತಕ್ಕಿಲ್ಲದಿರುವುದೂ ಕೂಡ ಸವಾಲಾಗುವ ಸಾಧ್ಯತೆ ಇದೆ. ಮುಖ್ಯವಾಗಿ ದೆಹಲಿಯ ವಾತಾವರಣ ಕಲುಷಿತದಿಂದಾಗಿ ಕಾರಣದಿಂದಾಗಿ ಪ್ರಜೆಗಳಲ್ಲಿ ಹೆಚ್ಚಿನವರಲ್ಲಿ ಮೊದಲೇ ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿವೆ.
ದೇಶದಾದ್ಯಂತ ಕರೋನಾ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕಳೆದ ಒಂದು ವಾರದಿಂದ ಸರಾಸರಿ ಸುಮಾರು 9.5 ಸಾವಿರದಂತೆ ಪ್ರಕರಣಗಳು ದಿನವೊಂದಕ್ಕೆ ಕಂಡು ಬರುತ್ತಿದೆ. ಅದೃಷ್ಟವಶಾತ್ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ಜೂನ್ 12ರ ಸಂಜೆ ವೇಳೆಗೆ 1,47,195 ಮಂದಿ ಚೇತರಿಸಿಕೊಂಡರೆ, 1,41,842 ಪ್ರಕರಣಗಳು ಇನ್ನೂ ಸಕ್ರಿಯವಾಗಿವೆ. ಚೇತರಿಸಿಕೊಳ್ಳುವವರ ಪ್ರಮಾಣ 49.32 ಶೇಕಡಾ ಇದೆ. ಇದುವರೆಗೂ 8,498 ಮಂದಿ ಕರೋನಾದಿಂದಾಗಿ ಅಸುನೀಗಿದ್ದಾರೆ. ಕರೋನಾ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಇದುವರೆಗೂ 2.85 ಶೇಕಡಾ ಜನರಷ್ಟೇ ಅಸುನೀಗಿದ್ದಾರೆ.
ಈ ಎಲ್ಲಾ ಅಂಕಿಅಂಶಗಳನ್ನು ಗಮನಿಸಿದರೆ ಹಾಗೂ ಹಿಂದೆ ಬಂದಿರುವಂತಹ ಸಾಂಕ್ರಾಮಿಕ ರೋಗಗಳಿಗೆ ಹೋಲಿಸಿದರೆ ಕರೋನಾ ಅಷ್ಟೇನೂ ಮಾರಣಾಂತಿಕವಲ್ಲ. ಅಲ್ಲದೆ ಕರೋನಾದಿಂದಾಗಿ ಮರಣ ಹೊಂದಿದವರಲ್ಲಿ ಈಗಾಗಲೇ ಉಳಿದ ರೋಗಗಳಿಂದ ಬಳಲುತ್ತಿದ್ದವರು ಹಾಗೂ ಹಿರಿಯ ನಾಗರಿಕರ ಸಂಖ್ಯೆಯೇ ಅಧಿಕ ಎಂದು ಅಂಕಿ ಅಂಶಗಳು ಹೇಳುತ್ತವೆ. ಚೀನಾ, ಇಂಗ್ಲಂಡ್ ಸೇರಿದಂತೆ ಹಲವು ರಾಷ್ಟ್ರಗಳ ತಜ್ಞರು ಹಾಗೂ ವೈರಾಲಜಿ ಸಂಶೋಧನಾಲಯಗಳು ಇದನ್ನೇ ಹೇಳುತ್ತಾ ಬಂದಿದ್ದಾರೆ. ಕರೋನಾ ಸೋಂಕಿತರ ಮರಣ ಪ್ರಮಾಣ, ಚೇತರಿಕೆ ಪ್ರಮಾಣ ಹಾಗೂ ಹರಡುವಿಕೆಯ ವೇಗ ದೇಶದ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯಾಗಿ ಇದೆ. ಹಾಗೆಂದು ಇದು ಕರೋನಾ ವೈರಸ್ ಭೌಗೋಳಿಕ ವಿಭಿನ್ನತೆಗೆ ತಕ್ಕಂತೆ ವರ್ತಿಸುತ್ತದೆ ಎಂದರ್ಥವಲ್ಲ. ಮುಖ್ಯವಾಗಿ ಜನರ ಜೀವನಮಟ್ಟ, ಆಡಳಿತದ ಸಾಮರ್ಥ್ಯ, ಆರೋಗ್ಯ ಕ್ಷೇತ್ರದ ಸಾಮರ್ಥ್ಯ ಎಲ್ಲವೂ ಸೇರುತ್ತದೆ. ಇಡೀ ದೇಶೀಯ ಮಟ್ಟದಲ್ಲಿ ಗಮನಿಸುವುದಾದರೆ ಕರೋನಾ ಭೀತಿಗೊಂಡಷ್ಟು ಮಾರಣಾಂತಿಕ ಸೋಂಕು ಅಲ್ಲ. ಮಹಾಮಾರಿಯಂತೂ ಅಲ್ಲವೇ ಅಲ್ಲ.