ಭಾರತದಲ್ಲಿ ಕರೋನಾ ಸೋಂಕು ಇನ್ನೂ ತೀವ್ರಗತಿಯಲ್ಲೇ ಹಬ್ಬುತ್ತಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಈ ಹಿಂದೆ ಇದ್ದಂತಹ ಉಚ್ರಾಯ ಸ್ಥಿತಿ ಇನ್ನೊಮ್ಮೆ ನಿರ್ಮಾನವಾಗುವುದಿಲ್ಲ. ಇದು ಭಾರತೀಯರಿಗೆ ಸಮಾಧಾನವಾಗುವಂತಹ ವಿಚಾರವಾದರೂ, ತಜ್ಞರ ಸಮಿತಿ ಬಹಿರಂಗ ಪಡಿಸಿದ ಇನ್ನೊಂದು ವಿಷಯ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಭಾರತದಲ್ಲಿ ಕೋವಿಡ್ನ ರೋಗಲಕ್ಷಣ ಇರುವ ಸೋಂಕಿತರ ಸಂಖ್ಯೆ ಸಪ್ಟೆಂಬರ್ ತಿಂಗಳಲ್ಲಿಯೇ 10 ಲಕ್ಷದ ಗಡಿ ದಾಟಿದೆ. ಈಗ ಆ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಫೆಬ್ರುವರಿ 2021ರ ವೇಳೆಗೆ ಭಾರತದಲ್ಲಿ ಸುಮಾರು 1.06 ಕೋಟಿಯಷ್ಟು ಕರೋನಾ ಸೋಂಕಿತರು ಇರಲಿದ್ದಾರೆ ಎಂದು ತಜ್ಞರ ಸಮಿತಿ ಹೇಳಿದೆ. ಈ ವೇಳೆಗೆ ಸೋಂಕಿತರಲ್ಲಿ ರೋಗದ ಗುಣಲಕ್ಷಣಗಳು ಕಡಿಮೆಯಾಗಲಿವೆ ಎಂದು ಸಮಿತಿ ಅಂದಾಜಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಐಐಟಿ ಹೈದರಾಬಾದ್ನ ಸದಸ್ಯರಾದ ಎಂ ವಿದ್ಯಾಸಾಗರ್ ನೇತೃತ್ವದ ತಜ್ಞರ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಸಮಿತಿಯಲ್ಲಿ IIT, IISc, ISI Kolkata ಮತ್ತು CMC Velloreನ ಪ್ರಮುಖ ವಿಜ್ಞಾನಿಗಳು ಅಧ್ಯಯವನ್ನು ಮಾಡಿದ್ದರು.
ವರದಿಯ ಪ್ರಕಾರ, ದೇಶದ 30% ಜನರಲ್ಲಿ ಈಗಾಗಲೇ ಕರೋನಾ ಸೋಂಕಿನ ವಿರುದ್ದ ಹೋರಾಡುವ Antibodyಗಳು ಉತ್ಪಾದನೆಯಾಗಿವೆ. ಆಗಸ್ಟ್ನಲ್ಲಿ ಈ ಪ್ರಮಾಣ ಕೇವಲ 14% ಇತ್ತು. “ದೇಶದ ನಾಗರಿಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಿರುವುದು ನಿಜಕ್ಕೂ ಸಂತೋಷಕರವಾದ ವಿಚಾರ. ಕರೋನಾ ಸೋಂಕಿತರ ಒಟ್ಟು ಸಂಖ್ಯೆಯನ್ನು ಕಲೆ ಹಾಕಿದರೆ, ಭಾರತದಲ್ಲಿ ಮರಣ ಪ್ರಮಾಣ ಕೇವಲ 0.04%ದಷ್ಟು ಮಾತ್ರ ಇದೆ,” ಎಂದು ವಿದ್ಯಾಸಾಗರ್ ಹೇಳಿದ್ದಾರೆ.
ಇನ್ನು ಭಾರತದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಅನ್ನು ಹೊಗಳಿರುವ ವರದಿಯು, ಸಕಾಲಕ್ಕೆ ಆಭರತದಲ್ಲಿ ಲಾಕ್ಡೌ ಹೇರಲಾಗಿದೆ. ಒಂದು ವೇಳೆ, ಲಾಕ್ಡೌನ್ ಅನ್ನು ತಡವಾಗಿ ಹೇರಿದ್ದಲ್ಲಿ, ಜೂನ್ ಕೊನೆಯ ವೇಳೆಗೆ ಸುಮಾರು 50 ಲಕ್ಷ ಕೋವಿಡ್ ಸೋಂಕಿತರು ಇರುತ್ತಿದ್ದರು. ಆಗ ಪರಿಸ್ಥಿತಿ ನಿಜವಾಗಿಯೂ ಕೈಮೀರಿ ಹೋಗುತ್ತಿತ್ತು, ಎಂದು ಹೇಳಿದೆ.
ಲಾಕ್ಡೌನ್ನ ನಿಯಮಗಳ ಪಾಲನೆ ಹಾಗೂ ಕಟ್ಟುನಿಟ್ಟಿನ ಕ್ವಾರೆಂಟೈನ್ ನಿಯಮಗಳಿಂದಾಗಿ ವಲಸೆ ಕಾರ್ಮಿಕರು ಹೆಚ್ಚಾಗಿ ಮರಳಿರುವ ರಾಜ್ಯಗಳಾದ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಕರೋನಾ ಸೋಂಕು ಕಡಿಮೆ ಪ್ರಮಾಣದಲ್ಲಿ ಹಬ್ಬಿದೆ.
ಭಾರತದಲ್ಲಿ ಜಾರಿಗೊಳಿಸಿದಂತಹ ಲಾಕ್ಡೌನ್ ಅನ್ನು ಎಲ್ಲಾ ತಜ್ಞರೂ ಟೀಕಿಸಿರುವಾಗ, ಈ ಒಂದು ವರದಿ ಮಾತ್ರ ಲಾಕ್ಡೌನ್ ಸಮರ್ಪಕ ಸಮಯದಲ್ಲಿ ಅನುಷ್ಟಾನವಾಗಿದೆ ಎಂದು ಹೇಳಿದೆ. 500ರ ಆಸುಪಾಸಿನಲ್ಲಿ ಕರೋನಾ ಸೋಂಕಿತರಿದ್ದಾಗ ಹೇರಲಾಗಿದ್ದ ಲಾಕ್ಡೌನ್ ತೆರವುಗೊಳಿಸುವಾಗ ಭಾರತದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅದರಲ್ಲಿಯೂ, ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಪಟ್ಟ ಪಾಡು ನಿಜಕ್ಕೂ ಹೇಳತೀರದಾಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಈ ವರದಿಯನ್ನು ಬಹಿರಂಗಗೊಳಿಸಿದೆ ಎಂಬ ಟೀಕೆ ಕೂಡಾ ಕೇಳಿ ಬಂದಿದೆ.